Advertisement
Related Articles
Advertisement
ಮಹಾನುಭಾವ ಬಿ.ಎಲ್. ರೈಸ್ 18ನೇ ಶತಮಾನದಲ್ಲಿ, ಮೈಸೂರು ಸಂಸ್ಥಾನದಲ್ಲಿ, “ಬಿಳಿ ಕನ್ನಡಿಗ’ ಎಂದೇ ಹೆಸರಾಗಿದ್ದ ಬಿ.ಎಲ್. ರೈಸ್ ಎನ್ನುವ ಮಹಾನುಭಾವರೊಬ್ಬರಿದ್ದರು. ಅವರು ಬೆಂಗಳೂರಿನಲ್ಲಿ ಶಿಕ್ಷಕವೃತ್ತಿ ನಿರ್ವಹಿಸುತ್ತಿದ್ದಾಗ ಹಾದಿ ಬದಿಯ ಕಲ್ಲುಗಳನ್ನು ನೋಡಿದ್ದರು. ಅದರ ಮೇಲಿದ್ದ ಹಳಗನ್ನಡ ಕೆತ್ತನೆಗಳನ್ನು ಗಮನಿಸಿದ್ದರು. ಅದರ ಕುರಿತು ವಿಚಾರಿಸಿದಾಗ ಯಾರ ಬಳಿಯೂ ಮಾಹಿತಿ ಸಿಗಲಿಲ್ಲ. ಆಮೇಲೆ ತಾವೇ ಸ್ವತಃ ಸ್ಥೂಲವಾಗಿ ಅಧ್ಯಯನ ನಡೆಸಿದಾಗ ಅವೆಲ್ಲವೂ ಶತಮಾನಗಳಷ್ಟು ಹಳೆಯವು ಎಂಬುದು ತಿಳಿದು ಬಂತು. ಅವರ ಆಸಕ್ತಿ ಕಂಡು ಸರ್ಕಾರ ಅವರಿಗೆ ಪ್ರಾಚ್ಯ ಇಲಾಖೆಯಲ್ಲಿ ಹುದ್ದೆ ನೀಡಿತು. ಅವರು ಬೆಂಗಳೂರಿನ ಉದ್ದಗಲಕ್ಕೂ ಓಡಾಡಿ ಶಾಸನ ಕಲ್ಲುಗಳ ಪಟ್ಟಿ ತಯಾರಿಸಿದರು. ಅವಷ್ಟನ್ನೂ “ಎಪಿಗ್ರಾಫಿಯಾ’ ಗ್ರಂಥದ ಒಂಭತ್ತನೇ ಆವೃತ್ತಿಯಲ್ಲಿ ಪ್ರಕಟಿಸಿದರು. ಮೋರಿ ಕೊಚ್ಚೆ ಗುಂಡಿಗಳಲ್ಲಿ ಇಳಿದರು
ಉದಯ್ ಮತ್ತು ವಿನಯ್, ಬಿ.ಎಲ್ ರೈಸ್ ಬರೆದ ಗ್ರಂಥವನ್ನು ಆಧಾರವಾಗಿಟ್ಟುಕೊಂಡು ಛಲದಂಕಮಲ್ಲರಂತೆ ಶಾಸನ ಕಲ್ಲುಗಳ ಹುಡುಕಾಟಕ್ಕೆ ಬಿದ್ದಿದ್ದರು. ಇದಕ್ಕಾಗಿ ಅವರು ಗಲ್ಲಿ ಗಲ್ಲಿಗಳನ್ನು ಸುತ್ತಿದ್ದಾರೆ. ಸರಕಾರಿ ಕಡತಗಳ ಸಮುದ್ರದಲ್ಲಿ ಮುಳುಗಿದ್ದಾರೆ, ಅನೇಕ ಹಿರಿಯ ಸ್ಥಳೀಯರನ್ನು ಭೇಟಿ ಮಾಡಿದ್ದಾರೆ. ಈ ಸಾಹಸದ ನಂತರ ಅವರಿಗೆ ತಿಳಿದು ಬಂದಿದ್ದಿಷ್ಟು- ಬಿ.ಎಲ್ ರೈಸ್ ಅವರ ಕಾಲದಲ್ಲಿ ಬೆಂಗಳೂರಿನಲ್ಲಿದ್ದ ಶಾಸನ ಕಲ್ಲುಗಳ ಸಂಖ್ಯೆ 130. ಅವುಗಳಲ್ಲಿ ಈಗ ಉಳಿದಿರೋದು ಬರೇ 30! ಅವುಗಳು ಸಿಕ್ಕಿದ್ದಾದರೂ ಎಲ್ಲಿ ಅಂತೀರಾ…? ಮೋರಿ ಬದಿ, ಕೊಚ್ಚೆ ಗುಂಡಿಗಳಲ್ಲಿ, ಮರಗಳ ಕೆಳಗೆ!