Advertisement

ಬಸವಸಾಗರ ಜಲಾಶಯದ 6 ಕ್ರಸ್ಟ್ ಗೇಟ್ ತೆರದು ಕೃಷ್ಣಾ ನದಿಗೆ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

06:16 PM Jul 17, 2024 | Team Udayavani |

ನಾರಾಯಣಪುರ: ಬಸವಸಾಗರ ಜಲಾಶಯದ 6 ಕ್ರಸ್ಟ್ ಗೇಟ್ ಗಳನ್ನು ತೆರದು ಕೃಷ್ಣಾ ನದಿಗೆ 20 ಸಾವಿರ ಕ್ಯೂಸೆಕ್ ನಷ್ಟು ನೀರನ್ನು ಹರಿಬಿಡಲಾಗುತ್ತಿದೆ. ಜೊತೆಗೆ ಜಲಾಶಯಕ್ಕೆ ಹೊಂದಿಕೊಂಡಿರುವ ಖಾಸಗಿ ಜಲ ವಿದ್ಯುತ್ ಸ್ಥಾವರದಿಂದಲು ನದಿಗೆ ನೀರು ಹರಿಸಲಾಗುತ್ತಿದೆ.

Advertisement

ಕ್ರಸ್ಟ್ ಗೇಟ್ ಗೆ ಪೂಜೆ: ಬುಧವಾರ ಬೆಳಿಗ್ಗೆ ಸಂಪ್ರದಾಯದಂತೆ ಕ್ರಸ್ಟ್ ಗೇಟ್ ಗೆ ಶಕ್ತಿ ಮಾತೆಗೆ, ಭರ್ತಿಯಾದ ಜಲಾಶಯಕ್ಕೆ ವಲಯ ಕಚೇರಿಯ ಮುಖ್ಯ ಇಂಜಿನಿಯರ್ ಆರ್. ಮಂಜುನಾಥ ಪೂಜೆ ನೆರವೇರಿಸಿದರು. ಬಳಿಕ ಸ್ವಿಚ್‌ ಬಟನ್ ಆನ್ ಮಾಡಿ ಗೇಟ್ ತೆರೆಯುವ ಮೂಲಕ ಕೃಷ್ಣಾ ನದಿಗೆ ನೀರು ಹರಿಸಲು ಚಾಲನೆ ನೀಡಿದರು.

ಬಳಿಕ ಮಾತಾನಾಡಿದ ಸಿಇ ಆರ್.ಮಂಜುನಾಥ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದು ಮುಂದುವರೆದಿದ್ದು ಸದ್ಯ ಬಸವಸಾಗರಕ್ಕೆ ಅಂದಾಜು 65 ಸಾವಿರ ಕ್ಯೂಸೆಕ್ ನಷ್ಟು ಒಳಹರಿವು ಇದ್ದು, ಸಂಜೆ ವೇಳೆಗೆ ಆಲಮಟ್ಟಿ ಜಲಾಶಯದಿಂದ ಬರುವ ಒಳಹರಿವಿನ ಪ್ರಮಾಣ ಗಮನಿಸಿ ನದಿಗೆ ನೀರು ಹರಿಸುವ ಪ್ರಮಾಣವನ್ನು ಹಂತ ಹಂತವಾಗಿ ಕ್ರಸ್ಟ್ ಗೇಟ್ ಗಳ ಸಂಖ್ಯೆ ಹೆಚ್ಚಿಸುವ ಮೂಲಕ ಅಂದಾಜು 50 ಸಾವಿರದಿಂದ 60 ಸಾವಿರ ಕ್ಯೂಸೆಕ್ ವರೆಗೆ  ಕೃಷ್ಣಾ ನದಿಗೆ ನೀರು ಹರಿಸುವ ಸಾಧ್ಯತೆಯಿದ್ದು ಮುಂಜಾಗ್ರತಾ ಕ್ರಮವಾಗಿ ನದಿ ತೀರದ ಗ್ರಾಮಗಳ ಜನ-ಜಾನುವಾರಗಳು ನದಿಗೆ ಇಳಿಯದಂತೆ ಯಾವುದೇ ಚಟುವಟಿಕೆ ನಡೆಸದಂತೆ ಜಾಗೃತಿ ವಹಿಸಬೇಕು ಎಂದು ಹೇಳಿದರು.

