Advertisement

ಪಾಲಿಕೆಗೆ ಸ್ವಚ್ಛ್ ಸರ್ವೇಕ್ಷಣ್‌ ಸವಾಲು

12:21 PM Nov 28, 2017 | Team Udayavani |

ಬೆಂಗಳೂರು: ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಂಡ ನಗರಗಳಿಗೆ “ಸ್ವಚ್ಛ್ ಸರ್ವೇಕ್ಷಣ್‌ ರ್‍ಯಾಂಕಿಂಗ್‌’ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಹಿಂದಿನ ಎರಡು ವರ್ಷಗಳ ಕಳಪೆ ಸಾಧನೆಯನ್ನು ಮೆಟ್ಟಿ ನಿಂತು, ಈ ಬಾರಿಯಾದರೂ ಉತ್ತಮ ರ್‍ಯಾಂಕಿಂಗ್‌ ಪಡೆಯುವ ಗುರಿ ಹೊಂದಿರುವ ಬಿಬಿಎಂಪಿ, ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ನಿರ್ಧರಿಸಿದೆ.

Advertisement

ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಪ್ರತಿ ವರ್ಷ ಸ್ವಚ್ಛತೆ, ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆಗೆ ಅತ್ತುತ್ತಮ ಕ್ರಮಕೈಗೊಂಡಿರುವ ನಗರಗಳಿಗೆ ರ್‍ಯಾಂಕಿಂಗ್‌ ನೀಡುತ್ತದೆ. ಅಗ್ರ 10 ನಗರಗಳನ್ನು “ಸ್ವಚ್ಛ ನಗರ’ಗಳೆಂದು ಘೋಷಿಸಿ ಅಲ್ಲಿ ಸ್ವಚ್ಛತೆಗೆ ಕೈಗೊಂಡ ಕ್ರಮಗಳನ್ನು ಅನುಸರಿಸುವಂತೆ ಇತರ ನಗರಗಳಿಗೆ ಸೂಚಿಸಲಾಗುತ್ತದೆ.

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ 2018ನೇ ಸಾಲಿನ ಸ್ವಚ್ಛ್ ಸರ್ವೇಕ್ಷಣ್‌ ರ್‍ಯಾಂಕಿಂಗ್‌ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ರ್‍ಯಾಂಕಿಂಗ್‌ ನೀಡುವ ವಿಧಾನ, ಪರಿಗಣಿಸುವ ಅಂಶಗಳು, ಪ್ರಶ್ನೆಗಳಿಗೆ ಉತ್ತರಿಸುವ ವಿಧಾನ ಸೇರಿ ಹಲವಾರು ಮಾಹಿತಿ ಪಡೆದಿದ್ದಾರೆ.

ಈ ನಿಟ್ಟಿನಲ್ಲಾಗಲೇ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿರುವ ಆಯುಕ್ತರು, ಲಭ್ಯವಿರುವ 40 ದಿನಗಳಲ್ಲಿ ನಗರದ ಸ್ವಚ್ಛತೆ, ನೈರ್ಮಲ್ಯ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಪಾಲಿಕೆಯಿಂದ ಕೈಗೊಂಡ ಕ್ರಮಗಳು ಹಾಗೂ ಅನುಷ್ಠಾನ ಕುರಿತ ಸಂಪೂರ್ಣ ಮಾಹಿತಿ ಕೇಳಿದ್ದಾರೆ. ಇದರೊಂದಿಗೆ ಸರ್ವೇಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ನೈಜ ಉತ್ತರ ಸಿದ್ಧಪಡಿಸುವಂತೆ ತಿಳಿಸಿದ್ದಾರೆ.

ಉತ್ತಮ ಸಾಧನೆಯೇ ಸವಾಲು: 2016ನೇ ಸಾಲಿನಿಂದ ಕೇಂದ್ರ ಸರ್ಕಾರ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಿರುವ ನಗರಗಳಿಗೆ ರ್‍ಯಾಂಕಿಂಗ್‌ ನೀಡುತ್ತಿದ್ದು, ಉತ್ತಮ ರ್‍ಯಾಂಕ್‌ ಪಡೆಯುವಲ್ಲಿ ಬೆಂಗಳೂರು ವಿಫ‌ಲವಾಗಿದೆ. 2016ರಲ್ಲಿ 73 ನಗರಗಳ ಪೈಕಿ ಮೈಸೂರು ಪ್ರಥಮ ಸ್ಥಾನ ಪಡೆದರೆ, ಬೆಂಗಳೂರು 38ನೇ ಸ್ಥಾನದಲ್ಲಿತ್ತು. 2017ರಲ್ಲಿ 500 ನಗರಗಳ ಪೈಕಿ ಮೈಸೂರು 5ನೇ ಸ್ಥಾನ ಪಡೆದರೆ, ಬೆಂಗಳೂರು 210ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಉತ್ತಮ ರ್‍ಯಾಂಕ್‌ ಪಡೆಯಲೇಬೇಕಾದ ಸವಾಲು ಪಾಲಿಕೆ ಆಡಳಿತದ ಮುಂದಿದೆ.

