ಸೇಂಟ್ ಲೂಸಿಯಾ (ವೆಸ್ಟ್ ಇಂಡೀಸ್): ಟೆಸ್ಟ್ ಕ್ರಿಕೆಟ್ ಇತಿಹಾಸದ ವಿವಾದಾತ್ಮಕ ಗಳಿಗೆಗೆ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ನ 3ನೇ ದಿನದಾಟ ಸಾಕ್ಷಿಯಾಯಿತು.
ಮೂರನೇ ದಿನ ಹೊಸ ಚೆಂಡಿನೊಂದಿಗೆ ಆಟ ಆರಂಭಿಸಲು ಅಂಪೈರ್ ತೀರ್ಮಾನಿಸಿದ್ದನ್ನು ವಿರೋಧಿಸಿದ ಶ್ರೀಲಂಕಾ 2 ಗಂಟೆಗಳ ಕಾಲ ಮೈದಾನಕ್ಕೆ ಬರದೇ ಡ್ರೆಸ್ಸಿಂಗ್ ಕೊಠಡಿಯಲ್ಲೇ ಉಳಿಯಿತು. 2006ರಲ್ಲಿ ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನ ತಂಡ ಇಂತ ಹದ್ದೇ ಪ್ರತಿಭಟನೆ ನಂತರ ಇದು 2ನೇ ಘಟನೆಯಾಗಿದೆ.
ಮೂಲಗಳ ಪ್ರಕಾರ ಚೆಂಡು ವಿರೂಪಗೊಂಡಿದ್ದರಿಂದ ಅಂಪೈರ್ಗಳು ಅದನ್ನು ಬದಲಿಸಲು ಮನಸ್ಸು ಮಾಡಿದ್ದರು. ಶ್ರೀಲಂಕಾದ ಮೇಲೆ ನಿರ್ದಿಷ್ಟವಾಗಿ ಬೊಟ್ಟು ಮಾಡಲು ಅಂಪೈರ್ಗಳು ಹೋಗದಿದ್ದರೂ ಎದುರಾಳಿ ವೆಸ್ಟ್ಇಂಡೀಸ್ಗೆ ದಂಡದ ರೂಪದಲ್ಲಿ 5 ಹೆಚ್ಚುವರಿ ರನ್ಗಳನ್ನು ನೀಡಿದರು (ಕ್ಷೇತ್ರರಕ್ಷಣೆ ಮಾಡುವ ತಂಡ ಚೆಂಡು ವಿರೂಪ ಮಾಡಿದರೆ ಈ ಕ್ರಮ ತೆಗೆದುಕೊಳ್ಳಲಾಗುತ್ತದೆ). ಇದು ಶ್ರೀಲಂಕನ್ನರನ್ನು ಸಿಟ್ಟಿಗೆಬ್ಬಿಸಿತು.
ಇದಕ್ಕಿಂತ ಹೆಚ್ಚಾಗಿ ಪಂದ್ಯಾರಂಭಕ್ಕೆ ಕೇವಲ 10 ನಿಮಿಷ ಮೊದಲು ಚೆಂಡನ್ನು ಬದಲಿಸುವ ತೀರ್ಮಾನವನ್ನು ಅಂಪೈರ್ಗಳು ತಿಳಿಸಿದ್ದಾರೆನ್ನುವುದು ಶ್ರೀಲಂಕಾ ದೂರು. ಈ ಬಗ್ಗೆ ಪಂದ್ಯದ ರೆಫ್ರಿ ಜಾವಗಲ್ ಶ್ರೀನಾಥ್ ಶ್ರೀಲಂಕಾ ಆಟಗಾರರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಕಡೆಗೂ ಚೆಂಡು ಬದಲಿಸಲು ಲಂಕಾ ಆಟಗಾರರು ಒಪ್ಪಿಕೊಂಡರು. ವೆಸ್ಟ್ ಇಂಡೀಸ್ ಗೆ ಹೆಚ್ಚುವರಿ 5 ರನ್ ನೀಡುವುದೂ ಖಾತ್ರಿಯಾಯಿತು. ಇದನ್ನು ವಿರೋಧಿಸಿ ಮೇಲ್ಮನವಿ ಸಲ್ಲಿಸಲು ಶ್ರೀಲಂಕಾ ನಿರ್ಧರಿಸುವುದರೊಂದಿಗೆ ಪ್ರಕರಣ ಇತ್ಯರ್ಥವಾಯಿತು.
ಆಗಿದ್ದೇನು?: 2ನೇ ದಿನದ ಅಂತ್ಯದ ಹೊತ್ತಿಗೆ ಅಂಪೈರ್ಗಳು ಚೆಂಡನ್ನು ಹಲವು ಬಾರಿ ಪರಿಶೀಲಿಸಿದ್ದರು. ಅದು ವಿರೂಪಗೊಂಡಿದೆ ಎಂಬ ಅನುಮಾನವನ್ನು ಆಗಲೇ ವ್ಯಕ್ತಪಡಿಸಿದ್ದರು. ಆಗಲೇ ಚೆಂಡು ಬದಲಿಸುವ ಸುಳಿವು ಲಭಿಸಿತ್ತು. ಮರುದಿನ ಅರ್ಧಗಂಟೆ ಮುಂಚೆಯೇ ಪಂದ್ಯ ಶುರು ಮಾಡುವ ಲೆಕ್ಕಾಚಾರದಲ್ಲಿ ಅಂಪೈರ್ಗಳಿದ್ದರು. ಆದರೆ ಅಂಪೈರ್ ಮೈದಾನ ಪ್ರವೇಶಿಸಿದರೂ ಲಂಕಾದ ಯಾವುದೇ ಆಟಗಾರರು ಹೊರಬರದ್ದರಿಂದ ಪಂದ್ಯ 2 ಗಂಟೆ ತಡವಾಯಿತು!