Advertisement

ಅಟಲ್‌ ಜೀ ಕಲಿಸಿ ಹೋದದ್ದೇನು?

06:00 AM Aug 21, 2018 | |

ಮುತ್ಸದ್ದಿ, ರಾಜತಾಂತ್ರಿಕ ನಿಪುಣ, ಕವಿ, ವಾಗ್ಮಿ, ದೂರದೃಷ್ಟಿಯುಳ್ಳ ಕನಸುಗಾರ.. ಹೀಗೆ ಅಟಲ್‌ ಬಿಹಾರಿ ವಾಜಪೇಯಿಯವರನ್ನು ಏನು ಕರೆದರೂ ಅಪೂರ್ಣವೇ. ಅವರ ವ್ಯಕ್ತಿತ್ವವೇ ಮೇರು ಪರ್ವತ. ಮಾತು, ಕವಿತೆ, ಭಾಷಣ, ಆಡಳಿತ ವೈಖರಿಯಲ್ಲಿ ಅವರಿಗೆ ಅವರೇ ಸಾಟಿ.  “ನಾಯಕನೊಬ್ಬ ಹೀಗಿರಬೇಕು’ ಎಂದು ಜಗತ್ತಿಗೇ ಮಾದರಿಯಾದ ಅಟಲ್‌ರ ಬದುಕು, ಬದುಕಿದ ರೀತಿ ನಮಗೆ ಪಾಠವಾಗಬೇಕು. ಅವರ ಬದುಕಿನಿಂದ ಕಲಿಯಬಹುದಾದ ಕೆಲವು ಜೀವನಪಾಠಗಳು ಇಲ್ಲಿವೆ…

Advertisement

1. ನೀವು ಎಲ್ಲಿ ಹುಟ್ಟಿದ್ದೀರಿ ಎನ್ನುವುದು ಮುಖ್ಯವಲ್ಲ
“ನಾನೂ ದೊಡ್ಡ ಸಿಟಿಯಲ್ಲಿ ಹುಟ್ಟಿದ್ದರೆ, ದೊಡ್ಡ ಸಾಧನೆ ಮಾಡುತ್ತಿದ್ದೆ’ ಎಂದು ಹೇಳುವವರಿದ್ದಾರೆ. ಆದರೆ, 3 ಬಾರಿ ಪ್ರಧಾನಿ ಗದ್ದುಗೆಗೇರಿದ ವಾಜಪೇಯಿಯವರು ಹುಟ್ಟಿದ್ದು ಮಧ್ಯಪ್ರದೇಶದ ಗ್ವಾಲಿಯರ್‌ ಎಂಬ ಊರಿನಲ್ಲಿ. ನಾವು ಎಲ್ಲಿ ಹುಟ್ಟುತ್ತೇವೆಂಬುದು ಮುಖ್ಯವಲ್ಲ, ಸಿಕ್ಕ ಅವಕಾಶಗಳನ್ನೇ ಹೇಗೆ ಬಳಸಿಕೊಳ್ಳುತ್ತೇವೆ, ಸೋಲುಗಳಿಂದ ಯಾವ ಪಾಠ ಕಲಿಯುತ್ತೇವೆ ಎಂಬುದು ಮುಖ್ಯ. 

2. ಸಾಧನೆಗೆ ಅಪ್ಪನ ಆಸ್ತಿ ಬೇಡ 
ಸಾಧನೆಗೆ ಹಣ ಮುಖ್ಯವಲ್ಲ, ಛಲ ಮುಖ್ಯ ಎಂದು ಸಾಧಿಸಿ ತೋರಿಸಿದವರು ವಾಜಪೇಯಿ. ಅವರ ತಂದೆ, ಕೃಷ್ಣ ಬಿಹಾರಿ ವಾಜಪೇಯಿ ಸಾಮಾನ್ಯ ಶಾಲಾ ಮಾಸ್ತರರಾಗಿದ್ದರು. ಹಣದಲ್ಲಿ ಶ್ರೀಮಂತರಲ್ಲದಿದ್ದರೂ, ಕೃಷ್ಣ ಬಿಹಾರಿಗಳ ಜೀವನಾನುಭವವೇ ಅಟಲ್‌ರಿಗೆ ಆಸ್ತಿ. ಶ್ವರ್ಯ, ಪ್ರಭಾವ, ಹೆಸರು ಇದ್ದವರ ಮಕ್ಕಳಿಗಷ್ಟೇ ಸಾಧನೆ ಸುಲಭ ಎನ್ನುವವರಿಗೆ ವಾಜಪೇಯಿ ಜೀವನ ದೊಡ್ಡಪಾಠ. 