ಎಡದಂಡೆ ಮುಖ್ಯ ಕಾಲುವೆಗೆ ನೀರು ಬಿಡುಗಡೆ: ಮಂಗಳವಾರ ಜರುಗಿದ ಐಸಿಸಿ ಸಭೆಯ ನಿರ್ಣಯದಂತೆ ಜಲಾಶಯದ ಎಡದಂಡೆ ಮುಖ್ಯ ಕಾಲುವೆಯ ಗೇಟ್ ಗೆ ಪೂಜೆ ನೆರವೇರಿಸಿ 1200 ಕ್ಯೂಸೆಕ್ ನಷ್ಟು ನೀರನ್ನು ಕಾಲುವೆಗೆ ಹರಿಸಲಾಗುತ್ತಿದೆ. ಕಾಲುವೆ ಜಾಲಗಳ ಅಧಿಕಾರಿಗಳ ಬೇಡಿಕೆಯಂತೆ ಸಂಜೆ ವೇಳೆಗೆ ಮುಖ್ಯ ಕಾಲುವೆಗೆ  ನೀರು ಹರಿಸುವ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸಲಾಗುವುದು ಎಂದು ಪ್ರಬಾರ ಎಇಇ ವಿಜಯ ಅರಳಿ ಮಾಹಿತಿ‌ ನೀಡಿದ್ದಾರೆ.

Advertisement

ಧುಮ್ಮಿಕ್ಕುವ ಜಲಧಾರೆ: ಬರಿದಾಗಿದ್ದ ಕೃಷ್ಣಾ ನದಿಗೆ ನೀರು ಹರಿಸಲಾಗಿದ್ದು, ಜಲಾಶಯದ ಕ್ರಸ್ಟ್ ಗೇಟ್ ಗಳ ಮೂಲಕ ರಭಸದಿಂದ ಧುಮ್ಮಿಕ್ಕುವ ಜಲರಾಶಿಯ ವೈಭವದ ನೋಟವು ಅತ್ಯಾಕರ್ಷಕವಾಗಿದೆ. ಜಲಾಶಯದ ಮುಂಭಾಗ ನೀರಿಲ್ಲದೆ ಬಣಗುಡುತಿತ್ತು. ಸದ್ಯ ನದಿಯಲ್ಲಿ ನೀರಿನ ಹರಿವು ಪ್ರವಾಹ ರೂಪದಲ್ಲಿ ಎಲ್ಲೆಡೆ ಹರಡಿಕೊಂಡಿದೆ. ನೀರು ಹರಿಯುತ್ತಿರುವ ದೃಶ್ಯ ಕಣ್ಮನ ಸೆಳೆಯುತ್ತಿರುವುದು ಒಂದೆಡೆಯಾದರೆ, ನದಿ ಮಾರ್ಗದಲ್ಲಿ ಕಣ್ಣು ಹಾಯಿಸಿದಷ್ಟು ನೀರು ಹರಿಯುತ್ತಿರುವುದು ಜಲವೈಭವವನ್ನು ಸೃಷ್ಠಿಸಿದೆ.

ಅರ್ಚಕ ರಾಘವೇಂದ್ರ ಆಚಾರ್ಯ ಪೂಜಾ ಕಾರ್ಯ ನೆರವೇರಿಸಿದರು.

ಈ ವೇಳೆ ಕೆಬಿಜೆಎನ್ ಎಲ್ ಅಧಿಕಾರಿಗಳಾದ ಆಧಂಶಪಿ, ಅಮರೇಶ ರಾಠೋಡ, ಆದಪ್ಪ ಕುಂಬಾರ ಹಾಗೂ ಎಇಇಗಳಾದ ಮಹಾಲಿಂಗಪ್ಪ ಭಜಂತ್ರಿ, ಟಿಎ ನಾಗೇಶ, ವಿಜಯ ಅರಳಿ, ಬಾಲಸುಭ್ರಮಣ್ಯ, ವಿರೇಶ, ಅಮರನಾಥ, ಮಲ್ಲಿಕಾರ್ಜುನ, ಶೌಕತ್, ನಾಗಪ್ಪ, ಅತಾವುಲ್ಲಾಖಾನ್, ರಮೇಶ, ಸಂಗಮ್ಮ, ಸಿದ್ದು, ಮುರಳಿಧರ ಸೇರಿದಂತೆ ಅಧಿಕಾರಿಗಳು, ಸೆಕ್ಯುರಿಟಿ ಸಿಬ್ಬಂದಿ ವರ್ಗದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next