Advertisement

ದಸರೆಗೆ 5 ಸಾವಿರ ಪೊಲೀಸರ ನಿಯೋಜನೆ: ಆಯುಕ್ತ

12:05 PM Sep 20, 2017 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು 5056 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ.

Advertisement

ಇದಲ್ಲದೆ, ಐಬಸ್‌ ಮತ್ತು ಮೈಸೂರು ನಗರ ಕಮಾಂಡೋ ಪಡೆಯ 70 ಕಮಾಂಡೋಗಳು, 60 ಕೆಎಸ್‌ಆರ್‌ಪಿ, ಸಿಎಆರ್‌-ಡಿಎಆರ್‌ ತುಕಡಿಗಳು, ಬಾಂಬ್‌ ನಿಷ್ಕ್ರಿಯ ದಳ, ಕ್ಷಿಪ್ರ ಕಾರ್ಯಪಡೆ ಸೇರಿದಂತೆ 49 ಭದ್ರತಾ ತಪಾಸಣಾ ಪಡೆಗಳು, ಹಾಗೂ 1600 ಮಂದಿ ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರಾವ್‌, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರದ ಮೂವರು ಎಸಿಪಿ, ಡಿವೈಎಸ್‌ಪಿ, 20 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು, 17 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳು, 70 ಎಎಸ್‌ಐ, 440 ಮಂದಿ ಮುಖ್ಯಪೇದೆ ಮತ್ತು ಪೇದೆಗಳು ಹಾಗೂ 47 ಮಂದಿ ಮಹಿಳಾ ಪೇದೆಗಳು ಸೇರಿದಂತೆ 597 ಮಂದಿ, ಹೊರ ಜಿಲ್ಲೆಗಳಿಂದ ಎಸ್‌.ಪಿ, ಡಿಸಿಪಿ ದರ್ಜೆಯ 10 ಮಂದಿ ಅಧಿಕಾರಿಗಳು, 37 ಮಂದಿ ಎಸಿಪಿ/ಡಿವೈಎಸ್‌ಪಿಗಳು, 91 ಪಿಐ, 240 ಪಿಎಸ್‌ಐ, 290 ಎಎಸ್‌ಐ, 2750 ಮುಖ್ಯಪೇದೆ ಮತ್ತು ಪೇದೆಗಳು,

260 ಮಂದಿ ಮಹಿಳಾ ಪೇದೆಗಳು ಸೇರಿ 3678 ಮಂದಿಯನ್ನು ನಿಯೋಜಿಸಲಾಗುತ್ತಿದೆ. ಇವರ ಜತೆಗೆ 781 ಮಂದಿ ಸಂಚಾರ ಪೊಲೀಸರು, ವಿಐಪಿ ಭದ್ರತೆಯ 56 ಮಂದಿ ಸೇರಿದಂತೆ ಒಟ್ಟಾರೆ 5056 ಮಂದಿ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು. ಅಕ್ಕಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಂದ ಅಪರಾಧಿಗಳು ಬಂದು ಅಪರಾಧ ಕೃತ್ಯ ಎಸಗುವುದುನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಪರಾಧ ವಿಭಾಗದ ನುರಿತ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಜೇಬುಗಳ್ಳರು, ಬ್ಯಾಗ್‌, ಸೂಟ್‌ಕೇಸ್‌ ಕಳ್ಳರು ಹಾಗೂ ಇತರೆ ಕಳವು ಪ್ರಕರಣಗಳ ಅಪರಾಧಿಗಳ ವಿರುದ್ಧ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಮೈಸೂರು ನಗರದ 720 ರೌಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.ಯಾವುದೇ ಅಹಿತಕರ ಘಟನೆ ನಡೆದಲ್ಲಿ ತಕ್ಷಣ ಪೊಲೀಸರು ಆ ಸ್ಥಳಕ್ಕೆ ತೆರಳಲು 40ಕ್ಕೂ ಹೆಚ್ಚು ಗಸ್ತು ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

