Advertisement

ಮೂಗಿನ ಗುಳ್ಳೆ ಚಿಕಿತ್ಸೆಗೆ ಹೋದ ಸದಸ್ಯ ಕೋಮಾ ಸ್ಥಿತಿಗೆ!

11:43 AM Nov 30, 2018 | |

ಬೆಂಗಳೂರು: ಮೂಗಿನಲ್ಲಿ ಸಣ್ಣ ಗುಳ್ಳೆಯಾಗಿದೆಯೆಂದು ಆಸ್ಪತ್ರೆಗೆ ಹೋದವರನ್ನು ಕೋಮಾ ಸ್ಥಿತಿಗೆ ತಲುಪಿಸಿದ ಖಾಸಗಿ ಆಸ್ಪತ್ರೆಯ ಕಾರ್ಯವೈಖರಿಗೆ ಸ್ವತಃ ಮೇಯರ್‌ ಅವರೇ ಆತಂಕ ವ್ಯಕ್ತಪಡಿಸಿದ್ದು, ಇಂತಹ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಪಕ್ಷಾತೀತವಾಗಿ ಎಲ್ಲಾ ಪಾಲಿಕೆ ಸದಸ್ಯರು ಒತ್ತಾಯಿಸಿದ ಘಟನೆ ಬಿಬಿಎಂಪಿ  ಸಭೆಯಲ್ಲಿ ಗುರುವಾರ ನಡೆಯಿತು. 

Advertisement

ಪಾಲಿಕೆ ಸಭೆಯಲ್ಲಿ ಮೊದಲಿಗೆ ಈ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ಮೂಗಿನಲ್ಲಿ ಚಿಕ್ಕ ಗುಳ್ಳೆಯಾಗಿದೆಯೆಂದು ಪಾಲಿಕೆ ಸದಸ್ಯ ಏಳುಮಲೈ ಅವರು ಫ್ರೆಜರ್‌ಟೌನನ ಸಂತೋಷ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅಲ್ಲಿ ಚಿಕಿತ್ಸೆ ಪಡೆದು ಕಳೆದ 19 ದಿನದಿಂದ ಕೋಮಾ ಸ್ಥಿತಿಯಲ್ಲಿದ್ದಾರೆ.

ಅವರ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಸಣ್ಣ ಪ್ರಮಾಣದ ಗುಳ್ಳೆಯೊಂದಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಲು ಹೋದ ಆಸ್ಪತ್ರೆ ವೈದ್ಯರು ಏಳುಮಲೈ ಅವರನ್ನು ಕೋಮಾ ಸ್ಥಿತಿಗೆ ತಲುಪಿಸಿದ್ದಾರೆ. ಹೀಗಾಗಿ ಕೂಡಲೇ ವರದಿ ತರಿಸಿಕೊಂಡು ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅದಕ್ಕೆ ದನಿಗೂಡಿಸಿದ ಮಾಜಿ ಮೇಯರ್‌ ಬಿ.ಎನ್‌.ಮಂಜುನಾಥರೆಡ್ಡಿ, ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ತಪಾಸಣೆಗೆ ಹೋದರೆ ಅನಗತ್ಯವಾಗಿ ಅನೇಕ ಪರೀಕ್ಷೆಗಳನ್ನು ಮಾಡಿಸಿ ಎಂದು ಸಾವಿರಾರು ರೂ. ಹಣ ಸುಲಿಗೆ ಮಾಡುತ್ತಾರೆ. ಜತೆಗೆ ಚಿಕಿತ್ಸೆಯನ್ನು ತಡ ಮಾಡುತ್ತಾರೆ. ಇದರಿಂದ ಶ್ರೀಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

ಈ ನಿಟ್ಟಿನಲ್ಲಿ ನಗರದ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್‌ ಹೋಂಗಳಲ್ಲಿ ಚಿಕಿತ್ಸೆಗೆ ಹೋದವರು ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ವರದಿ ತರಿಸಿಕೊಳ್ಳಿ ಎಂದು ಒತ್ತಾಯಿಸಿದರು. ಅದಕ್ಕೆ ಬೆಂಬಲ ಸೂಚಿಸಿದ ಮೇಯರ್‌, ಜನರು ವೈದ್ಯರನ್ನು ದೇವರೆಂದು ಕಾಣುತ್ತಾರೆ. ಆದರೆ, ವೈದ್ಯರು ರೋಗಿಗಳ ಆರೋಗ್ಯದ ವಿಚಾರದಲ್ಲಿ ಅಸಡ್ಡೆ ತೋರುತ್ತಿರುವುದು ಬೇಸರದ ವಿಚಾರ.

