Advertisement

ಬಿಜೆಪಿಗೆ 60, ಕಾಂಗ್ರೆಸ್‌ಗೆ 140 ಸೀಟ್ : ಡಿ.ಕೆ.ಶಿವಕುಮಾರ್

10:44 PM Feb 15, 2023 | Team Udayavani |

ಹುಣಸೂರು: ನಮ್ಮ ಕಾಂಗ್ರೆಸ್ ಸರಕಾರ ಅಕ್ಷರ, ಆರೋಗ್ಯ, ಆಹಾರ ಮತ್ತು ಆಶ್ರಯಕ್ಕೆ ಆದ್ಯತೆ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದೆವು, ಆದರೆ ಡಬ್ಬಲ್ ಇಂಜಿನ್‌ನ ಬಿಜೆಪಿ ಸರಕಾರ ದ್ವೇಷ, ಜಾತಿ,ಧರ್ಮಗಳ ನಡುವೆ ಭಿನ್ನಾಭಿಪ್ರಾಯ ಹುಟ್ಟು ಹಾಕಿದ್ದೇ, ಅಚ್ಛೇ ದಿನ್ ತರುತ್ತೇವೆಂದು ಹೇಳಿ ಜನರನ್ನು ವಂಚಿಸಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

Advertisement

ಹುಣಸೂರಿನಲ್ಲಿ ಕಾಂಗ್ರೆಸ್ ಪಕ್ಷವು ಪ್ರಜಾಧ್ವನಿಯಾತ್ರೆ ಅಂಗವಾಗಿ ಮುನೇಶ್ವರಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಹುಣಸೂರು ದೇವರಾಜ ಅರಸರಿಂದಾಗಿ ರಾಷ್ಟದಲ್ಲಿ ಗಮನ ಸೆಳೆದಿದೆ. ಇಂತ ಕ್ಷೇತ್ರದಲ್ಲಿ ಎಚ್.ಪಿ.ಮಂಜುನಾಥ್ ತನ್ನ ಅವಿಸ್ಮರಣೀಯ ಕೆಲಸಗಳ ಮೂಲಕ ಮೂರು ಬಾರಿ ಶಾಸಕರಾಗಿ ಇತಿಹಾಸ ನಿರ್ಮಿಸಿದ್ದಾರೆ. ಕಳೆದ ಉಪ ಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಗೆಲ್ಲಿಸಿಕೊಟ್ಟಿದ್ದನ್ನು ಸ್ಮರಿಸಿ. ಈ ಭಾಗದ ತಂಬಾಕು ಬೆಳೆಗಾರರ ಪರವಾಗಿ ಶಾಸಕ ಮಂಜುನಾಥ್ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಬಿಜೆಪಿ, ದಳ ಪಕ್ಷ ಪ್ರಶ್ನಿಸಲಿಲ್ಲವೆಂದರು. ನಿಮ್ಮ ಸಂಕಷ್ಟಕ್ಕೆ ನಿಲ್ಲುವ ಸರಕಾರಕ್ಕೆ ಬೆಂಬಲ ನೀಡುವಂತೆ ಕೋರಿದರು.

ದೇಶದ ಜನರ ಭಾವನೆಗಳನ್ನು ಒಗ್ಗೂಡಿಸಲು ಭಾರತ್ ಜೋಡೋ ಯಾತ್ರೆ ಮಾಡಿದೇವು. ರಾಹುಲ್ ಗಾಂಧಿಯವರ ಭಾರತ್ ಜೋಡೆಯಾತ್ರೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ಬದನಾಳಿನಲ್ಲಿ ಸವರ್ಣಿಯರಿಗೆ ಹಾಗೂ ದಲಿತರಿಗೂ ವೈಷಮ್ಯ ಬಂದಿತ್ತು. ಆ ಹೃದಯಗಳನ್ನು ನಾವೆಲ್ಲ ಕೂತು ಒಂದು ಮಾಡಿದ್ದೇವೆ. ಇದು ಒಂದು ಇತಿಹಾಸವೆಂದರು.

ಕಾಂಗ್ರೆಸ್‌ಗೆ 140 ಸೀಟ್
ರಾಜ್ಯದಲ್ಲಿ ಶೇ.40 ಪರ್ಸೆಂಟ್ ಭ್ರಷ್ಟ ಸರಕಾರವಿದ್ದು, ಜನತಾದಳ 25, ಬಿಜೆಪಿ 60 ಹಾಗೂ ಕಾಂಗ್ರೆಸ್ 140 ಸೀಟು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಚಿತ ವಿದ್ಯುತ್- 2ಸಾವಿರ ಖಚಿತ
ನಮ್ಮ ಪ್ರಣಾಳಿಕೆಯಂತೆ ನಾನು, ಸಿದ್ದರಾಮಯ್ಯ ಚರ್ಚಿಸಿ ಜೂನ್ ವೇಳೆಗೆ ಪ್ರತಿಕುಟುಂಬದ ಮಹಿಳೆಗೆ 2 ಸಾವಿರ, 200 ಯೂನಿಟ್ ವಿದ್ಯುತ್ ನೀಡಲು ಬದ್ದರಾಗಿದ್ದು, ನಾವಿಬ್ಬರು ಸಹಿ ಹಾಕಿರುವ ಚೆಕ್ಕನ್ನು ಪ್ರಿಯಾಂಕ ಗಾಂಧಿ ಆಶಯದಂತೆ ಮನೆಮನೆಗೂ ವಿತರಿಸಲಾಗುವುದು. ಇದು ನಮ್ಮ ಬದ್ಧತೆ ಎಂದರು.

