Advertisement

ದಾನಗಳಲ್ಲೇ ಶ್ರೇಷ್ಠ ಅಂಗದಾನ 

12:30 AM Feb 10, 2019 | |

“ಪರೋಪಕಾರಾಯ ಇದಂ ಶರೀರಂ’ ಎಂಬುದು ಪುರಾಣೋಕ್ತಿ. ಇದನ್ನು ಪುಷ್ಟೀಕರಿಸುವಂತೆ ಅನೇಕ ಪುರಾಣ ಪುರುಷರ ಉದಾಹರಣೆಗಳು ನಮ್ಮಲ್ಲಿ ಇವೆ. ತನ್ನ ಬೆನ್ನಮೂಳೆಯಲ್ಲಿ ಸಂಗ್ರಹಿಸಿಟ್ಟ ದೇವತೆಗಳ ಶಸ್ತ್ರಗಳನ್ನು ಹಿಂದಿರುಗಿಸಲು ಯೋಗ ಬಲದಿಂದಲೇ ದೇಹತ್ಯಾಗ ಮಾಡಿದ ದಧೀಚಿ ಮಹರ್ಷಿಯ ಕತೆ ಇದೆ. ಯಜ್ಞ ದೀಕ್ಷಿತನಾಗಿ ಕುಳಿತಿದ್ದಾಗ ಬಂದ ಪಾರಿವಾಳವನ್ನು ಗಿಡುಗನ ಬಾಯಿಯಿಂದ ರಕ್ಷಿಸಲು ತನ್ನ ದೇಹವನ್ನೇ ಗಿಡುಗನಿಗೆ ಒಪ್ಪಿಸಿದ ಶಿಬಿ ಚಕ್ರವರ್ತಿಯ ಉದಾಹರಣೆಯೂ ಇದೆ. (ಇಂದ್ರ ಗಿಡುಗನ ರೂಪದಲ್ಲೂ ಅಗ್ನಿ ಪಾರಿವಾಳದ ರೂಪದಲ್ಲೂ ಬಂದುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬೇಕು.) ಇನ್ನು ಶುನಶೆÏàಫ‌, ಮಯೂರಧ್ವಜ ಮುಂತಾದವರ ಉದಾಹರಣೆಗಳನ್ನೂ ಗಮನಿಸಬಹುದು. 

Advertisement

ವರ್ತಮಾನಕಾಲಕ್ಕೆ ಬರುವಾಗ ಅಂಗಾಂಗ ದಾನದ ಮಹತ್ವವನ್ನು ಸಾರುವ ಪುಣೆ ಮೂಲದ ಪ್ರಮೋದ ಲಕ್ಷ್ಮಣ ಮಹಾಜನ ಎಂಬ 67 ವರ್ಷದ ವ್ಯಕ್ತಿ ಇತ್ತೀಚೆಗೆ ಮಂಗಳೂರಿಗೆ ಬಂದಾಗ ಅವರನ್ನು ರೆಡ್‌ಕ್ರಾಸ್‌ ಸಂಸ್ಥೆ ಹಾಗೂ ವೆನ್‌ಲಾಕ್‌ ಆಸ್ಪತ್ರೆಯ ಆಡಳಿತ ವರ್ಗದಿಂದ ಸ್ವಾಗತಿಸಿ ಸಮ್ಮಾನಿಸಲಾಯಿತು. ಅಂಗಾಂಗ ದಾನದ ಸಂದೇಶ ಸಾರಲು ಅಕ್ಟೋಬರ್‌ 21ರಂದು ಬೈಕ್‌ ಯಾತ್ರೆ ಆರಂಭಿಸಿ ಅವರು ಅದಾಗಲೇ 18 ರಾಜ್ಯಗಳಲ್ಲಿ ಸುಮಾರು 10 ಸಾವಿರ ಕಿ.ಮೀ. ದೂರ ಕ್ರಮಿಸಿದ್ದಾರೆ. 

