ಮೈಸೂರು: ವಿಶ್ವ ಪ್ರಸಿದ್ಧ ಮೈಸೂರು ದಸರಾ ಜಂಬೂ ಸವಾರಿ ಅರಮನೆ ಆವರಣದಲ್ಲಿ ಆರಂಭವಾಗಿದೆ. ಕಲಾ ತಂಡಗಳಿಂದ ಕೂಡಿದ್ದ ಮೆರವಣಿಗೆಯನ್ನು ಮಾಜಿ ಕ್ಯಾಪ್ಟನ್ ಅರ್ಜುನ ಮುನ್ನಡೆಸಿದ್ದಾನೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಳು ನಿಮಿಷ ಮುಂಚೆಯೇ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿರು. ಕುಟುಂಬ ವರ್ಗದವರ ಸಮೇತ ಆಗಮಿಸಿ, ಪೂಜೆ ಸಲ್ಲಿಸಿದರು. 3.62ಕ್ಕೆ ನಿಶಾನೆ ಆನೆಯಾದ ಅರ್ಜುನನು ಮೊದಲ ಹೆಜ್ಜೆ ಇಟ್ಟು, ಸೊಂಡಿಲೆತ್ತಿ ನಮಸ್ಕರಿಸಿ, ಜಂಬೂ ಸವಾರಿ ಮುನ್ನಡೆಸಿದ. ಬಲರಾಮ ದ್ವಾರದಿಂದ ನಿಶಾನೆ ಆನೆಯಾಗಿ ಅರ್ಜುನ ಅರಮನೆಯಿಂದ ಆಚೆ ಬರುತ್ತಿದ್ದಂತೆ ಲಕ್ಷಾಂತರ ಮಂದಿ ಜೋರು, ಶಿಳ್ಳೆ, ಜೈಕಾರ ಕೂಗಿ ಸ್ವಾಗತಿಸಿದರು.
ಜಂಬೂ ಸವಾರಿ ವೈಭವವನ್ನು ಕಣ್ತುಂಬಿಕೊಳ್ಳಲು, ದೂರದ ಊರುಗಳಿಂದ, ದೇಶ, ವಿದೇಶಗಳಿಂದ ಲಕ್ಷಾಂತರ ಮಂದಿ ಬೆಳಗ್ಗೆ ಹತ್ತುಗಂಟೆಯಿಂದಲೇ ಬಿಸಿಲನ್ನೂ ಲೆಕ್ಕಿಸದೇ ಜಂಬೂಸವಾರಿ ವೀಕ್ಷಣೆಗೆ ಕಾಯ್ದು ಕುಳಿತಿದ್ದರು.
Related Articles
ಅಭಿಮನ್ಯು ಜತೆಗೆ 13 ಆನೆಗಳು, ಅಶ್ವರೋಹಿಪಡೆಗಳು, ಆನೆಗಾಡಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ. ಇದರ ಜತೆಗೆ ಮೆರವಣಿಗೆಯಲ್ಲಿ 31 ಜಿಪಂ, ರಾಜ್ಯಮಟ್ಟದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಸ್ತಬ್ಧಚಿತ್ರ ಉಪಸಮಿತಿ ಸೇರಿ 43 ಸ್ತಬ್ಧಚಿತ್ರಗಳು ಸೇರಿ 100ಕ್ಕೂ ಜಾನಪದ ತಂಡಗಳು ಭಾಗವಹಿಸಲಿವೆ.
ಕಟ್ಟಡ, ಮರ ಹತ್ತಿ ವೀಕ್ಷಿಸಿದ ಜನ: ಜಂಬೂ ಸವಾರಿ ಸಾಗುವ ರಾಜ ಮಾರ್ಗದುದ್ದಕ್ಕೂ ರಸ್ತೆ ಇಕ್ಕೆಲಗಳಲ್ಲಿನ ಮರ ಹಾಗೂ ಕಟ್ಟಡ ಏರಿ ಮೆರವಣಿಗೆ ವೀಕ್ಷಿಸಿದರು. ಕೆ.ಆರ್. ಸರ್ಕಲ್ ಬಳಿಯ ಲ್ಯಾನ್ಸ್ ಡೌನ್ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆ ಕಟ್ಟಡದ ಮೇಲೆ ಸಾವಿರಾರು ಮಂದಿ ಕಟ್ಟಡ ಕುಸಿದು ಬೀಳುವ ಅಪಾಯವನ್ನು ಲೆಕ್ಕಿಸದೇ ಹತ್ತಿನಿಂತಿದ್ದ ದೃಶ್ಯ ಕಂಡು ಬಂದಿತು.
ದಿಕ್ಕೆಟ್ಟು ಓಡಿದ ನಾಯಿಗಳು: ಮೆರವಣಿಗೆ ಹಿನ್ನೆಲೆಯಲ್ಲಿ ರಸ್ತೆ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಿದ್ದರಿಂದ ರಸ್ತೆ ಮಧ್ಯ ಸಿಲುಕಿದ ನಾಲ್ಕಾರು ನಾಯಿಗಳು ಅತ್ತಿದ್ದಿಂತ ಮೆರವಣಿಗೆ ಮಧ್ಯ ಭೀತಿಯಿಂದ ಓಡಾಡಿದ ದೃಶ್ಯ ಕಂಡುಬಂದಿತು.