Advertisement

ಸರ್ಕಾರದ ಗ್ಯಾರಂಟಿ ಯೋಜನೆ ಲಂಚ ಇದ್ದಂತೆ; ನ್ಯಾ.ಸಂತೋಷ್‌ ಹೆಗ್ಡೆ

04:57 PM Jul 21, 2023 | Team Udayavani |

ಹಾಸನ: ಸರ್ಕಾರ ನೀಡುತ್ತಿರುವ ಐದು ಗ್ಯಾರಂಟಿಗಳು ಲಂಚ ಇದ್ದಂತೆ. ಮತ ಪಡೆಯಲು ಲಂಚ ಕೊಟ್ಟಿದ್ದಾರೆ ಎಂದು ಸರ್ವೋತ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ, ನಿವೃತ್ತ ಲೋಕಾಯುಕ್ತ ಎನ್‌. ಸಂತೋಷ್‌ ಹೆಗ್ಡೆ ಅವರು ಆರೋಪಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಗಳಿಗೆ ಖರ್ಚು ಮಾಡುವ ಮೊತ್ತ ಯಾರ ಮೇಲೆ ಬೀಳುತ್ತದೆ? ಜನರ ಮೇಲೆ, ತೆರಿಗೆದಾರರ ಮೇಲೆ, ಈಗಾಗಲೇ ವಿದ್ಯುತ್‌ ದರ ಹೆಚ್ಚಿಸಿದ್ದಾರೆ. ಮುಂದೆ ಬಹಳಷ್ಟು ಆರ್ಥಿಕ ತೊಂದರೆ ಬರಬಹುದು. ಇದನ್ನೆಲ್ಲಾ ಅಧಿಕಾರಕ್ಕೆ ಬರಲು ದುರ್ಬಳಕೆ ಮಾಡಿದ್ದಾರೆ ಎಂದು ದೂರಿದರು.

ವಿಪಕ್ಷ ನಾಯಕನ ಹುದ್ದೆ ಮಹತ್ವದು: ವಿಪಕ್ಷದ ನಾಯಕನಿಲ್ಲದೇ ಇರುವುದಕ್ಕೂ, ಅಧಿವೇಶನಕ್ಕೂ ಏನೂ ಸಂಬಂಧವಿಲ್ಲ. ಸಂವಿಧಾನದಲ್ಲೂ ವಿಪಕ್ಷದ ನಾಯಕನಿಲ್ಲದೆ ಕಲಾಪಗಳು ನಡೆಯಬಾರದು ಎಂದೇನೂ ಇಲ್ಲ. ಆದರೆ, ಒಂದು ರೀತಿ ನಿರ್ಲಕ್ಷ್ಯ ಅಂತ ಕಾಣುತ್ತದೆ. ಪ್ರಜಾಪ್ರಭುತ್ವದಲ್ಲಿ ಆ ಹುದ್ದೆ ಇರಬೇಕಿತ್ತು. ಸರ್ಕಾರ ರಚನೆಯಾಗಿ ಎರಡು ತಿಂಗಳಾದರೂ ಆ ಹುದ್ದೆ ಆಯ್ಕೆ ಏಕೆ ಮಾಡಿಲ್ಲ ಅಂತ ನನಗೆ ಗೊತ್ತಾಗಲ್ಲ. ಅಂತಿಮ ನಿರ್ಧಾರಕ್ಕೆ ಬರಲು ಅವರಿಗೆ ಧೈರ್ಯ ಇಲ್ಲ ಎಂದು ಕಾಣುತ್ತೆ ಎಂದು ಪ್ರತಿಕ್ರಿಯಿಸಿದರು.