3. ನಿಮ್ಮ ತಣ್ತೀ, ಸಿದ್ಧಾಂತಗಳಿಗೆ ಬದ್ಧರಾಗಿರಿ
ಜಗತ್ತು ಏನೇ ಹೇಳಲಿ, ನಿಮ್ಮ ನಂಬಿಕೆ, ನಿರ್ಧಾರ, ಸಿದ್ಧಾಂತಗಳು ಅಚಲವಾಗಿರಲಿ ಎನ್ನುತ್ತದೆ ವಾಜಪೇಯಿ ಬದುಕು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿದ್ದ ವಾಜಪೇಯಿ ಎಂದಿಗೂ ಆರ್‌ಎಸ್‌ಎಸ್‌ನ ತಣ್ತೀ, ಸಿದ್ಧಾಂತಗಳನ್ನು ಬಿಟ್ಟುಕೊಟ್ಟವರಲ್ಲ. ಅವರು ಸ್ಥಾಪಿಸಿದ ಜನತಾಸಂಘವು ಮುಂದೆ ಭಾರತೀಯ ಜನತಾ ಪಕ್ಷದ ಭಾಗವಾದಾಗ, ಆರ್‌ಎಸ್‌ಎಸ್‌ನ ಸದಸ್ಯತ್ವ ಬಿಡುವಂತೆ ಒತ್ತಡಗಳು ಬಂದವು. ಆದರೆ, ವಾಜಪೇಯಿ ಯಾರ ಮಾತಿಗೂ ಕಿವಿಗೊಡದೆ ತಾನು ನಂಬಿದ ಸಿದ್ಧಾಂತಕ್ಕೆ ಕೊನೆಯವರೆಗೂ ಬದ್ಧರಾಗಿದ್ದರು. ಜನರ ಅಭಿಪ್ರಾಯಗಳು ನಮ್ಮ ನಿರ್ಧಾರಗಳನ್ನು ಬದಲಿಸಬಾರದು ಎನ್ನುತ್ತದೆ ಅವರ ಈ ನಡೆ.

4. ಗುರು ಇಲ್ಲವೆಂದು ಗುರಿ ಬಿಡಬೇಡಿ 
ಸಾಧನೆ ಮಾಡಲು ಮುಂದೆ ಗುರಿಯಿರಬೇಕು, ಹಿಂದೆ ಗುರುವಿರಬೇಕು ಎಂಬ ಮಾತಿದೆ. ಅಟಲ್‌ರಿಗೆ ಗುರಿ, ಗುರು ಎರಡೂ ಇತ್ತು. ಶ್ಯಾಮ ಪ್ರಸಾದ ಮುಖರ್ಜಿಯವರ ಮಾರ್ಗದರ್ಶನದಲ್ಲಿ ಬೆಳೆಯುತ್ತಿದ್ದ ವಾಜಪೇಯಿಗೆ ದೊಡ್ಡ ಆಘಾತವಾಗಿದ್ದು, ಗುರುಗಳ ದಿಢೀರ್‌ ಸಾವು. ಕೈ ಹಿಡಿದು ನಡೆಸಬೇಕಿದ್ದ ಗುರುವನ್ನು ಕಳೆದುಕೊಂಡ 29ರ ಅಟಲ್‌ ದಿಕ್ಕೆಡಲಿಲ್ಲ. ಗುರು ಇಲ್ಲವೆಂದು ಗುರಿಯನ್ನೂ ತೊರೆಯಲಿಲ್ಲ. ಮುಖರ್ಜಿಯವರು ಹಾಕಿಕೊಟ್ಟ ಹಾದಿಯಲ್ಲಿ ನಡೆದು, ಪಕ್ಷ ಕಟ್ಟಿದರು, ಜನಾನುರಾಗಿ ನಾಯಕರಾದರು. 

