Advertisement

ಮಸ್ಕಿ ತಹಶೀಲ್‌ ಕಚೇರಿಯಲ್ಲೀಗ ಬದಲಾವಣೆ ಗಾಳಿ

07:27 PM Jul 15, 2021 | Team Udayavani |

ಮಸ್ಕಿ: ಮಸ್ಕಿ ಇನ್ನೂ ಹೊಸ ತಾಲೂಕು. ತಹಶೀಲ್‌ ಕಚೇರಿಯಲ್ಲಿ ಆದಾಯ, ಜಾತಿ ಪ್ರಮಾಣ ಪತ್ರ ಬಿಟ್ಟರೆ ಬೇರೆನೂ ಸಿಗದು ಎಂದು ಮೂಗು ಮುರಿಯುತ್ತಿದ್ದ ಸಾರ್ವಜನೀಕರಿಗೆ ಈಗ ಅಚ್ಚರಿ. ಯಾವುದೇ ಕಡತ ವಿಲೇವಾರಿ ಇರಲಿ ಈಗ ಫಟಾಫಟ್‌. ಹೌದು. ಮಸ್ಕಿಗೆ ಹೊಸದಾಗಿ ತಾಲೂಕು ದಂಡಾಧಿಕಾರಿಯಾಗಿ ಆಗಮಿಸಿದ ಕೆಎಎಸ್‌ ಅಧಿಕಾರಿ ಕವಿತಾ ಆರ್‌.ಅವರಿಂದ ಈ ಬದಲಾವಣೆಯ ಗಾಳಿ ಬೀಸಿದೆ. ಕಂದಾಯ ಇಲಾಖೆಯ ಸಿಬ್ಬಂದಿಯಲ್ಲಿ ಚುರುಕುತನ ಮಾತ್ರವಲ್ಲ; ಕಚೇರಿಯ ಭೌತಿಕ ಚಿತ್ರಣವೇ ಅದಲು-ಬದಲಾಗಿದೆ.

Advertisement

ತಹಶೀಲ್‌ ಕಚೇರಿ ಮುಂಭಾಗದ ಆವರಣದಲ್ಲಿ ವಾಹನಗಳ ಪಾರ್ಕಿಂಗ್‌ ಪದ್ಧತಿಯಿಂದ ಹಿಡಿದು ಸಿಬ್ಬಂದಿಗಳ ಚೇಂಬರ್‌, ತಹಶೀಲ್ದಾರ್‌ ಚೇಂಬರ್‌, ಆರ್‌ಆರ್‌ಟಿ ವ್ಯಾಜ್ಯಗಳು ನಡೆಸುವ ತಾಲೂಕು ದಂಡಾ ಧಿಕಾರಿಗಳ ಕೋರ್ಟ್‌ವರೆಗೂ ಎಲ್ಲವೂ ಬದಲಾಗಿದೆ. ತಹಶೀಲ್ದಾರ್‌ ಕಚೇರಿಗೆ ಹೋಗುವುದೇ ದಂಡ, ಸಿಬ್ಬಂದಿ ಇರಲ್ಲ, ಅಲ್ಲಿ ಯಾವ ಕೆಲಸಗಳು ಸಕಾಲದಲ್ಲಿ ಆಗಲ್ಲ ಎಂದು ದೂರ ಉಳಿಯುತ್ತಿದ್ದವರು ಈಗ ತಹಶೀಲ್‌ ಕಚೇರಿಗೆ ಕಾಲಿಡುತ್ತಿದ್ದಂತೆಯೇ ಬದಲಾದ ಚಿತ್ರಣ ಕಂಡು ಅಚ್ಚರಿಗೊಂಡಿದ್ದಾರೆ.

ಏನಾಗಿದೆ ಬದಲಾವಣೆ?: ಮಸ್ಕಿ ತಹಶೀಲ್‌ ಕಚೇರಿಗೆ ಸ್ವಂತ ಕಟ್ಟಡವಿಲ್ಲ. ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧ ಕಚೇರಿಯಲ್ಲಿಯೇ ತಹಶೀಲ್ದಾರ್‌ ಆಡಳಿತ ನಡೆದಿದೆ. ಆದರೆ ಇದ್ದ ಕಚೇರಿಯನ್ನೇ ಸುವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿರಲಿಲ್ಲ. ಯಾವ ಶಾಖೆ ಎಲ್ಲಿದೆ? ಯಾವ ಕೆಲಸಕ್ಕೆ ಯಾರನ್ನೂ ಭೇಟಿಯಾಗಬೇಕು ಎನ್ನುವುದೇ ಗೊಂದಲವಾಗಿತ್ತು. ಆದರೀಗ ಒಂದು ವಾರದಿಂದ ಈ ಎಲ್ಲ ವ್ಯವಸ್ಥಿತ ಪದ್ಧತಿಗಳು ಚಾಲ್ತಿಗೆ ಬಂದಿವೆ. ಗ್ರೇಡ್‌-1 ತಹಶೀಲ್ದಾರ್‌, ಗ್ರೇಡ್‌-2 ತಹಸೀಲ್ದಾರ್‌ ಚೇಂಬರ್‌ನಿಂದ ಹಿಡಿದು ಆಯಾ ಶಾಖೆಯ ಕಡತ ನಿರ್ವಹಿಸುವ ಎಫ್‌ಡಿಸಿ, ಎಸ್‌ ಡಿಸಿಗಳು, ಆಪರೇಟರ್‌ಗಳಿಗೂ ಪ್ರತ್ಯೇಕ ಕೌಂಟರ್‌ ಮಾಡಲಾಗಿದೆ. ರೇಕಾರ್ಡ್‌(ಅಭಿಲೇಖಾಲಯ) ರೂಂಗೆ ಸುವ್ಯವಸ್ಥೆ ಇಲ್ಲದ ಕಚೇರಿಯಲ್ಲಿ ಈಗ ಬೃಹತ್‌ ಅಭಿಲೇಖಾಲಯ ತೆಗೆಯಲಾಗಿದೆ.

