Advertisement

ಊರಿಗೆ ನೀರುಣಿಸುತ್ತಿರುವ ಬೆದ್ರಂಪಳ್ಳಕ್ಕೆ ತಡೆಗೋಡೆ ನಿರ್ಮಾಣ ಅಗತ್ಯ

08:16 PM Nov 06, 2019 | Team Udayavani |

ಪೆರ್ಲ: ಭೂಮಿಯ ಮೇಲಿರುವ ಜೀವಸಂಕುಲಗಳ ಉಳಿಯುವಿಕೆಗೆ ಜೀವ ಜಲ ಅತೀ ಅಗತ್ಯ.ಪ್ರಕೃತಿಯ ಅಮೂಲ್ಯ ಕೊಡುಗೆಯಾದ ನೀರಿನ ಸಂರಕ್ಷಣೆಯ ಪ್ರಧಾನ ಜವಾಬ್ದಾರಿ ಮನುಷ್ಯನಿಗೇ ಸೇರಿದ್ದು .ಇಂದು ಮಳೆಗಾಲದಲ್ಲಿ ಮಾತ್ರ ಎಲ್ಲಾ ಕಡೆ ನೀರಿನ ಲಭ್ಯವಿದ್ದು ,ಮಳೆ ಕಡಿಮೆಯಾದ ಒಂದೆರಡು ತಿಂಗಳಲ್ಲಿಯೇ ನೀರಿಗೆ ಹಾಹಾಕಾರ ನಡೆಸುತ್ತೇವೆ.ಇರುವಂತಹ ಜಲ ಸಂಪನ್ಮೂಲಗಳಿಗೆ ಮರುಪೂರಣ,ನಿರ್ವಹಣೆ,ರಕ್ಷಣೆ ಮಾತ್ರ ಮಾಡದಿರುವುದು ನಮ್ಮ ನಿರ್ಲಕ್ಷé. ಎಣ್ಮಕಜೆ ಗ್ರಾಮ ಪಂಚಾಯತಿನ ಬೆದ್ರಂಪಳ್ಳವು ಪ್ರಕೃತಿ ದತ್ತ ಜಲ ಸಂರಕ್ಷಣೆಯ ಒಂದು ಕೇಂದ್ರ.

Advertisement

ಸುಮಾರು 3 ಎಕ್ರೆಯಷ್ಟು ವಿಸ್ತಾರವಿರುವ ಈ ಜಲಾಶಯವು ನಡುಬೈಲ್‌ ,ಎಣ್ಮಕಜೆ ಪ್ರದೇಶಗಳ ನೀರಿನ ಮೂಲಗಳಿಗೆ ಪ್ರಧಾನ ಆಶ್ರಯ.ಗ್ರಾಮಸ್ಥರಿಗೆ ತಮ್ಮ ಪ್ರಾಥಮಿಕ ಅವಶ್ಯಕತೆಗಳಿಗೆ ಹಾಗೂ ಕೃಷಿ ಅಗತ್ಯಗಳಿಗೆ ಇದರ ನೀರೆ ಆಧಾರ.ತಗ್ಗು ಪ್ರದೇಶಗಳಾದ ಇಲ್ಲಿ ಹಳ್ಳದಿಂದ ನೀರು ಹರಿದು ಬರುವ ಕಾರಣ ಭತ್ತದ ಕೃಷಿ,ತೆಂಗು ಕಂಗು ಬೆಳೆಗಳಿಗೂ ನೀರೂಣಿಸಲು ಸಾಧ್ಯವಾಗುತ್ತಿತ್ತು.ಎಣ್ಮಕಜೆ ಪ್ರದೇಶದಲ್ಲಿನ ಸುಮಾರು ಎರಡು ಎಕ್ರೆಯಷ್ಟು ಗದ್ದೆಗಳಿಗೆ ಈ ಹಳ್ಳವೆ ಪ್ರಧಾನ ನೀರಿನ ಮೂಲ ಎಂದು ಸ್ಥಳೀಯರಾದ ಸುಬ್ಬಣ್ಣ ಆಳ್ವ ಎಣ್ಮಕಜೆ ಹಾಗೂ ಸಾವೆರ್‌ ಡಿ ಸೋಜಾ ಹೇಳುತ್ತಾರೆ. ಒಂದೆರಡು ಮಳೆ ಬಂದಾಗಲೆ ಈ ಪ್ರದೇಶಗಳ ನೀರಿನ ಮೂಲಗಳಲ್ಲಿ ಜಲ ತುಂಬಿಕೊಳ್ಳುತ್ತದೆ. ಆದರೆ ಈಗ ಜಲಾಶಯದಲ್ಲಿ ನೀರು ಬೇಗ ಬರಿದಾಗುವ ಕಾರಣ ಕೃಷಿಕರು ಬೆಳೆ ಮಾಡುವುದನ್ನೆ ನಿಲ್ಲಿಸಿದ್ದಾರೆ.ಜನರಿಗೆ ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳಿಗೂ ಈ ಜಲಾಶಯದ ನೀರು ಅಗತ್ಯ.