ಕಿಡ್ನಿ ದಾನ ಮಾಡುವ ಕುರಿತು ಅವರಲ್ಲಿ ಯೋಚನೆ ಮೊಳಕೆ ಒಡೆದದ್ದು ಹೇಗೆ ? ಸುಮಾರು ಏಳೆಂಟು ವರ್ಷಗಳ ಹಿಂದೆ ಪರಿಚಯದ ಯೋಧನೊಬ್ಬನ ಎರಡೂ ಮೂತ್ರಪಿಂಡಗಳು ಕೆಟ್ಟು ಅವನು ಸಾಯುವ ಸ್ಥಿತಿಯಲ್ಲಿದ್ದಾಗ ತನ್ನ ಒಂದು ಮೂತ್ರಪಿಂಡವನ್ನು ದಾನವಾಗಿ ನೀಡಿ ಆತನಿಗೆ ಬದುಕು ನೀಡಿದ ಹೆಮ್ಮೆ ಇವರದು. ಅಂದಿನಿಂದಲೇ ಇವರ “ಅಂಗಾಂಗ ದಾನ ಜಾಗೃತಿ’ ಕಾರ್ಯಕ್ರಮ ಪ್ರಾರಂಭವಾಯಿತು. ಅಂಗಾಂಗ ದಾನ ಕಾರ್ಯಕ್ರಮದ ಮೂರ್ತಿ ಎಷ್ಟೋ ಜನರ ಪ್ರಾಣ ಉಳಿಸಲು “ಪುಣೆಯ ರಿಬರ್ತ್‌ ಫೌಂಡೇಶನ್‌’ ಜತೆಗಿನ ಇವರ ಸಹಯೋಗ ಫ‌ಲಕೊಟ್ಟಿದೆ. ಅಂಗಾಂಗ ದಾನದ ಮಹತ್ವ ತಿಳಿಸಿರುವವರಲ್ಲಿ ಇವರೇ ಮೊದಲಿಗರೇನಲ್ಲ. ಈ ಹಿಂದೆ ಮಹಾರಾಷ್ಟ್ರದ ಕೆಲವೆಡೆ ಬೇಕಾದಷ್ಟು ಮಂದಿ ಅಂಗಾಂಗ ದಾನ ಮಾಡುವ ಮೂಲಕ ಮಾದರಿಯಾಗುವುದರ ಜತೆ ಸಾರ್ವಜನಿಕರಲ್ಲಿ ಜಾಗೃತಿಯನ್ನೂ ಮಾಡಿಸಿದ್ದಾರೆ. 

