Advertisement

ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಅಖಂಡ ಭಜನೆ: 500ನೆಯ ಸಂಭ್ರಮ

11:24 PM May 27, 2019 | sudhir |

2018ರ ಜನವರಿ 18ರ ಮುಂಜಾವ ಶ್ರೀಕೃಷ್ಣಮಠದ ಕನಕಗೋಪುರ ಬಳಿ ಆರಂಭಗೊಂಡ ನಿರಂತರ ಭಜನೆ 2020ರ ಜನವರಿ 17ರ ಮಧ್ಯರಾತ್ರಿವರೆಗೆ ಮುಂದುವರಿಯುತ್ತದೆ. ಜೂ. 1ರಂದು 500ನೆಯ ದಿನಕ್ಕೆ ಈ ಭಜನ ಆಂದೋಲನ ಕಾಲಿಡುತ್ತಿದೆ. ಇದೇ ವೇಳೆ ಶ್ರೀಕೃಷ್ಣನ ಗರ್ಭಗುಡಿಗೆ ಸುವರ್ಣ ಗೋಪುರ ಸಮರ್ಪಣೆಯೂ ನಡೆಯುತ್ತಿದೆ.

Advertisement

ಉಡುಪಿ: ಉಡುಪಿಯ ಶ್ರೀಕೃಷ್ಣ ಅನ್ನಬ್ರಹ್ಮ, ಪಂಢರಪುರದ ವಿಟuಲ ನಾದಬ್ರಹ್ಮ, ತಿರುಪತಿಯ ತಿಮ್ಮಪ್ಪ ಕಾಂಚನ ಬ್ರಹ್ಮ ಎನ್ನುವುದು ಲೋಕರೂಢಿ. ವಿಟuಲನ ಸನ್ನಿಧಿಯಲ್ಲಿ ನಡೆಯುವ ನಿರಂತರ ತಾಳ, ಭಗವಂತನ ಸಂಕೀರ್ತನೆ ಈ ಎರಡು ವರ್ಷಗಳಲ್ಲಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ನಡೆಯುತ್ತಿದೆ.

2018ರ ಜನವರಿ 18ರ ಬೆಳಗ್ಗೆ 6 ಗಂಟೆಗೆ ಆರಂಭಗೊಂಡ ನಿರಂತರ ಭಜನೆ ಅಖಂಡ ವಾಗಿ ಮುಂದುವರಿಯುತ್ತಿದೆ. ಇದು 2020ರ ಜನವರಿ 17ರ ಮಧ್ಯರಾತ್ರಿವರೆಗೆ ನಡೆಯಲಿದೆ. ಇಷ್ಟೊಂದು ಸುದೀರ್ಘ‌ ಅವಧಿ ಸಂಕೀರ್ತನೆ ನಡೆದಿರಲಾರದು. ಹೀಗಾಗಿ ಇದು ಗಿನ್ನೆಸ್‌ ದಾಖಲೆಗೆ ಸೇರ್ಪಡೆಗೊಳಿಸಲು ಅರ್ಹವಾದ ಒಂದು ಈವೆಂಟ್‌.

ಶ್ರೀಕೃಷ್ಣಮಠದಲ್ಲಿ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಎರಡನೆಯ ಪರ್ಯಾಯ ಪೂಜೆಯನ್ನು ನಡೆಸುವ ಸಂದರ್ಭದಲ್ಲಿ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ತಿರುಮಲ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್, ಮಂತ್ರಾಲಯದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್, ಉಡುಪಿ ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟ ಸಹಕಾರ ನೀಡುತ್ತಿರುವ ಸಂಸ್ಥೆಗಳು.

