Advertisement

ಬದಲಾದ ಶಿಕ್ಷಣ ವ್ಯವಸ್ಥೆ ಮತ್ತು ಯುವ ಭಾರತ

11:58 PM Aug 14, 2020 | Karthik A |

ಯಾವುದೇ ಕ್ಷೇತ್ರವಾದರೂ ಕಾಲಕ್ಕೆ ತಕ್ಕಂತೆ ತನ್ನನ್ನು ತಾನು ಬದಲಾವಣೆಗೆ ತೆರೆದು ಕೊಳ್ಳುತ್ತಿರಬೇಕು.

Advertisement

ಹೊಸತನವನ್ನು ಅಳವಡಿಸಿಕೊಳ್ಳುವಷ್ಟು ಉದಾರವಾಗಿರಬೇಕು. ತನ್ನಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಷ್ಟು ಪ್ರಾಮಾಣಿಕರಾಗಿರಬೇಕು.

ಆಗ ಮಾತ್ರ ಸತ್ವಪೂರ್ಣವಾಗಿರಲು ಸಾಧ್ಯ. ಈ ಮಾತು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆಯಾದರೂ ಶಿಕ್ಷಣ ವ್ಯವಸ್ಥೆಗೆ ಈ ಬದಲಾವಣೆಗಳು ಹೆಚ್ಚು ಆವಶ್ಯಕ.

ಈ ನಿಟ್ಟಿನಲ್ಲಿ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಹಲವು ದಶಕಗಳ ಬಳಿಕವಾದರೂ ಬದಲಾವಣೆಗೆ ಮೈಯೊಡ್ಡಿರುವುದು, ಈ ಕಾಲದ ಆವಶ್ಯಕತೆ ಹಾಗೂ ಅನಿವಾರ್ಯಕ್ಕೆ ತಕ್ಕಂತೆ ಹೆಜ್ಜೆ ಇಡುವ ಮನಸ್ಸು ಮಾಡಿರುವುದು ಸಮಾಧಾನಕರ ಸಂಗತಿ.

ಶಿಕ್ಷಣ ಎಂದರೇನು? ಶಿಕ್ಷಣ ಹೇಗಿರಬೇಕು? ಶಿಕ್ಷಣದ ಮೂಲ ಉದ್ದೇಶವೇನು… ಇತ್ಯಾದಿ ಪ್ರಶ್ನೆಗಳನ್ನು ನಮ್ಮ ಮುಂದಿರಿಸಿಕೊಂಡು ಕೂತರೆ ಒಂದಷ್ಟು ಗೊಂದಲಗಳು ಹುಟ್ಟಿಕೊಳ್ಳುತ್ತವೆ. ವಿಪರ್ಯಾಸವೆಂದರೆ ಆ ಗೊಂದಲಗಳ ನಡುವೆಯೇ ಹಲವು ತಲೆಮಾರುಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿವೆ! ಶಿಕ್ಷಣದ ಉದ್ದೇಶ ಅಂಕಗಳ ಹಿಂದೆ ಓಡುವುದು, ಆಸಕ್ತಿಗಿಂತ ಹೆಚ್ಚು ಒತ್ತನ್ನು ಅಂಕಪಟ್ಟಿಗೆ ನೀಡುವುದು, ಪರೀಕ್ಷೆಯೆಂದರೆ ಯುದ್ಧವೆಂಬಂತೆಯೂ, ಅದರಲ್ಲಿ ಅನುತ್ತೀರ್ಣರಾದರೆ ಬದುಕೇ ಮುಗಿದು ಹೋಯಿತೆಂಬ ಭ್ರಮೆಯನ್ನು ಹುಟ್ಟುಹಾಕುವುದು, ಮಕ್ಕಳ ಆಸಕ್ತಿಗಿಂತ ಪೋಷಕರ ಆಸಕ್ತಿಯ ವಿಷಯವೇ ಕಲಿಕೆಯ ಮುಖ್ಯ ವಸ್ತುವಾಗುವುದು. ಹೀಗೆ ಸುಮಾರು ಒತ್ತಡಗಳ ನಡುವೆಯೇ ಯುವ ಮನಸ್ಸುಗಳು ಸಿಲುಕಿ ಕೊಂಡಿರುವುದು ಅನೇಕ ವರ್ಷಗಳಿಂದ ಕಂಡು ಬರುತ್ತಿವೆ.

Advertisement

ಪ್ರತಿವರ್ಷ ಶಿಕ್ಷಣವನ್ನು ಪೂರೈಸಿ ಹೊರ ಬರುವ ಒಂದು ದೊಡ್ಡ ಸಮೂಹಕ್ಕೆ ಸ್ವಾವಲಂಬಿಯಾಗಿ ಮುಂದಡಿ ಇಡುವಷ್ಟು ಧೈರ್ಯ ತುಂಬುವಲ್ಲಿ ಈಗಿನ ಶಿಕ್ಷಣ ವ್ಯವಸ್ಥೆ ಸಫ‌ಲವಾಗಿದೆಯೇ? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಅದರ ಸಾಧಕ ಭಾದಕದ ಒಂದು ಸಾಧಾರಣ ಚಿತ್ರಣವಾದರೂ ಸಿಗಬಹುದು.