ಅವರಲ್ಲಿ ಒಬ್ಬರಾದ ಕಿಶನ್‌ ಭಾಯಿ ಮೆಹತಾ 
ಎಂಬ ಸಣ್ಣಮಟ್ಟದ ಮುಂಬಯಿ ವ್ಯಾಪಾರಿಯೊಬ್ಬರು ಹೆಂಡತಿ ವೀಣಾ ಅವರ ಇಚ್ಛೆಯಂತೆ ಆಕೆಯ ಮರಣಾನಂತರ (3-9-1986) ದೇಹವನ್ನು ದಾನವಾಗಿ ಕೊಡಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಆಕೆಯ ಕಣ್ಣುಗಳನ್ನಷ್ಟೇ ಸ್ವೀಕರಿಸಿದ ಆಸ್ಪತ್ರೆಯ ವೈದ್ಯರು ದೇಹವನ್ನು ಸ್ವೀಕರಿಸಲು ನಿರಾಕರಿಸಿದಾಗ ಕೋರ್ಟಿನ ಮೊರೆ ಹೋಗದೆ ಕಿಶನ್‌ ಭಾಯಿಗೆ ಬೇರೆ ಮಾರ್ಗವಿರಲಿಲ್ಲ. ಆಸ್ಪತ್ರೆಯಿಂದ ಹೊರತಂದ 
ಶವವನ್ನು ಕೆಡದಂತೆ ಕಾಪಾಡುವುದರ ಜತೆ ಕೋರ್ಟಿನಿಂದ ಆದೇಶ ಪತ್ರ ಪಡೆಯುವುದು ಒಂದು ಸವಾಲಾಯಿತು ಅವರಿಗೆ. ಕೊನೆಗೂ ಆದೇಶ ಪತ್ರ ಸಿಕ್ಕಿ ಅದನ್ನು ಜಿ.ಎಸ್‌. ಮೆಡಿಕಲ್‌ ಕಾಲೇಜಿನ ಪ್ರಿನ್ಸಿಪಾಲರಿಗೆ ಒಪ್ಪಿಸುವಾಗ ಇಪ್ಪತ್ತು ಗಂಟೆಗಳೇ ಕಳೆದಿದ್ದವು. ಹೀಗೆ ಪತ್ನಿಯ ಶವವನ್ನು ಆಸ್ಪತ್ರೆಗೆ ಒಪ್ಪಿಸಿ ಹೆಂಡತಿಯ ಕೊನೆಯಾಸೆ ಪೂರೈಸಿದಾಗ ಯುದ್ಧ ಜಯಿಸಿದ 
ಅನುಭವ ಕಿಶನ್‌ ಭಾಯಿಯವರದಾಗಿತ್ತು. ಅನಂತರ ಅಲ್ಲಲ್ಲಿ ಅಂಗ ದಾನದ ಕಾರ್ಯಕ್ರಮಗಳು ನಡೆದವು. ಈಗಲೂ ನಡೆಯುತ್ತಿವೆ. ಕೆಲವು ಸಂಘ ಸಂಸ್ಥೆಗಳು ದೇಹದಾನ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಸಹಕರಿಸುವ ಜತೆ ಕೆಲವು ಕಾಲೇಜುಗಳಲ್ಲಿ ಸಹ ದೇಹದಾನ ಸ್ವೀಕರಿಸುವ ವ್ಯವಸ್ಥೆಯೂ ಇದೆ. ದಾವಣಗೆರೆಯ ಮೆಡಿಕಲ್‌ ಕಾಲೇಜು, ಮೈಸೂರಿನ ಜೆ.ಎಸ್‌.ಎಸ್‌. ಮೆಡಿಕಲ್‌ ಕಾಲೇಜು, ಹುಬ್ಬಳ್ಳಿಯ ಮೆಡಿಕಲ್‌ ಕಾಲೇಜು, ಬಾಗಲಕೋಟೆಯ ಎಸ್‌. ನಿಜಲಿಂಗಪ್ಪ ಮೆಡಿಕಲ್‌ ಕಾಲೇಜು, ಮಣಿಪಾಲದ ಕಸ್ತೂರ್ಬಾ ಮೆಡಿಕಲ್‌ ಕಾಲೇಜು ಮುಂತಾದವುಗಳು ಕರ್ನಾಟಕದಲ್ಲಿ ಹೆಸರು ಮಾಡಿವೆ. ಪುಣೆಯ ರಿಬರ್ತ್‌ ಫೌಂಡೇಶನ್‌ ಎಂಬ ಸಂಸ್ಥೆಯ ಕೆಲಸ ಕಾರ್ಯಗಳಿಂದ ಪ್ರೇರಿತರಾದ ಪುಣೆಯ ಪ್ರಮೋದ ಲಕ್ಷ್ಮಣ ಮಹಾಜನರಂತೆ ಡಾ| ವಸಂತ ಕುಲಕರ್ಣಿ, ಮಠಪತಿ ವಕೀಲರು ಸೇರಿದಂತೆ ಡಾ| ನಾಗಲೋಟಿ ಮಠ ಮುಂತಾದವರು ಈ ನಿಟ್ಟಿನಲ್ಲಿ ಹೆಚ್ಚು ಶ್ರಮ ವಹಿಸಿದ್ದಾರೆ. 

