Advertisement

ವಿದ್ಯುತ್‌ ಗುಣಮಟ್ಟ ಹೆಚ್ಚಳಕ್ಕೆ ಕೇಂದ್ರದಿಂದ 8,500 ಕೋ.ರೂ.

12:27 AM Jan 04, 2022 | Team Udayavani |

ಸುಳ್ಯ: ವಿದ್ಯುತ್‌ ಗುಣಮಟ್ಟ ಹೆಚ್ಚಳಕ್ಕಾಗಿ ಕೇಂದ್ರ ಸರಕಾರದಿಂದ ಆರ್‌ಡಿಎಸ್‌ಎಸ್‌ ಯೋಜನೆಯಡಿ 8,500 ಕೋಟಿ ರೂ. ಅನುದಾನ ಮಂಜೂರಾಗಿದೆ. ತಾಂತ್ರಿಕ ಸಮಸ್ಯೆಗಳ ಪರಿಹಾರ, ಹೊಸ ಲೈನ್‌ ನಿರ್ಮಾಣ, ಸಿಂಗಲ್‌ ಫೇಸ್‌ ಸಮಸ್ಯೆಗೆ ಪರಿಹಾರಕ್ಕೆ ಈ ಮೊತ್ತವನ್ನು ಬಳಸಲಾಗುವುದು ಎಂದು ರಾಜ್ಯ ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ದ.ಕ. ಜಿಲ್ಲೆಗೆ 290 ಕೋಟಿ ರೂ. ಮೀಸಲಿಡಲಾಗಿದೆ. ಗ್ರಾಹಕರಿಗೆ ಮತ್ತು ಕೈಗಾರಿಕೆಗಳಿಗೆ ಗುಣಮಟ್ಟದ ವಿದ್ಯುತ್‌ ಸರಬರಾಜಿಗೆ ಅನುಕೂಲವಾಗುವಂತೆ ಮಂಗಳೂರಿನಲ್ಲಿ 400 ಕೆವಿ ಸಬ್‌ಸ್ಟೇಶನ್‌ ನಿರ್ಮಾಣದ ಪ್ರಸ್ತಾವನೆ ಇದೆ. ಬೆಳಕು ಯೋಜನೆಯಲ್ಲಿ ವಿದ್ಯುತ್‌ ಸಂಪರ್ಕ ಪಡೆಯದ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡುವ ಯೋಜನೆ ಜಾರಿ ಮಾಡಲಾಗಿದೆ. ಪಂಚಾಯತ್‌ನ ನಿರಾಕ್ಷೇಪಣಾ ಪತ್ರ ಇಲ್ಲದೆ ಆಧಾರ್‌ ಕಾರ್ಡ್‌ ಅಥವಾ ಪಡಿತರ ಚೀಟಿ ಇದ್ದರೆ ವಿದ್ಯುತ್‌ ಸಂಪರ್ಕ ನೀಡುವ ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ ದ.ಕ. ಜಿಲ್ಲೆಯಲ್ಲಿ 2,500 ಮನೆಗಳನ್ನು ಗುರುತಿಸಲಾಗಿದೆ. 1,700 ಮನೆಗಳಿಗೆ ವಿದ್ಯುತ್‌ ನೀಡಲಾಗಿದೆ ಎಂದರು.

24 ತಾಸಿನಲ್ಲಿ ಟಿಸಿ ದುರಸ್ತಿ
ಟ್ರಾನ್ಸ್‌ಫಾರ್ಮರ್‌ ಕೆಟ್ಟು ಹೋದ 24 ತಾಸಿನಲ್ಲಿ ದುರಸ್ತಿ ಪಡಿಸಲಾಗುತ್ತಿದೆ. ಈಗಾಗಲೇ 20 ಸಾವಿರ ಟಿಸಿಗಳನ್ನು ಬದಲಿಸಲಾಗಿದೆ. 160 ಕಡೆ ಟಿಸಿ ಬ್ಯಾಂಕುಗಳನ್ನು, 162 ಕಡೆ ಟಿಸಿ ದುರಸ್ತಿ ಕೇಂದ್ರಗಳನ್ನು ತೆರೆಯಲಾಗಿದೆ. ಟಿ.ಸಿ. ಸಂಪರ್ಕದಲ್ಲಿ ಯಾರಾದರೂ ಭ್ರಷ್ಟಾಚಾರ ನಡೆಸಿದರೆ 24 ಗಂಟೆಯೊಳಗೆ ಅಮಾನತು ಮಾಡಲಾಗುವುದು ಎಂದರು.

