Advertisement

ಬದುಕಿನ ಆಟ ಮುಗಿಸಿದ ಆಟಗಾರ

04:38 AM Jun 08, 2020 | Lakshmi GovindaRaj |

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದ ಬೆನ್ನಲ್ಲೇ ಭಾನುವಾರ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಸುದ್ದಿ ನಿಜಕ್ಕೂ ಸ್ಯಾಂಡಲ್‌ವುಡ್‌ಗೆ ಬರಸಿಡಿಲು ಬಡಿದಂತಾಗಿದೆ. ಕಳೆದ ಹನ್ನೆರೆಡು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿ ಜನಮನ ಗೆದ್ದಿದ್ದ ಚಿರಂಜೀವಿ ಸರ್ಜಾ, ಹಲವು ಯಶಸ್ವಿ ಚಿತ್ರಗಳ ಮೂಲಕ ಸಿನಿ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದ್ದರು.

Advertisement

ಇನ್ನಷ್ಟು ಹೊಸ ಬಗೆಯ ಸಿನಿಮಾಗಳ ಮೂಲಕ ಎಲ್ಲರನ್ನೂ ರಂಜಿಸುವ ಉತ್ಸಾಹದಲ್ಲಿದ್ದ ಚಿರಂಜೀವಿ, ಈಗ ಇಲ್ಲವಾಗಿರುವುದು ನಿಜಕ್ಕೂ ದುರಂತ. 2009ರಲ್ಲಿ ಸರ್ಜಾ ಕುಟುಂಬದ ಕುಡಿಯೊಂದು ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಲಿದೆ ಎಂಬ ಸುದ್ದಿ ಅನೇಕರಲ್ಲಿ ಕುತೂಹಲ ಮೂಡಿಸಿದ್ದು ನಿಜ. ಅದಕ್ಕೆ  ತಕ್ಕಂತೆಯೇ ಚಿರು, ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ಮೂಲಕ ಗಟ್ಟಿನೆಲೆ ಕಂಡುಕೊಂಡಿದ್ದರು. ಅವರಿಗೆ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್‌ ಸರ್ಜಾ ಅವರ ಬೆಂಬಲವಿತ್ತು ಎಂಬುದು ಬಿಟ್ಟರೆ, ಅವರು ತಮ್ಮ ಪ್ರತಿಭೆ ಹಾಗೂ  ಶ್ರಮದಿಂದಲೇ ಕನ್ನಡ ಚಿತ್ರರಂಗದಲ್ಲಿ ಸ್ಥಾನ ಪಡೆದುಕೊಂಡಿದ್ದರು.

ವಾಯುಪುತ್ರ ಸಿನಿಮಾ ಮೂಲಕ ಸ್ಯಾಂಡಲ್‌ ವುಡ್‌ಗೆ ಎಂಟ್ರಿಕೊಟ್ಟ ಅವರಿಗೆ ಆ ಚಿತ್ರ ಹೇಳಿಕೊಳ್ಳುವಂತಹ ದೊಡ್ಡ ಗೆಲುವು ತಂದುಕೊಡದಿದ್ದರೂ, ಚಿರು ಎಂಬ  ಯುವ ನಟಬೆಳಕಿಗೆ ಬಂದಿದ್ದು ಸುಳ್ಳಲ್ಲ. ಆ ಬಳಿಕ ಚಿರು ತಮ್ಮ ಸ್ವಂತ ಸಾಮರ್ಥ್ಯದಿಂದಲೇ ಹೊಸ ಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ಯಶಸ್ಸಿನ ಮೆಟ್ಟಿಲು ಏರಿದರು. ಈವರೆಗೆ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ  ಅಭಿನಯಿಸಿರುವ ಚಿರಂಜೀವಿ ಸರ್ಜಾ ಎಲ್ಲಾ ಜಾನರ್‌ನ ಸಿನಿಮಾಗಳಲ್ಲಿ ಕಾಣಿಸಿಕೊಂಡು ವರ್ಸಟೈಲ್‌ ಆ್ಯಕ್ಟರ್‌ ಎಂಬ ಮಾತು ಅವರ ಬಗ್ಗೆ ಕೇಳಿಬಂದಿತ್ತು.