ಇದು 3-4 ವರ್ಷಗಳ ಹಿಂದಿನ ಘಟನೆ, ಕೇರಳದ ಚಾಲಕ್ಕುಡಿಯ ರಿಕ್ಷಾಚಾಲಕ ಅಚದಾನ್‌ ಮ್ಯಾಥುÂವಿನ ಆರೋಗ್ಯದಲ್ಲಿ ಏಕಾಏಕಿ ಏರುಪೇರಾದಾಗ ಆತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು. ಹೃದಯದ ತೊಂದರೆ ಇದ್ದು ಬದಲಿ ಹೃದಯದ ಜೋಡಣೆಯೇ ಅದಕ್ಕೆ ಪರಿಹಾರ ಎಂದು ವೈದ್ಯಕೀಯ ವರದಿ ತಿಳಿಸಿದಾಗ ಮ್ಯಾಥ್ಯೂವಿನ ಕುಟುಂಬ ಆತಂಕಕ್ಕೊಳಗಾಯಿತು. ಹೃದಯ ಶಸ್ತ್ರಚಿಕಿತ್ಸೆಗಾಗಿ 15-20 ಲಕ್ಷ ರೂಪಾಯಿಗಳ ವೆಚ್ಚವನ್ನು ಹೊಂದಿಕೊಳ್ಳುವುದು ಆತನ ಮಟ್ಟಿಗೆ ಕಷ್ಟವೇ. ರಿಕ್ಷಾ ಚಾಲಕನಾಗಿರುವ ಮ್ಯಾಥ್ಯೂವಿನ ದೈನಂದಿನ ಸಂಪಾದನೆ ಆತನ ಕುಟುಂಬ ನಿರ್ವಹಣೆ ಮಟ್ಟಿಗೆ ಸಾಕಾಗುತ್ತಿತ್ತೆ ವಿನಃ ಉಳಿತಾಯವೇನೂ ಇರಲಿಲ್ಲ. ಆಗ ಆಪ್ತರೆನಿಸಿದವರ ಹಾಗೂ ಸಂಬಂಧಿಕರ ಸಹಕಾರದಿಂದ ಹಾಗೂ ಸರಕಾರ ಮತ್ತು ಕೆಲವು ಸ್ವಯಂ ಸೇವಾ ಸಂಸ್ಥೆಗಳು ನೀಡಿದ ದೇಣಿಗೆಗಳಿಂದ ಸಂಗ್ರಹಿಸಿದ ಹಣ ಶಸ್ತ್ರಕ್ರಿಯೆಯ ವೆಚ್ಚ ಭರಿಸುವಷ್ಟಾದರೂ ಹೃದಯದಾನಿಗಳನ್ನು ಹುಡುಕುವ ಕೆಲಸ ಇದಿರಾಯಿತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದು ತಿರುವನಂತಪುರದ ಸರಕಾರಿ ಕೃಷಿ ಇಲಾಖೆಯ ಅಧಿಕಾರಿ ಲತಾ ಶರ್ಮ ಎಂಬ ಮಹಿಳೆ. ಅನಾರೋಗ್ಯದ ನಿಮಿತ್ತ ವಕೀಲರಾಗಿದ್ದ ಪತಿ ನೀಲಕಂಠ ಶರ್ಮರು ಸಾವಿಗೀಡಾದಾಗ ಪತಿಯ ಎಲ್ಲ ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬಂದ ಲತಾ ಶರ್ಮ ಅವರನ್ನು ಸಂಪರ್ಕಿಸಿ ಹೃದಯವನ್ನು ದಾನವಾಗಿ ಪಡೆಯಲಾಯಿತು. ಶಸ್ತ್ರಕ್ರಿಯೆ ನಡೆಯಲಿರುವ ಕೊಚ್ಚಿಯ ಲೂರ್ಡ್ಸ್‌ ಆಸ್ಪತ್ರೆ ಮತ್ತು ನೀಲಕಂಠ ಶರ್ಮರು ದಾಖಲಾಗಿದ್ದ ತಿರುವನಂತಪುರದ ಸ್ವಾತಿ ತಿರುವಾಳ್‌ ಆಸ್ಪತ್ರೆಯ ವೈದ್ಯರೊಳಗೂ ಸಮನ್ವಯದಂತೆ ಶರ್ಮರ ಹೃದಯವನ್ನೂ ತಿರುವನಂತಪುರ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ವಿಶೇಷ ವಿಮಾನದಿಂದ ರವಾನಿಸಿ ಆಗಲೇ ಕೊಚ್ಚಿಯ ಆಸ್ಪತ್ರೆಗೆ ದಾಖಲಾಗಿದ್ದ ಮ್ಯಾಥ್ಯೂವಿನ ದೇಹ ಸೇರಿ ಉಸಿರಾಡತೊಡಗಿತು.