ಕನಕದಾಸರು ಇದ್ದು ಭಜಿಸಿದ ಸ್ಥಳದ ಸಮೀಪದಲ್ಲಿ ಕನಕ ಗೋಪುರವಿದ್ದು ಅದರ ಪಕ್ಕದಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ನಿತ್ಯ ಆರು ಭಜನ ಮಂಡಳಿಗಳು ಎರಡೆರಡು ಗಂಟೆಗಳಿಗೊಮ್ಮೆ ಪಾಳಿಯಂತೆ ಹರಿ ಸಂಕೀರ್ತನೆ ನಡೆಸುತ್ತವೆ. ಮೂರು ದಿನಗಳ ಬಳಿಕ ಇನ್ನು ಆರು ತಂಡಗಳು ಬರುತ್ತವೆ. ಹೀಗೆ ನಡೆಯುತ್ತಲೇ ಇದೆ…

Advertisement

ನಿತ್ಯ ಬೆಳಗ್ಗೆ 6 ಗಂಟೆಯಿಂದ 8 ಗಂಟೆವರೆಗೆ ಮಧ್ವ ಮಂಟಪದಲ್ಲಿ ಸುಪ್ರಭಾತವಿರುತ್ತದೆ. ಇದರಲ್ಲಿ ವಿವಿಧ ದೇವತೆಗಳು, ಗುರುಗಳು, ದಾಸರನ್ನು ಸ್ಮರಿಸುವ ಶ್ಲೋಕಗಳನ್ನು ಪಠಿಸುತ್ತಾರೆ. ಒಂದು ಭಜನ ತಂಡ ಭಜನೆ ಹಾಡುತ್ತಿದ್ದರೆ, ಉಳಿದ ಐದು ತಂಡಗಳು ಸುಪ್ರಭಾತದಲ್ಲಿ ಪಾಲ್ಗೊಳ್ಳುತ್ತವೆ. ಪ್ರತಿ ತಂಡ ಎರಡೆರಡು ಗಂಟೆಗೊಮ್ಮೆ ಪಾಳಿಯನ್ನು ಬದಲಾಯಿಸುತ್ತವೆ. ಬೆಳಗ್ಗೆ 6ರಿಂದ 8 ಗಂಟೆ ವರೆಗೆ ಭಜನೆ ಮಾಡಿದ ತಂಡ ಮತ್ತೆ ಸಂಜೆ 6ರಿಂದ 8 ಗಂಟೆವರೆಗೆ ಭಜನೆ ಮಾಡುತ್ತದೆ. ಏತನ್ಮಧ್ಯೆ ಪಲಿಮಾರು ಮಠದ ಸಭಾಂಗಣದಲ್ಲಿ 10ರಿಂದ 11 ಗಂಟೆವರೆಗೆ ತಣ್ತೀಚಿಂತನೆಯನ್ನು ಪಂಡಿತರಾದ ವೇದವ್ಯಾಸ ಪುರಾಣಿಕ ಮತ್ತು ಸಂಜೆ 3ರಿಂದ 4 ಗಂಟೆವರೆಗೆ ಶ್ರೀರಂಗದ ಸರಸ್ವತಿ ಶ್ರೀಪತಿಯವರು ನಡೆಸಿಕೊಡುತ್ತಾರೆ.

ನಿರಂತರ ಭಜನ ಕಾರ್ಯಕ್ರಮದ ಭಜನ ಮಂಡಳಿಗಳ ಜೋಡಣೆ, ಸಂಪರ್ಕ, ಮಾರ್ಗದರ್ಶನ ಇತ್ಯಾದಿಗಳನ್ನು ದಾವಣಗೆರೆ ಮಹಾನಗರಪಾಲಿಕೆ ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಮೂಲತಃ ಬಳ್ಳಾರಿ ಕಂಪ್ಲಿಯವರಾದ ಗುರುರಾಜ ಆಚಾರ್ಯ ಮತ್ತು ಅವರ ಪತ್ನಿ ಗೀತಾ ನಡೆಸುತ್ತಿದ್ದಾರೆ. ಈ ದಂಪತಿ ಇದಕ್ಕೋಸ್ಕರ ಉಡುಪಿಯಲ್ಲಿಯೇ ಬಂದು ನೆಲೆಸಿದ್ದಾರೆ. “ಎಷ್ಟೋ ಜನರಿಗೆ ಅವರವರ ಇಚ್ಛೆಗಳು ಈಡೇರಿದ ಬಗ್ಗೆ ಮಾಹಿತಿಗಳು ಬರುತ್ತಿವೆ. ನಮಗೆ ಈ ಅಪೂರ್ವ ಅವಕಾಶವನ್ನು ಶ್ರೀಕೃಷ್ಣ ಮತ್ತು ಶ್ರೀಪಲಿಮಾರು ಸ್ವಾಮೀಜಿಯವರು ಕೊಟ್ಟಿದ್ದಾರೆ’ ಎಂಬ ಧನ್ಯತೆಯನ್ನು ಗುರುರಾಜ ಆಚಾರ್ಯ ಹೊರಗೆಡಹುತ್ತಾರೆ.

