Advertisement

ಇಂದಿನ ನಿರ್ದೇಶಕರ ಅವಧಿಯಲ್ಲಿ ಭಯದ ವಾತಾವರಣ

06:21 PM Dec 02, 2022 | Team Udayavani |

ಚಾಮರಾಜನಗರ: ಬಿ.ವಿ.ಕಾರಂತರಿಂದ ಆರಂಭ ವಾದ ಮೈಸೂರಿನ ರಂಗಾಯಣದಲ್ಲಿ ಅಂದಿನಿಂದ ಇಂದಿನವರೆಗೆ ಅನೇಕ ನಿರ್ದೇಶಕರು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗುವ ಕೆಲಸಗಳನ್ನು ಮಾಡಿದ್ದಾರೆ. ಆದರೆ, ಈಗಿನ ನಿರ್ದೇಶಕರ ಅವಧಿಯಲ್ಲಿ ಅಸಹನೀಯವಾದ ಭಯದ ವಾತಾ ವರಣ ಸೃಷ್ಟಿಯಾಗಿದೆ ಎಂದು ನಗರದ ಶಾಂತಲಾ ಕಲಾವಿದರು ರಂಗತಂಡದ ಅಧ್ಯಕ್ಷ ಎ ಡಿಸಿಲ್ವ ಹೇಳಿದರು.

Advertisement

ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜು ಕ್ಯಾಂಪಸ್‌ನಲ್ಲಿ ಗುರುವಾರ ಆರಂಭಗೊಂಡ ಮೂರು ದಿನಗಳ ಜೆಎಸ್‌ಎಸ್‌ ರಂಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಟಕ ಕಲೆ ಎಂದಾಗ ಅಂತಹ ಪರಿಸರದಲ್ಲಿ ಮನಸ್ಸಿಗೆ ಸಂತಸ ಕೊಡುವ ವಾತಾವರಣ ಉಂಟಾಗಬೇಕು. ಆದರೆ ರಂಗಾಯಣದ ಇಂದಿನ ನಿರ್ದೇಶಕರ ಅವಧಿಯಲ್ಲಿ ಭಯದ ವಾತಾವರಣ ಉಂಟಾಗಿರುವುದು ದುರಂತ ಎಂದು ಅವರು ವಿಷಾದಿಸಿದರು.

ನಮ್ಮ ಶಾಂತಲಾ ಕಲಾವಿದರು ತಂಡ ಮುಂದಿನ ವರ್ಷ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ತಂಡ ಉದಯಿಸಲು ಒಂದು ರೀತಿ ಜೆಎಸ್‌ಎಸ್‌ ಕಾಲೇಜು ಕಾರಣ. ಈ ಕಾಲೇಜು ನಾವು ಯಾವುದೇ ನಾಟಕ ಮಾಡಲು ಅಡ್ಡಿಪಡಿಸಲಿಲ್ಲ. ಇಲ್ಲಿ ಶಾಸಕರು ಮತ್ತು ನಾವು ಸೇರಿ, ಕಂಬಳಿ ನಾಗಿದೇವ, ಅಳಿಯ ದೇವರು ಅಕ್ಕ- ಪಕ್ಕ ನಾಟಕ ಮಾಡಿದ್ದೇವೆ.ಹಿಂದಿನ ಪ್ರಾಂಶುಪಾಲರಾಗಿದ್ದ ಕೆ.ಎಂ. ರೇವಣಸಿದ್ದಯ್ಯ ಹಾಗೂ ಇತರರು ನಾಟಕಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು ಎಂದು ಸ್ಮರಿಸಿದರು.

ಜೆಎಸ್‌ಎಸ್‌ ಸಂಸ್ಥೆ ರಂಗೋತ್ಸವದ ಮೂಲಕ ನಾಟಕ ಕಲೆಗೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆ. ನಾಟಕ ಕಲೆ ವ್ಯಕ್ತಿಯಲ್ಲಿ ಸೃಜನ ಶೀಲತೆಯನ್ನು ಬೆಳೆಸುತ್ತದೆ. ಉಗ್ಗುವಿಕೆ ಹೊಂದಿದ್ದ ಗೆಳೆಯರೊಬ್ಬರು ನಾಟಕದಲ್ಲಿ ಅಭಿನಯಿಸುವ ಮೂಲಕ ಆ ಸಮಸ್ಯೆ ಹೋಗಲಾಡಿಸಿಕೊಂಡರು ಎಂದರು. ಕಿರುತೆರೆ ನಟ ಲೋಕೇಶ್‌ ಬಸವಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸರ್ಕಾರ ಮಾಡಬೇಕಾದ ಕೆಲಸವನ್ನು ಜೆಎಸ್‌ಎಸ್‌ ಸಂಸ್ಥೆ ಮಾಡುತ್ತಿದೆ. ರಂಗ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಬೆಳವಣಿಗೆಗೆ ಕಾರಣವಾಗಿದೆ. ಜೆಎಸ್‌ಎಸ್‌ ರಂಗಶಿಕ್ಷಣ ವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಲಬೇಕು ಎಂದರು.

ಹಿಂದೆ ನಟರಾಗಿ ಬೆಳೆಯಲು ಬಹಳಷ್ಟು ಪರಿಶ್ರಮ ಪಡಬೇಕಾಗಿತ್ತು. ಇಂದು ಮೊಬೈಲ್‌ ಆಪ್‌ ಗಳ ಮೂಲಕ ಆಡಿಷನ್‌ ನೀಡಲಾಗುತ್ತದೆ. ಇದರಿಂದ ನೈಜ ಪ್ರತಿಭೆ ಬೆಳೆಯಲು ಸಾಧ್ಯವಿಲ್ಲ. ನಟನೆ ಬಹಳಷ್ಟು ವರ್ಷಗಳ ಪರಿಶ್ರಮ, ಪ್ರತಿಭೆ ಬೇಡುತ್ತದೆ. ಹಾಗಾದಾಗ ಮಾತ್ರ ಉತ್ತಮ ಕಲಾವಿದನಾಗಲು ಸಾಧ್ಯ ಎಂದರು.

Advertisement

ಜೆಎಸ್‌ಎಸ್‌ ಮಹಾ ಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್‌ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್‌. ಎಂ. ಸ್ವಾಮಿ, ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್‌ ಸಿದ್ಧರಾಜು, ಸಂಗೀತ ನಿರ್ದೇಶಕ ಚಂದ್ರಶೇಖರಾಚಾರ್‌ ಹೆಗ್ಗೊಠಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದ ಬಳಿಕ ಮಂಜುನಾಥ್‌ ಕಾಚಕ್ಕಿ ನಿರ್ದೇಶನದ ಹಲಗಲಿಯ ಬೇಡರು ನಾಟಕವನ್ನು ಗುಂಡ್ಲುಪೇಟೆ ತಾ. ಬರಗಿ ಜೆಎಸ್‌ಎಸ್‌ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next