Advertisement

Pejawar Mutt; ಸಕಲ ಕಾರ್ಯ ಧುರಂಧರ, ಕುತೂಹಲ ಹೃದಯಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು

10:33 AM Dec 16, 2023 | Team Udayavani |

ಅಯೋಧ್ಯೆಯ ಕುಸಿದಿದ್ದ ಕಟ್ಟಡದ ಅವಶೇಷದ ಅಡಿಯಲ್ಲೇ ರಾಮಲಲ್ಲನನ್ನು ಮರುಸ್ಥಾಪಿಸಿದವರು ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು. ಈ ಶತಮಾನದಲ್ಲಿ ಜಗತ್ತು ಕಂಡ ಅಸಾಧಾರಣ ಸಿದ್ಧಪುರುಷರು. ಲೌಕಿಕ-ಅಧ್ಯಾತ್ಮ ಎರಡು ಜಗತ್ತಿನ ಮೇರು ವ್ಯಕ್ತಿತ್ವ ಸಮ್ಮೇಳನಗೊಂಡದ್ದು ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಲ್ಲಿ. ಅಂತಹ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಅಂತರಂಗದ ಉದ್ಗಾರ ಹೀಗಿತ್ತು ‘ದೇವರು ನನಗೆ ಶ್ರೀ ವಿದ್ಯಾಮಾನ್ಯ ತೀರ್ಥರಂತಹ ಗುರುಗಳನ್ನು ಕೊಟ್ಟಿದ್ದಾನೆ. ಶ್ರೀವಿಶ್ವಪ್ರಸನ್ನತೀರ್ಥರಂತಹ ಶಿಷ್ಯರನ್ನು ನೀಡಿದ್ದಾನೆ. ಇದಕ್ಕಿಂತ ಇನ್ನೇನು ಬೇಕು ಎನಗೆ? ನನ್ನ ಬದುಕು ಸಾರ್ಥಕ.’ ಹೀಗೆ ಗುರುಗಳಿಂದಲೇ ಸೈ ಎನಿಸಿಕೊಂಡ ಶಿಷ್ಯರಾಗಿ ತನ್ನದೇ ಆದ ವಿಶಿಷ್ಟ ಛಾಪನ್ನು ಸಮಾಜದಲ್ಲಿ ಮೂಡಿಸಿದವರು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು. ಹಿರಿಯ ಶ್ರೀಪಾದರ ಎಲ್ಲ ನಡೆನುಡಿಗಳನ್ನು ಆವು ಆವು (ತುಳುವಿನಲ್ಲಿ ಆಗಲಿ ಎಂದರ್ಥ) ಎಂದೇ ಒಪ್ಪಿಕೊಂಡು ಅವರ ಮನಸ್ಸು ಗೆದ್ದವರು ‘ಆವು ಶ್ರೀಪಾದರು’. ಕನ್ನಡದಲ್ಲಿ ಆವು ಎಂದರೆ ಗೋವು. ಇವರನ್ನು ಗೋಸ್ವಾಮಿಗಳೆಂದೇ ಗುರುತಿಸುವವರೂ ಇದ್ದಾರೆ. ಗುರುಗಳ ಗೌರವಕ್ಕೆ ಚುತಿ ಬಾರದಂತೆ ಅವರದೇ ಹಾದಿಯಲ್ಲಿ ನಡೆದರೂ ತನ್ನತನವನ್ನು ಬಿಡದೆ ನಡೆಯುತ್ತಿದ್ದಾರೆ. ಶ್ರೀ ವಿಶ್ವೇಶತೀರ್ಥರ ಬಳಿಕ ಸಾತ್ವಿಕ ಸಮಾಜಕ್ಕೆ ದಿಕ್ಕು ಯಾರು ಎಂಬುದಕ್ಕೆ ಉತ್ತರದಂತಿದ್ದಾರೆ.