Advertisement

ನಂಬಿ ಬಂದವರ ಜೀವದ ಜತೆಗೆ ಆಟವಾಡುವುದು ಸರಿಯಲ್ಲ. ಇನ್ನು ಏಳುಮಲೈ ಅವರ ಆರೋಗ್ಯ ಹದಗೆಡಲು ಕಾರಣದವಾದ ನರ್ಸಿಂಗ್‌ ಹೋಂ ಅಕ್ರಮ ಕುರಿತು ತನಿಖೆ ಮಾಡಲು ಆದೇಶಿಸುತ್ತೇನೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿ ಒಳಗೊಂಡ ಸಂಪೂರ್ಣ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ಸರ್ಕಾರಿ ಶಾಲೆಗೆ ಎಲ್‌ಇಡಿ ಟಿವಿ: ಬಿಬಿಎಂಪಿ ರೋಶಿನಿ ಯೋಜನೆಯಡಿ ಗಾಂಧಿನಗರ ವಾರ್ಡ್‌ನಲ್ಲಿ ಡಿಜಿಟಲ್‌ ಟಿವಿ ಅಳವಡಿಸಿ ಅದರ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಕುರಿತಂತೆ ವಾರ್ಡ್‌ ಸದಸ್ಯೆ ಲತಾ ಕುವರ್‌ ರಾಥೋಡ್‌ ವಿವರಿಸಿದರು. ರೋಶಿನಿ ಯೋಜನೆಯಡಿ ಪಾಲಿಕೆ ವ್ಯಾಪ್ತಿಯ 156 ಸರ್ಕಾರಿ ಶಾಲೆಗಳನ್ನು ಮೈಕ್ರೋಸಾಫ್ಟ್‌, ಟೆಕ್‌ ಅವಂತ್‌ ಕಂಪನಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಸ್ಮಾಟ್‌ ತರಗತಿಗಾಗಿ 3ಲಕ್ಷ ರೂ. ವೆಚ್ಚದ 64 ಇಂಚಿನ 4ಕೆ ಡಿಸ್‌ಪ್ಲೇ ಹೊಂದಿದ ಎಲ್‌ಇಡಿ ಟಿವಿ ನೀಡಲಿದೆ.

ಜತೆಗೆ ಪಾಲಿಕೆ ಶಾಲೆ ಮಕ್ಕಳಿಗೆ ಟ್ಯಾಬ್‌ ನೀಡುವಂತಹ ಯೋಜನೆಯೂ ಇದೆ ಎಂದರು. ಯೋಜನೆಯ ಬಗ್ಗೆ ಎಲ್ಲ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ ಸಭೆಯ ಸದಸ್ಯರು ಇಂತಹ ಶಿಕ್ಷಣ ನೀಡುವ ಅವಶ್ಯಕತೆ ಇದೆ ಎಂದರು. ಜತೆಗೆ ರೋಶಿನಿ ಎಂಬುದನ್ನು ಹಿಂದಿ ಹೆಸರಾಗಿದ್ದು, ಬೆಳಕು ಎಂದು ಹೆಸರಿಡುವುದು ಸೂಕ್ತ. ಈ ಬಗ್ಗೆ ಪರಿಶೀಲಿಸಿ ಎಂದೂ ಸಲಹೆ ನೀಡಿದರು.

ಪಾಲಿಕೆ ಶಾಲಾ ಶಿಕ್ಷಕರಿಗೆ ಸಂಬಳ ನೀಡಲು ಆಗ್ರಹ: ರೋಶನಿ ಯೋಜನೆ ಕುರಿತು ಮಾತು ಮುಗಿಯುತ್ತಿದ್ದಂತೆ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುವ ಹೊರಗುತ್ತಿಗೆ ಶಿಕ್ಷಕರಿಗೆ ಬಿಬಿಎಂಪಿ ಕಳೆದ ನಾಲ್ಕು ತಿಂಗಳಿಂದ ವೇತನ ಬಾಕಿ ಉಳಿಸಿಕೊಂಡಿದೆ ಎಂದು ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರು. ಇದಕ್ಕೆ ಬೆಂಬಲ ನೀಡಿದ ಬಿಜೆಪಿ ಸದಸ್ಯರು ನಗರ ಸ್ವತ್ಛಗೊಳಿಸುವ ಪೌರಕಾರ್ಮಿಕರಿಗೆ ನೀಡುವ ವೇತನದಷ್ಟು ಹಣ ಸ್ನಾತಕೋತ್ತರ ಪದವಿ ಮಾಡಿದ ಹೊರಗುತ್ತಿಗೆ ಶಿಕ್ಷಕರಿಗೆ ಸಿಗುತ್ತಿಲ್ಲ.

