Advertisement

ರಾಜ್ಯದಲ್ಲಿ 12 ವರ್ಷಗಳಲ್ಲಿ 881ಸಾವು! ಸಿಡಿಲಾಘಾತದಿಂದ ಸಾವು ಬೆಳಗಾವಿ,ಬೀದರ್‌ನಲ್ಲೇ ಹೆಚ್ಚು

12:30 AM May 18, 2024 | Team Udayavani |

ಪುತ್ತೂರು: ಕ್ಷಣ ಮಾತ್ರದಲ್ಲೇ ಪ್ರಾಣ ಪಕ್ಷಿ ಹಾರಿಹೋಗುವಷ್ಟು ಆತಂಕಕಾರಿಯಾಗಿರುವ ಸಿಡಿಲಿನ ಆಘಾತಕ್ಕೆ ಪ್ರಾಣ ತೆತ್ತವರ ಸಂಖ್ಯೆ ದಿಗಿಲು ಮೂಡಿಸುವಂತಿದೆ. ಕಳೆದ 12 ವರ್ಷಗಳಲ್ಲಿ ರಾಜ್ಯದಲ್ಲಿ ಸಿಡಿಲಿನ ಆಘಾತಕ್ಕೆ 881 ಮಂದಿ ಸಾವನ್ನಪ್ಪಿದ್ದಾರೆ.

Advertisement

ಕಂದಾಯ ಇಲಾಖೆಯ ವಿಪತ್ತು ನಿರ್ವಹಣ ವಿಭಾಗ 2011ರಿಂದ 2023ರ ತನಕ ಪಟ್ಟಿ ಮಾಡಿರುವ ಅಂಕಿಅಂಶಗಳು ಸಿಡಿಲಿನ ಅಪಾಯದ ಮಟ್ಟವನ್ನು ತೆರೆದಿಟ್ಟಿವೆ.

ಬೆಳಗಾವಿ ಅಪಾಯ
ರಾಜ್ಯದಲ್ಲೇ ಸಿಡಿಲಿನ ಆಘಾತದ ಅಪಾಯದ ಪಟ್ಟಿಯಲ್ಲಿ ಬೆಳಗಾವಿ, ಬಳಿಕ ಬೀದರ್‌, ಕಲಬುರಗಿ ಜಿಲ್ಲೆ ಇವು. ಅತೀ ಹೆಚ್ಚು ಸಾವಿನ ಪ್ರಕರಣ ವರದಿಯಾಗಿರುವ 3 ಜಿಲ್ಲೆಗಳು ಇವು. ಬೆಳಗಾವಿ ಯಲ್ಲಿ ಕಳೆದ 12 ವರ್ಷಗಳಲ್ಲಿ 63 ಮಂದಿ, ಬೀದರ್‌, ಕಲಬುರಗಿ ಜಿಲ್ಲೆಗಳಲ್ಲಿ ತಲಾ 38 ಮಂದಿ ಸಿಡಿಲಿನಿಂದ ಸಾವನ್ನಪ್ಪಿದ್ದಾರೆ.

ಪ್ರಸ್ತಾವನೆಗಷ್ಟೇ ಸೀಮಿತವಾದ ಮಿಂಚು ಪ್ರತಿಬಂಧಕ ಟವರ್‌
ದ.ಕ. ಜಿಲ್ಲೆಯಲ್ಲಿ ಸಿಡಿಲಿನ ತೀವ್ರತೆ ಇರುವ 13 ಕಡೆಗಳಲ್ಲಿ ಮಿಂಚು ಪ್ರತಿಬಂಧಕ ಟವರ್‌ ಅಳವಡಿಸಬೇಕು ಎಂಬ ಬೇಡಿಕೆಗೆ ಎಂಟು ವರ್ಷ ಕಳೆದಿದ್ದು, ಸ್ಪಂದನೆ ಸಿಕ್ಕಿಲ್ಲ. ಆಯಾ ತಾಲೂಕಿನ ಕಂದಾಯ ಇಲಾಖೆಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇನ್ನೂ ಅನುದಾನ ಬಿಡುಗಡೆ ಆಗಿಲ್ಲ.