ಶ್ರೀಕೃಷ್ಣನ ಅನುಗ್ರಹ
ಶ್ರೀಕೃಷ್ಣನಿಗೆ ನಮ್ಮ ಪರ್ಯಾಯ ಕಾಲದ ಪೂಜೆ ಸಲ್ಲಿಸುವಾಗ ನಿರಂತರ ಭಗವಂತನ ನಾಮಸಂಕೀರ್ತನೆ ನಡೆಯಲಿ ಎಂಬ ಆಶಯದಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡೆವು. ಭಜನಾ ಮಂಡಳಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿವೆ. ನಮ್ಮಿಂದ ಮಾಹಿತಿ ಹೋಗದಿದ್ದರೂ ಅವರಾಗಿಯೇ ಬಂದು ಸೇವೆ ಸಲ್ಲಿಸುತ್ತಿದ್ದಾರೆ. ಕರಾವಳಿ ಮತ್ತು ಘಟ್ಟದ ಮೇಲಿನ ಭಜನ ಮಂಡಳಿಯವರು ಬಂದು ಸೇವೆ ಸಲ್ಲಿಸುತ್ತಿದ್ದಾರೆ. ಬಹಳ ಜನರಿಗೆ ಇದರಿಂದ ಶ್ರೀಕೃಷ್ಣನ ಅನುಗ್ರಹವಾಗಿದೆ.
– ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀಕೃಷ್ಣಮಠ, ಪರ್ಯಾಯ ಶ್ರೀಪಲಿಮಾರು ಮಠ

ಲಕ್ಷ ಸಂಕೀರ್ತನಕಾರರ ಸೇವಾ ದಾಖಲೆ
ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಕೇರಳದ ಕಾಸರಗೋಡು, ಆಂಧ್ರಪ್ರದೇಶ, ತಮಿಳುನಾಡು ಭಾಗಗಳಿಂದ ಭಜನಾ ಮಂಡಳಿಗಳು ಜಾತಿಮತ ಭೇದವಿಲ್ಲದೆ ಬಂದು ನಾದಸೇವೆಯನ್ನು ಸಲ್ಲಿಸುತ್ತಿದ್ದಾರೆ. ನಿರಂತರ ಭಜನೆಯು ಜೂ. 1ಕ್ಕೆ 500ನೆಯ ದಿನಕ್ಕೆ ಕಾಲಿಡುತ್ತಿದೆ. ಇದುವರೆಗೆ ಸುಮಾರು 3,000 ಭಜನ ಮಂಡಳಿಗಳು ಭಾಗವಹಿಸಿವೆ. ಒಂದು ಬಾರಿ ಬಂದ ತಂಡ ಇನ್ನೊಮ್ಮೆ ಬರುವ ಅಗತ್ಯವಿಲ್ಲದಷ್ಟು ಆಸಕ್ತ ಮಂಡಳಿಗಳಿವೆ. ಒಂದೊಂದು ತಂಡದಲ್ಲಿರುವ ಸದಸ್ಯರ ಸಂಖ್ಯೆ ಹೆಚ್ಚು ಕಡಿಮೆ ಇರುತ್ತದೆ. ಸುಮಾರು 25 ಜನರೆಂದುಕೊಂಡರೆ 75,000 ಭಜನ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇನ್ನಾರು ತಿಂಗಳಲ್ಲಿ ಎರಡು ವರ್ಷ ಮುಗಿಯುವಾಗ ಲಕ್ಷ ಕಲಾವಿದರು ಪಾಲ್ಗೊಂಡಂತಾಗುತ್ತದೆ.