ರೋಶಿನಿ ಯೋಜನೆಯಡಿ ಮಕ್ಕಳಿಗೆ ಕೌಶಲ್ಯಾಧಾರಿತ ಉತ್ತಮ ಶಿಕ್ಷಣ ನೀಡುತ್ತಿರುವುದು ಉತ್ತಮ ವಿಚಾರ ಆದರೆ, ಶಿಕ್ಷಕರಿಗೇಕೆ ಕನಿಷ್ಠ ವೇತನ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಗಂಗಾಂಬಿಕೆ, ಬಿಬಿಎಂಪಿ ಶಾಲೆಯ ಶಿಕ್ಷಕರಿಗೆ ಸಮರ್ಪಕವಾಗಿ ವೇತನ ಸಿಗುವಂತಹ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದರು.

ಜಂಟಿ ಆಯುಕ್ತರ ನೇಮಕಕ್ಕೆ ವಿರೋಧ: ಬೊಮ್ಮನಹಳ್ಳಿ, ಬೆಂಗಳೂರು ಪೂರ್ವ ಹಾಗೂ ಮಹದೇವಪುರ ವಲಯಗಳಿಗೆ ಹೊಸದಾಗಿ ನಿಯೋಜನೆಗೊಂಡಿರುವ ಜಂಟಿ ಆಯುಕ್ತರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ತಮ್ಮ ಪರಿಚಯ ಮಾಡಿಕೊಂಡರು.

ಈ ವೇಳೆ ಮಹದೇವಪುರ ವಲಯಕ್ಕೆ ನಿಯೋಜನೆಗೊಂಡ ಜಗದೀಶ್‌ ಎಂಬುವವರು ಪರಿಚಯ ಮಾಡಿಕೊಂಡ ನಂತರ ಆಕ್ಷೇಪ ವ್ಯಕ್ತಪಡಿಸಿದ ಪದ್ಮನಾಭರೆಡ್ಡಿ ಅವರು, ಕಾನೂನು ಪ್ರಕಾರ ಐಎಎಸ್‌ ಅಥವಾ ಕೆಎಎಸ್‌ ಅಧಿಕಾರಿಗಳು ಜಂಟಿ ಆಯುಕ್ತರಾಗಿ ನಿಯೋಜನೆಗೊಳ್ಳಬೇಕು ಎಂದಿದೆ. ಆದರೆ, ಇವರು ಯಾವುದೇ ಗ್ರೇಡ್‌ಗೂ ಸೇರಿಲ್ಲ. ಈ ಕುರಿತು ಪಾಲಿಕೆ ಆಯುಕ್ತರು ಉತ್ತರಿಸಬೇಕು ಎಂದರು. 

ಇದಕ್ಕುತ್ತರಿಸಿದ ವಿಶೇಷ ಆಯುಕ್ತ ರಂದೀಪ್‌, ಕಾನೂನು ಪ್ರಕಾರ ಐಎಎಸ್‌ ಅಥವಾ ಕೆಎಎಸ್‌ ಅಧಿಕಾರಿಗಳು ಜಂಟಿ ಆಯುಕ್ತರಾಗಿ ನಿಯೋಜನೆಗೊಳ್ಳಬೇಕು. ಆದರೆ, ನಗರಾಭಿವೃದ್ಧಿ ಇಲಾಖೆಯು ಈ ಪ್ರಕಾರ ನಿಯೋಜನೆ ಮಾಡಿದೆ. ಈ ವಿಷಯದಲ್ಲಿ ಪಾಲಿಕೆ ಯಾವ ಕ್ರಮ ಕೈಗೊಳ್ಳಲಾಗದು. ಈ ಕುರಿತು ಸರ್ಕಾರದಿಂದ ಮಾಹಿತಿ ಪಡೆದುಕೊಳ್ಳುವುದಾಗಿ ಹೇಳಿದರು. 

ಮಾಜಿ ಮೇಯರ್‌ ಸಭಾತ್ಯಾಗ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಐಡಿಎಲ್‌) ವತಿಯಿಂದ ನಡೆಯುತ್ತಿರುವ ಕಾಮಗಾರಿಗಳಲ್ಲಿ ಅಕ್ರಮ ನಡೆಯುತ್ತಿದ್ದು, ಈ ಬಗ್ಗೆ  ಕೆಆರ್‌ಐಡಿಎಲ್‌ ಅಧಿಕಾರಿಗಳು ಉತ್ತರ ನೀಡಬೇಕೆಂದು ಕಳೆದ ಸಭೆಯಲ್ಲಿ ಮಾಜಿ ಮೇಯರ್‌ ಮಂಜುನಾಥ ರೆಡ್ಡಿ ಪ್ರಶ್ನಿಸಿದ್ದರು. 