ಕಲಾ ಕುಟುಂಬದ ಕುಡಿ: ವಿಜಯಾ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿದ ಚಿರುಗೆ  ಬಾಲ್ಯದಿಂದಲೂ ಸಿನಿಮಾ ಮೇಲೆ ಆಸಕ್ತಿ ಇತ್ತು. ಕಾರಣ, ಅವರದು ಕಲಾಕುಟುಂಬ. ಅವರ ತಾತ ಶಕ್ತಿ ಪ್ರಸಾದ್‌ ಅವರು ಕಪ್ಪು-ಬಿಳುಪು ಕಾಲದಿಂದ ಖ್ಯಾತ ಖಳನಟರಾಗಿ ಮಿಂಚಿದವರು. ಅವರ ಪುತ್ರ ಅರ್ಜುನ್‌ ಸರ್ಜಾ ಈಗ ಖ್ಯಾತ ನಟ. ಇನ್ನೊಬ್ಬ ಪುತ್ರ ನಿರ್ದೇಶಕ ಕಿಶೋರ್‌ ಸರ್ಜಾ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಸಿನಿಮಾ ಮೇಲೆ ಅತೀವ ಆಸಕ್ತಿ ಬೆಳೆಸಿಕೊಂಡಿದ್ದ  ಚಿರಂಜೀವಿ  ಸರ್ಜಾ, ಸಿನಿಮಾ ಬಿಟ್ಟು ಬೇರೆ ಆಯ್ಕೆ ಬಗ್ಗೆ ಯೋಚಿಸಲಿಲ್ಲ.

ಹಾಗಾಗಿಯೇ, ಅರ್ಜುನ್‌ ಸರ್ಜಾ ಅವರ ಜೊತೆಗೆ ಸಿನಿಮಾ ಕನಸು ಕಾಣುತ್ತ, ಅವರ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಒಂದಷ್ಟು  ಸಿನಿಮಾ ಪಟ್ಟುಗಳನ್ನು ಕಲಿತರು. ಅವರ ಆಸಕ್ತಿ ನೋಡಿ, ಅರ್ಜುನ್‌ ಸರ್ಜಾ ಅವರು, ಎಲ್ಲಾ ರೀತಿಯ ಸಹಕಾರ ನೀಡಿ, ವಾಯುಪುತ್ರ ಸಿನಿಮಾ ಮೂಲಕ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಆ ನಂತರ ಚಿರು ಹಿಂದಿರುಗಿ  ಡಲಿಲ್ಲ. ಅಂದಿನಿಂದ ಇಂದಿನವರೆಗೂ ಚಿರು, ಅರ್ಜುನ್‌ ಸರ್ಜಾ ಅವರನ್ನು ಗಾಡ್‌ಫಾದರ್‌ ಎಂದೇ ನಂಬಿದ್ದರು.

Advertisement

ವಾಯುಪುತ್ರನ ಆಗಮನ: 2009ರಲ್ಲಿ ಚಿರು ವಾಯುಪುತ್ರ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾದರು. ನಂತರದ ದಿನಗಳಲ್ಲಿ ಅವರು ಗಂಡೆದೆ, ಚಿರು, ದಂಡಂ ದಶಗುಣಂ, ಕೆಂಪೇಗೌಡ, ವರದನಾಯಕ, ವಿಷಲ್‌, ಚಂದ್ರಲೇಖ, ಅಜಿತ್‌, ರುದ್ರತಾಂಡವ, ಆಟಗಾರ,  ಆಕೆ, ಸಂಹಾರ, ಸೀಜರ್‌, ಅಮ್ಮಾ ಐ ಲವ್‌ಯು, ಸಿಂಗ, ಖಾಕಿ, ಆದ್ಯ, ಶಿವಾರ್ಜುನ ಚಿತ್ರಗಳಲ್ಲಿ ನಟಿಸಿದ್ದರು. ಪ್ರತಿ ಸಿನಿಮಾಗಳಲ್ಲೂ ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದಿದ್ದ ಅವರು  ಸೋಲು-ಗೆಲುವಿನ ಲೆಕ್ಕಾಚಾರ ಹಾಕದೆ ಬಂದಿದ್ದನ್ನು ಸ್ವೀಕರಿಸಿ ಮುನ್ನಡೆಯುತ್ತಿದ್ದರು.