Advertisement

ಬಿಜೆಪಿಯಿಂದ ದೂರ ಇರಲು ಕುಮಾರಣ್ಣನಿಗೆ ಬೆಂಬಲ ನೀಡಿದ್ದೆವು. ನಾನು, ಜಿ.ಟಿ.ದೇವೇಗೌಡ ಬಾಂಬೆಗೆ ಹೋಗಿ ಹೋರಾಟ ಮಾಡಿದೆವು. ಆದರೆ ಸರಕಾರ ಉಳಿಸಿಕೊಳ್ಳಲು ಆಗಲಿಲ್ಲ. ಅಂದು ಎಚ್.ಡಿ.ದೇವೇಗೌಡರು ಪ್ರಧಾನಿ ಆಗಲು ಕಾಂಗ್ರೆಸ್ ಬೆಂಬಲ ನೀಡಿತ್ತೆಂದರು.

ನಾವೇ ಅಭ್ಯರ್ಥಿ 

ಇಲ್ಲಿ ಮಂಜಣ್ಣ ಕ್ಯಾಂಡಿಡೇಟ್ ಅಲ್ಲ ಈ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನಖರ್ಗೆ ಯವರು ಕ್ಯಾಂಡಿಡೇಟ್ ಆಗಿದ್ದು, ಅವರನ್ನು ಗೆಲ್ಲಿಸಿದರೆ ನಮಗೆಲ್ಲಾ ಶಕ್ತಿ ತುಂಬಿದಂತೆ ಎಂದ ಅವರು ಬಿಜೆಪಿ ಪಾಪ ಪುರಾಣದ ಬಗ್ಗೆ ಒಂದು ಪುಸ್ತಕ ಬರೆದಿದ್ದೇವೆ ಪ್ರತಿ ಮನೆಗೂ ತಲುಪಿಸಲಾಗುವುದೆಂದರು.

ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ನಾನು ಮೂರು ಬಾರಿ ಶಾಸಕನಾಗಿದ್ದರು ಒಂದು ಅವಧಿಯಲ್ಲಿ ಮಾತ್ರ ನಮ್ಮ ಸರ್ಕಾರವಿತ್ತು. ತಾಲೂಕಿನ ಅಭಿವೃದ್ಧಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್,ಮಹಾದೇವಪ್ಪ ಹಾಗೂ ಇತರೆ ಸಚಿವರು ಹೆಚ್ಚಿನ ಅನುದಾನ ನೀಡಿದರು. ಈ ಸರ್ಕಾರದಲ್ಲಿ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ.ಸಿದ್ದರಾಮಯ್ಯ ಸರ್ಕಾರದಲ್ಲಿ ಮಂಜೂರಾದ ಕಾಮಗಾರಿಗಳಿಗೆ ಹಣವನ್ನು ನೀಡುತ್ತಿಲ್ಲ.ಎಲ್ಲಾ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ನನ್ನ ಎಲ್ಲಾ ಕನಸಿನ ಯೋಜನೆಗಳು ಸಾಕಾರವಾಗಬೇಕಾದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ನಾನು ಇಲ್ಲಿ ಶಾಸಕನಾಗಬೇಕು. ನಾನು ಈ ಊರಿನ ಮಗ.ಇಲ್ಲೇ ಹುಟ್ಟಿದ್ದೇನೆ, ಇಲ್ಲೇ ಮಣ್ಣಾಗುತ್ತೇನೆ. ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಜಾತಿ ಧರ್ಮದವರಿಗೆ ನೋವಾಗದಂತೆ ಕೆಲಸ ಮಾಡಿದ್ದೇನೆ.ತಾಲೂಕಿನಲ್ಲಿ ಯಾವುದೇ ಅಶಾಂತಿ ವಾತಾವರಣಕ್ಕೆ ಆಸ್ಪದ ನೀಡಿಲ್ಲ.ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಕೆಲಸ ಮಾಡಿದ್ದೇನೆ. ಮತ್ತೊಮ್ಮೆ ಆಶಿರ್ವದಿಸಬೇಕೆಂದು ಮನವಿ ಮಾಡಿದರು

ಅಜೆಂಡಾ ಬದಲಾದ್ರು ವಿಶ್ವನಾಥ್ ಝೆಂಡಾ ಬದಲಾಯಿಸಿಲ್ಲ
ನಾನು ವಿಧಾನಸಭೆಯೊಳಗೆ ಹೋಗಬೇಕಾದರೆ, ಈ ಮಂಜಣ್ಣನ ನೀವು ಗೆಲ್ಲಿಸಬೇಕ್, ಮಂಜಣ್ಣ ಗೆದ್ದರೆ, ಕಾಂಗ್ರೆಸ್ ಅಧಿಕಾರ ಹಿಡಿಯುತ್ತೆ, ನಾವು ಅಧಿಕಾರಕ್ಕೆ ಬರಲು ಸಹಕಾರಿಯಾಗುತ್ತೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಂತೆ ನೆರೆದಿದ್ದವರು ಹೋ ಎಂದು ಕೂಗುತ್ತಾ ಚಪ್ಪಾಳೆ ತಟ್ಟಿದರು.

