Advertisement

ಒಂದೇ ದಿನ ಹೆಚ್ಚು ಸೋಂಕಿತರು, ಹೆಚ್ಚು ಗುಣಮುಖ!

01:55 AM Jul 31, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಇದುವರೆಗಿನ ದಾಖಲೆ ಸಂಖ್ಯೆಯ, ಅಂದರೆ  6,128 ಮಂದಿಗೆ ಸೋಂಕು ತಗುಲಿದ್ದು, 83 ಮಂದಿ ಮೃತಪಟ್ಟಿದ್ದಾರೆ

Advertisement

ಜತೆಗೆ 3,793 ಮಂದಿ ಸೋಂಕಿನಿಂದ ಮುಕ್ತರಾಗಿದ್ದು, ಇದು ಕೂಡ ಹೊಸ ದಾಖಲೆಯಾಗಿದೆ.

ಈ ಮೂಲಕ ಸೋಂಕು ಪ್ರಕರಣಗಳು 1,18,632ಕ್ಕೆ, ಸೋಂಕಿನಿಂದ ಮೃತಪಟ್ಟವರು 2,230ಕ್ಕೆ, ಹಾಗೂ ಚೇತರಿಸಿಕೊಂಡವರ ಸಂಖ್ಯೆ 46,694ಕ್ಕೆ ಏರಿಕೆಯಾಗಿದೆ.

ಸದ್ಯ 69,700 ಸೋಂಕಿತರು ಚಿಕಿತ್ಸೆಯಲ್ಲಿದ್ದಾರೆ. ಈ ಪೈಕಿ 620 ಮಂದಿ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿದ್ದಾರೆ.

38,095 ಸೋಂಕು ಪರೀಕ್ಷೆ
ಗುರುವಾರ 20 ಸಾವಿರ Rapid ಆ್ಯಂಟಿಜನ್‌, 17 ಸಾವಿರ ಆರ್‌ಟಿಪಿಸಿಆರ್‌ ಸೇರಿ ಒಟ್ಟು 38,095 ಸೋಂಕು ಪರೀಕ್ಷೆಗಳು ನಡೆದಿವೆ. ಈ ಪೈಕಿ 6,128 ಪಾಸಿಟಿವ್‌ ವರದಿಯಾಗಿದ್ದು, ಪಾಸಿಟಿವಿಟಿ ದರ ಶೇ.16 ಇದೆ. ಅಂದರೆ, ಪರೀಕ್ಷೆಗೊಳಪಟ್ಟ 100 ಮಂದಿಯಲ್ಲಿ 16 ಮಂದಿಗೆ ಸೋಂಕು ದೃಢಪಟ್ಟಿದೆ.

Advertisement

ಒಂದು ವಾರದಿಂದ 5,000 ಆಸುಪಾಸಿನಲ್ಲಿದ್ದ ಸೋಂಕು  ಇದೇ ಮೊದಲ ಬಾರಿ 6,000ದ ಗಡಿ ದಾಟಿವೆ. ಬೆಂಗಳೂರಿನಲ್ಲಿ 2,233 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮೈಸೂರು 430, ಬಳ್ಳಾರಿ 343, ಉಡುಪಿ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಬೆಳಗಾವಿ ಸೇರಿ ನಾಲ್ಕು ಜಿಲ್ಲೆಗಳಲ್ಲಿ 200ಕ್ಕೂ ಹೆಚ್ಚು, ದಕ್ಷಿಣ ಕನ್ನಡ, ಧಾರವಾಡ, ರಾಯಚೂರು, ಶಿವಮೊಗ್ಗ, ಬಾಗಲಕೋಟೆ, ಚಿಕ್ಕಮಗಳೂರು, ವಿಜಯಪುರ ಹಾಗೂ ಉತ್ತರ ಕನ್ನಡ ಸೇರಿ ಎಂಟು ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ರಾಜ್ಯದ 82 ಸೋಂಕಿತರ ಸಾವಿನಲ್ಲಿ ಅತಿ ಹೆಚ್ಚು ಬೆಂಗಳೂರಿನಲ್ಲಿ 22 ಮಂದಿ, ಮೈಸೂರಿನಲ್ಲಿ 9, ಧಾರವಾಡ, ದಕ್ಷಿಣ ಕನ್ನಡದಲ್ಲಿ 8 ಮತ್ತು ಕಲಬುರಗಿಯಲ್ಲಿ 7 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲಾವಾರು ಒಟ್ಟಾರೆ ಪ್ರಕರಣಗಳಲ್ಲಿ ಮೈಸೂರು ಮತ್ತು ಉಡುಪಿ ತಲಾ 4,000, ಬಳ್ಳಾರಿ 6,000, ಕಲಬುರಗಿ 5,000, ಬೆಳಗಾವಿ 3,000, ಉತ್ತರ ಕನ್ನಡ 2,000, ಕೊಪ್ಪಳ 1,000ದ ಗಡಿ ದಾಟಿವೆ.