ಮಿನಿಮಮ್‌ ಗ್ಯಾರಂಟಿ ನಟ: ಕನ್ನಡ ಚಿತ್ರರಂಗಕ್ಕೆ ಬಂದು ಹನ್ನೆರೆಡು ವರ್ಷ ಪೂರೈಸಿರುವ ಚಿರಂಜೀವಿ ಸರ್ಜಾ 22 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಒಂದಷ್ಟು ಸಿನಿಮಾಗಳಲ್ಲಿ ಗೆಳೆತನಕ್ಕಾಗಿ ಅತಿಥಿ ಪಾತ್ರಗಳಲ್ಲಿ, ಹಾಡುಗಳಲ್ಲಿ  ಕಾಣಿಸಿಕೊಂಡಿದ್ದರು.  ಚಿರಂಜೀವಿ ಸರ್ಜಾ ಈ ಹನ್ನೆರಡು ವರ್ಷಗಳಲ್ಲಿ 22ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಅಂದರೆ, ಅದು ಅವರಿಗಿದ್ದ ಬೇಡಿಕೆ. ಚಿತ್ರಮಂದಿರಗಳಲ್ಲಿ ಸಿನಿಮಾಗಳ ಫ‌ಲಿತಾಂಶ ಏನೇ ಇದ್ದರೂ, ನಿರ್ಮಾಪಕರಿಗೆ  ಚಿರಂಜೀವಿ ಸರ್ಜಾ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಕೈ ಕಚ್ಚಿಲ್ಲ. ಅದು ಟಿವಿ ರೈಟ್ಸ್‌, ಡಬ್ಬಿಂಗ್‌ ರೈಟ್ಸ್‌ ಅಥವಾ ಡಿಜಿಟಲ್‌ ಫ್ಲಾಟ್‌ಫಾರ್ಮ್ ಹೀಗೆ ಯಾವುದಾದರೊಂದು ರೂಪದಲ್ಲಿ ನಿರ್ಮಾಪಕರ ಜೇಬು ತುಂಬಿಸಿವೆ.

ಆ್ಯಕ್ಷನ್‌ ಹೀರೋ: ಚಿರಂಜೀವಿ ಮೊದಲ ಚಿತ್ರವೇ ಆ್ಯಕ್ಷನ್‌ ಚಿತ್ರವಾಗಿತ್ತು. ನಂತರದ ದಿನಗಳಲ್ಲಿ ಮಾಡಿದ ಸಿನಿಮಾಗಳು ಕೂಡಾ ಬಹುತೇಕ ಆ್ಯಕ್ಷನ್‌ ಹಿನ್ನೆಲೆಯಲ್ಲೇ ಸಾಗಿ ಬಂದು, ಮಾಸ್‌ ಪ್ರಿಯರನ್ನು ರಂಜಿಸಿದ ಕಾರಣ, ಚಿರಂಜೀವಿಗೆ  ಸಲೀಸಾಗಿ ಆ್ಯಕ್ಷನ್‌ ಹೀರೋ ಪಟ್ಟ ಹುಡುಕಿ ಬಂದಿತ್ತು. ಹಾಗಾಗಿ ಅವರಿಗೆ ಮಾಸ್‌ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿತ್ತು. ಗಂಡೆದೆ, ದಂಡಂ ದಶಗುಣಂ, ವರದನಾಯಕ, ರುದ್ರತಾಂಡವ, ಸಂಹಾರ, ಸೀಜರ್‌, ಸಿಂಗ, ಖಾಕಿ ಹೀಗೆ ಸಾಕಷ್ಟು  ಆ್ಯಕ್ಷನ್‌ ಸಿನಿಮಾಗಳಲ್ಲಿ ಚಿರು ತಮ್ಮ ಖದರ್‌ ತೋರಿಸಿದ್ದರು.