ಪಾಲನೆ ಆಗದ ನಿಯಮ
15 ಮೀ.ಗಿಂತ ಹೆಚ್ಚು ಎತ್ತರವಿರುವ ಗೋಪುರಗಳು, ಖಾಸಗಿ ಕಟ್ಟಡಗಳು, ಶ್ರದ್ಧಾ ಕೇಂದ್ರಗಳು, ಇನ್ನಿತರ ಕಟ್ಟಡಗಳಲ್ಲಿ ಮಿಂಚು ಪ್ರತಿಬಂಧಕ ಅಳವಡಿಸುವುದು ಕಡ್ಡಾಯ. ಆದರೆ ಆ ಕಾರ್ಯ ಬಹುತೇಕ ಕಡೆಗಳಲ್ಲಿ ಆಗಿಲ್ಲ. ಅಧಿಕಾರಿಗಳು ಪರಿಶೀಲನೆಯನ್ನು ನಡೆಸಿಲ್ಲ. ಮಿಂಚು ಮತ್ತು ಸಿಡಿಲಿನ ಹೊಡೆತ 30 ಸಾವಿರ ಫ್ಯಾರನ್‌ ಹೀಟ್‌ನಿಂದ 50 ಸಾವಿರ ಫ್ಯಾರನ್‌ ಹೀಟ್‌ ಉಷ್ಣಾಂಶವನ್ನು ಬಿಡುಗಡೆ ಮಾಡಬಲ್ಲವು. ಅಂದರೆ ಇದು ಸೂರ್ಯನ ಮೇಲ್ಮೈ ತಾಪಮಾನಕ್ಕಿಂತಲೂ ಹೆಚ್ಚಿರುತ್ತದೆ. ದೊಡ್ಡ ಕಟ್ಟಡಗಳನ್ನು ಈ ಸಿಡಿಲಿನ ಹೊಡೆತದಿಂದ ರಕ್ಷಿಸಲು ತ್ರಿಶೂಲಾಕಾರದ ಲೋಹದ ಸಲಾಕೆಯನ್ನು ಕಟ್ಟಡದ ಮೇಲೆ ನೆಟ್ಟು ಅದರ ಕೆಳತುದಿಯನ್ನು ಒಂದು ವಾಹಕದ ಮೂಲಕ ಭೂಮಿಗೆ ಸಂಪರ್ಕಿಸುತ್ತಾರೆ. ಇದೇ ಮಿಂಚು ಬಂಧಕ. ಮೋಡದಿಂದ ಪ್ರೇರೇಪಿತಗೊಂಡ ವಿದ್ಯುತ್‌ ಅಂಶ ಮಿಂಚು ಪ್ರತಿಬಂಧಕ ಹಾಗೂ ವಾಹಕಗಳ ಮೂಲಕ ಭೂಮಿಯನ್ನು ಸೇರಿ ಸಿಡಿಲಿನ ಅಪಾಯ ತಪ್ಪುತ್ತದೆ.

Advertisement

ಕರಾವಳಿಯಲ್ಲೂ ಸಾವು ಏರಿಕೆ
ಅಂಕಿ ಅಂಶಗಳ ಪ್ರಕಾರ 2011ರಿಂದ 2017ರ ತನಕ ಉಡುಪಿ, ದ.ಕ. ಜಿಲ್ಲೆಯಲ್ಲಿ ಸಿಡಿಲಿನ ಆಘಾತಕ್ಕೆ ಬಲಿಯಾದವರ ಸಂಖ್ಯೆ ಕಡಿಮೆ. ಈ ಅವಧಿಯಲ್ಲಿ 7 ಜನ ಮೃತಪಟ್ಟಿದ್ದರು. ಆದರೆ 2018ರ ಅನಂತರ ಅವಿಭಜಿತ ಜಿಲ್ಲೆಯಲ್ಲಿ ಸಿಡಿಲಿನ ಆಘಾತದಿಂದ ಉಂಟಾಗುತ್ತಿರುವ ಜೀವಹಾನಿಯ ಪ್ರಮಾಣ ಹೆಚ್ಚಳವಾಗಿರುವುದು ಆತಂಕಕಾರಿ ಸಂಗತಿ. 2018ರಿಂದ 2023ರ ಅವಧಿಯಲ್ಲಿ 21 ಮಂದಿ ಸಿಡಿಲಿನಿಂದ ಮೃತಪಟ್ಟಿದ್ದಾರೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 12 ಮಂದಿ, ಉಡುಪಿ ಜಿಲ್ಲೆಯ 9 ಮಂದಿ ಸೇರಿದ್ದಾರೆ. ಕಳೆದ 12 ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 13, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2024ರ ಮಳೆಗಾಲ ಪೂರ್ಣ ಪ್ರಮಾಣದಲ್ಲಿ ಆವರಿಸಿಕೊಳ್ಳುವ ಮೊದಲೇ ಅವಿಭಜಿತ ಜಿಲ್ಲೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಇಬ್ಬರು ಹಾಗೂ ಸುಳ್ಯ ಮತ್ತು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ತಲಾ ಓರ್ವರು ಮೃತರಾಗಿದ್ದಾರೆ.