Advertisement

 ಯಾವ ಅಂಗಚ್ಛೇದ ಮಾಡದೆ ಪೂರ್ಣ ಪ್ರಮಾಣದ ಶವಕ್ಕೆ ಅಗ್ನಿಸ್ಪರ್ಶದ ಮೂಲಕವಾಗಿ ಅಂತ್ಯಸಂಸ್ಕಾರ ಮಾಡಬೇಕು ಎಂಬ ಪ್ರಬಲವಾದ ನಿಲುವು ಹೊಂದಿದ ನಿಷ್ಠಾವಂತ ಬ್ರಾಹ್ಮಣ ಸಮುದಾಯದ ಹಿನ್ನೆಲೆ ಹೊಂದಿದ್ದು ಈ ಎಲ್ಲವನ್ನೂ ಮೀರಿ ಹೃದಯದಾಸರ ಮೂಲಕ ಮಾನವತೆ ತೋರಿಸಿದ ಲತಾ ಶರ್ಮರ ನಿಲುವು ಮಾಧ್ಯಮದವರ ಹಾಗೂ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಸ್ವತಃ ಕೇರಳದ ಮುಖ್ಯಮಂತ್ರಿಯವರು ಲತಾರವರ ಮನೆಗೆ ಬಂದು ಅವರನ್ನು ಅಭಿನಂದಿಸಿದರು. ಬಯಸದಿದ್ದರೂ ಲತಾ ಅವರಿಗೆ ಸಾರ್ವಜನಿಕರಿಂದ ಸಮ್ಮಾನವೂ ಜರಗಿತು. 

ಅದರ ಬೆನ್ನಲ್ಲೇ ನಡೆದ ಈ ಘಟನೆ ನಡೆದದ್ದು ಬೆಂಗಳೂರಿನಲ್ಲಿ. ಕರ್ನಾಟಕ ತಮಿಳುನಾಡಿನ ಗಡಿಯಂಚಿನ ಹೊಸೂರಿನಲ್ಲಿ ದ್ವಿಚಕ್ರದಲ್ಲಿ ಪಯಣಿಸುತ್ತಿದ್ದ 35ರ ಆಸುಪಾಸಿನ ಮಹಿಳೆಯೊಬ್ಬಳು ಅಪಘಾತಕ್ಕೀಡಾದಾಗ ಸಮೀಪದ ಬಿಜಿಎಲ್‌ ಗ್ಲೋಬಲ್‌ ಆಸ್ಪತ್ರೆಗೆ ದಾಖಲಾದಳು. ವೈದ್ಯರ ಸತತ ಪ್ರಯತ್ನದಿಂದಲೂ ಮಹಿಳೆಯನ್ನು ಉಳಿಸಲಾಗಲಿಲ್ಲ. ಆಗ ಆಕೆಯ ಕುಟುಂಬದವರೊಡನೆ ವಿಚಾರ ವಿನಿಮಯ ನಡೆಸಿದ ಅಲ್ಲಿನ ವೈದ್ಯರ ತಂಡ ಆಕೆಯ ಅಂಗಾಂಗಗಳನ್ನು ದಾನ ಮಾಡುವಂತೆ ಅವರ ಮನವೊಲಿಸಿದರು. ಅದಕ್ಕವರು ಪೂರಕವಾಗಿ ಸ್ಪಂದಿಸಿದಾಗ ಹೃದಯದ ಹೊರತಾಗಿ ಉಳಿದ ಅಂಗಗಳನ್ನು ಬೆಂಗಳೂರಿನ ಫ‌ಲಾನುಭವಿ ರೋಗಿಗಳಿಗೆ ದಾನ ಮಾಡಲಾಯಿತು. ಹೃದಯವನ್ನು ಚೆನ್ನೈ ನಿವಾಸಿ ಓರ್ವ ಯುವಕನಿಗೆ ಜೋಡಿಸಲು ಅಲ್ಲಿನ ಪೋರ್ಟಿಸ್‌ ಮಲಾರ ಆಸ್ಪತ್ರೆಗೆ ಕಳಿಸುವ ಏರ್ಪಾಟು ಮಾಡಲಾಯಿತು. ದೇಹದಿಂದ ಹೊರ ತೆಗೆಯಲ್ಪಟ್ಟ ಹೃದಯ 6 ತಾಸಿನ ಅವಧಿಯೊಳಗೆ ಫ‌ಲಾನುಭವಿ ರೋಗಿಯ ದೇಹದೊಳಗೆ ಜೋಡಿಸದಿದ್ದರೆ ನಿಷ್ಕ್ರಿಯವಾಗುತ್ತದೆ. ಆದುದರಿಂದ ಹೃದಯ ಜೋಡಣೆ ಪ್ರಕ್ರಿಯೆ ಶೀಘ್ರಗತಿಯಲ್ಲಿ ನಡೆಯಬೇಕು. ಅದರಂತೆ ಬೆಂಗಳೂರಿನ ಬಿಜಿಎಲ್‌ ಗ್ಲೋಬಲ್‌ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಕನಿಷ್ಠ ಅವಧಿಯೊಳಗೆ ವಿಶೇಷ ದ್ರಾವಣದಲ್ಲಿ ಹೃದಯವನ್ನಿರಿಸಿದ ಪೆಟ್ಟಿಗೆಯನ್ನು ತಲುಪಿಸಿ ಅಲ್ಲಿಂದ ವಿಶೇಷ ವಿಮಾನದ ಮೂಲಕ ಚೆನ್ನೈಗೆ ತಲುಪಿದ ಪೆಟ್ಟಿಗೆಯನ್ನು ತತ್‌ಕ್ಷಣ ಅವಧಿಯಲ್ಲಿ ವಿಮಾನ ನಿಲ್ದಾಣದಿಂದ ಫೋರ್ಟಿಸ್‌ ಆಸ್ಪತ್ರೆಗೆ ತಲುಪಿಸಲು ಪೊಲೀಸರು ತೋರಿಸಿದ ಸಹಕಾರವನ್ನು ಮೆಚ್ಚಲೇಬೇಕು. ಎರಡೂ ರಾಜ್ಯಗಳ ಪೊಲೀಸರು ಸಂಚರಿಸುವ ಮಾರ್ಗದಲ್ಲಿ ಇತರ ವಾಹನಗಳ ಓಡಾಟವನ್ನು ನಿಷೇಧಿಸಿ ಹೃದಯ ಪೆಟ್ಟಿಗೆ ಹೊತ್ತ ವಾಹನದ ಸುಗಮ ಸಂಚಾರಕ್ಕೆ ಅನುಕೂಲ ಆಗುವ ಹಾಗೆ ಮಾರ್ಗದುದ್ದಕ್ಕೂ ತಡೆರಹಿತ ಗ್ರೀನ್‌ ಕಾರಿಡಾರ್‌ (ಇತರ ವಾಹನಗಳ ಸಂಚಾರಕ್ಕೆ ತಡೆ ಹಾಕುವ ವ್ಯವಸ್ಥೆ) ಕಲ್ಪಿಸಿಕೊಟ್ಟರು. ಹೃದಯ ಚೆನ್ನೈ ತಲುಪಿಸುತ್ತಿದ್ದಂತೆ ಅಲ್ಲಿನ ವೈದ್ಯರ ತಂಡ ಯುವಕನಿಗೆ ಹೃದಯ ಜೋಡಣೆ ಕೆಲಸ ಮಾಡಿ ಆತನಿಗೆ ಜೀವ ದಾನ ಮಾಡಿದರು. ಜೀವಂತ ಹೃದಯವನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಾಗಿಸಿ ಕಸಿ ಮಾಡಿದ್ದು ರಾಜ್ಯದಲ್ಲೇ ಪ್ರಥಮವೆಂಬ ಹೆಗ್ಗಳಿಕೆ ಪಾತ್ರವಾಗಿ ದೊಡ್ಡ ಸುದ್ದಿ ಮಾಡಿತು.