ಅರಸುರ ಗರಡಿಯಲ್ಲಿ ಪಳಗಿದ ಎಚ್.ವಿಶ್ವನಾಥ್ ಈ ಭಾಗದ ನಾಯಕರಾಗಿದ್ದಾರೆ. ಶಾಸಕರಾಗಿ, ಮಾಜಿ ಸಚಿವರಾಗಿ, ಸಂಸದರಾಗಿ ಕೆಲಸ ಮಾಡಿದ್ದಾರೆ. ಹೆಚ್ಚಿನ ಅನುಭವ ಉಳ್ಳವರು. ನೇರ ನಡೆ ನುಡಿಯ ವ್ಯಕ್ತಿ. ಕಾಂಗ್ರೆಸ್ ಬಿಟ್ಟು ಜೆಡಿಎಸ್ ಶಾಸಕರಾಗಿ ನಂತರ ಆಪರೇಷನ್ ಲೋಟಸ್ ನಲ್ಲಿ ಬಿಜೆಪಿ ಸೇರಿದರು. ಆದರೆ ಬಿಜೆಪಿಯವರು ಅವರನ್ನು ಎಂಎಲ್ಸಿ ಮಾಡಿದ್ದರೂ ಬಿಜೆಪಿ ತತ್ವ ಸಿದ್ಧಾಂತಕ್ಕೆ ಒಪ್ಪದೆ ವಿಶ್ವನಾಥ್ ನನ್ನ ಬಳಿ ಬಂದು ನಾನು ಕಾಂಗ್ರೆಸ್ಸಿಗನಾಗಿ ಸಾಯಬೇಕೆಂದು ತಮ್ಮ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ ಎಂದರು.

ಅದ್ದೂರಿ ಮೆರವಣಿಗೆ
ಪ್ರಜಾ ಯಾತ್ರೆ ಬಸ್‌ನಲ್ಲಿ ಆಗಮಿಸಿದ ಡಿ.ಕೆ.ಶಿವಕುಮಾರ್ ನೇತೃತ್ವದ ತಂಡವನ್ನು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮೈಸೂರು ಹೆದ್ದಾರಿಯ ದೇವರಾಜು ಅರಸು ಪ್ರತಿಮೆ ಬಳಿ ಸ್ವಾಗತಿಸಿದರಲ್ಲದೆ, ಬೈಕ್ ರ‍್ಯಾಲಿ ಮೂಲಕ ಪ್ರಮುಖ ಬೀದಿಗಳಲ್ಲಿ ಮುಖಾಂತರ ನಗರಸಭಾ ಮೈದಾನವನ್ನು ಪ್ರವೇಶಿಸಿತು. ಇದಕ್ಕೂ ಮುನ್ನಾ ಕಲ್ಪತರು ಸರ್ಕಲ್‌ನಲ್ಲಿ ಜೆಸಿಬಿ ಮೂಲಕ ಸೀಬೆ ಹಣ್ಣು-ಮೂಸಂಬೆ ಹಣ್ಣಿನ ಬೃಹತ್ ಹಾರವನ್ನು ಹಾಕುವ, ಭಾರಿ ಪಟಾಕಿ ಸಿಡಿಸುವ, ಕಳಸಹೊತ್ತ ನೂರಾರು ಹೆಂಗಳೆಯರು ಪೂರ್ಣಕುಂಭ ಸ್ವಾಗತಕೋರಿದರು. ಸಮಾವೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಕಾರ್ಯ ಕರ್ತರು ಜೆಸಿಬಿ ಮೂಲಕ ಬೃಹತ್ ಮೋಸುಂಬಿ, ಸೀಬೆ, ಕಿತ್ತಳೆ ಹಣ್ಣಿನ ಹಾಕಲು ಮುಂದಾಗಿತ್ತಿದ್ದಂತೆ ಬಿಸಿಲಿನ ಝಳಕ್ಕೆ ಬಳಲಿದ್ದ ಡಿ.ಕೆ.ಶಿವಕುಮಾರ್ ರವರು ಕಿತ್ತಳೆ ಹಣ್ಣುಗಳನ್ನು ಕಿತ್ತು ತಿಂದರಲ್ಲದೆ ಜೊತೆಯಲ್ಲಿದ್ದ ಕಾರ್ಯಧ್ಯಕ್ಷ ಧ್ರುವನಾರಾಯಣ್ ಹಾಗೂ ಮಹದೇವಪ್ಪ,ಶಾಸಕ ಮಂಜುನಾಥರಿಗೂ ತಿನ್ನಲು ನೀಡಿ ದಣಿವಾರಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next