ಅರಣ್ಯ ಸಮಸ್ಯೆ: ಸಿಎಂ ಜತೆ ಚರ್ಚೆ
ಸುಳ್ಯದಲ್ಲಿ 110 ಕೆ.ವಿ. ಸಬ್‌ಸ್ಟೇಶನ್‌ ಅನುಷ್ಠಾನಗೊಳ್ಳಬೇಕು ಎನ್ನುವ ಆಗ್ರಹಕ್ಕೆ ನನ್ನ ಸಹಮತ ಇದೆ. ಆದರೆ ಅದಕ್ಕೆ ಅರಣ್ಯದ ಸಮಸ್ಯೆ ಇದ್ದು ಮುಂದಿನ ವಾರಸಚಿವ ಅಂಗಾರ ಅವರ ಜತೆಗೂಡಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಪ್ಯಾಂಗಾಂಗ್‌ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿದೆ ಚೀನಾ! ಉಪಗ್ರಹ ಚಿತ್ರದಿಂದ ಸ್ಪಷ್ಟ

Advertisement

ತುಳುವಿಗೆ ಮಾನ್ಯತೆ: ದಿಲ್ಲಿಗೆ ನಿಯೋಗ
ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಮುಂದಿನ ವಾರ ಕರ್ನಾಟಕದ ನಿಯೋಗ ದಿಲ್ಲಿಗೆ ತೆರಳುವುದಾಗಿ ಸಚಿವರು ಹೇಳಿದರು.

ಸಚಿವ ಎಸ್‌. ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್‌ ಕಂಜಿಪಿಲಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎ.ವಿ. ತೀರ್ಥರಾಮ, ನ.ಪಂ. ಅಧ್ಯಕ್ಷ ವಿನಯಕುಮಾರ್‌ ಕಂದಡ್ಕ, ಮುಳಿಯ ಕೇಶವ ಭಟ್‌, ವೆಂಕಟ್‌ ವಳಲಂಬೆ,
ಸುಭೋದ್‌ ಶೆಟ್ಟಿ ಮೇನಾಲ ಉಪಸ್ಥಿತರಿದ್ದರು.

ವಿದ್ಯುತ್‌ ಬಿಲ್‌ ಪಾವತಿಸದಿದ್ದರೆ
ಸಂಪರ್ಕ ಕಡಿತ
ಸುಬ್ರಹ್ಮಣ್ಯ: ಧಾರ್ಮಿಕ ಸಂಸ್ಥೆಗಳಿಂದ ಮೆಸ್ಕಾಂಗೆ ಎರಡು ಕಾಲು ಕೋಟಿ ರೂ. ವಿದ್ಯುತ್‌ ಬಿಲ್‌ ಪಾವತಿಗೆ ಬಾಕಿಯಿದೆ. ಕೊರೊನಾ ಕಾರಣದಿಂದ ಈ ವರೆಗೆ ಪಾವತಿಸುವಂತೆ ಆಗ್ರಹಿಸಿಲ್ಲ. ಜನರು, ಸಂಸ್ಥೆಗಳು ಬಾಕಿ ಇರುವ ವಿದ್ಯುತ್‌ ಬಿಲ್‌ ಕಟ್ಟಿ ಎಂದು ವಿನಂತಿಸುತ್ತಿದ್ದೇನೆ. ಇಲ್ಲದಿದ್ದರೆ ಇಲಾಖೆಯು ಸಹಜವಾಗಿ ಸಂಪರ್ಕ ಕಡಿತಗೊಳಿಸಲಿದೆ ಎಂದು ಇಂಧನ ಸಚಿವ ಸುನಿಲ್‌ ಕುಮಾರ್‌ ಹೇಳಿದರು.

ಸುಬ್ರಹ್ಮಣ್ಯದಲ್ಲಿ ಮಾಧ್ಯಮದ ವರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯಲ್ಲಿ ಕಾಂಗ್ರೆಸ್‌ ಸ್ವ ಹಿತಾಸಕ್ತಿಗಾಗಿ ಪಾದಯಾತ್ರೆ ಮಾಡುತ್ತಿರುವುದು ಗೋಚರಿಸುತ್ತಿದೆ. ಇದರಲ್ಲಿ ರಾಜ್ಯದ ಅಥವಾ ನೀರಾವರಿ ಹಿತಾಸಕ್ತಿ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next