Advertisement

ಸಾರ್ಥಕ ಪ್ರಜ್ಞೆ

ಪ್ರಜ್ಞೆ ಬಹಳ ಮಂದಿಗೆ ಇರುತ್ತದೆ. ಆದರೆ ಸಮಯಕ್ಕೊದಗುವುದಿಲ್ಲ. ಆದರೆ ಶ್ರೀಪಾದರ ಪ್ರಜ್ಞೆ ಅಂತಹುದಲ್ಲ. ಅದೊಂದು ಕೃಷ್ಣ ಪ್ರತಿಷ್ಠೆಯ ವಾರ್ಷಿಕ ದಿನ. ರಥಬೀದಿ ಸುತ್ತಿದ ಸಂಕ್ರಾಂತಿಯ ತೇರಿನಿಂದಿಳಿದು ಶ್ರೀಕೃಷ್ಣ ವಾದ್ಯ ವೈಭವಗಳೊಂದಿಗೆ, ಹಲವು ಶ್ರೀಪಾದರ ಸಮಕ್ಷದಲ್ಲಿ ಮಧ್ವಸರೋವರವನ್ನು ಪ್ರವೇಶಿಸಿದ್ದಾನೆ. ಸರೋವರದ ತುಂಬೆಲ್ಲ ಜನರ ನೂಕುನುಗ್ಗಲು. ಪರ್ಯಾಯ ಶ್ರೀಪಾದರು ಶ್ರೀ ಕೃಷ್ಣನ ಉತ್ಸವದ ಮೂರ್ತಿಯೊಂದಿಗೆ ನೀರಿಗೆ ಇಳಿದಿದ್ದಾರೆ. ಉಳಿದ ಶ್ರೀಗಳೆಲ್ಲ ಕೃಷ್ಣನ ಅಭಿಷೇಕಕ್ಕೆ ಸಹಕರಿಸುತ್ತಿದ್ದಾರೆ. ನೂರಾರು ಭಕ್ತರು ಕಂಠದ ತನಕ ನೀರಿಗಿಳಿದಿದ್ದಾರೆ. ಅವಭೃಥ ಸ್ನಾನದ ಪುಣ್ಯ ಹೊಂದಲು ಮುಳುಗು ಹಾಕುತ್ತಿದ್ದಾರೆ. ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮುಳುಗುಹಾಕಿ ಎದ್ದವರೆ ಶ್ರೀಕೃಷ್ಣನನ್ನು ಉಳಿದವರ ಕೈಯಲ್ಲಿ ಹಾಗೆಯೇ ಬಿಟ್ಟು ಭಕ್ತಜನರ ನಡುವಿನಿಂದ ನೀರಿನ ನಡುವೆ ನೆಗೆದರು. ಹಠಾತ್ತನೆ ಶ್ರೀಗಳು ನೀರಿನ ಮಧ್ಯಕ್ಕೆ ಹಾರಿದ್ದು ಯಾಕೆ ಎಂದು ಯಾರಿಗೂ ತಿಳಿಯಲಿಲ್ಲ ಎಲ್ಲರೂ ಈ ಅನಿರೀಕ್ಷಿತ ಘಟನೆಗೆ ಸಾಕ್ಷಿಯಾಗಿ ನಿಂತಿದ್ದರು. ಶ್ರೀಗಳು ಈಜುಬರದ ಯುವಕನೊಬ್ಬನನ್ನು ನೀರಿನ ಆಳದಿಂದ ಮೇಲಕ್ಕೆತ್ತಿ ಹಾಕಿದ್ದರು. ಅಷ್ಟು ಜನರ ನಡುವೆ ಒಬ್ಬ ಮುಳುಗಿದ್ದನ್ನು ನೋಡಿ, ಕೈ ಬಾಯಿಗಳಿಗೆ ಕೆಲಸ ನೀಡದೆ, ತಾವೇ ಖುದ್ದಾಗಿ ರಕ್ಷಣೆಗೆ ಧಾವಿಸಿದರು. ಸಮಯ ಪ್ರಜ್ಞೆ ಸದಾ ಜಾಗೃತಾವಸ್ಥೆಯಲ್ಲಿ ಇರುವುದು ಶ್ರೀಗಳ ವಿಶೇಷ ಗುಣ.