ಶಾಸಕರ ಬೇಜವಾಬ್ದಾರಿ ನಡೆ: ವಿಧಾನಸಭೆ ಉಪ ಸ್ಪೀಕರ್‌ ಮೇಲೆ ವಿಧೇಯಕ ಪ್ರತಿಗಳನ್ನು ಹರಿದು ಬಿಸಾಡಿದ ಘಟನೆ, ಬೇಜವಾಬ್ದಾರಿ ನಡೆ ಎಂದು ವಿಷಾದಿಸಿದರು. ವಿಧಾನಸಭೆಯ ಸದಸ್ಯರಲ್ಲಿ ಒಂದಿಷ್ಟು ಮೌಲ್ಯಗಳು ಇರಬೇಕಿತ್ತು. ವಾದಗಳ ಮೂಲಕ ಯಾವುದು ಸರಿ, ಯಾವುದು ತಪ್ಪು, ಅಂತ ನಿರ್ಧಾರ ಮಾಡೋದು ಸ್ಪೀಕರ್‌ ಅಥವಾ ಉಪ ಸ್ಪೀಕರ್‌. ಅದು ಅವರ ಕೆಲಸ ಎಂದರು. ಅವರ ಹೇಳಿದಂತಹ ಮಾತನ್ನು ಸಭೆ ಒಪ್ಪಲೇಬೇಕಾಗುತ್ತದೆ. ತದನಂತರ ನೀವು ಸರಿಯಲ್ಲ, ತಪ್ಪು ಎನ್ನುವ ಬಗ್ಗೆ ಮಾಧ್ಯಮಕ್ಕೆ ತಿಳಿಸಬೇಕಿತ್ತು. ಆದರೆ, ಸಭೆಯಲ್ಲಿ ಇರಬೇಕಾದ ಒಂದು ರೀತಿಯ ಶಿಸ್ತು ಮೀರಿ ವರ್ತಿಸುವುದು ಸರಿಯಲ್ಲ. ಸದನದಲ್ಲಿ ಶಿಸ್ತಿನ ವರ್ತನೆ ಇರಲಿಲ್ಲ ಎಂಬುದು ಬಹಳ ವಿಷಾದಕರ ಎಂದರು.

ವ್ಯರ್ಥ ಕಲಾಪ ಆಗಬಾರದು: ತಾವು ಹೇಳಿದ್ದೇ ಸರಿ ಅಂತ ಹೇಳಲು ಸಾಧ್ಯವಿಲ್ಲ. ಯಾರಾದರೂ ಒಬ್ಬರು ಅದರ ಬಗ್ಗೆ ತೀರ್ಪು ಕೊಡಬೇಕಾಗುತ್ತದೆ. ಅದು ನಿಮಗೆ ಸರಿ ಕಾಣದಿದ್ದರೆ ಅದಕ್ಕೆ ಬೇರೆ ದಾರಿ ಇರಬಹುದು. ಆದರೆ, ಸದನದಲ್ಲಿ ಪ್ರತಿಭಟನೆ ಮಾಡಬಾರದು. ಸಭೆ ಸಮಯ ಹಾಳಾಗುತ್ತದೆ. ಶಾಸಕರಿಗೆಲ್ಲ ಸಂಬಳ ಕೊಡ ಲಾಗುತ್ತಿದೆ. ಅದನ್ನುಕೂಡ ಲೆಕ್ಕ ಹಾಕಬೇಕು. ಅಜೆಂಡಾದಲ್ಲಿ ಏನಿದೆ ಆ ಬಗ್ಗೆ ಚರ್ಚಿಸುವ ಕೆಲಸ ಆಗಬೇಕು ಎಂದು ಹೇಳಿದರು.

Advertisement

ಲೋಕಾಯುಕ್ತ ಕೆಲಸ ಮಾಡಬೇಕಷ್ಟೇ: ಲೋಕಾಯುಕ್ತ ಸಂಸ್ಥೆ ಇದ್ದಾಗಲೇ ಎಸಿಬಿ ಸ್ಥಾಪನೆ ಮಾಡಿದ್ದರು. ಲೋಕಾಯುಕ್ತರ ವಿಚಾರಣೆ ಅಧಿಕಾರ ವಾಪಸ್‌ ಪಡೆದುಕೊಂಡಿದ್ದರು. ನಂತರ ಎಸಿಬಿ ರಚನೆ ತಪ್ಪು ಎಂದು ಹೈಕೋರ್ಟ್‌ ಹೇಳಿದ ಮೇಲೆ ಎಸಿಬಿ ತೆಗೆದು ಹಾಕಿದ್ರು. ಇವತ್ತು ಲೋಕಾಯುಕ್ತಕ್ಕೆ ನನ್ನ ಅವಧಿಯಲ್ಲಿ ಇದ್ದಂತೆಯೇ ಸಂಪೂ ರ್ಣ ಅಧಿಕಾರ ಇದೆ. ಕೆಲಸ ಶುರುವಾಗಿದೆ, ಮುಂದಕ್ಕೆ ಏನಾಗುತ್ತೆ ಅಂತ ನೋಡೋಣ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್‌ ಹೆಗ್ಡೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next