ಅವುಗಳಿಗೊದಗಿದ ಅವಸ್ಥೆಗೆ ಮರುಗಬೇಕೋ, ಇಲ್ಲಾ ನಮ್ಮ ಸಮಾಜದ ಅಜ್ಞಾನಕ್ಕೆ ಮರುಗಬೇಕೋ ಎಂದು ಅವರಿಬ್ಬರಿಗೂ ತಿಳಿಯದಾಯಿತು. ಸಿಕ್ಕಿದ್ದರಲ್ಲಿ ಕೆಲವನ್ನು ಮ್ಯೂಸಿಯಂಗೆ ಸ್ಥಳಾಂತರಿಸಲಾಗಿದ್ದರೆ, ಇನ್ನು ಕೆಲವು ದೇವಸ್ಥಾನಗಳಲ್ಲಿವೆ. ಇವುಗಳನ್ನು ಕಾಪಾಡಿಕೊಳ್ಳದಿದ್ದರೆ ನಾವು ಆದಷ್ಟು ಬೇಗನೆ ಬೆಂಗಳೂರಿನ ಇತಿಹಾಸದ ಪ್ರಮುಖ ಕೊಂಡಿಗಳನ್ನು ಕಳೆದುಕೊಳ್ಳಲಿದ್ದೇವೆ. ಏನ್ಮಾಡಿದ್ದೀರಾ ನೋಡಿ…
1342ನೇ ಇಸವಿಗೆ ಸೇರಿದ ಶಾಸನ ಕಲ್ಲು ಜಕ್ಕೂರಿನಲ್ಲಿ ಪತ್ತೆಯಾಗಿತ್ತು. ಅದರ ಮೇಲೆ ಜಕ್ಕೂರು ಅಂತಲೇ ಬರೆದಿತ್ತು. ಉದಯ್ ಮತ್ತು ತಂಡ ಕಲ್ಲನ್ನು ಶುಚಿಗೊಳಿಸುತ್ತಿದ್ದಾಗ ಊರಿನವರು ಕುತೂಹಲದಿಂದ - ಏನ್ ಸ್ವಾಮಿ ಇದು? ಅಂತ ಕೇಳಿದ್ದರು. ಕಲ್ಲಿನ ದುಃಸ್ಥಿತಿ ಕಂಡು ಮೊದಲೇ ಸಿಟ್ಟಾಗಿದ್ದ ಉದಯ್ “1342ನೇ ಇಸವಿ ಕಲ್ಲಿದು. ಇದರ ಮೇಲೆ ಜಕ್ಕೂರು ಅಂತಲೇ ಬರೆದಿದೆ. ಏನ್ಮಾಡಿದ್ದೀರಾ ನೋಡಿ’ ಅಂತ ಅಸಹನೆ ವ್ಯಕ್ತಪಡಿಸಿದರು. ಇದಾದ ಕೆಲ ದಿನಗಳ ಬಳಿಕ ಉದಯ್ ಹೋಗಿ ನೋಡಿದಾಗ ಊರಿನವರು ಆ ಕಲ್ಲನ್ನು ರಸ್ತೆಯ ಮಧ್ಯೆ ವೃತ್ತವೊಂದರಲ್ಲಿ ನಿಲ್ಲಿಸಿದ್ದರು. ಈಗ ಜಕ್ಕೂರಿನ ಪ್ರತಿ ಮನೆಯವರಿಗೂ ಆ ಕಲ್ಲಿನ ಕುರಿತು ಹೆಮ್ಮೆಯಿದೆ. ಮಕ್ಕಳು, ಮನೆಗೆ ಬಂದ ನೆಂಟರಿಗೆ ಆ ಕಲ್ಲನ್ನು ತೋರಿಸಿ ಅದು ನಮ್ಮ ಊರಿನ ಇತಿಹಾಸ ಎಂದು ಎದೆ ತಟ್ಟಿ ತೋರಿಸುತ್ತಾರೆ. “ಇಂಥ ಕೆಲಸ ಬೇರೆ ಏರಿಯಾಗಳಲ್ಲೂ ಆಗಬೇಕು. ಜನರಲ್ಲಿಯೇ ಈ ಬಗ್ಗೆ ಕಾಳಜಿ ಮೂಡಬೇಕು.’ ಎನ್ನುವ ಉದಯ್, ನಿರ್ಲಕ್ಷ್ಯಕ್ಕೊಳಪಟ್ಟ ಈ ಅತ್ಯಮೂಲ್ಯ ಶಾಸನ ಕಲ್ಲುಗಳು, ಮೂಢನಂಬಿಕೆಯಿಂದ, ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ ಮುಂತಾದ ಕೆಲಸಗಳಿಗೆ ಒಡೆಯಲ್ಪಟ್ಟಿರುವುದನ್ನೂ ನೋಡಿದ್ದಾರೆ. ಅಂದಹಾಗೆ, ಆ ಅಪರಾಧದಲ್ಲಿ ನಾವೆಲ್ಲರೂ ಭಾಗಿದಾರರು. ಯಾಕೆ ಗೊತ್ತಾ? ಶತಮಾನಗಳಿಂದ ಉಳಿದುಕೊಂಡು ಬಂದ ಕಲ್ಲುಗಳಲ್ಲಿ ಬಹುತೇಕವು ನಾಶಗೊಂಡಿದ್ದು ಕಳೆದ 15 ವರ್ಷಗಳಲ್ಲಿ! ಬಾಕ್ಸ್- ಶಾಸನ ಕಲ್ಲು ಯಾಕೆ ಮುಖ್ಯವಾಗುತ್ತೆ?
ಶತ ಶತಮಾನಗಳ ಹಿಂದೆ ಪತ್ರಿಕೆಗಳಿರಲಿಲ್ಲ, ಟಿವಿಗಳಿರಲಿಲ್ಲ. ಆಗಿನ ಎಲ್ಲಾ ಕೆಲಸಗಳು ಸಾರ್ವಜನಿಕರಿಗೆ ತಿಳಿಯುತ್ತಿದ್ದಿದ್ದು, ದಾಖಲಾಗುತ್ತಿದ್ದಿದ್ದು ಶಾಸನ ಕಲ್ಲುಗಳ ಮೂಲಕ. ಕೆರೆಕಟ್ಟೆ ನಿರ್ಮಾಣ, ದೇವಸ್ಥಾನ ಜೀರ್ಣೋದ್ಧಾರ, ಸುಂಕ ವಸೂಲಾತಿ ನಿಯಮ ಮುಂತಾದ ಪ್ರಮುಖ ಸಂದರ್ಭಗಳಲ್ಲಿ ರಾಜರು ಶಾಸನ ಕಲ್ಲುಗಳನ್ನು ಸ್ಥಾಪಿಸಿಬಿಡುತ್ತಿದ್ದರು. ಕಾಲದ ಹೊಡೆತಕ್ಕೆ ಸಿಕ್ಕಿ ಮಾಸಿದ, ಒಡೆದು ಹೋದ ಇಂಥ ಒಂದು ಕಲ್ಲಿನ ಚೂರೊಂದರ ಮೂಲಕ ನಾವು ಎಂತೆಂಥ ವಿಚಾರಗಳನ್ನು ಬಯಲಿಗೆಳೆಯಬಹುದು ಎನ್ನುವುದನ್ನು ತಿಳಿದರೆ ನೀವು ಹೌಹಾರಿಬಿಡುತ್ತೀರಿ! ಕೊಡಿಗೆಹಳ್ಳಿಯ ಶಾಸನಕಲ್ಲಿನಲ್ಲಿ ಬರೆದದ್ದರ ಭಾವಾರ್ಥವಿದು- ಈ ಬಾರಿ ತೆರಿಗೆ ಕಟ್ಟುವ ಹಣವನ್ನು ಊರಿನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದಾನ ನೀಡಬೇಕೆಂದು ಗ್ರಾಮಸ್ಥರು ನಿಶ್ಚಯಿಸಿದ್ದಾರೆ. ಅದಕ್ಕೆ ರಾಜರ ಒಪ್ಪಿಗೆ ಸಿಕ್ಕಿರುತ್ತದೆ. ಸೂರ್ಯಗ್ರಹಣದ ದಿನ ಶುಭಮುಹೂರ್ತದ ವೇಳೆ ದಾನ ಪ್ರಕ್ರಿಯೆ ನೆರವೇರುತ್ತದೆ. ಶಾಸನದ ಲಿಪಿಯಿಂದ ಆಗಿನ ಕಾಲಮಾನವನ್ನೂ ಪತ್ತೆಹಚ್ಚಬಹುದು. ಇದರಿಂದ ಊರಿನ ದೇವಸ್ಥಾನ ಎಷ್ಟು ಹಳೆಯದೆಂಬುದು ತಿಳಿಯುತ್ತದೆ. ಸುಂಕ ವಿವರದಿಂದ ಆಗಿನ ಕಾಲದ ಸಾಮಾಜಿಕ ವ್ಯವಸ್ಥೆಯನ್ನು ತಿಳಿಯಬಹುದು. ಜನಜೀವನವನ್ನೂ ಅಂದಾಜಿಸಬಹುದು. ಇನ್ನೊಂದು ಕುತೂಹಲದ ವಿಷಯವೆಂದರೆ ಕೊಡಿಗೆಹಳ್ಳಿಯ ಶಾಸನದಲ್ಲಿ ಸೌರಗ್ರಹಣದ ಕುರಿತಾದ ವಿವರಗಳಿದ್ದಿದ್ದು. ಇದರಿಂದ ಆಗಿನವರಿಗೆ ಆ ಕುರಿತು ನಿಖರ ದಿನಾಂಕದ ಮಾಹಿತಿ ಇತ್ತು ಎಂಬುದು ತಿಳಿದುಬರುತ್ತದೆ. ಆಗಿನ ಕಾಲದಲ್ಲಿ ವಿಜ್ಞಾನ ಎಷ್ಟು ಮುಂದುವರಿದಿತ್ತು ಎಂಬುದನ್ನೂ ಇದರಿಂದ ತಿಳಿಯಬಹುದು. ಲಿಪಿಯಿಂದ ಶಾಸನ 14ನೇ ಶತಮಾನದ್ದೆಂದು ಗೊತ್ತಾಯ್ತು. ಅಷ್ಟಕ್ಕೇ ಸುಮ್ಮನಾಗದ ಉದಯ್ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅವರ ವೆಬ್ಸೈಟಿಗೆ ಭೇಟಿ ನೀಡಿ ಇತಿಹಾಸದಲ್ಲಿ ಘಟಿಸಿದ ಸೌರಗ್ರಹಣದ ಪಟ್ಟಿಯನ್ನು ಜಾಲಾಡಿದಾಗ ಅವರಿಗೆ 1431ನೇ ಇಸವಿ ಆಗಸ್ಟ್ 8 ರಂದು ಭಾರತದಲ್ಲಿ ಸೌರಗ್ರಹಣ ಕಂಡಿದ್ದ ಮಾಹಿತಿ ಸಿಕ್ಕಿತ್ತು. ಮೈ ಜುಮ್ಮೆನ್ನುವುದೊಂದು ಬಾಕಿ! ಎಪಿಗ್ರಾಫಿಯಾ ಆನ್ಲೈನ್ ಗೂಗಲ್ ಲಿಂಕ್ - goo.gl/XZmGrf
ಶಾಸನಗಳಿರುವ ಪ್ರದೇಶದ ಗೂಗಲ್ ನಕಾಶೆಯ ಲಿಂಕ್ ಇಲ್ಲಿದೆ. ಜೊತೆಗೆ ಶಾಸನದಲ್ಲಿರುವ ವಿವರಗಳನ್ನೂ ಇಲ್ಲಿ ತಿಳಿಯಬಹುದು. ಗೂಗಲ್ ಸಹಾಯದಿಂದ ಉದಯ್ ಅವರು ಈ ನಕಾಶೆಯನ್ನು ಸಿದ್ಧಪಡಿಸಿದ್ದಾರೆ. ಆಸಕ್ತರು ತಾವೇ ಸ್ವತಃ ಆ goo.gl/vYY3Ky
ಶಾಸನಗಳ 3ಡಿ ಮಾದರಿ- goo.gl/oQAMgp ಫೇಸ್ಬುಕ್ ಪೇಜ್ - goo.gl/MCjics
ಸಂಪರ್ಕ- 9845204268(ಉದಯ್)