ಶಹನಾಜ್‌ ಭಜನಾ ಸೇವೆ
ಶಹನಾಜ್‌ ಗದಗ ಜಿಲ್ಲೆ ನರಗುಂದ ತಾಲೂಕು ತಿರುವಾಳ ಗ್ರಾಮದವರು. ಹುಬ್ಬಳ್ಳಿಯಲ್ಲಿ ಟೈಲರಿಂಗ್‌ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಎರಡು ವರ್ಷಗಳಿಂದ ಇವರಿಗೆ ಭಜನ ಮಂಡಳಿಗಳ ಸಂಪರ್ಕವಿದೆ. ಇವರು ಸ್ವತಃ ಭಜನೆಗಳನ್ನು ಕಲಿತು ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಐದು ತಿಂಗಳ ಹಿಂದೆ ಎರಡು ದಿನವಿದ್ದು ಸಂಕೀರ್ತನ ಸೇವೆ ಸಲ್ಲಿಸಿದರು. ನಾಲ್ಕು ತಿಂಗಳಿಂದ ಹುಬ್ಬಳ್ಳಿಯಲ್ಲಿ ಮೂರು ತಂಡ, ತಿರುವಾಳದಲ್ಲಿ ಒಂದು ತಂಡಕ್ಕೆ ಭಜನ ತರಬೇತಿ ಕೊಡುತ್ತಿದ್ದಾರೆ. ಇವರು ಕಲಿಸಿದ ತಂಡಗಳೂ ಉಡುಪಿಗೆ ಬಂದು ನಾದಸೇವೆ ನೀಡಿವೆ. ಇನ್ನೂ ಎರಡು ತಂಡಗಳನ್ನು ತಯಾರಿಸುವ ಇರಾದೆ ಇದೆ. “ನಮ್ಮ ಊರಿನಲ್ಲಿ ಹಿಂದೂಗಳು, ಮುಸ್ಲಿಮರು ಕೂಡಿ ಬಾಳುತ್ತಿದ್ದೆವು. ನನಗೆ ಹಾಡುವ ಹವ್ಯಾಸವಿತ್ತು. ಭಜನ ಸಂಘಟಕ ಬೆಳಗಾವಿ ಜಿಲ್ಲೆ ರಾಮದುರ್ಗದ ವಿಜಯೇಂದ್ರ ಜೋಷಿಯವರ ಸಂಪರ್ಕವಾದಾಗ ಭಜನೆ ಹೇಳಿಕೊಡಲು ಕೇಳಿದೆ. ಒಪ್ಪಿದರು. ನಾನು ಆರಂಭಿಸಿದ ಒಂದೇ ವಾರದಲ್ಲಿ ನನಗೆ ಇದರ ಉತ್ತಮ ಫ‌ಲಿತಾಂಶ ಸಿಕ್ಕಿದೆ’ ಎನ್ನುತ್ತಾರೆ ಶಹನಾಜ್‌.