Advertisement

ಸರ್ವೇ ಹೇಗೆ ನಡೆಯುತ್ತೆ?: ನಗರದ ಸ್ವಚ್ಛತೆ, ನೈರ್ಮಲ್ಯ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ 1400 ಅಂಕಗಳಿಗೆ ಮೂರು ಹಂತಗಳಲ್ಲಿ ಪರೀಕ್ಷೆ ನಡೆಯುತ್ತದೆ. ಮೊದಲ ಎರಡು ಹಂತಗಳಲ್ಲಿ ಮನೆಗಳಿಂದ ತ್ಯಾಜ್ಯ ಸಂಗ್ರಹ, ರಸ್ತೆಗಳ ಸ್ವಚ್ಛತೆ, ತ್ಯಾಜ್ಯ ಸಂಸ್ಕರಣೆ, ಸಾರ್ವಜನಿಕ ಶೌಚಾಲಯ ವ್ಯವಸ್ಥೆ, ಮಾಹಿತಿ, ಜಾಗೃತಿ, ಆನ್‌ಲೈನ್‌ ಮೂಲಕ ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಹೀಗೆ ಹತ್ತಾರು ಪ್ರಶ್ನೆಗಳಿಗೆ ನಗರಗಳು ಲಿಖೀತ ಉತ್ತರ ನೀಡಬೇಕು.

ಜನವರಿ 4ರಿಂದ ಕೇಂದ್ರ ತಂಡ ಪ್ರತಿ ನಗರಕ್ಕೂ ಭೇಟಿ ನೀಡಿ, ನಗರಗಳು ನೀಡಿರುವ ಉತ್ತರಗಳು ಸರಿಯಾಗಿವೆಯೇ ಎಂದು ಖಾತ್ರಿಪಡಿಸಿಕೊಳ್ಳಲು ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಸತ್ಯಾಸತ್ಯತೆ ಆಧಾರದಲ್ಲಿ ಅಂಕ ನೀಡುತ್ತಾರೆ. ಒಂದೊಮ್ಮೆ ಆಡಳಿತ ತಪ್ಪು ಮಾಹಿತಿ ನೀಡಿದ್ದರೆ, ಋಣಾತ್ಮಕ ಅಂಕ ಖಚಿತ. ನಿಯೋಗ ಹೀಗೆ ನೀಡುವ ಅಂಕಗಳನ್ನೇ ಆಧರಿಸಿ ರ್‍ಯಾಂಕ್‌ ನೀಡಲಾಗುತ್ತದೆ.

ನಾಲ್ಕು ಸಾವಿರ ನಗರಗಳ ಜತೆ ಪೈಪೋಟಿ!: 2018ನೇ ಸಾಲಿನ ಸ್ವಚ್ಛ್ ಸರ್ವೇಕ್ಷಣ್‌ ರ್‍ಯಾಂಕಿಂಗ್‌ಗಾಗಿ ಈ ಬಾರಿ ತೀವ್ರ ಪೈಪೋಟಿ ಇರಲಿದೆ. 2016ರಲ್ಲಿ ಕೇವಲ 73 ನಗರಗಳು ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ, 2017ರಲ್ಲಿ ಸ್ಪ ರ್ಧಿಸಿದ್ದ ನಗರಗಳ ಸಂಖ್ಯೆ ಬರೋಬ್ಬರಿ 500 ಮುಟ್ಟಿತ್ತು. ಈ ಬಾರಿ ದೇಶದ 4041 ನಗರಗಳು ಸ್ಪರ್ಧೆಗಿಳಿಯಲಿವೆ. ಈ ಹಿಂದಿನ ಎರಡೂ ವರ್ಷ ಕಳಪೆ ಸಾಧನೆ ತೋರಿರುವ ಸಿಲಿಕಾನ್‌ ಸಿಟಿಗೆ ಈ ಬಾರಿಯ ಪ್ರಕ್ರಿಯೆ ಸಾಕ್ಷಾತ್‌ ಅಗ್ನಿ ಪರೀಕ್ಷೆಯಾಗಲಿದೆ.