ಸಭೆಗೆ ಅಧಿಕಾರಿಗಳು ಬಾರದ ಹಿನ್ನೆಲೆ ಮುಂದಿನ ತಿಂಗಳ ಸಭೆಯಲ್ಲಿ ಉತ್ತರ ಕೊಡಿಸುವುದಾಗಿ ಮೇಯರ್‌ ಭರವಸೆ ನೀಡಿದ್ದರು. ಆದರೆ, ಈ ತಿಂಗಳ ಸಭೆಗೂ ಕೆಆರ್‌ಐಡಿಎಲ್‌ ಅಧಿಕಾರಿ ಬಂದಿಲ್ಲ. ಇದರಿಂದ ಬೇಸರಗೊಂಡ ಮಂಜುನಾಥರೆಡ್ಡಿ ಅವರು, ಅಧಿಕಾರಿಗಳು ಮೇಯರ್‌ ಮತ್ತು ಸಭೆಯ ಆದೇಶ ಪಾಲಿಸಿಲ್ಲ ಎಂದು ಸೆಟ್ಟಾಗಿ ನನಗೆ ಉತ್ತರ ಕೊಡಿಸಿ. ಇಲ್ಲವಾದಲ್ಲಿ ನಾನು ಸಭಾತ್ಯಾಗ ಮಾಡುವುದಾಗಿ ಹೇಳಿ ಹೊರನಡೆದರು. 

ಕೆಎಂಸಿ ಕಾಯಿದೆ ಸೆಕ್ಷನ್‌ 321(ಬಿ) ತಿದ್ದುಪಡಿಗೆ ಆಗ್ರಹ: ಬಿಬಿಎಂಪಿ ವ್ಯಾಪ್ತಿಯಲ್ಲಿ ನಕ್ಷೆ ಉಲ್ಲಂ ಸಿ ಕಟ್ಟಡ ನಿರ್ಮಿಸಲು ಕಾರಣರಾಗಿರುವ ಅಧಿಕಾರಿಗಳಿಗೆ ದಂಡ ಹಾಗೂ ಶಿಕ್ಷೆ ವಿಧಿಸಲು ಸರ್ಕಾರ ಕೆಎಂಸಿ ಕಾಯಿದೆ ತಿದ್ದುಪಡಿ ತಂದು ಕರಡು ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ಬಿಜೆಪಿ ಪಕ್ಷದ ಸದಸ್ಯರು ಕೌನ್ಸಿಲ್‌ ಸಭೆಯಲ್ಲಿ ತೀರ್ವ ಆಕ್ಷೇಪ ವ್ಯಕ್ತಪಡಿಸಿದರು.

ಬಿಬಿಎಂಪಿ ಸದಸ್ಯರ ಗಮನಕ್ಕೆ ತರದೆ ಕೆಎಂಸಿ ಕಾಯಿದೆ ತಿದ್ದುಪಡಿ ತರಲು ಮುಂದಾಗಿದ್ದು, ಇದರಿಂದ ನಗರದಲ್ಲಿರುವ ಶೇ.97 ಕಟ್ಟಡಗಳ ಮಾಲೀಕರು ಆತಂಕಕ್ಕೊಳಗಾಗಿದ್ದಾರೆ. ಅಲ್ಲದೆ, ಅಕ್ರಮ-ಸಕ್ರಮ ಅಡಿಯಲ್ಲಿ ಬರುವ ಕೆಲ ಅಂಶಗಳಿಗೂ ತಿದ್ದುಪಡಿ ತರುವ ಮೂಲಕ ಸುಪ್ರೀಂಕೋರ್ಟ್‌ ಆದೇಶ ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ, ಈ ಕುರಿತು  ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ಅದರಿಂದಾಗುವ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಬೇಕು ಎಂದು ಪದ್ಮನಾಭರೆಡ್ಡಿ ಆಗ್ರಹಿಸಿದರು.

