Advertisement

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

11:44 PM Apr 13, 2024 | Team Udayavani |

ಸಚಿವ ಎಚ್‌.ಸಿ.ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌ 2017 ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು.ತಿ. ನರಸೀಪುರ ಕ್ಷೇತ್ರದಲ್ಲಿ ತಂದೆಯವರ ಕೆಲಸ ಕಾರ್ಯಗಳ ಜವಾಬ್ದಾರಿ ಹೊತ್ತಿದ್ದರು.

ಮೊದಲ ಬಾರಿಗೆ ಚುನಾವಣ ಕಣಕ್ಕಿಳಿದಿದ್ದೀರಿ. ಏನನ್ನಿಸುತ್ತಿದೆ?

ಯಾರಿಗಾದರೂ ರಾಷ್ಟ್ರೀಯ ಪಕ್ಷದಲ್ಲಿ ಚುನಾವಣೆಗೆ ಅವಕಾಶ ಮಾಡಿಕೊಟ್ಟಾಗ ಖುಷಿಗಿಂತ ಹೆಚ್ಚಾಗಿ ಇದೊಂದು ದೊಡ್ಡ ಜವಾಬ್ದಾರಿ ಎನಿಸುತ್ತದೆ. ನಾನು ವಿಧಾನಸಭೆಗೆ ಆಕಾಂಕ್ಷಿಯಾಗಿದ್ದವನು. ಅವಕಾಶ ಸಿಕ್ಕಿರಲಿಲ್ಲ. ಈಗ ಸಿಕ್ಕಿರುವುದು ಸಂತೋಷವಾಗಿದೆ.

Advertisement

ಸ್ಪರ್ಧಿಸಬೇಕೆಂದು ನಿಮಗೆ ಅನ್ನಿಸಿದ್ದು ಯಾವಾಗ, ಯಾಕೆ, ಪ್ರೇರಣೆ ಏನು?
ತಂದೆಯವರು (ಎಚ್‌.ಸಿ. ಮಹದೇವಪ್ಪ) ರಾಜಕೀಯ ಅಧಿಕಾರದಲ್ಲಿದ್ದರಿಂದ ಕ್ಷೇತ್ರದಲ್ಲಿ ಜನರ ಆಗುಹೋಗುಗಳನ್ನು ನೋಡಿಕೊಳ್ಳು ತ್ತಿದ್ದೆ. ಅದರ ಅನುಭವದಲ್ಲಿ ಜನರ ಕೆಲಸ ಮಾಡಲು, ಅಧಿಕಾರ ಎನ್ನುವ ಕೀ ಆವಶ್ಯಕ ಎಂಬುದು ಮನವರಿಕೆ ಆಯಿತು. ಇದು ರಾಜಕೀಯಕ್ಕೆ ಬರಲು ಪ್ರೇರಣೆಯಾಯಿತು.

ರಾಜಕೀಯದಲ್ಲಿ ನಿಮ್ಮ ಗಾಡ್‌ಫಾದರ್‌ ಯಾರು ಮತ್ತು ಯಾಕೆ?
ಮಕ್ಕಳಿಗೆ ತಮ್ಮ ತಂದೆಯೇ ಗಾಡ್‌ಫಾದರ್‌, ರೋಲ್‌ ಮಾಡೆಲ್‌. ಹೀಗಾಗಿ ನನಗೆ ನಮ್ಮ ತಂದೆಯೇ ಗಾಡ್‌ಫಾದರ್‌. ಅವರೇ ನನ್ನ ರೋಲ್‌ ಮಾಡೆಲ್‌.

ಮೊದಲ ಪ್ರಯತ್ನದಲ್ಲೇ ನೀವು ಲೋಕ ಸಭೆಗೆ ಸ್ಪರ್ಧಿಸುತ್ತಿದ್ದೀರಿ, ಕಾರಣವೇನು?
ನಾನು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಅವಕಾಶ ಸಿಗಲಿಲ್ಲ. ಹೀಗಾಗಿ ಲೋಕಸಭೆಗೆ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದೆ. ಪಕ್ಷದ ಮುಖಂಡರು, ಹೈಕಮಾಂಡ್‌ ಎಲ್ಲರೂ ಸೇರಿ ಟಿಕೆಟ್‌ ಕೊಟ್ಟಿದ್ದಾರೆ.