ಶಿವಾರ್ಜುನ ಕೊನೆಯ ಚಿತ್ರ: ಚಿರಂಜೀವಿ ಅವರು ಕೊನೆಯದಾಗಿ ನಟಿಸಿದ ಚಿತ್ರ “ಶಿವಾರ್ಜುನ’ . ಈ ಚಿತ್ರ ಲಾಕ್‌ಡೌನ್‌ ಘೋಷಣೆಯಾಗುವ ಕೆಲವೇ ದಿನಗಳ ಮುನ್ನ ಬಿಡುಗಡೆಯಾಗಿತ್ತು. ಆದರೆ, ಎರಡು ದಿನಗಳ ಕಾಲ ಪ್ರದರ್ಶನಗೊಂಡ  ನಂತರ ಲಾಕ್‌ಡೌನ್‌ ಘೋಷಣೆಯಾಗಿತ್ತು. ಹಾಗಾಗಿ ಆ ಚಿತ್ರದ ಪ್ರದರ್ಶನ ಸ್ಥಗಿತಗೊಂಡಿತ್ತು. ಲಾಕ್‌ಡೌನ್‌ ತೆರವಾದ ಬಳಿಕ ಶಿವಾರ್ಜುನ ಚಿತ್ರ ಪ್ರದರ್ಶನಕ್ಕೆ ಸಜ್ಜಾಗಿತ್ತು. ಈಗಲೂ ಬಿಡುಗಡೆಯಾಗಿದ್ದ  ಚಿತ್ರಮಂದಿರಗಳಲ್ಲಿ ಚಿತ್ರದ ಪೋಸ್ಟರ್‌,ಕಟೌಟ್‌ ಹಾಗೆಯೇ ಇದೆ. ಇದಕ್ಕೂ ಮುನ್ನ ಆದ್ಯ ಚಿತ್ರ ಬಿಡುಗಡೆಯಾಗಿತ್ತು.

ವಿಭಿನ್ನ ಜಾನರ್‌ನಲ್ಲಿ ಚಿರು: ಚಿರಂಜೀವಿ ಆ್ಯಕ್ಷನ್‌ ಹೀರೋ ಆಗಿದ್ದರೂ, ವಿಭಿನ್ನ ಪಾತ್ರಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಮೂಲಕ ಪ್ರಯೋಗ ಮಾಡುತ್ತಿದ್ದರು. ಕಾಮಿಡಿ, ಹಾರರ್‌, ಥ್ರಿಲ್ಲರ್‌ ಸಿನಿಮಾಗಳಲ್ಲಿ ಚಿರು ಕಾಣಿಸಿಕೊಂಡಿದ್ದರು. ಚಂದ್ರಲೇಖ, ಆಟಗಾರ, ವಿಷಲ್‌, ಆಕೆ ಚಿತ್ರಗಳು  ಹಾರರ್‌ ಕಥಾಹಂದರ ಹೊಂದಿದ್ದರೆ, ಅಮ್ಮಾ ಐ ಲವ್‌ಯು ಸಿನಿಮಾ ತಾಯಿ ಸೆಂಟಿಮೆಂಟ್‌ ಹೊಂದಿತ್ತು. ಇದರೊಂದಿಗೆ ಚಿರು ಪ್ರಯೋಗಾತ್ಮಕ ಚಿತ್ರಗಳಿಗೂ ಸೈ ಎಂದಿದ್ದರು. ಹಿರಿಯ  ನಿರ್ದೇಶಕ ನಾಗಾಭರಣ ಅವರ ಜುಗಾರಿ ಕ್ರಾಸ್‌ನಲ್ಲಿ ಚಿರು ನಾಯಕರಾಗಿದ್ದರು. ಆ ಚಿತ್ರಕ್ಕೆ ಮುಹೂರ್ತ ಕೂಡ ನಡೆದಿತ್ತು.