Advertisement

ಸಿಸಿಟಿವಿ: ದಸರಾ ಭದ್ರತೆಗಾಗಿ ನಗರದಲ್ಲಿ ಈಗಾಗಲೇ ಅಳವಡಿಸಿರುವ ಕಾಯಂ ಸಿಸಿ ಕ್ಯಾಮರಾಗಳ ಜತೆಗೆ ತಾತ್ಕಾಲಿಕವಾಗಿ ಅರಮನೆ, ಬನ್ನಿಮಂಟಪ ಮೈದಾನ, ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗ ಮತ್ತು ಇತರೆ ಸ್ಥಳಗಳಲ್ಲಿ ಒಟ್ಟು 66 ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು, ದಿನದ 24ಗಂಟೆಗಳ ಕಾಲ ರೆಕಾರ್ಡ್‌ ಆಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಹಾಯವಾಣಿ: ನಾಡಹಬ್ಬದ ಸಂದರ್ಭದಲ್ಲಿ ಮೈಸೂರಿಗೆ ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲು ನಗರದ 30 ಪ್ರಮುಖ ಸ್ಥಳಗಳಲ್ಲಿ ಪೊಲೀಸ್‌ ಸಹಾಯವಾಣಿಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ವಾಹನ ನಿಲುಗಡೆ ಇಲ್ಲ: ಅರಮನೆ ಸುತ್ತಮುತ್ತಲಿನ ರಸ್ತೆಗಳು, ನ್ಯೂ ಸಯ್ನಾಜಿರಾವ್‌ ರಸ್ತೆ, ಬಿ.ಎನ್‌.ರಸ್ತೆ, ಬನುಮಯ್ಯ ರಸ್ತೆ, ತ್ಯಾಗರಾಜ ರಸ್ತೆಗಳಲ್ಲಿ ಸೆ.21ರಿಂದ 30ರವರೆಗೆ ಏಕ ಮುಖ ಸಂಚಾರ ವ್ಯವಸ್ಥೆ ಮಾಡಲಾಗಿದ್ದು, ಈ ರಸ್ತೆಗಳ ಬದಿಗಳಲ್ಲಿ ಮಧ್ಯಾಹ್ನ 3 ರಿಂದ ರಾತ್ರಿ 10ಗಂಟೆವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಭಾರೀ ವಾಹನದಟ್ಟಣೆ ಉಂಟಾಗುತ್ತಿರುವುದರಿಂದ ಈ ವರ್ಷ ಪ್ರಾಯೋಗಿಕವಾಗಿ ಆಹಾರ ಮೇಳ ಹಾಗೂ ಯುವ ದಸರಾ ನಡೆಯುವ ಸ್ಥಳಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಯಶಸ್ವಿಯಾದರೆ ಮುಂದಿನ ವರ್ಷ ಎಲ್ಲ ಸ್ಥಳಗಳಲ್ಲೂ ವಾಹನ ನಿಲುಗಡೆ ನಿಷೇಧಿಸಲಾಗುವುದು ಎಂದರು.

ಡಿ.ದೇವರಾಜ ಅರಸು ರಸ್ತೆಯಲ್ಲಿ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ ಆಯೋಜಿಸಿರುವುದರಿಂದ ಸೆ.26ರ ರಾತ್ರಿ 9ಗಂಟೆಯಿಂದ ಸೆ.27ರ ರಾತ್ರಿ 10ಗಂಟೆವರೆಗೆ ಈ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ತಿಳಿಸಿದರು. ಡಿಸಿಪಿಗಳಾದ ವಿಕ್ರಂ ಆಮಟೆ, ವಿಷ್ಣುವರ್ಧನ ಸುದ್ದಿಗೋಷ್ಠಿಯಲ್ಲಿದ್ದರು.

ಬೆಟ್ಟಕ್ಕೆ ಖಾಸಗಿ ವಾಹನ ಪ್ರವೇಶ ನಿರ್ಬಂಧ: ದಸರಾ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಚಾಮುಂಡಿಬೆಟ್ಟಕ್ಕೆ ಬರುವುದರಿಂದ ಬೆಟ್ಟದಲ್ಲಿ ಸಂಚಾರ ವ್ಯವಸ್ಥೆ ಹದಗೆಡುವುದನ್ನು ತಪ್ಪಿಸಲು ಸೆ.22 ರಿಂದ 24 ಹಾಗೂ ಸೆ.28ರಿಂದ ಅ.2ರವರೆಗೆ ಪ್ರತಿ ದಿನ ಬೆಳಗ್ಗೆ 6ರಿಂದ ರಾತ್ರಿ 9.30ರವರೆಗೆ ಖಾಸಗಿ ವಾಹನಗಳನ್ನು ತಾವರೆಕಟ್ಟೆಯಿಂದ ಚಾಮುಂಡಿಬೆಟ್ಟಕ್ಕೆ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ.

ಲಲಿತಮಹಲ್‌ ಹೆಲಿಪ್ಯಾಡ್‌ ಬಳಿಯಿಂದ ಚಾಮುಂಡಿ ಬೆಟ್ಟಕ್ಕೆ ಉಚಿತ ಸಾರಿಗೆ ಬಸ್ಸುಗಳ ಸೇವೆ ಕಲ್ಪಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ನಗರ ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next