ಸಾರ್ಥಕ ಕ್ಷಣಗಳು

ಬರಿಗಾಲಲ್ಲಿ ದೇಶದ ಉದ್ದಗಲಕೆ ಸಂಚರಿಸಿ ಧರ್ಮಜಾಗೃತಿ ಮೂಡಿಸುವ ಕೈಂಕರ್ಯ ಶ್ರೀಗಳಿಂದ ಹತ್ತಾರು ವರ್ಷಗಳಿಂದ ನಿರಂತರ ನಡೆದುಬರುತ್ತಿದೆ. ದಾರಿ ಉದ್ದಕ್ಕೂ ಭಗವನ್ನಾಮಸ್ಮರಣೆ, ಗಿಡಮರ ಬಳ್ಳಿಗಳ ಪರಿಚಯ, ಊರುಗಳ ವೈಶಿಷ್ಟ್ಯ, ಇತಿಹಾಸದ ಕಥನ, ಭಾಷಾ ವಿಜ್ಞಾನದ ಚರ್ಚೆಗಳು, ನಡೆಯುತ್ತಲೇ ಇರುತ್ತವೆ. ತಂಗಿದ ತಾಣಗಳಲ್ಲಿ ಪಾಠ-ಪ್ರವಚನ, ಶಾಸ್ತ್ರೀಯ ಚರ್ಚೆ, ಭಜನೆಗಳು ನಡೆಯುತ್ತಿದ್ದವು. ಶ್ರೀಗಳು ತಲೆಯ ಮೇಲೆ ದೇವರ ಪೆಟ್ಟಿಗೆ ಹೊತ್ತು, ಹೆಗಲಲ್ಲಿ ಜಾರದಂತೆ ದಂಡವನ್ನು ಇಟ್ಟು, ಕೈಬೀಸಿಕೊಂಡು ಸಾಗುತ್ತಿದ್ದರೆ ಸುತ್ತಲಿನ ಭಕ್ತರಲ್ಲಿ ಉತ್ಸಾಹ ತುಂಬಿ ತುಳುಕುತ್ತಿತ್ತು. ಊರ ಜನರ ಕಂಗಳಲ್ಲಿ ಭಕ್ತಿಯ ಬುಗ್ಗೆ ಪುಟಿಯುತ್ತಿತ್ತು. ಬೆಳಗ್ಗೆ ಸೂರ್ಯೋದಯಕ್ಕಿಂತ ಮೊದಲೇ ಪಾದಯಾತ್ರೆ ಮೊದಲಾಗುತ್ತಿತ್ತು. ಸಂಜೆ ತಡರಾತ್ರಿಯವರೆಗೂ ಸಾಗುತ್ತಿತ್ತು. ಜೊತೆಗಿದ್ದ ಭಕ್ತರಿಗೆ ಮಧ್ಯಾಹ್ನದ ಸುಡುಬಿಸಿಲು ನಡೆಯಲು ತುಸು ಕಷ್ಟವಾದೀತು ಎಂದು ಆಯಾಸ ಪರಿಹರಿಸಿಕೊಳ್ಳಲು ಬಿಡುವಿರುತ್ತಿತ್ತು, ಭಜನೆಗಳಲ್ಲಿ ತಾನು ಸೇರಿಕೊಳ್ಳುತ್ತಿದ್ದರು. ಪ್ರವಚನಗಳಲ್ಲಿ ಜೊತೆಗಿದ್ದ ಶಿಷ್ಯ ವಿದ್ವಾಂಸರನ್ನು ಸೇರಿಸಿಕೊಳ್ಳುತ್ತಿದ್ದರು. ಪ್ರತಿಯೊಂದರ ಬಗೆಗಿನ ಅವರ ಕುತೂಹಲದ ಕಣ್ಣು ಯಾವಾಗಲೂ ತೆರೆದೆ ಇರುತ್ತಿತ್ತು. ಬಿಡುವಿನ ವೇಳೆ ಎಂದರೆ ಬಂದವರೊಡನೆ ಒಳ್ಳೆಯ ವಿಷಯಗಳ ಚರ್ಚಿಸುವ ಸಾರ್ಥಕ ಕ್ಷಣಗಳಾಗಿರುತ್ತಿತ್ತು. ಅದೇ ವಿಶ್ರಾಂತಿ. ದೇಶ ಸುತ್ತಿಸಿ ಕೋಶ ಓದಿಸುವ ಹಿರಿತನ ಈ ಗುರುಗಳದ್ದು.