ನಿಮ್ಮ ಕ್ಷೇತ್ರದ ಜನ ನಿಮಗೆ ಯಾವ ಕಾರಣಕ್ಕಾಗಿ ಮತ ಹಾಕಬೇಕು?
ನನ್ನನ್ನು ಹತ್ತಿರದಿಂದ ಬಲ್ಲ ಜನರಿಗೆ, ಎಲ್ಲರನ್ನೂ ಪ್ರೀತಿಸುವ ನನ್ನ ಸ್ವಭಾವ ಗೊತ್ತು. ನನ್ನ ಕ್ಷೇತ್ರಕ್ಕೆ ಒಳ್ಳೆಯ ಕೆಲಸಗಳನ್ನು, ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡಿದ್ದೇನೆ. ನಿಸ್ವಾರ್ಥವಾಗಿ ಸಂವಿಧಾನದ ಆಶಯಗಳಿಗೆ ಬದ್ಧನಾಗಿ ಕೆಲಸ ಮಾಡಬೇಕೆಂಬ ಆಶಯ ಹೊಂದಿದ್ದೇನೆ. ಹೀಗಾಗಿ ಜನರು ನನಗೆ ಮತ ಹಾಕಬೇಕು.

Advertisement

ಈ ಚುನಾವಣೆಯನ್ನು ನೀವು ಹೇಗೆ ಗೆಲ್ಲುತ್ತೀರಿ? 5 ಕಾರಣ ಹೇಳಿ.
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಗಳು, ಬಿಜೆಪಿ ಸರಕಾರದ ವೈಫ‌ಲ್ಯಗಳು, ಮುಖ್ಯಮಂತ್ರಿಯವರ ಬಜೆಟ್‌, ಧ್ರುವ ನಾರಾಯಣ ಅವರ ಅವಧಿಯಲ್ಲಿ ದೊರೆತ ಕೇಂದ್ರ ಯೋಜನೆಗಳು, ಮತ ದಾರರು ಕಾಂಗ್ರೆಸ್‌ ಬಗ್ಗೆ ಇಟ್ಟಿರುವ ವಿಶ್ವಾಸದಿಂದ ಚುನಾವಣೆಯನ್ನು ಗೆಲ್ಲುತ್ತೇವೆ.

ನಿಮ್ಮ ಕನಸೇನು? ಗೆದ್ದು ದಿಲ್ಲಿಗೆ ಹೋಗಿ ಏನು ಮಾಡಬೇಕು ಎಂದಿದ್ದೀರಿ?
ಚಾಮರಾಜನಗರ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕೆಂಬುದು ನನ್ನ ಕನಸು. ಮತದಾರರು ದಿಲ್ಲಿಗೆ ಆರಿಸಿ ಕಳುಹಿಸಿದರೆ, ಕ್ಷೇತ್ರಕ್ಕೆ ಕೇಂದ್ರದಿಂದ ಬರಬೇಕಾದ ಯೋಜನೆ, ಅನುದಾನ ತಂದು ಕೆಲಸ ಮಾಡುತ್ತೇನೆ.

ಗೆದ್ದರೆ ನಿಮ್ಮ ಲೋಕಸಭಾ ಕ್ಷೇತ್ರಕೆೆR ಮಾಡುವ ಮೊದಲ ಕೆಲಸ ಏನು?
ಕ್ಷೇತ್ರದ ಹಲವಾರು ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕವೇ ಇಲ್ಲ. ಅಂತಹ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತೇನೆ.

ನಿಮ್ಮ ಕ್ಷೇತ್ರದ ಭವಿಷ್ಯಕ್ಕೆ ಇರುವ 5 ಕನಸುಗಳೇನು? ಅವುಗಳನ್ನು ಹೇಗೆ ಈಡೇರಿಸುತ್ತೀರಿ?
ಕ್ಷೇತ್ರದ ಬಗ್ಗೆ ಹಲವಾರು ಕನಸುಗಳಿವೆ. ಬೆಂಗಳೂರು ಕನಕಪುರ ರೈಲು ಮಾರ್ಗ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ, ಪ್ರವಾಸೋದ್ಯಮ ತಾಣಗಳ ಮೂಲಸೌಲಭ್ಯ ಅಭಿವೃದ್ಧಿ, ಕಾಡಂಚಿನ ಬುಡಕಟ್ಟು ಜನರಿಗೆ ಶಿಕ್ಷಣ ಆರೋಗ್ಯ ಸೌಲಭ್ಯ ಕಲ್ಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರದ ಜತೆ ಸೇರಿ ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ.

ಅನೇಕ ಹಿರಿಯ ನಾಯಕರನ್ನು ನೀವು ಸಂಭಾಳಿಸಬೇಕಾಗುತ್ತದೆ. ಹೇಗೆ ನಿಭಾಯಿಸುತ್ತೀರಿ?
ನಾನು ಹಿರಿಯರ ಜತೆ ಗೌರವ ಹಾಗೂ ವಿನಯದಿಂದ ನಡೆದುಕೊಳ್ಳುವವನು. ಕ್ಷೇತ್ರದಲ್ಲಿ ನಮ್ಮ ಹಿರಿಯ ಶಾಸಕರಿದ್ದಾರೆ. ಅನೇಕ ಹಿರಿಯರ ಸಲಹೆ-ಸೂಚನೆ ಮಾರ್ಗದರ್ಶನ ಪಡೆಯುತ್ತೇನೆ.

– ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next