ಸಿಂಧನೂರು, ಮಾನ್ವಿ, ಲಿಂಗಸುಗೂರು ಮೂರು ತಾಲೂಕಿನಲ್ಲಿ ಹರಿದು ಹಂಚಿದ್ದ ಎಲ್ಲ ದಾಖಲೆಗಳನ್ನು ಈಗ ಮಸ್ಕಿ ಆಮದು ಮಾಡಿಕೊಳ್ಳಲಾಗಿದೆ. ಬಾಕಿ ಕಡತ ಹಸ್ತಾಂತರಕ್ಕೂ ತಹಶೀಲ್ದಾರ್‌ ಕವಿತಾ ಪತ್ರ ಬರೆದಿದ್ದಾರೆ. ಇನ್ನು ತಾಲೂಕಿನ ಎಲ್ಲ ಹೋಬಳಿಗಳ ಪ್ರತ್ಯೇಕ ಮಾಹಿತಿ, ಏನೇ ಕೆಲಸ-ಕಾರ್ಯಗಳಿಗೂ ಸಾರ್ವಜನಿಕರಿಗೆ ಸುಲಭವಾಗಿ ಸಿಬ್ಬಂದಿ ಸಿಗುವ ದೃಷ್ಟಿಯಿಂದ ಪ್ರತ್ಯೇಕ ಕೌಂಟರ್‌ ತೆಗೆಯಲಾಗಿದೆ.

ಇನ್ನೂ ಸಾಗಿದ ಕೆಲಸ: ಇದುವರೆಗೂ ತಹಶೀಲ್‌ ಕಚೇರಿಗೆ ಅನುದಾನವಿಲ್ಲ; ಏನು ಕೆಲಸ ಆಗುತ್ತಿಲ್ಲ. ಸಿಬ್ಬಂದಿಗಳೂ ಇಲ್ಲ ಎಂದು ಸ್ವತಃ ತಾಲೂಕು ದಂಡಾ ಧಿಕಾರಿಗಳೇ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದರು. ಆದರೆ ಹೊಸದಾಗಿ ಅ ಧಿಕಾರ ವಹಿಸಿಕೊಂಡ ಈಗಿನ ತಹಶೀಲ್ದಾರ್‌ ಕವಿತಾ ಎಲ್ಲವನ್ನೂ ನಿಭಾಯಿಸಿದ್ದಾರೆ. ಫ್ಲೆçವುಡ್‌, ಕೌಂಟರ್‌ ನಿರ್ಮಾಣ, ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ತಹಶೀಲ್‌ ಕಚೇರಿಗೆ ಹೈಟೆಕ್‌ ಸ್ವರೂಪ ನೀಡಿದ್ದಾರೆ.

Advertisement

ಹೆಚ್ಚುವರಿ ಸಿಬ್ಬಂದಿ
ಕೇವಲ ಕಚೇರಿಯ ಹೊರ, ಒಳಾಂಗಣದ ಅಂದ-ಚಂದ, ಚಿತ್ರಣ ಬದಲಾಯಿಸುವುದು ಮಾತ್ರವಲ್ಲ; ತಹಶೀಲ್‌ ಕಚೇರಿಗೆ ಸಿಬ್ಬಂದಿಯೇ ಇಲ್ಲ ಎನ್ನುವ ಕೊರಗು ನಿವಾರಣೆಯೂ ನಡೆದಿದೆ. ಕಚೇರಿಗೆ ಅಗತ್ಯವಿರುವಷ್ಟು ಸಿಬ್ಬಂದಿಗಳ ನಿಯೋಜನೆಗೂ ಕಸರತ್ತು ನಡೆಸಿರುವ ತಹಶೀಲ್ದಾರ್‌, ಸದ್ಯ ಸಿಂಧನೂರು, ಲಿಂಗಸುಗೂರು ತಹಶೀಲ್‌ ಕಚೇರಿ ಮೂಲಕ 5 ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ಮಸ್ಕಿ ತಹಶೀಲ್‌ ಕಚೇರಿಗೆ ನಿಯೋಜಿಸಿದ್ದಾರೆ. ಹೆಚ್ಚುವರಿ ಸಿಬ್ಬಂದಿ ಮೂಲಕ ಕಾರ್ಯಭಾರವನ್ನು ಸಮರ್ಪಕ ಹಂಚಿಕೆ ಮಾಡಲಾಗಿದ್ದು, ಶೀಘ್ರ ಕಡತ ವಿಲೇವಾರಿ, ಸಾರ್ವಜನಿಕ ರಿಗೆ ತ್ವರಿತ ಸಂಪರ್ಕಕ್ಕೆ ಅನುಕೂಲಕರ ವಾತಾವರಣ ತಹಶೀಲ್‌ ಕಚೇರಿಯಲ್ಲಿ ನಿರ್ಮಿಸಲಾಗುತ್ತಿದೆ.

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next