Advertisement

ಭಾರತ-ಚೀನಾ ಗಡಿಭಾಗದ ಚಮೋಲಿಯಲ್ಲಿ ಮತ್ತೆ ನಿರ್ಗಲ್ಲು ಸ್ಫೋಟ; ಎಂಟು ಮಂದಿ ಸಾವು

04:16 PM Apr 24, 2021 | Team Udayavani |

ಗೋಪೇಶ್ವರ್/ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿ ಶುಕ್ರವಾರ(ಏ.23) ರಾತ್ರಿ ಭಾರೀ ಪ್ರಮಾಣದ ನಿರ್ಗಲ್ಲು ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಸಾವನ್ನಪ್ಪಿರುವ ಎಂಟು ಮಂದಿಯ ಶವಗಳನ್ನು ಹೊರತೆಗೆಯಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಭಾರತೀಯ ಸೇನೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, 384 ಮಂದಿಯನ್ನು ರಕ್ಷಿಸಿದ್ದು, ಆರು ಮಂದಿ ಸ್ಥಿತಿ ಚಿಂತಾಜನಕವಾಗಿರುವುದಾಗಿ ವರದಿ ಹೇಳಿದೆ. ನಿರ್ಗಲ್ಲು ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಬಿಆರ್ ಒ ರಸ್ತೆ ದುರಸ್ತಿ ಕಾಮಗಾರಿ ನಡೆಸುತ್ತಿದ್ದು, ಕಾರ್ಮಿಕರ ಎರಡು ಶಿಬಿರಗಳು ಇಲ್ಲಿ ಬಿಡಾರ ಹೂಡಿರುವುದಾಗಿ ವರದಿ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದಾಗಿ ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಉತ್ತರಾಖಂಡ್ ಚಮೋಲಿಯಲ್ಲಿ ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ ಜನರಿಗೆ ನೆರವು ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದರು.

ಚಮೋಲಿಯ ನಿತಿ ಕಣಿವೆಯ ಮಲಾರಿ ಸಮೀಪದ ಸುಮ್ನಾ ಚೌಕಿ ನಡುವೆ ಈ ನಿರ್ಗಲ್ಲು ಸ್ಫೋಟ ಸಂಭವಿಸಿದೆ ಎಂಬ ಬಗ್ಗೆ ಮಾಹಿತಿ ಬಂದಿರುವುದಾಗಿ ಬಿಆರ್ ಒ (ಬಾರ್ಡರ್ ರೋಡ್ಸ್ ಆರ್ಗನೈಸೇಶನ್) ಅಧಿಕಾರಿಗಳು ತಿಳಿಸಿದ್ದರು. ಘಟನೆಯಲ್ಲಿ ಸಂಭವಿಸಿದ ಸಾವು, ನೋವು ನಷ್ಟದ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಿತ್ತು.

ಫೆಬ್ರುವರಿಯಲ್ಲಿ ಚಮೋಲಿ ಜಿಲ್ಲೆಯ ಜೋಶಿಮಠ ಸೇರಿದಂತೆ ಹಲವೆಡೆ ಸಂಭವಿಸಿದ ಭಾರೀ ನಿರ್ಗಲ್ಲು ಸ್ಫೋಟಕ್ಕೆ 70ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಮೂಲಭೂತ ಸೌಕರ್ಯ ಸೇರಿದಂತೆ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next