Advertisement

ಸಾರ್ಥಕ ಸೇವೆ

ಹಿರಿಯ ಗುರುಗಳ ಮಾತಿಗೆ ಬದ್ಧರಾಗಿರುವುದು ಎಂಬುದರ ಪ್ರತಿರೂಪ ಎಂಬಂತೆ ಸನ್ಯಾಸವಾಗಿ 35 ವರ್ಷಗಳ ಕಾಲವೂ ಅಧಿಕಾರವನ್ನು ಬಯಸದೆ ನಿಸ್ಪೃಹವಾಗಿ ಬದುಕಿದರು. ಗುರುಗಳ ಬಗೆಗೆ ಅವರ ಹಣೆಯಲ್ಲಿ ಎಂದು ಅಸಹನೆಯ ಗೆರೆ ಮೂಡಲಿಲ್ಲ. ಅಸಹನೆ ತೋರಿ, ಗುರುಗಳನ್ನು ನಿಂದಿಸಿದವರ ಬಗ್ಗೆ ಎಂದೂ ಸಹಿಸಿಕೊಳ್ಳಲಿಲ್ಲ. ಗುರುಗಳ ಕಾರ್ಯಭಾರದ ನಡುವೆ ತಾನಂದು ಕೊಂಡದ್ದು ನಡೆಯದಾಗ ಮುಖ ಬಾಡಲಿಲ್ಲ. ಗುರುಗಳ ಅಗತ್ಯಕ್ಕೆ ಸದಾ ಊರುಗೋಲಾಗಿ ಜೊತೆಗಿದ್ದವರು. ತನ್ನ ಸಂಚಾರದ ಅನೇಕ ಕಾರ್ಯಕ್ರಮಗಳನ್ನು ಗುರುಗಳಿಗಾಗಿಯೇ ಬದಲಾಯಿಸಿಕೊಳ್ಳುತ್ತಿದ್ದರು. ಎಲ್ಲದಕ್ಕಿಂತಲೂ ಮಿಗಿಲಾಗಿ ಯಾರು ಮಾಡಲಾಗದ ಎಂದು ಮರೆಯಲಾಗದ ಅವರ ತ್ಯಾಗವೆಂದರೆ ಪರ್ಯಾಯ ಪೀಠದಲ್ಲಿ ಪಂಚಮ ಪೂಜಾ ದೀಕ್ಷೆಯನ್ನು ಗುರುಗಳಿಗೆ ಒದಗಿಸಿದ್ದು. ತನ್ನ ಆಯುಷ್ಯದಲ್ಲಿ ಐದು ದಶಕಗಳು ಕಳೆದು ಹೋಗಿವೆ. ಪೂಜಾ ದೀಕ್ಷೆಯ ಅವಕಾಶ ಮತ್ತೊದಗುವುದೋ ತಿಳಿಯದು. ಆದರು ಅನುಕ್ಷಣವು ಗುರುಗಳ ಒಡನೆ ಇದ್ದು ಗುರುಗಳಿಂದ ಪಂಚಮ ಮಹಾ ಪರ್ಯಾಯ ಪೂಜೆಯ ಉತ್ಸವವನ್ನು ನಡೆಸಿಕೊಟ್ಟರು. ಗುರುಗಳು ಯಾವಾಗಲೂ ನಾವು ಮತ್ತು ನಮ್ಮ ಶಿಷ್ಯರು ಸೇರಿ ನಡೆಸಿದ ಪರ್ಯಾಯ ಎಂದೇ ಹೇಳುತ್ತಿದ್ದರು. ತನ್ನ ಶಿಷ್ಯನ ಬಗ್ಗೆ ಯಾವಾಗಲೂ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು. ಅಂತಹ ಸಾರ್ಥಕ ಸೇವೆಯ ಫ‌ಲವಾಗಿ ರಾಮಜನ್ಮ ಭೂಮಿಯ ಟ್ರಸ್ಟ್‌ ನ ವಿಶ್ವಸ್ಥ ಮಂಡಳಿಯ ಸದಸ್ಯತ್ವ ಒದಗಿತು. ದಕ್ಷಿಣ ಭಾರತದ ಏಕ ಮಾತ್ರ ವ್ಯಕ್ತಿಯಾಗಿ ಶ್ರೀಗಳು ಅಯೋಧ್ಯೆಯ ರಾಮಚಂದ್ರನ ಪೀಠದಲ್ಲಿ ನಮ್ಮೆಲ್ಲರನ್ನು ಪ್ರತಿನಿಧಿಸುತ್ತಿದ್ದಾರೆ. ತನ್ನ ಅವಸಾನದ ಮುನ್ನವೇ ತನ್ನ ಶಿಷ್ಯನ ಹೆಸರನ್ನು ಮಂಡಳಿಯ ಸದಸ್ಯತ್ವ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡಿದ್ದರು ಎಂಬುವುದು ತಿಳಿದಿದ್ದೆ ಬಳಿಕ. ಗುರುಗಳ ಸೇವೆ ಎಂದೂ ವ್ಯರ್ಥವಾಗಿಲ್ಲ.

