Advertisement

ವರ್ಷಕ್ಕೆ 50ರಷ್ಟು ಜೀವಗಳು ಬಲಿ; ಹೆದ್ದಾರಿಯದ್ದೇ ಸಿಂಹಪಾಲು

12:12 AM Mar 31, 2019 | sudhir |

ಉಡುಪಿ: ಪಾದಚಾರಿಗಳ ಸುರಕ್ಷೆ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ ಎಂಬುದನ್ನು ಅಂಕಿ ಅಂಶ ಸಾದರಪಡಿಸುತ್ತಿವೆ. ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂಡಿರುವ ಪಾದಚಾರಿಗಳ ಸಂಖ್ಯೆ 91. ಇದರಲ್ಲಿ ಶೇ.80ರಷ್ಟು ಅಪಘಾತಗಳು ರಾ.ಹೆದ್ದಾರಿ 66ರಲ್ಲೇ ಸಂಭವಿಸಿವೆ !

Advertisement

ಚತುಷ್ಪಥಗೊಂಡು ಮೇಲ್ದರ್ಜೆ ಗೇರಿದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದಿನನಿತ್ಯವೆಂಬಂತೆ ಪಾದಚಾರಿಗಳ ಸಾವು/ಗಾಯ ಪ್ರಕರಣಗಳು ವರದಿಯಾಗುತ್ತಿವೆ. ಪಾದಚಾರಿಗಳು ದಾಟುವುದಕ್ಕೆಂದು ಸುರಕ್ಷಿತ ಸ್ಥಳಗಳನ್ನು ಗುರುತಿಸದಿರುವುದು. ಫ್ಲೈ ಓವರ್‌, ಸಿಗ್ನಲ್‌ ಲೈಟ್‌ಗಳು ಇಲ್ಲದಿರುವುದು ಈ ಅಪಘಾತಗಳಿಗೆ ಪ್ರಮುಖ ಕಾರಣ. ಮಾತ್ರವಲ್ಲದೆ, ಈ ಹಿಂದೆ ಕಿರಿದಾಗಿದ್ದ ರಸ್ತೆಯಲ್ಲಿ ವಾಹನಗಳು ಕೆಲವೆಡೆ ಕಡಿಮೆ ವೇಗದಲ್ಲಿ ಸಾಗುತ್ತಿದ್ದವು. ಆದರೆ ಈಗ ವೇಗ ಹೆಚ್ಚಿಸಿಕೊಂಡಿವೆ.

ಹಿಂದಿನ ಅಂದಾಜಿನಲ್ಲೇ ರಸ್ತೆ ದಾಟಲೆಂದು ಮುನ್ನುಗ್ಗುವ ಅನೇಕ ಮಂದಿ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ.

ಭಯವಿಲ್ಲ
ವಾಹನ ಢಿಕ್ಕಿ ಹೊಡೆಸಿ ಅನಂತರ ವಾಹನ ನಿಲ್ಲಿಸದೆ ಹೋಗುವ (ಹಿಟ್‌ ಆ್ಯಂಡ್‌ ರನ್‌) ಪ್ರಕರಣಗಳು ಕೂಡ ಅಧಿಕವಾಗಿವೆ. ಕೆಲವೊಮ್ಮೆ ಅಪಘಾತವುಂಟಾದ ಸ್ಥಳದಲ್ಲಿ ಯಾರು ಕೂಡ ವಾಹನದ ನಂಬರ್‌ನ್ನು ಗಮನಿಸದಿರುವುದರಿಂದ, ನಂಬರ್‌ ಪ್ಲೇಟ್‌ ಇಲ್ಲದ ಅಥವಾ ಇದ್ದರೂ ಅದು ಕೂಡಲೆ ಗುರುತಿಸಲಾಗದ ಸ್ಥಿತಿಯಲ್ಲಿರುವುದರಿಂದ ತಪ್ಪೆಸಗಿದ ಚಾಲಕರನ್ನು ಪತ್ತೆಹಚ್ಚುವುದು ಕೂಡ ಕಷ್ಟಸಾಧ್ಯವಾಗುತ್ತದೆ. ವಿಮೆಯ ಹಣವೂ ದೊರೆಯದ ಸ್ಥಿತಿ ಉಂಟಾಗುತ್ತಿದೆ.