ಪ್ರೇಮ ವಿವಾಹ: ಚಿರಂಜೀವಿ ಸರ್ಜಾ ಅವರದು ಪ್ರೇಮ ವಿವಾಹ. ಕಲಾವಿದ ದಂಪತಿ ಸುಂದರರಾಜ್‌, ಪ್ರಮೀಳಾ ಜೋಷಾಯ್‌ ಅವರ ಪುತ್ರಿ ನಟಿ ಮೇಘನಾರಾಜ್‌ ಅವರನ್ನು ಮದುವೆಯಾಗಿದ್ದರು. ಮೇ 2, 2018ರಲ್ಲಿ ಅರಮನೆ  ಮೈದಾನದಲ್ಲಿ ನಡೆದ ಅದೂರಿ ವಿವಾಹ ಕಾರ್ಯಕ್ರಮದಲ್ಲಿ ಇಡೀ ಚಿತ್ರರಂಗವೇ ಪಾಲ್ಗೊಂಡಿತ್ತು.

ಮೇಘನಾ ಈಗ ಗರ್ಭಿಣಿ: ಚಿರಂಜೀವಿ ಪತ್ನಿ ಮೇಘನಾರಾಜ್‌ ಈಗ ಗರ್ಭಿಣಿ. ಪುಟ್ಟ ಕಂದನ ಆಗಮನದ ನಿರೀಕ್ಷೆಯಲ್ಲಿರುವಾಗಲೇ ಈ ರೀತಿಯ ಆಘಾತಕಾರಿ ಸುದ್ದಿ ಇಡೀ ಕುಟುಂಬಕ್ಕೆ ದೊಡ್ಡ ಆಘಾತ ತಂದಿದೆ.

ಹಿಟ್‌ ಚಿತ್ರ, ಹಾಡು: ಚಿರು ಅಭಿನಯಿಸಿದ ಹಲವು ಚಿತ್ರಗಳು ಯಶಸ್ಸು ಕಂಡಿವೆ. ದಂಡಂ ದಶಗುಣಂ, ರುದ್ರತಾಂಡವ, ಗಂಡೆದೆ, ಚಂದ್ರಲೇಖ, ಆಟಗಾರ, ಅಮ್ಮ ಐ ಲವ್‌ ಯು, ಸಿಂಗ ಸೇರಿದಂತೆ ಹಲವು ಚಿತ್ರಗಳು ಯಶಸ್ಸು ಕಂಡಿವೆ. ಚಿರು  ಚಿತ್ರದ “ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ’ ಹಾಗೂ ಇತ್ತೀಚೆಗೆ ತೆರೆಕಂಡ ಸಿಂಗಂ ಚಿತ್ರದ “ಶ್ಯಾನೆ ಟಾಪ್‌ ಆಗೌಳೆ ನಮ್‌ ಹುಡ್ಗಿ’ ಹಾಡು ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.