ಹಳ್ಳದ ಬದಿಯಲ್ಲಿ ನಿರ್ಮಿಸಿದ ಕಲ್ಲಿನ ತಡೆಗೋಡೆಯು ಮರಗಳ ಬೇರಿನಿಂದ ಬಿರುಕು ಬಿಟ್ಟಿದೆ.ಕೆಸರು ತುಂಬಿಕೊಂಡು ಹೆಚ್ಚು ನೀರು ಸಂಗ್ರಹವಾಗುವುದಿಲ್ಲ .ಒಂದು ಬದಿ ತಗ್ಗು ಪ್ರದೇಶವಾದ ಕಾರಣ ಸುಮಾರು 5ಮೀ.ಅಗಲದಲ್ಲಿ ಮಣ್ಣಿನಿಂದ ಗೋಡೆ ನಿರ್ಮಿಸಿ ಹಳ್ಳದಿಂದ ನೀರು ಹರಿದು ಹೋಗಲು ಕಬಿಣ್ಣದ ಸಣ್ಣ ಪೈಪ್‌ ಅಳವಡಿಸಿದ್ದರು.ಆದರೆ ಇದೀಗ ಆ ಪೈಪ್‌ ತುಕ್ಕು ಹಿಡಿದು ನಾಶವಾಗಿದೆ.ಹಿಂದೆ ಫೆಬ್ರವರಿ ತಿಂಗಳು,ಕೆಲವೊಮ್ಮೆ ನಂತರವು ನೀರಿರುತ್ತಿದ್ದ ಈ ಜಲಮೂಲದಲ್ಲಿ ಸಮರ್ಪಕ ತಡೆಗೋಡೆ ಇಲ್ಲದೆ ಇದೀಗ ಡಿಸೆಂಬರ್‌ನಲ್ಲಿಯೇ ನೀರು ಬರಿದಾಗುತ್ತದೆ ಎನ್ನುತ್ತಾರೆ.

ಸ್ಥಳಿಯರಿಂದ ಕ್ರೀಯಾ ಸಮಿತಿ ರಚಿಸಲು ತೀರ್ಮಾನ
ಗ್ರಾಮದ ಪ್ರಧಾನ ನೀರಿನ ಸಂಪನ್ಮೂಲವಾದ ಬೆದ್ರಂಪಳ್ಳದ ಅಭಿವೃದ್ಧಿ ,ಸಂರಕ್ಷಣೆಗಾಗಿ ಪ್ರದೇಶವಾಸಿಗಳನ್ನು ಒಟ್ಟುಗೂಡಿಸಿ ಕ್ರಿಯಾ ಸಮಿತಿ ರಚಿಸುವುದಾಗಿ ಅಶ್ರಫ್‌ ಬೆದ್ರಂಪಳ್ಳ ಹೇಳಿದ್ದಾರೆ.