1000 ಗಡಿ ದಾಟಿದ ಬೆಂಗಳೂರು ಸಾವು
ರಾಜಧಾನಿಯಲ್ಲಿ ಬುಧವಾರ ಒಟ್ಟಾರೆ ಪ್ರಕರಣಗಳು 50 ಸಾವಿರ ಗಡಿ ದಾಟಿದ್ದು, ಗುರುವಾರ ನಗರದ ಒಟ್ಟಾರೆ ಸಾವು 1,000ದ ಗಡಿದಾಟಿದೆ. ಈವರೆಗೂ 1,009 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ 914 ಮಂದಿ ಜುಲೈಯಲ್ಲೇ ಮೃತಪಟ್ಟಿದ್ದಾರೆ. ಅಂದರೆ ಒಂದು ತಿಂಗಳಿಂದ ನಿತ್ಯ ಸರಾಸರಿ 30 ಸಾವಾಗಿವೆ. ಸದ್ಯ ಒಟ್ಟಾರೆ ಪ್ರಕರಣಗಳು 53,324ಕ್ಕೆ ತಲುಪಿದ್ದು, 15,791 ಮಂದಿ ಗುಣಮುಖರಾಗಿದ್ದು, 36,000 ಮಂದಿ ಚಿಕಿತ್ಸೆಯಲ್ಲಿದ್ದಾರೆ.

ದಾಖಲೆಯ ಗುಣಮುಖ
ಗುಣಮುಖರಾಗುತ್ತಿರುವ ಸಂಖ್ಯೆ ರಾಜ್ಯದಲ್ಲಿ ಮೊದಲ ಬಾರಿ ಮೂರು ಸಾವಿರ ಗಡಿದಾಟಿದೆ. ಈ ಹಿಂದೆ 2800 ಮಂದಿ ಗುಣಮುಖರಾಗಿದ್ದರು. ಗುರುವಾರ ಅತಿ ಹೆಚ್ಚು 3,793 ಮಂದಿ ಚೇತರಿಸಿಕೊಂಡಿದ್ದಾರೆ.  ರಾಜ್ಯದ ಗುಣಮುಖ ದರವೂ ಹೆಚ್ಚಳವಾ ಗಿದ್ದು, ಸದ್ಯ ಶೇ.39ರಷ್ಟಿದೆ.  ಜುಲೈಯಲ್ಲಿ 103,390 ಮಂದಿ ಸೋಂಕಿತರಾಗಿದ್ದು, 38,776 ಮಂದಿ ಗುಣಮುಖರಾಗಿದ್ದಾರೆ.

ಕಲಬುರಗಿ ಗ್ರಾಮೀಣ ಶಾಸಕರಿಗೆ ಕೋವಿಡ್ 19 ಸೋಂಕು
ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರಿಗೂ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಬುಧವಾರದಿಂದಲೇ ಹೋಂ ಐಸೊಲೇಷನ್‌ಗೆ ಒಳಗಾಗಿದ್ದಾರೆ.

“ನಾನು ಆರೋಗ್ಯವಾಗಿದ್ದೇನೆ. ಕೋವಿಡ್ 19 ರೋಗ ಲಕ್ಷಣಗಳು ಕಂಡು ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಸ್ವಯಂ ಕ್ವಾರಂಟೈನ್‌ ಆಗಿ ಕೋವಿಡ್ 19 ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಅವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next