ಯಾವ ತಿಂಗಳಲ್ಲಿ
ಆಘಾತ ಹೆಚ್ಚು
ಎಪ್ರಿಲ್‌, ಮೇ, ಜೂನ್‌ ತಿಂಗಳಿನಲ್ಲಿ ಸಿಡಿಲಿನ ಆಘಾತಕ್ಕೆ ಸಿಲುಕಿ ಹೆಚ್ಚು ಮಂದಿ ಮೃತಪಟ್ಟಿರುವುದು ಗಮನಕ್ಕೆ ಬರುತ್ತದೆ. ರಾಜ್ಯದಲ್ಲಿ 2011ರಿಂದ 2023ರ ತನಕ ಎಪ್ರಿಲ್‌ನಲ್ಲಿ 191, ಮೇ ತಿಂಗಳಲ್ಲಿ 228, ಜೂನ್‌ನಲ್ಲಿ 137 ಮಂದಿ ಮೃತಪಟ್ಟಿದ್ದಾರೆ. 2022ರ ಎಪ್ರಿಲ್‌ನಲ್ಲಿ 33, 2023ರ ಮೇ ತಿಂಗಳಲ್ಲಿ 33, 2015ರ ಜೂನ್‌ನಲ್ಲಿ 18 ಮಂದಿ ಸಾವನ್ನಪ್ಪಿರುವುದು ತಿಂಗಳಿನ ಲೆಕ್ಕಾಚಾರದಲ್ಲಿ ಗರಿಷ್ಠವಾಗಿದೆ.

881 ಸಾವು
ಕಳೆದ 12 ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 881 ಜನ ಸಿಡಿಲಿನಿಂದ ಮೃತಪಟ್ಟಿದ್ದಾರೆ. 2011ರಲ್ಲಿ 24, 2012ರಲ್ಲಿ 24, 2013ರಲ್ಲಿ 27, 2014ರಲ್ಲಿ 63, 2015ರಲ್ಲಿ 66, 2016ರಲ್ಲಿ 51, 2017ರಲ್ಲಿ 87, 2018ರಲ್ಲಿ 89, 2019ರಲ್ಲಿ 109, 2020ರಲ್ಲಿ 78, 2021ರಲ್ಲಿ 89, 2022ರಲ್ಲಿ 111, 2023ರಲ್ಲಿ 63 ಮಂದಿ ಸಿಡಿಲಿಗೆ ಪ್ರಾಣ ತೆತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ 2017ರ ಅನಂತರ ಸಿಡಿಲಿನಿಂದ ಉಂಟಾಗುತ್ತಿರುವ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದೆ.

ಗುಡುಗು ಸಿಡಿಲಿನ ಅಪಾಯದಿಂದ ಪಾರಾಗಲು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ತಳಮಟ್ಟ ದಲ್ಲಿಯೂ ಜಾಗೃತಿ ಮೂಡಿಸಲು
ಸೂಚನೆ ನೀಡಲಾಗುವುದು.
-ಮುಲ್ಲೈ ಮುಗಿಲನ್‌,
ಜಿಲ್ಲಾಧಿಕಾರಿ, ದ.ಕ. ಜಿಲ್ಲೆ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next