91 ಮಂದಿ ಸಾವು; 223 ಗಂಭೀರ !
ಉಡುಪಿ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದೆರಡು ವರ್ಷಗಳಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ ಒಟ್ಟು 91 ಮಂದಿ ಪಾದಚಾರಿಗಳು ಸಾವನ್ನಪ್ಪಿದ್ದಾರೆ.

Advertisement

2017ರಲ್ಲಿ 50 ಮಂದಿ, 2018ರಲ್ಲಿ 41 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 25 ಮಂದಿ ಮಹಿಳೆಯರು. ಎರಡು ವರ್ಷಗಳಲ್ಲಿ 223 ಮಂದಿ ಪಾದಚಾರಿಗಳು ಗಂಭೀರ ಗಾಯಗೊಂಡಿದ್ದಾರೆ.

ತಿಂಗಳಲ್ಲಿ 6 ಸಾವು
ಮಾರ್ಚ್‌ ತಿಂಗಳೊಂದರಲ್ಲೇ ಉಡುಪಿ ಮತ್ತು ಸುತ್ತಲಿನ ಹೆದ್ದಾರಿಯಲ್ಲಿ 6 ಮಂದಿ ಪಾದಚಾರಿಗಳು ವಾಹನ ಢಿಕ್ಕಿಯಾಗಿ ಸಾವನ್ನಪ್ಪಿದ್ದಾರೆ.
ಮಾ. 4: ರಾ.ಹೆದ್ದಾರಿ 169ಎಯ ಕಡಿಯಾಳಿಯಲ್ಲಿ ರಿಕ್ಷಾ ಢಿಕ್ಕಿ ಹೊಡೆದು ಮಹಿಳೆ ಸಾವು.

ಮಾ. 6: ರಾ.ಹೆದ್ದಾರಿ66ರ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದ ಬಳಿ ಟೆಂಪೋ ಢಿಕ್ಕಿ ಹೊಡೆದು ಓರ್ವ ಸಾವು .

ಮಾ. 8: ರಾ.ಹೆದ್ದಾರಿ 66ರ ಹನುಮಂತನಗರದಲ್ಲಿ ಅಪರಿಚಿತ ವಾಹನ ಢಿಕ್ಕಿ ಹೊಡೆದು ಓರ್ವ ಸಾವು.

ಮಾ.13: ರಾಷ್ಟ್ರೀಯ ಹೆದ್ದಾರಿ 66ರ ಪುತ್ತೂರು ಜಂಕ್ಷನ್‌ ಬಬ್ಬುಸ್ವಾಮಿ ದೈವಸ್ಥಾನದ ಬಳಿ ಬೈಕ್‌ ಢಿಕ್ಕಿ ಹೊಡೆದು ಓರ್ವನಿಗೆ ಗಾಯ
ಮಾ. 16: ರಾ.ಹೆದ್ದಾರಿ 169ಎಯ ಮಣಿ ಪಾಲದಲ್ಲಿ ರಿಕ್ಷಾ ಢಿಕ್ಕಿ

ಹೊಡೆದು ಮಹಿಳೆ ಸಾವು
ಮಾ. 21: ರಾ.ಹೆದ್ದಾರಿ 66ರ ಮೂಳೂರು ನರ್ಸರಿ ಬಳಿ ಕಾರು ಢಿಕ್ಕಿಯಾಗಿ ಓರ್ವ ಸಾವು, ರಾ.ಹೆದ್ದಾರಿ 169ಎ ಎಂಜಿಎಂ ಬಳಿ ಕಾರು ಢಿಕ್ಕಿ ಹೊಡೆದು ಓರ್ವನಿಗೆ ಗಂಭೀರ ಗಾಯ.

ಮಾ. 22: ರಾ.ಹೆದ್ದಾರಿ 66ರ ಪಡುಬಿದ್ರಿ ಬಂಟರ ಭವನದ ಬಳಿ ಸ್ಕೂಟಿ ಢಿಕ್ಕಿಯಾಗಿ ಓರ್ವ ಸಾವು.

ಮಾ. 26: ರಾ.ಹೆದ್ದಾರಿ 66ರ ಸಂತೆಕಟ್ಟೆಯಲ್ಲಿ ಬೈಕ್‌ ಢಿಕ್ಕಿ ಹೊಡೆದು ಓರ್ವನಿಗೆ ಗಾಯ.