ಕಸದ ಗುತ್ತಿಗೆದಾರನ ವಂಚನೆ ಪ್ರಕರಣ 
ಕಾವೇರಿಪುರ ವಾರ್ಡ್‌ನಲ್ಲಿ ಕಸ ವಿಲೇವಾರಿ ಗುತ್ತಿಗೆದಾರ ನರಸೇಗೌಡ ಎಂಬುವವರು ಮನೆಗೆಲಸ ಮಾಡುವವರು, ಕಾರು ಚಾಲಕರು ಜತೆಗೆ ತಮ್ಮ ಸಂಬಂಧಿಕರೆಲ್ಲರೂ ಪೌರಕಾರ್ಮಿಕರೆಂದು ಬಿಲ್‌ ಮಾಡುತ್ತಾ ಬಿಬಿಎಂಪಿಗೆ ವಂಚಿಸುತ್ತಿದ್ದಾರೆ. ಅವರ ಗುತ್ತಿಗೆಯನ್ನು ರದ್ಧುಗೊಳಿಸಬೇಕು ಎಂದು ಬಿಜೆಪಿ ಸದಸ್ಯ ಉಮೇಶ್‌ ಶೆಟ್ಟಿ ಸಭೆಯಲ್ಲಿ ಪ್ರಸ್ತಾಪಿಸಿದರು. 

ನಖಲಿ ಪೌರಕಾರ್ಮಿಕರಿಂದ ಪ್ರತಿದಿನ ಬಯೋಮೆಟ್ರಿಕ್‌ ಮಾಡಿಸಿ ಪಾಲಿಕೆಗೆ ಲಕ್ಷಾಂತರ ರೂ. ವಂಚಿಸುತ್ತಿರುವುದು ಮಾತ್ರವಲ್ಲದೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ಈ ವಿಷಯ ಬೆಳಕಿಗೆ ಬಂದ ಬಳಿಕ ಕೃಷ್ಣ ಎಂಟರ್‌ಪ್ರçಸಸ್‌ ಅವರಿಗೆ ಗುತ್ತಿಗೆ ನೀಡಲಾಗಿತ್ತು. ಮತ್ತೆ ಎರಡೇ ದಿನದೊಳಗಾಗಿ ಹೊಸದಾಗಿ ಗುತ್ತಿಗೆ ನೀಡಿದ್ದನ್ನು ರದ್ದುಗೊಳಿಸಿ ಹಳೆಯ ಗುತ್ತಿಗೆದಾರನಿಗೆ ಕಸ ವಿಲೇವಾರಿ ಜವಾಬ್ದಾರಿ ವಹಿಸಲಾಗಿದೆ.

ಈ ಬಗ್ಗೆ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಕೇಳಿದರೆ ಆಯುಕ್ತರು ಮೌಖೀಕ ಆದೇಶ ನೀಡಿದ್ದಾರೆ ಎಂದು ಹೇಳುತ್ತಾರೆ. ಇನ್ನು ಈ ಬಗ್ಗೆ ಸ್ಥಳೀಯ ಶಾಸಕ ವಿ.ಸೋಮಣ್ಣ ಪ್ರಶ್ನೆ ಮಾಡಿದರೂ ಸಮರ್ಪಕ ಉತ್ತರವಿಲ್ಲ. ಹೀಗಾಗಿ, ನರಸೇಗೌಡ ಅವರಿಗೆ ಗುತ್ತಿಗೆ ರದ್ದುಪಡಿಸಿ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ದನಿಗೂಡಿಸಿ ಶಾಸಕರ ಮಾತಿಗೂ ಬೆಲೆ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ಇವರಿಗೆ ಬೆಂಬಲವಾಗಿ ಮಾಜಿ ಮೇಯರ್‌ಗಳಾದ ಕಟ್ಟೆ ಸತ್ಯ, ಶಾಂತಕುಮಾರಿ ನಿಂತರು. ಇದಕ್ಕುತ್ತರಿಸಿದ ಆಯುಕ್ತ ರಂದೀಪ್‌, ಪ್ರಸ್ತುತ ಟೆಂಡರ್‌ ಕರೆದಿಲ್ಲವಾದ್ದರಿಂದ ಹಿಂದಿನವರಿಗೆ ಗುತ್ತಿಗೆ ಮುಂದುವರಿಸಲು ಸೂಚಿಸಿದೆ. ಕೆಲವೇ ದಿನಗಳಲ್ಲಿ ಟೆಂಡರ್‌ ಕರೆಯುವ ಸಾಧ್ಯತೆ ಇದೆ. ಇನ್ನು ಕಸ ಸಮರ್ಪಕ ವಿಲೇವಾರಿ ಆಗದಿರುವ ಕುರಿತು ಪರಿಶೀಲನೆ ಮಾಡಲಾಗುವುದು ಎಂದರು. ಆಯುಕ್ತ ಮಾತಿಗೆ ಒಪ್ಪದೆ ಮಾತಿನ ಚಕಮಕಿ ಉಂಟಾಯಿತು. ಈ ಕಾರಣಕ್ಕೆ ಮೇಯರ್‌ ಅವರು ಸಭೆಯನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next