ದೇಶದ ಯುವ ಸಮುದಾಯವನ್ನು ಕೇವಲ ಅಂಕಪಟ್ಟಿ ಆಧಾರಿತ ಶಿಕ್ಷಣಕ್ಕೆ ಮೀಸಲಾಗಿಸುವುದಕ್ಕಿಂತ ಅವರ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯಲು ಆವಶ್ಯಕತೆ ಇರುವ ಮಾಹಿತಿ ಆಧಾರಿತ ಶಿಕ್ಷಣ ನೀಡಿದರೆ ಸಹಜವಾಗಿಯೇ ಓದು ಮುಗಿಸುವಷ್ಟರಲ್ಲಿ ಅವರ ಆತ್ಮವಿಶ್ವಾಸ ಹಾಗೂ ಕೆಲಸದೆಡೆಗಿನ ಅನುಭವ ವೃದ್ಧಿಸುತ್ತದೆ. ಓಡುತ್ತಿರುವ ಕಾಲಘಟ್ಟದಲ್ಲಿ ಈ ಮಾದರಿಯ ಶಿಕ್ಷಣ ಮಾತ್ರ ಯುವ ಜನತೆಯಲ್ಲಿ ಶಕ್ತಿ ತುಂಬಬಲ್ಲದು. ಜತೆಗೆ ಪದವಿ ಶಿಕ್ಷಣದಲ್ಲೂ ಮಹತ್ತರ ಬದಲಾವಣೆ ತರಲು ನಿರ್ಧರಿಸಿರುವುದು ಕೂಡ ಅತ್ಯಂತ ಪ್ರಬುದ್ಧ ತೀರ್ಮಾನ ಎಂದೆನ್ನಿಸುತ್ತದೆ.

ಆದರೆ ಈ ನೂತನ ಶಿಕ್ಷಣ ನೀತಿಯೇ ಇನ್ನು ಮುಂದಿನ ಐದಾರು ದಶಕಗಳಲ್ಲಿ ಮುಂದುವರಿದು ಮತ್ತೆ ನಿಂತ ನೀರಿನಂತಾಗದಿರಲಿ. ಆಡಳಿತ ವರ್ಗವು ಪ್ರತಿ ವರ್ಷ ವರ್ಷವೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಶಿಕ್ಷಣವು ಸದಾ ಹೊಸತನದತ್ತ ಹೊರಳಲು ಅವಕಾಶ ಕಲ್ಪಿಸಿಕೊಡಲಿ ಎಂಬುದಷ್ಟೇ ಈ ಹೊತ್ತಿನ ಆಶಯ.

ಒಂದುವೇಳೆ, ಈಗ ಘೋಷಿಸಲಾಗಿರುವ ನೂತನ ಶಿಕ್ಷಣ ನೀತಿ ಈ ಮೇಲಿನ ಬಹುತೇಕ ಸಮಸ್ಯೆಗಳಿಗೆ ಪರಿಹಾರವಾಗುವಲ್ಲಿ ಸಫ‌ಲವಾದರೆ ಅದು ಕೇವಲ ಶಿಕ್ಷಣ ಕ್ಷೇತ್ರದ ನಿಯಮಗಳ ಮೇಲಷ್ಟೇ ಅಲ್ಲದೆ, ಇಡೀ ವ್ಯವಸ್ಥೆಯ ಮೇಲೆಯೇ ಧನಾತ್ಮಕ ಪರಿಣಾಮ ಬೀರಲಿದೆ. ಎಳೆಯ ಮಕ್ಕಳಿಗೆ ಮಾತೃಭಾಷಾ ಶಿಕ್ಷಣವೇ ಸೂಕ್ತ ಎಂಬಲ್ಲಿಂದ ಇದುವರೆಗೂ ರೂಢಿಸಿಕೊಂಡು ಬಂದಿದ್ದ ಅನೇಕ ಪದ್ಧತಿಗಳನ್ನು ಮಾರ್ಪಾಡು ಮಾಡುವಲ್ಲಿ ಹೊಸ ಶಿಕ್ಷಣ ನೀತಿ ಪರಿಣಾಮ ಕಾರಿಯಾಗಬಹುದು. ಕೌಶಲಾಧಾರಿತ ಶಿಕ್ಷಣದ ಆವಶ್ಯಕತೆಯ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದ್ದ ಹೊತ್ತಿನಲ್ಲಿ ಇಡೀ ದೇಶವೇ ಅದನ್ನು ಅಳವಡಿಸಿಕೊಳ್ಳುವಂತೆ ಮಾಡಲು ಹೊರಟಿರುವುದು ಅತ್ಯಂತ ಸ್ವಾಗತಾರ್ಹ.

 ಸ್ಕಂದ ಆಗುಂಬೆ, ಎಸ್‌ಡಿಎಂ ಕಾಲೇಜು, ಉಜಿರೆ

 

 

Advertisement

Udayavani is now on Telegram. Click here to join our channel and stay updated with the latest news.

Next