ಸಾರ್ಥಕ ಶಿಕ್ಷಣ

ಶಿಕ್ಷಣವೆಂದರೆ ನಮ್ಮತನವನ್ನು ಮರೆತು ಪರಕೀಯರಾಗುವುದಿಲ್ಲ. ನಮ್ಮತನವನ್ನು ಉಳಿದುಕೊಂಡೆ ಇಂದಿನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು. ವಿದೇಶಗಳಲ್ಲಿ ಮುಖ ಮಾಡುವುದನ್ನು ಹೆಗ್ಗಳಿಕೆ ಎಂಬಂತೆ ಬಿಂಬಿಸುವ ಇಂದಿನ ಶಿಕ್ಷಣದ ಕೊಳ್ಳುಬಾಕ ಸಂಸ್ಕೃತಿಗೆ ಮಾರಿಕೊಳ್ಳುವ ಅಪಾಯವನ್ನು ಶ್ರೀಗಳು ಸುಮಾರು ಎರಡು ದಶಕಗಳ ಹಿಂದೆಯೇ ಗುರುತಿಸಿದ್ದರು. ಪ್ರಾಚೀನ-ನವೀನ ಎರಡೂ ಶಿಕ್ಷಣವನ್ನು ಒಂದೇ ವೇದಿಕೆಯಲ್ಲಿ ಕೊಡುವ ಪ್ರಯತ್ನವಾಗಿ ಶ್ರೀಗಳ ನೇತೃತ್ವದಲ್ಲಿ ಪ್ರಹ್ಲಾದ ಗುರುಕುಲ ಜನ್ಮ ತಾಳಿತು. ದೇಹ-ಆತ್ಮದಂತಿರುವ ಲೌಕಿಕ-ಅಧ್ಯಾತ್ಮ ಸಮ್ಮಿಳಿತ ಶಿಕ್ಷಣ ಇವತ್ತಿನ ತುರ್ತು ಎಂಬುದು ಈಗಿನ ಶಿಕ್ಷಣತಜ್ಞರು ಸಹಕಾರಗಳಿಗೆ ಶಿಫಾರಸು ಮಾಡುತ್ತಿದ್ದಾರೆ. ಭಾರತೀಯ ತತ್ವಜ್ಞಾನ, ಪ್ರಾಚೀನ ಇತಿಹಾಸ ವಿಜ್ಞಾನಗಳ ಜೊತೆಗೆ ಇಂದಿನ ಪ್ರಶ್ನಿಸುವ ಪ್ರಯೋಗಶೀಲ ವಾತಾವರಣ ಜೊತೆ ಕೂಡಿದರೆ ಹೆಮ್ಮೆಯ ಭಾರತ ತಲೆಯೆತ್ತುತ್ತದೆ. ಸ್ವಾವಲಂಬಿ ಪೀಳಿಗೆ ಮುಂದಿನದಾಗುತ್ತದೆ. ಇಂದಿನ ಈ ಬಗೆಯ ಪ್ರಯೋಗಗಳಿಗೆ ಪ್ರಹ್ಲಾದ ಗುರುಕುಲ ಮಾದರಿ ಎನಿಸಿತು.

ಸಾರ್ಥಕ ಬದುಕು

ಕೃಷಿ ಕುಟುಂಬದ ಹಿನ್ನೆಲೆಯ ಶ್ರೀಗಳು ನಿರಂತರ ಕ್ರಿಯಾಶೀಲರು. ಸಂಸ್ಕೃತ, ಕನ್ನಡ, ತುಳು, ಇಂಗ್ಲಿಷ್‌, ತೆಲುಗು, ತಮಿಳು, ಒರಿಯಾ, ಮಲೆಯಾಳಂ ಭಾಷೆಗಳನ್ನು ಬಲ್ಲವರು. ಕುದುರೆಯ ಸವಾರಿ ಮಾಡುತ್ತಾರೆ. ಹಗ್ಗ, ಗಳುಗಳ ಸಹಾಯವಿಲ್ಲದೆ ಸರಸರನೆ ಮರ ಏರುತ್ತಾರೆ. ಬೈಕ್‌ ಓಡಿಸುತ್ತಾರೆ. ಪದಗಳ ಅರ್ಥ ವಿಮರ್ಶೆ ಶ್ರೀಗಳ ಅಚ್ಚುಮೆಚ್ಚಿನ ಸಂಗತಿಗಳಲ್ಲೊಂದು. ಏಟಾಗಿ ತೊಂದರೆಗಳಿಗೊಳಗಾದ ಹಾವು, ಹಕ್ಕಿ, ಜಿಂಕೆ ಮೊದಲಾದ ಜೀವಿಗಳಿಗೆ ಚಿಕಿತ್ಸೆ ನೀಡಿ ಸುರಕ್ಷಿತ ಜಾಗಕ್ಕೆ ಬಿಟ್ಟಿದ್ದಾರೆ. ಆಹಾರ ನಿಯಮದೊಂದಿಗೆ ಯೋಗಪಟುವಾಗಿ ದೇಹದ ದಾರ್ಡ್ಯವನ್ನು ಕಾಯ್ದುಕೊಂಡಿದ್ದಾರೆ. ಯತಿಧರ್ಮಕ್ಕೆ ಚ್ಯುತಿಯಾಗದಂತೆ ನೇಮ ಸಂಪ್ರದಾಯಗಳ ಪಾಲಿಸುತ್ತಲೇ ಸಮಾಜಕ್ಕೆ ನೆರವಾಗುತ್ತಿದ್ದಾರೆ. ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ದನಿಯಾಗಿದ್ದಾರೆ. ಧರ್ಮದ ಅವಹೇಳನಕಾರಿ ಮಾತುಗಳನ್ನು ಖಂಡಿಸುತ್ತಾರೆ. ಬೀಡಾಡಿ, ಗಾಯಕ್ಕೊಳಗಾದ, ಮುದಿ ಹೋರಿ, ಹಸು, ಕೋಣಗಳನ್ನು ನಿರ್ವ್ಯಾಜವಾಗಿ ನೋಡಿಕೊಳ್ಳುತ್ತಿರುವುದು ಎಂದಿಗೂ ಬೆಲೆ ಕಟ್ಟಲಾಗದ ಕೆಲಸ. ಎರಡು ಸಾವಿರಕ್ಕೆ ಹತ್ತಿರದಷ್ಟು ಹಸುಗಳ ಆರೈಕೆಗಾಗಿ ತಲೆ ಎತ್ತಿರುವ ಕೃಷ್ಣದೇಗುಲ, ಸರೋವರದಿಂದೊಡಗೂಡಿದ ‘ನೀಲಾವರ ಗೋಶಾಲೆ’ ತೀರ್ಥಕ್ಷೇತ್ರವೇ ಆಗಿದೆ. ಸಂಗೀತ ಇವರ ಆಸಕ್ತಿಯ ವಿಷಯವಾಗಿದೆ. ತುಳಸಿ ಸಂಕೀರ್ತನೆ ಕುಣಿತವನ್ನು ನೂರಾರು ಹುಡುಗರಿಗೆ ಹೇಳಿಕೊಟ್ಟು ಮನೆಮನೆಗಳಲ್ಲಿ ಹಬ್ಬಿಸಿದ್ದಾರೆ. ಪರಿಸರ ತಜ್ಞರೂ ಆಗಿ ಕೃಷಿಯ ಕಾರ್ಯದಲ್ಲಿ ಅಪಾರ ತಿಳುವಳಿಕೆ ಹೊಂದಿದ್ದಾರೆ. ಸಾರ್ಥಕ ಬದುಕನ್ನು ಸಾಗಿಸಲು ಬೇಕಾದ ನೂರಾರು ಸಾಧಕ ಜೀವಿಗಳೊಂದಿಗೆ ಕಾಲ ಕಳೆದಿದ್ದಾರೆ. ಇವರ ಅರವತ್ತು ಸಂವತ್ಸರಗಳು ಮುಂದಿನ ಪೀಳಿಗೆಗೂ ಅನುಭವದ ಮೂಟೆಯನ್ನೆ ಹೊತ್ತು ನಿಂತಿದೆ. ಇಂಥವರ ಬದುಕು ಸಂಸ್ಕೃತಿಯ ಹೊನಲನ್ನು ಇನ್ನೂ ಹೆಚ್ಚಿಸಿದೆ. ಇಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಪಂಚತಂತ್ರದ ಕನ್ನಡದ ಅವತರಣಿಕೆಯ ಮಾತು ಸ್ಮರಣೀಯ..

ಒಂದಷ್ಟು ಕಳಕೊಂಡು ಕಿಂಚಿತ್ತು ಉಳಿಸುವುದು ಜಾಣತನಕೊಂದು ಕೆಸರು.

ಚೂರು ಕಳಕೊಂಡು ನೂರು ಉಳಿಸಿದರೆ ಜಾಣತನವೆಂದು ಹೆಸರು

 

ಲೇಖನ: ಕೃಷ್ಣರಾಜ ಕುತ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next