ಅಂಗಾಂಗ ದಾನದ ಕುರಿತು ಆಗಾಗ ಕಾರ್ಯಕ್ರಮಗಳು ನಡೆದು ಜನರನ್ನು ಮುಖ್ಯವಾಗಿ ನಮ್ಮ ಯುವ ಜನಾಂಗವನ್ನು ಈ ನಿಟ್ಟಿನಲ್ಲಿ ಯೋಚಿಸುವಂತೆ ಮಾಡುವುದು ಒಂದು ಅಭಿಯಾನವೇ ಆಗಬೇಕಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಇತ್ತೀಚೆಗೆ ಅಂಗದಾನದ ಕುರಿತು ಅರಿವು ಮೂಡಿಸಲು ಒಂದು ಉಪಯುಕ್ತ ಕಾರ್ಯಕ್ರಮ ನಡೆದು ನಲ್ವತ್ತಕ್ಕೂ ಮೇಲ್ಪಟ್ಟ ವಿದ್ಯಾರ್ಥಿಗಳು ತಮ್ಮ ಅಂಗದಾನ ಮಾಡುವ ಪ್ರತಿಜ್ಞೆ ಮಾಡಿದ್ದು ಮೆಚ್ಚತಕ್ಕ ವಿಚಾರ.

ಕೆ. ಶಾರದಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next