ಮಧ್ಯರಾತ್ರಿ ಬಂದ ಮಗು ಯಾರು?
ಕಾಸರಗೋಡು ರಾಮದಾಸ ನಗರದ ಅಯ್ಯಪ್ಪ ಮಂದಿರದ ಬಳಿ ಅಯ್ಯಪ್ಪನ ಹೆಸರು ಹೊತ್ತ “ತಣ್ತೀಮಸಿ’ ಭಜನ ತಂಡದ ಆರು ಸದಸ್ಯೆಯರು ಆರು ತಿಂಗಳ ಹಿಂದೆ ಶ್ರೀಕೃಷ್ಣಮಠದ ನಿರಂತರ ಭಜನೆಗೆ ಬಂದಿದ್ದರು. ಇವರ ಪಾಳಿ ರಾತ್ರಿ 12ರಿಂದ 2 ಗಂಟೆವರೆಗಿತ್ತು. ಇವರು ಭಜನೆಯನ್ನು ಕಲಿಯಲು ಆರಂಭಿಸಿದ್ದಷ್ಟೆ. ಎರಡು ಗಂಟೆ ಕಾಲ ಹಾಡುವಷ್ಟು ಹಾಡುಗಳ ದಾಸ್ತಾನೂ ಇದ್ದಿರಲಿಲ್ಲ. ಮಧ್ಯರಾತ್ರಿಯಾದ ಕಾರಣ ಅಂಗಡಿ ಬದಿಯಲ್ಲಿ ಮಲಗಿದವರನ್ನು ಬಿಟ್ಟರೆ ಬೇರಾರೂ ಇಲ್ಲ. ನಿರ್ಜನ ಪ್ರದೇಶ. ಯಾರೂ ಇಲ್ಲದ ಕಾರಣ ಹಾಡಿಲ್ಲದಿದ್ದರೂ ಹಾಡುವ ಧೈರ್ಯವಿತ್ತು, ಕೇಳುವವರಾರೂ ಇಲ್ಲವಲ್ಲ! ಇವರು ಕನ್ನಡಿ ಮುಚ್ಚಿದ ವೇದಿಕೆಯಲ್ಲಿ “ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡೀರೆನೆ…|’ ಹಾಡುವಾಗ ಹೊರಗೆ ಸುಮಾರು ಮೂರು ವರ್ಷ ಪ್ರಾಯದ ಸ್ವಲ್ಪ ಅಲಂಕಾರ ಮಾಡಿದಂತಿದ್ದ ಮಗುವೊಂದನ್ನು ಕಂಡರು. ಮಗು ಆಚಿಂದ ಈಚೆ, ಈಚಿಂದ ಆಚೆ ಹೋಗುತ್ತಿತ್ತು, ಇವರನ್ನು ಕಂಡು ಮುಗುಳು ನಗುತ್ತಿತ್ತು. ಹಾಡುವವರಿಗೆ ಇದಾವ ಮಗು? ತಂದೆ ತಾಯಿ ಜತೆ ಬಂದ ಮಗುವೋ? ಎಂಬ ಪ್ರಶ್ನೆ ಮನದಲ್ಲಿ ಮೂಡಿತು. ಕೊನೆಗೆ ಅನಂತರದ ಪಾಳಿಯವರು ಬಂದಾಗ ಇವರು ಹೊರಗೆ ಹೋಗಬೇಕು. ಹೊಸ ಪಾಳಿಯವರಿಗೆ ಆ ಮಗು ಕಾಣಲಿಲ್ಲ. ಇವರಿಗೂ ಕಾಣಲಿಲ್ಲ. “ನಾವು ಸೀದಾ ಹೋಗಿ ಕನಕನ ಕಿಂಡಿಯಲ್ಲಿ ದರ್ಶನ ಮಾಡಿ ಧನ್ಯರಾದೆವು. ನಾವು ಹೊಸಬರಾದರೂ ಆ ಎರಡು ಗಂಟೆ ಹೇಗೆ ಹಾಡಿದೆವೋ ಗೊತ್ತಿಲ್ಲ. ನಾವು ಊರಿಗೆ ಹೋದ ಬಳಿಕ ನಮಗೆ ಭಜನೆ ಹೇಳಿಕೊಡುವ ವಿಷ್ಣುಮಂಗಲ ಕ್ಷೇತ್ರದ ವೀಣಾ ಅವರ ಮನೆಗೆ ಹೋಗಿ ನೋಡುವಾಗ ಅವರ ಮನೆಯಲ್ಲಿ ಕೃಷ್ಣನ ಚಿತ್ರವಿತ್ತು. ಇದೇ ರೀತಿಯ ಮಗುವನ್ನು ಅಲ್ಲಿ ಕಂಡೆವು ಎಂದು ಭಾಸವಾಯಿತು. ಈಗಲೂ ವಾರಕ್ಕೊಮ್ಮೆ ಅವರ ಮನೆಗೆ ತರಗತಿಗೆ ಹೋದಾಗ ಆ ಚಿತ್ರ ನೋಡದೆ ಸಮಾಧಾನವೇ ಇಲ್ಲ’ ಎನ್ನುತ್ತಾರೆ ತಂಡದಲ್ಲಿ ಹಾಡಿದ ಸದಸ್ಯರಾದ ರತ್ನಾ, ಶಾಂಭವಿ, ಪುಷ್ಪಾವತಿ, ಪದ್ಮಿನಿ, ದೀಪಾ, ಚಂದ್ರಾವತಿ.

Advertisement

Udayavani is now on Telegram. Click here to join our channel and stay updated with the latest news.

Next