Advertisement

5. ಹಳೆಯ ಸಂಗತಿಗಳಿಂದ ಪಾಠ ಕಲಿಯಿರಿ 
1996 ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷ 161 ಸೀಟುಗಳನ್ನು ಗೆದ್ದರೂ, ವಿಶ್ವಾಸಮತ ಸಾಬೀತುಪಡಿಸಲಾಗದೆ 13 ದಿನಗಳಲ್ಲಿ ಸರ್ಕಾರ ಉರುಳಿಬಿತ್ತು. 1998ರಲ್ಲಿ ಮತ್ತೂಮ್ಮೆ ಇದೇ ಪರಿಸ್ಥಿತಿ ಎದುರಾಯ್ತು. ಹಳೆಯ ಅನುಭವಗಳಿಂದ ಪಾಠ ಕಲಿತಿದ್ದ ವಾಜಪೇಯಿ, ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎನ್‌ಡಿಎ ಮೈತ್ರಿಕೂಟ ರಚಿಸಿ ಅಧಿಕಾರಕ್ಕೇರಿದರು. ಸೋಲು ಶಾಶ್ವತವಲ್ಲ, ಅದು ಮುಂದಿನ ಸವಾಲುಗಳಿಗೆ ನಿಮ್ಮನ್ನು ತಯಾರು ಮಾಡುವ ಜೀವನ ಪಾಠ ಎಂಬುದಕ್ಕೆ ಇದುವೇ ನಿದರ್ಶನ.  

6. ದ್ವೇಷಕ್ಕೆ ದ್ವೇಷವೇ ಉತ್ತರವಲ್ಲ
ಪಾಕಿಸ್ತಾನದೊಂದಿಗೆ ಮೈತ್ರಿ ಸಾಧಿಸಲು ವಾಜಪೇಯಿ ನಡೆಸಿದ ಪ್ರಯತ್ನಗಳು ಕೂಡ ಬಹುದೊಡ್ಡ ಜೀವನಪಾಠವೇ. ಲಾಹೋರ್‌ಗೆ ಬಸ್‌ನಲ್ಲಿ ಹೋಗಿ ಶಾಂತಿ ಸಂಧಾನಕ್ಕೆ ಮುಂದಾದಾಗ, ಕಾರ್ಗಿಲ್‌ ಯುದ್ಧದ ಉಡುಗೊರೆ ನೀಡಿತ್ತು ಪಾಕಿಸ್ತಾನ. 2001ರಲ್ಲಿ ಪಾಕ್‌ ಅಧ್ಯಕ್ಷ ಪರ್ವೇಜ್‌ ಮುಷರಫ್ರನ್ನು ಭಾರತಕ್ಕೆ ಆಹ್ವಾನಿಸಿದಾಗ, ಸಂಸತ್‌ನ ಮೇಲೆ ದಾಳಿ ನಡೆಯಿತು. ಪಾಕ್‌ನಿಂದ ಸಕಾರಾತ್ಮಕ ಸ್ಪಂದನೆ ಸಿಗದಿದ್ದರೂ, ದ್ವೇಷಕ್ಕೆ ದ್ವೇಷವೇ ಉತ್ತರವಲ್ಲ ಎಂದು, ತಮ್ಮ ಅಧಿಕಾರಾವಧಿಯುದ್ದಕ್ಕೂ ಅವರು ಶಾಂತಿ ಮಾತುಕತೆ ನಡೆಸುತ್ತಲೇ ಬಂದರು. 