ಕೈಯಲ್ಲಿದ್ದ ಚಿತ್ರಗಳು: ಚಿರು ಸದಾ ಬಿಝಿಯಾಗಿದ್ದ ನಟ. ಹಾಗಾಗಿ ಅವರ ಕೈಯಲ್ಲಿನ್ನೂ ಸಾಕಷ್ಟು ಚಿತ್ರಗಳಿದ್ದವು. ರಾಜ ಮಾರ್ತಾಂಡ ಬಿಡುಗಡೆಯ ಹಾದಿಯಲ್ಲಿತ್ತು. ಜೊತೆಯಲ್ಲಿ ಏಪ್ರಿಲ್‌ ಸಿನಿಮಾದ ಮುಹೂರ್ತ ಕೂಡ ನಡೆದಿತ್ತು.  ಇದಲ್ಲದೆ ಧೀರಂ ಸೆಟ್ಟೇರಬೇಕಿತ್ತು.

ಅಣ್ತಮ್ಮನ ಬಾಂಧವ್ಯ: ಚಿರಂಜೀವಿ ಸರ್ಜಾ ಹಾಗೂ ಅವರ ಸಹೋದರ ಧ್ರುವ ಸರ್ಜಾ ಇಬ್ಬರೂ ಕನ್ನಡ ಚಿತ್ರರಂಗದ ಬೇಡಿಕೆ ನಟರು. ಆದರೆ, ಅವರಿಬ್ಬರ ಮಧ್ಯೆ ಯಾವುದೇ ಮನಸ್ತಾಪ, ಪೈಪೋಟಿ ಇರಲಿಲ್ಲ. ಸದಾ ಗೆಳೆಯರಂತೆಯೇ  ಜೊತೆಗಿದ್ದು, ತಮಾಷೆ ಮಾಡುತ್ತಿದ್ದರು. ಇತ್ತೀಚೆಗೆ ಲಾಕ್‌ಡೌನ್‌ ಘೋಷಣೆಯಾದ ನಂತರ ಇಡೀ ಕುಟುಂಬದ ಜೊತೆ ಕಳೆದ ಕ್ಷಣಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ ಧ್ರುವಸರ್ಜಾ ಅವರು ಚಿರುಗೆ ಕೈತುತ್ತು  ತಿನ್ನಿಸುತ್ತಿದ್ದ ದೃಶ್ಯ ಈಗ ವೈರಲ್‌ ಆಗಿದೆ. ಜೊತೆಯಲ್ಲಿ, ಶನಿವಾರವಷ್ಟೇ ಚಿರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಧ್ರುವ ಸರ್ಜಾ ಜೊತೆಗಿನ ಫೋಟೋ ಹಾಕಿಕೊಂಡಿದ್ದರು. ಅಂದು, ಇಂದು ನಾವೆಲ್ಲರೂ ಒಂದೇ.. ನೀವೇನು ಹೇಳುತ್ತೀರಿ ಎಂದು ಬರೆದುಕೊಂಡಿದ್ದರು.

ಸಂತಾಪ: ಚಿರಂಜೀವಿ ಸರ್ಜಾ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಸಂತಾಪ ಸೂಚಿಸಿದೆ. ಹಿರಿಯ ನಟ ದ್ವಾರಕೀಶ್‌, ರವಿಚಂದ್ರನ್‌, ಶಿವರಾಜಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಜಗ್ಗೇಶ್‌, ಸುದೀಪ್‌, ದರ್ಶನ್‌, ಯಶ್‌, ಪುನೀತ್‌,  ಶ್ರೀಮುರಳಿ, ಉಪೇಂದ್ರ, ನೀನಾಸಂ ಸತೀಶ್‌, ಸೃಜನ್‌, ನಿರ್ದೇಶಕ ಚೇತನ್‌, ಹಿರಿಯ ನಟಿ ಲೀಲಾವತಿ, ಹಿರಿಯ ನಟಿ ಹಾಗೂ ಸಂಸದೆ ಸುಮಲತಾ, ಅದಿತಿ, ತಾರಾ, ನಿರ್ಮಾಪಕ ಹಾಗೂ ನಿರ್ದೇಶಕರು ಸೇರಿ, ರಾಜಕೀಯದ ಗಣ್ಯರು ಸಂತಾಪ  ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next