ಇದರ ಸಂರಕ್ಷಣೆಗಾಗಿ ಯೋಜನೆ ತಯಾರಿಸಲು ಜಿಲ್ಲಾ ನಿರ್ಮಿತಿ ಕೇಂದ್ರದವರು ಬಂದು ಸ್ಥಳ ಪರೀಶೀಲಿಸಿ ಹೋಗಿದ್ದಾರೆ.ಯೋಜನೆಯ ತಯಾರಿಯ ಬಗ್ಗೆ ,ಅನುದಾನ ಮಂಜುರಾದ ಕುರಿತು ಇದುವರೆಗೂ ಯಾವುದೇ ಮಾಹಿತಿ ಇಲ್ಲ ಎಂದು ಸ್ಥಳೀಯ ಕುಂಞಾಲಿ ಹೇಳುತ್ತಾರೆ.ಹಳ್ಳದ ಪುನರ್ಜೀವನದ ಬಗ್ಗೆ ವಾರ್ಡು ಸದಸ್ಯೆ ಪ್ರೇಮ ಎಂ.ಅವರಲ್ಲಿ ಮಾಹಿತಿ ಕೇಳಿದಾಗ, ಈ ಪ್ರದೇಶದ ಪ್ರಧಾನ ಜಲಸಂಪನ್ಮೂಲವಾದ ಈ ಹಳ್ಳವನ್ನು ಸಂರಕ್ಷಿಸ ಬೇಕಾಗಿದೆ.ಆದರೆ ಇದಕ್ಕೆ ದೊಡ್ಡ ಮೊತ್ತದ ಯೋಜನೆ ಬೇಕಾಗಿದೆ.ಗ್ರಾಮ ಪಂಚಾಯತಿಗೆ ಈ ಬೃಹತ್‌ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ .ಸಂಬಂಧ ಪಟ್ಟ ಇತರ ಇಲಾಖೆಗಳಿಂದ ಅನುದಾನ ಲಭಿಸಲು ಗರಿಷ್ಠ ಪ್ರಯತ್ನ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.

Advertisement

ಪ್ರಕೃತಿದತ್ತವಾದ ಇಂತಹ ಹಳ್ಳಗಳು ಪ್ರಕೃತಿ ನಮಗೆ ನೀಡಿದ ಮಹಾ ಕೊಡುಗೆ.ಆದರೆ ಮಾನವನ ನಿರ್ಲಕ್ಷದಿಂದ ಹಳ್ಳ ,ಕೆರೆ,ತೋಡುಗಳು ಮರೆಯಾಗುತ್ತಿವೆ.ಇವುಗಳ ಸಂರಕ್ಷಣೆ,ಅಭಿವೃದ್ಧಿ ಗಾಗಿ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಜಲಕ್ಷಾಮ ದುರಂತದ ಗಂಭೀರ ಪರಿಣಾಮ ಎದುರಿಸ ಬೇಕಾದೀತು.ಜನರ ಸಹಕಾರ ಹಾಗೂ ಸರಕಾರ ಮುತುವರ್ಜಿ ವಹಿಸಿ ಯೋಜನೆ ತಯಾರಿಸ ಬೇಕು.ಅನುದಾನ ಲಭಿಸಿದರೆ ಮಾತ್ರ ಸಾಲದು,ಅದರ ಸಮರ್ಪಕ ಅನುಷ್ಠಾನ ಕೂಡ ಆಗ ಬೇಕಾಗಿದೆ,

“ಸಂರಕ್ಷಣೆ ಅಗತ್ಯ’
ಇದರ ಆಳ ವಿಸ್ತರಿಸಿ,ಬದಿಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದರೆ ಫಲಪ್ರದವಾದೀತು.ತಜ್ಞರಿಂದ ಯೋಜನೆ ತಯಾರಿಸ ಬೇಕಾಗಿದೆ.ಈ ಹಳ್ಳದ ಕೆಸರನ್ನು ಸುಮಾರು 20ವರ್ಷಗಳ ಮೊದಲೊಮ್ಮೆ ತೆಗೆದಿದ್ದರು.ನಂತರ ಇದರ ಸ್ವತ್ಛತೆ ನಡೆಯಲಿಲ್ಲ .ಸುಮಾರು ಎರಡು ಕಿ.ಮೀ.ಪ್ರದೇಶಗಳ ಜನರಿಗೆ ನೀರಿನ ಮೂಲವಾದ ಇದರ ರಕ್ಷಣೆ ಅತೀ ಅಗತ್ಯ ಎಂದು ಬೆಂದ್ರಪಳ್ಳದ ಅಶ್ರಫ್‌ ಹೇಳುತ್ತಾರೆ. ಈ ಬಗ್ಗೆ ಎಣ್ಮಕಜೆ ಪೆರ್ಲ ವಿಲೇಜ್‌ ಅಧಿಕಾರಿಯವರಲ್ಲಿ ಕೇಳಿದಾಗ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಬಂದು ಪರಿಶೀಲಿಸಿದ್ದಾರೆ.ಯೋಜನೆಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next