Advertisement

Sagara: ದಶಕದ ದಾರಿ ದಾಟಿದ ಚೈತನ್ಯ ವಿಶೇಷ ಶಿಕ್ಷಣ ಶಾಲೆ; ಡಿ. 2ಕ್ಕೆ ವಿಶೇಷ ಕಾರ್ಯಕ್ರಮ

03:52 PM Nov 28, 2023 | Kavyashree |

ಸಾಗರ: ತಾಲೂಕಿನ ಭೀಮನಕೋಣೆ ಸಮೀಪದ ಮುಂಗರವಳ್ಳಿಯ ಚೈತನ್ಯ ವಿಶೇಷ ಶಿಕ್ಷಣ ಶಾಲೆಯ ದಶಮಾನೋತ್ಸವ ಕಾರ್ಯಕ್ರಮ ಡಿ. 2ರಂದು ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಭೀಮನಕೋಣೆಯ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಬಿ.ಎಚ್.ರಾಘವೇಂದ್ರ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ದಿನಗಳನ್ನು ನೆನಪಿಸಿಕೊಂಡ ಅವರು, ಮೂವರು ವಿಶೇಷ ಚೇತನ ಮಕ್ಕಳ ಮೂಲಕ ಶಾಲೆ ಆರಂಭಿಸಿದ ಸಂಸ್ಥಾಪಕಿ ಶಾಂತಲಾ ಸುರೇಶ್ 2012ರ ಒಂದು ವರ್ಷ ಕಾಲ ಮನೆಯಲ್ಲಿಯೇ ಇದನ್ನು ನಡೆಸಿದರು. 2013ರಲ್ಲಿ ವಿದ್ಯುಕ್ತವಾಗಿ ಸ್ಥಾಪಿಸಿದ ಚೈತನ್ಯ ವಿಶೇಷ ಶಿಕ್ಷಣ ಶಾಲೆ ಸರ್ಕಾರದ ಯಾವುದೇ ಅನುದಾನ ಇಲ್ಲದೆ ಈಗ 45 ಮಕ್ಕಳು, 8 ಜನ ಶಿಕ್ಷಕರು ಹಾಗೂ ನಾಲ್ವರು ಶಿಕ್ಷಕೇತರ ಸಿಬ್ಬಂದಿ ವರ್ಗದ ಮೂಲಕ ವ್ಯವಸ್ಥಿತವಾಗಿ ಮುನ್ನಡೆಯುತ್ತಿದೆ. ಕಳೆದ 10 ವರ್ಷಗಳಲ್ಲಿ ಶಾಲೆ ನಡೆದು ಬಂದ ದಾರಿಯ ಅವಲೋಕನವೇ ದಶಮಾನೋತ್ಸವ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಬೆಳಿಗ್ಗೆ 10ಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ಮಕ್ಕಳನ್ನು ಸಂಸದ ಬಿ.ವೈ.ರಾಘವೇಂದ್ರ ಅಭಿನಂದಿಸಲಿದ್ದಾರೆ. ಸಂಸ್ಥೆಯ ಲಾಂಛನವನ್ನು ಸ್ಪೆಷಲ್ ಓಲಿಂಪಿಕ್ಸ್ ಭಾರತ ಕರ್ನಾಟಕದ ಅಧ್ಯಕ್ಷೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಅನಾವರಣ ಮಾಡಲಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರದರ್ಶಿನಿ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಸಂಸ್ಥೆಯ ಅಭಿವೃದ್ದಿಗೆ ಸಹಕಾರ ನೀಡಿದವರನ್ನು ಅಭಿನಂದಿಸುವರು. ಮಾಜಿ ಸಚಿವ ಹರತಾಳು ಹಾಲಪ್ಪ, ಅನಂತ ಹೆಗಡೆ ಅಶೀಸರ, ಕೆ.ಎಸ್.ಗುರುಮೂರ್ತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು ಎಂದು ಹೇಳಿದರು.

ಸಾಗರ, ಹೊಸನಗರ ತಾಲೂಕುಗಳ ವ್ಯಾಪ್ತಿಯಲ್ಲಿ ಈ ಮಾದರಿಯ ಶಾಲೆ ಇದೊಂದೇ. ಇಲ್ಲಿ ಮಕ್ಕಳಿಗೆ ಮುಖ್ಯವಾಗಿ ದೈನಂದಿನ ಜೀವನ ಪದ್ಧತಿಯನ್ನು ಕಲಿಸುವ ಪ್ರಯತ್ನದಿಂದ ಶಿಕ್ಷಣ ಆರಂಭವಾಗುತ್ತದೆ. 25 ವರ್ಷ ವಯಸ್ಸಿನ ಈ ಮಾದರಿಯ ಎಲ್ಲ ಮಕ್ಕಳಿಗೆ ಅವಕಾಶವಿದೆ. ವಾಸ್ತವವಾಗಿ ಈ ಎರಡು ತಾಲೂಕುಗಳಲ್ಲಿ ಇಂತಹ 500ರಿಂದ 600 ಮಕ್ಕಳಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದ ಅವರು, ಇವರನ್ನು ಕಲಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾಗಿದೆ. ಶಾಲೆಗೆ ಸೇರದ ವಿಶೇಷ ಮಕ್ಕಳಿಗೂ ವೈದ್ಯಕೀಯ ಸಲಹೆ, ಚಿಕಿತ್ಸೆಗೆ ನಮ್ಮ ಮೂಲಕ ಪ್ರಯತ್ನ ನಡೆಯುತ್ತದೆ. ಈವರೆಗೆ ಸರ್ಕಾರದ ಅನುದಾನ ಸಿಕ್ಕಿಲ್ಲ, ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದರು.

