Advertisement

ಐಸಿಯುನಲ್ಲಿ ಸೋಂಕು ಗೆದ್ದವರ ಪ್ರಮಾಣ ಹೆಚ್ಚಳ : ಶೇ. 95ರಷ್ಟು ಮಂದಿ ಗುಣಮುಖ

12:44 AM Apr 22, 2021 | Team Udayavani |

ಬೆಂಗಳೂರು: ಈ ಬಾರಿ ಪರಿಸ್ಥಿತಿ ಗಂಭೀರಗೊಂಡು ತುರ್ತು ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವ ಕೊರೊನಾ ಸೋಂಕಿತರ ಪ್ರಮಾಣ ಶೇ.95ಕ್ಕೆ ಹೆಚ್ಚಳವಾಗಿದ್ದು, ಇದಕ್ಕೆ ಲಸಿಕೆ ಮತ್ತು
ಟೆಲಿ ಐಸಿಯು ನಿಗಾ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ಜಾರಿಯಾದುದು ಪ್ರಮುಖ ಕಾರಣವೆನ್ನಲಾಗಿದೆ.

Advertisement

ರಾಜ್ಯದಲ್ಲಿ ಕೊರೊನಾ ಮೊದಲ ಅಲೆಯಲ್ಲಿ ವೆಂಟಿಲೇಟರ್‌ ಹಂತಕ್ಕೆ ತಲುಪಿದ್ದ ಸೋಂಕಿತರಲ್ಲಿ ಶೇ.80ರಷ್ಟು ಮಾತ್ರ ಗುಣಮುಖರಾಗುತ್ತಿದ್ದರು. ಆದರೆ, ಎರಡನೇ ಅಲೆಯಲ್ಲಿ ಇದು ಶೇ. 95ಕ್ಕೇರಿದೆ. ಜತೆಗೆ ಐಸಿಯುಗೆ ದಾಖಲಾಗುತ್ತಿರುವವರ ಪ್ರಮಾಣವೂ ಅರ್ಧಕ್ಕರ್ಧ ಇಳಿಕೆಯಾಗಿದೆ.

ಐಸಿಯುನಲ್ಲಿ ಆಕ್ಸಿಜನ್‌ ಐಸಿಯು ಹಾಗೂ ವೆಂಟಿಲೇಟರ್‌ ಐಸಿಯು ಎಂಬ ಎರಡು ಘಟಕಗಳಿವೆ. ಗಂಭೀರ ಸ್ಥಿತಿಯ ರೋಗಿಗಳನ್ನು ವೆಂಟಿಲೇಟರ್‌ ಐಸಿಯುಗೆ ವರ್ಗಾಯಿಸಿ ಕ್ಷಣ ಕ್ಷಣಕ್ಕೂ ನಿಗಾ ವಹಿಸಲಾಗುತ್ತದೆ. ಬುಧವಾರದ ಅಂತ್ಯಕ್ಕೆ ರಾಜ್ಯದಲ್ಲಿ 904 ಸೋಂಕಿತರು ಈ ಸ್ಥಿತಿಯಲ್ಲಿದ್ದಾರೆ.

1,385 ಮಂದಿ ಗುಣಮುಖ
ಎ.1ರಿಂದ 20ರವರೆಗೆ ರಾಜ್ಯದಲ್ಲಿ ವೆಂಟಿಲೆಟರ್‌ ಮತ್ತು ಆಕ್ಸಿಜನ್‌ ಐಸಿಯುನಲ್ಲಿ ಒಟ್ಟು 1,505 ಸೋಂಕಿತರು ಚಿಕಿತ್ಸೆ ಪಡೆದಿದ್ದು, ಈ ಪೈಕಿ 1,385 ಮಂದಿ ಗುಣಮುಖರಾಗಿದ್ದಾರೆ. ಮೊದಲ ಅಲೆಯಲ್ಲಿ ಈ ಪ್ರಮಾಣ ಶೇ. 18ರಿಂದ 20ರಷ್ಟಿತ್ತು.

ಅರ್ಧಕ್ಕರ್ಧ ಇಳಿಕೆ
ಕಳೆದ ವರ್ಷ ರಾಜ್ಯದಲ್ಲಿ ಸೋಂಕು ಪ್ರಕರಣಗಳು 10,800ಕ್ಕೆ ತಲುಪಿದ್ದಾಗಲೂ ವೆಂಟಿಲೇಟರ್‌ನಲ್ಲಿರುವ ಸೋಂಕಿತರ ಸಂಖ್ಯೆ 750ರಿಂದ 800 ಇತ್ತು. ಈ ಬಾರಿ 20 ಸಾವಿರ ಗಡಿ ದಾಟಿದ್ದು, 904 ಮಂದಿ ಮಾತ್ರ ವೆಂಟಿಲೇಟರ್‌ನಲ್ಲಿದ್ದಾರೆ.