7. ಶತ್ರುಗಳೇ ಇಲ್ಲದಂತೆ ಬದುಕಿ…
ಒಬ್ಬ ಮನುಷ್ಯನಿಗೆ ಅದರಲ್ಲೂ ರಾಜಕಾರಣಿಯೊಬ್ಬನಿಗೆ ಶತ್ರುಗಳೇ ಇಲ್ಲ ಎಂದರೆ ನೀವೇ ಯೋಚಿಸಿ, ಆತನ ಬದುಕು ಎಷ್ಟು ನೇರ, ಸರಳ, ಪ್ರಾಮಾಣಿಕವಾಗಿರಬಹುದು ಅಂತ. ರಾಜಕಾರಣದಲ್ಲಿದ್ದೂ ಅಜಾತಶತ್ರುವಾಗಿ, ವಿರೋಧ ಪಕ್ಷದವರಿಂದಲೂ ಗೌರವಿಸಲ್ಪಟ್ಟವರು ವಾಜಪೇಯಿ. ಆದರೆ, ತಪ್ಪನ್ನು ತಪ್ಪು ಎನ್ನಲು, ಆಡಳಿತ ಪಕ್ಷಕ್ಕೆ ತಿರುಗೇಟು ನೀಡಲು ಅವರೆಂದೂ ಹಿಂಜರಿಯುತ್ತಿರಲಿಲ್ಲ. 

8. ದಿಟ್ಟ ನಿರ್ಧಾರ
ದೂರದೃಷ್ಟಿಯ ನೇತಾರರಾಗಿದ್ದ ವಾಜಪೇಯಿ, ಎಲ್ಲ ವಿರೋಧಗಳನ್ನು ಮೆಟ್ಟಿ ನಿಂತು ಅಣ್ವಸ್ತ್ರ ಪರೀಕ್ಷೆ ನಡೆಸಿದರು. ಅಣ್ವಸ್ತ್ರ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ಗಟ್ಟಿ ನೆಲೆ ಒದಗಿಸಿಕೊಟ್ಟರೂ, ನೆರೆಯ ಪಾಕಿಸ್ತಾನದೊಂದಿಗೆ ಶಾಂತಿ ಸಂಧಾನ ನಡೆಸುತ್ತಲೇ ಇದ್ದರು. ಶಾಂತಿಯ ಮಂತ್ರ ಪಠಿಸುತ್ತಲೇ, ದೇಶದ ರಕ್ಷಣೆಯ ಮಹತ್ವವನ್ನು ಅವರು ಎತ್ತಿ ಹಿಡಿದರು. 

9. ಹೃದಯ ಗೆದ್ದು ಬನ್ನಿ…
ಪಾಕ್‌ ಯಾವುದೇ ಬುದ್ಧಿ ತೋರಿಸಿದರೂ, ವಾಜಪೇಯಿ ಅವರನ್ನು ಶತ್ರುಗಣ್ಣಿನಿಂದ ನೋಡಲೇ ಇಲ್ಲ. 2004ರಲ್ಲಿ ಭಾರತ ಕ್ರಿಕೆಟ್‌ ತಂಡ ಪಾಕಿಸ್ತಾನಕ್ಕೆ ಸರಣಿ ಆಡಲು ಹೊರಟಾಗ, “ಪಂದ್ಯವನ್ನಷ್ಟೇ ಅಲ್ಲ, ಹೃದಯವನ್ನೂ ಗೆದ್ದು ಬನ್ನಿ’ ಎಂದು ಶುಭಹಾರೈಸಿದ್ದರು. ಇದುವೇ ಒಬ್ಬ ಮನುಷ್ಯನಿಗೆ ಇರಬೇಕಾದ ಮಹತ್ತರ ಗುಣ.

ಪ್ರಿಯಾಂಕಾ

Advertisement

Udayavani is now on Telegram. Click here to join our channel and stay updated with the latest news.

Next