ರ್‍ಯಾಂಕಿಂಗ್‌ ಉದ್ದೇಶವೇನು: ದೇಶದ ನಗರಗಳ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಡಿಸುವ ಮೂಲಕ ಸ್ವಚ್ಛತೆ ಹಾಗೂ ನೈರ್ಮಲ್ಯ ಹೆಚ್ಚಿಸುವುದು ಸ್ವಚ್ಛ್ ಸರ್ವೇಕ್ಷಣ್‌ ಕಾರ್ಯಕ್ರಮದ ಉದ್ದೇಶ. ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ (ಜಿಡಿಪಿ)ನಗರಗಳ ಪಾಲು ಶೇ.70ರಷ್ಟಿದೆ. ಆದರೆ, ನಗರಗಳಲ್ಲಿ ಕಡೆಗಣಿಸಲಾಗಿರುವ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡುವಂತೆ ಪ್ರೋತ್ಸಾಹಿಸಲು ರ್‍ಯಾಂಕಿಂಗ್‌ ನೀಡಲಾಗುತ್ತದೆ.

ಮಲ್ಲಸಂದ್ರ ಪಾಲಿಕೆ ವ್ಯಾಪ್ತಿಯಲ್ಲಿದೆಯೇ?
ಬೆಂಗಳೂರು:
ಯಶವಂತಪುರ ವಿಧಾನಸಭೆ ಕ್ಷೇತ್ರದ ಮಲ್ಲಸಂದ್ರ ಗ್ರಾಮವು ಬಿಬಿಎಂಪಿಗೆ ಸೇರಿರುವುದು ಹಾಗೂ ಅಲ್ಲಿನ ಜನರು ಪಾಲಿಕೆಯ ಮತದಾರರೇ ಎಂಬ ಕುರಿತು ವರದಿ ನೀಡುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ನಡೆದ ಸಭೆಯಲ್ಲಿ ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್‌, ಮಲ್ಲಸಂದ್ರ ಗ್ರಾಮದ ಜನ ಪಾಲಿಕೆ ಮತದಾರರಾಗಿದ್ದಾರೆ. ಆದರೆ, ಈವರೆಗೆ ಆ ಗ್ರಾಮವನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವ ಕೆಲಸ ನಡೆದಿಲ್ಲ. ಹೀಗಾಗಿ ಕೂಡಲೇ ಗ್ರಾಮವನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲು ಕ್ರಮಕೈಗೊಳ್ಳಬೇಕು ಎಂದು ಕೋರಿದರು.

ಮನವಿಗೆ ಸ್ಪಂದಿಸಿದ ಜಾರ್ಜ್‌, ಮಲ್ಲಸಂದ್ರ ಗ್ರಾಮ ಪಾಲಿಕೆಯ ವ್ಯಾಪ್ತಿಗೆ ಸೇರಿದೆಯೇ? ಮತ್ತು ಅಲ್ಲಿನ ಜನರು ಪಾಲಿಕೆಯ ಮತದಾರರಾಗಿದ್ದಾರೆಯೇ ಎಂಬ ಕುರಿತು ಮಾಹಿತಿ ನೀಡಬೇಕು. ಜತೆಗೆ ನಗರದ ಹೊರವಲಯಗಳಲ್ಲಿ ಹಲವಾರು ಗ್ರಾಮಗಳು ಪಾಲಿಕೆಯ ವ್ಯಾಪ್ತಿಯಿಂದ ಹೊರಗುಳಿದಿವೆ ಎಂಬ ದೂರು ಬಂದಿದ್ದು, ಅವುಗಳನ್ನು ಪರಿಹರಿಸಲು ಕ್ರಮಕೈಗೊಳ್ಳುವಂತೆಯೂ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದಾರೆ.

ಕೇಂದ್ರ ನಗರಾಭಿವೃದ್ಧಿ ಇಲಾಖೆ ನಡೆಸುವ ಸ್ವಚ್ಛ್ ಸರ್ವೇಕ್ಷಣ್‌ ರ್‍ಯಾಂಕಿಂಗ್‌ನಲ್ಲಿ ಉತ್ತಮ ರ್‍ಯಾಂಕ್‌ ಪಡೆಯಲು ಈ ಬಾರಿ ಅಗತ್ಯ ಸಿದ್ಧತೆ ನಡೆದಿದೆ. ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ವಚ್ಛತೆ, ಘನತ್ಯಾಜ್ಯ ನಿರ್ವಹಣೆ ಕ್ರಮಗಳು ಹಾಗೂ ಅನುಷ್ಠಾನ ಕುರಿತು ಮಾಹಿತಿ ಕೇಳಿದ್ದು, ಕೇಂದ್ರದಿಂದ ಕೇಳಿರುವ ಪ್ರಶ್ನೆಗಳಿಗೆ ನೈಜ ಉತ್ತರಗಳನ್ನೇ ನೀಡುತ್ತವೆ.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ವೆಂ. ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next