Advertisement

ಈ ಬಾರಿ ಗಂಭೀರ ಸೋಂಕಿತರ ಪ್ರಮಾಣ ಕಡಿಮೆ ಎನ್ನುತ್ತಾರೆ ಟೆಲಿ ಐಸಿಯು ವಿಭಾಗದ ಸಹಾಯಕ ಉಪನಿರ್ದೇಶಕ ಡಾ| ವಸಂತ್‌ಕುಮಾರ್‌.

ಕಾರಣಗಳಿವು
1. ಟೆಲಿ ಐಸಿಯು ಪರಿಣಾಮಕಾರಿ ಜಾರಿ
ರಾಜ್ಯದ ಎಲ್ಲ ಆಸ್ಪತ್ರೆಗಳ ಐಸಿಯುಗಳೊಂದಿಗೆ ಟೆಲಿ ಐಸಿಯು ಸಂಪರ್ಕ ಹೊಂದಿರುತ್ತದೆ. ಇದರಲ್ಲಿ ನಾಲ್ಕು ಪಾಳಿಯಲ್ಲಿ ಖಾಸಗಿ ಮತ್ತು ಸರಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ ವಿವಿಧ ಆರೋಗ್ಯ ವಿಭಾಗದ ತಜ್ಞ ವೈದ್ಯರು ಕಾರ್ಯನಿರ್ವಹಿಸುತ್ತಾರೆ. ಇಲ್ಲಿನ ವೈದ್ಯರು ಕೊರೊನಾ ಚಿಕಿತ್ಸೆ, ವಿವಿಧ ಕೇಸ್‌ ಸ್ಟಡಿಗಳ ಅನುಭವ ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ.

2. ಲಸಿಕೆ ಪರಿಣಾಮ
ಸಾವಿನ ಪ್ರಮಾಣ ಕಡಿಮೆ ಮಾಡುವಲ್ಲಿ ಲಸಿಕೆ ಸಹಕಾರಿಯಾಗಿದೆ. ಐಸಿಯು ಹಂತಕ್ಕೆ ತಲುಪುವ ಬಹುತೇಕರು 50 ವರ್ಷ ಮೇಲ್ಪಟ್ಟವರಾಗಿದ್ದು, ಅನೇಕರು ಲಸಿಕೆ ಪಡೆದಿದ್ದು, ಅಂಥವರ ಶ್ವಾಸಶೋಶದಲ್ಲಿ ಸೋಂಕಿನ ತೀವ್ರತೆ ಕಡಿಮೆ ಇತ್ತು ಎನ್ನುತ್ತಿದ್ದಾರೆ ತಜ್ಞರು.

ಚಿಕಿತ್ಸೆ ಕ್ರಮ ಕಳೆದ ವರ್ಷಕ್ಕಿಂತ ಉತ್ತಮಗೊಂಡಿದೆ. ಜತೆಗೆ ಶ್ವಾಸಕೋಶದಲ್ಲಿ ಸೋಂಕು ಹತೋಟಿಗೆ ಲಸಿಕೆಯೂ ಸಹಕಾರಿಯಾಗಿದೆ. ಇದರಿಂದ ಐಸಿಯು ನಲ್ಲಿದ್ದವರ ಮರಣ ಪ್ರಮಾಣ ತಗ್ಗಿದೆ.
– ಡಾ| ಸಿ.ಎನ್‌.ಮಂಜುನಾಥ್‌, ತಜ್ಞರ ಸಲಹಾ ಸಮಿತಿ ಸದಸ್ಯ

ಟೆಲಿ ಐಸಿಯು ವ್ಯವಸ್ಥೆ ಮೂಲಕ ಮಣಿಪಾಲ್‌ ಮತ್ತು ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳ ತಜ್ಞ ವೈದ್ಯರ ಉಪಸ್ಥಿತಿಯಲ್ಲಿ ರಾಜ್ಯಾದ್ಯಂತ ಐಸಿಯುನಲ್ಲಿರುವ ಸೋಂಕಿತರ ಸ್ಥಿತಿ, ಚಿಕಿತ್ಸೆ ಕ್ರಮದ ಬಗ್ಗೆ ಪ್ರತಿದಿನ ಚರ್ಚಿಸಲಾಗುತ್ತದೆ. 10 ಜಿಲ್ಲೆಗೊಂದರಂತೆ 3 ತಂಡ ರಚಿಸಿದ್ದು, ಐಸಿಯು ಘಟಕಗಳ ಸಿಬಂದಿ, ವೈದ್ಯರಿಗೆ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ.
-ಡಾ| ತ್ರಿಲೋಕ್‌ ಚಂದ್ರ, ಆರೋಗ್ಯ ಇಲಾಖೆ ಆಯುಕ್ತ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next