ಹರಪನಹಳ್ಳಿ: ಅಪ್ರಾಪ್ತ ಬಾಲಕಿ ವಿವಾಹ ತಡೆದ ಅಧಿಕಾರಿಗಳು ಪೋಷಕರ ಮನವೊಲಿಸಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿದ ಘಟನೆ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದ ಪ್ರಕಾಶ್ ಹಾಗೂ ಕೆಂಚಮ್ಮ ಎಂಬುವರ ಪುತ್ರಿಯ ವಿವಾಹವನ್ನು ಹುಲಿಕಟ್ಟಿ ಗ್ರಾಮದ ಹನುಮಂತಪ್ಪ ಎಂಬುವವರ ಮಗ ಜೆ.ಬಸವರಾಜ್ ಎಂಬಾತನೊಂದಿಗೆ ನಿಗದಿಗೊಳಿಸಲಾಗಿತ್ತು. ಏ. 11ರಂದು ಬೆಳಗ್ಗೆ ವರನ ಸ್ವಗೃಹದಲ್ಲಿ ವಿವಾಹ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಶಾಲಾ ದಾಖಲೆಯ ಪ್ರಕಾರ ಬಾಲಕಿಯ ವಯಸ್ಸು ಕೇವಲ 15 ವರ್ಷ ಎಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿವಾಹ ತಡೆಹಿಡಿದಿದ್ದಾರೆ.
ಅಧಿಕಾರಿಗಳು, ಗ್ರಾಮಸ್ಥರು ಏ. 10ರಂದು ರಾತ್ರಿಯೇ ಮದುವೆ ಮಾಡದಂತೆ ಪೋಷಕರಿಗೆ ಎಚ್ಚರಿಕೆ ನೀಡಿದರು. ಆದರೂ ಕಣ್ಣು ತಪ್ಪಿಸಿ ಮದುವೆ ನಡೆಯಬಹುದು ಎಂಬ ಅತಂಕದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮಲೆಕ್ಕಾಧಿಕಾರಿ, ಪಿಡಿಒ, ನೇಸರ ಸಂಸ್ಥೆ ಹಾಗೂ ಪೊಲೀಸ್ ಇಲಾಖೆಯ ತಂಡ ಬುಧವಾರ ವರನ ಮನೆಗೆ ತೆರಳಿ ಅವರಿಗೆ ಬಾಲ್ಯ ವಿವಾಹದಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಿದರು. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಬಾಲಕಿಗೆ 18 ವರ್ಷ ತುಂಬುವವರೆಗೆ ಮದುವೆ ಮಾಡುವುದಿಲ್ಲ ಎಂದು ಪೋಷಕರು ಅಧಿಕಾರಿಗಳಿಗೆ ಮುಚ್ಚಳಿಕೆ ಪತ್ರವನ್ನು ಬರೆದುಕೊಟ್ಟಿದ್ದಾರೆ.
ಜಿಲ್ಲಾ ಮಕ್ಕಳ ಕಲ್ಯಾಣ ರಕ್ಷಣಾಧಿ ಕಾರಿ ಕೆ.ಎಚ್. ವಿಜಯಕುಮಾರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮನಾಯ್ಕ, ಸದಸ್ಯರಾದ ಎಲ್. ಮಂಜುನಾಥ, ಅಮೀರಬಾನು, ಶಿಶು ಅಭಿವೃದ್ಧಿ ಯೋಜನಾಧಿ ಕಾರಿ ಮಹಾಂತಸ್ವಾಮಿ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿ ಕಾರಿ ಕೆ.ಪಿ.ದೇವರಾಜ್, ತಾಪಂ ಸದಸ್ಯ ಎಚ್.ಚಂದ್ರಪ್ಪ, ಪೊಲೀಸ್ ಅಧಿಕಾರಿ ಅಪ್ಪಣ್ಣರೆಡ್ಡಿ, ನೇಸರ್ ಸಂಸ್ಥೆಯ ಕಾರ್ಯಕರ್ತ ಎಚ್. ಎಂ.ರಮೇಶ್, ಗ್ರಾಮಸ್ಥರಾದ ಪಿ.ಗಂಗಾಧರಪ್ಪ, ಬಿ. ಕೃಷ್ಣಪ್ಪ, ಟಿ.ಹೋಮ್ಯಪ್ಪ, ಹೊಳಿಯಪ್ಪ, ಶಿವಾನಂದಪ್ಪ ಇತರರಿದ್ದರು.