ಚೈತನ್ಯ ವಿಶೇಷ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ವರದಪುರದ ಶ್ರೀಧರಾಶ್ರಮದಿಂದ ಅಕ್ಕಿಯನ್ನು ದೇಣಿಗೆ ರೂಪದಲ್ಲಿ ಕೊಡಲಾಗುತ್ತಿದೆ. 2017ರಲ್ಲಿ ಕಾಕಾಲ್ ಫೌಂಡೇಶನ್ ವತಿಯಿಂದ ಶಾಲಾವಾಹನ ನೀಡಲಾಗಿದೆ. ಸಾಗರ ಮತ್ತು ಹೊಸನಗರ ತಾಲೂಕಿನಿಂದ ಮಕ್ಕಳು ಶಾಲೆಗೆ ಬರುತ್ತಿದ್ದು, ಪೋಷಕರು ಹಿಂಜರಿಕೆ ಬಿಟ್ಟು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬಹುದು ಎಂದರು.

Advertisement

ಶಾಲೆಯ ಸಂಸ್ಥಾಪಕಿ ಶಾಂತಲಾ ಸುರೇಶ್ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ನೂರಾರು ವಿಶೇಷ ಚೇತನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಸಮಾಜದ ಮುಖ್ಯವಾಹಿನಿಯಲ್ಲಿ ಅವರು ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದೇವೆ. ನಮ್ಮ ಶಾಲೆಯ ವಿಶೇಷ ಚೇತನ ಮಕ್ಕಳು ರಾಜ್ಯ, ರಾಷ್ಟ್ರಮಟ್ಟದ ವಿಶೇಷ ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡು 75ಕ್ಕೂ ಹೆಚ್ಚು ಪದಕ ಗೆದ್ದಿದ್ದಾರೆ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ನಡೆಯುವ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ರಾಷ್ಟ್ರಮಟ್ಟದಲ್ಲಿ ನಾಲ್ವರಿಗೆ ಅವಕಾಶ ಸಿಕ್ಕಿದೆ. ಕಲಾಂಗಣ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಬಹುಮಾನ ಸಿಕ್ಕಿದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಎಲ್ಲ ರೀತಿಯ ಪ್ರೋತ್ಸಾಹ ಶಾಲೆ ವತಿಯಿಂದ ನೀಡಲಾಗುತ್ತಿದೆ. ದಶಮಾನೋತ್ಸವ ಹಿನ್ನೆಲೆಯಲ್ಲಿ ಇನ್ನಷ್ಟು ಯೋಜನೆಗಳನ್ನು ರೂಪಿಸಿ ಅನುಷ್ಟಾನಕ್ಕೆ ತರುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಪೋಷಕರಲ್ಲಿ ಅನವಶ್ಯಕವಾದ ಭಯವೊಂದಿದೆ. ಮಕ್ಕಳನ್ನು ಈ ಶಾಲೆಗೆ ಸೇರಿಸಿದರೆ ಆ ಮಕ್ಕಳು ‘ಬ್ರಾಂಡ್’ ಆಗಿಬಿಡುತ್ತಾರೆ ಎಂಬ ಕಾರಣದಿಂದ ಶಾಲೆಗೆ ಮಕ್ಕಳನ್ನು ಬಿಡುತ್ತಿಲ್ಲ. ಇಂತಹ ಮಕ್ಕಳು ಕೇವಲ ಮನೆಗೆ ಸೀಮಿತರಾಗಿ ಅವರಲ್ಲಿನ ಪ್ರತಿಭೆಗಳನ್ನು ಗುರ್ತಿಸುವ, ಅವಕಾಶಗಳನ್ನು ಬಳಸಿಕೊಳ್ಳುವ ಕೆಲಸ ಆಗುತ್ತಿಲ್ಲ. ಈಗಾಗಲೇ ನಮ್ಮ ಶಾಲೆಯಲ್ಲಿ ಓದಿದ ಕೆಲವು ಮಕ್ಕಳು ಸ್ವಯಂ ಉದ್ಯೋಗಕ್ಕೆ ಮುಂದಾಗಿದ್ದಾರೆ. ಕಂಪ್ಯೂಟರ್ ಆಪರೇಟಿಂಗ್ ಕಲಿತಿದ್ದಾರೆ. ಹಾಗೆ ಮಕ್ಕಳಲ್ಲಿ ಧನಾತ್ಮಕತೆ ಹೆಚ್ಚಿಸಲಾದರೂ ನಮ್ಮ ಶಾಲೆಗೆ ಆ ಮಕ್ಕಳನ್ನು ಸೇರ್ಪಡೆ ಮಾಡಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಕೆ.ಎನ್., ನಿರ್ದೇಶಕ ಎಂ.ನಾಗರಾಜ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next