ಸುರಕ್ಷಾ ಕ್ರಮಕ್ಕೆ ಸಮೀಕ್ಷೆ
ಹೆದ್ದಾರಿಯಲ್ಲಿ ಹಂಪ್ಸ್‌ಗಳನ್ನು ಅಳವಡಿಸಲು ಅವಕಾಶವಿಲ್ಲ. ಪಾದಚಾರಿಗಳ ಸುರಕ್ಷತೆ ಸೇರಿದಂತೆ ಹೆದ್ದಾರಿಯಲ್ಲಿ ಸುರಕ್ಷೆಗಾಗಿ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಸಮೀಕ್ಷೆ ನಡೆಸಲಾಗುತ್ತಿದೆ. ಸಿಗ್ನಲ್‌ ಲೈಟ್‌ಗಳು ಸೇರಿದಂತೆ ಅವಶ್ಯ ಕ್ರಮಕ್ಕೆ ಬೇಕಾಗುವ ಪರಿಕರಗಳ ಕುರಿತು ಹೆದ್ದಾರಿ ಪ್ರಾಧಿಕಾರಕ್ಕೆ ಕೊಟೇಷನ್‌ ಕಳುಹಿಸಲಾಗಿದೆ. ಹೆದ್ದಾರಿ ಮೇಲ್ದರ್ಜೆಗೇರಿರುವುದರಿಂದ ವಾಹನಗಳ ವೇಗ ಹೆಚ್ಚು ಎಂಬುದನ್ನು ಪಾದಚಾರಿಗಳು ಕೂಡ ಗಮನಿಸಬೇಕು.
-ನಿಶಾ ಜೇಮ್ಸ್‌, ಎಸ್‌ಪಿ ಉಡುಪಿ

ತಿಳಿವಳಿಕೆ ನೀಡಿ
ಹೆದ್ದಾರಿಯನ್ನು ದಾಟುವವರಿಗೆ, ಮುಖ್ಯವಾಗಿ ಒಬ್ಬಂಟಿಯಾಗಿ ದಾಟುವ ಹಿರಿಯರಿಗೆ ಮನೆಯವರು ಸೂಕ್ತ ತಿಳಿವಳಿಕೆ/ ಎಚ್ಚರಿಕೆ ನೀಡಬೇಕು. ಹಿರಿಯರು ಏಕಾಂಗಿಯಾಗಿ ರಸ್ತೆ ದಾಟುವ ಬದಲು ಇನ್ನೋರ್ವರ ಸಹಾಯ ಪಡೆದೇ ದಾಟಬೇಕು. ಮನೆಯವರು ನಿಗಾ ವಹಿಸಬೇಕು. ಕೆಲವು ಜಂಕ್ಷನ್‌ಗಳಲ್ಲಿಯಾದರೂ ಪಾದಚಾರಿಗಳು ದಾಟಲು ಅಗತ್ಯ ಸೌಕರ್ಯ ಒದಗಿಸಬೇಕು. ನಿರ್ಲಕ್ಷ್ಯದ ವಾಹನ ಚಾಲನೆ ವಿರುದ್ಧ ಪೊಲೀಸರು ಕಠಿನ ಕ್ರಮ ಕೈಗೊಳ್ಳಬೇಕು. ಮದ್ಯಪಾನಿಗಳು ರಸ್ತೆ ಬದಿ ತೂರಾಡುವುದು, ಮಲಗುವುದು ಕೂಡ ಅಪಾಯಕಾರಿ. ಹೆದ್ದಾರಿ ಕಾಮಗಾರಿಯನ್ನು ಸಮ ರ್ಪಕವಾಗಿ ಪೂರ್ಣಗೊಳಿಸಬೇಕು. ರಸ್ತೆ ದಾಟುವ, ರಸ್ತೆಯಲ್ಲಿ ನಡೆದಾಡುವ ಬಗ್ಗೆ ಸಾರ್ವಜನಿಕ ಜಾಗೃತಿ/ತಿಳಿವಳಿಕೆ ಕಾರ್ಯಕ್ರಮ ನಡೆಯಬೇಕು.
– ವಿಶು ಶೆಟ್ಟಿ ಅಂಬಲಪಾಡಿ, ಸಮಾಜ ಸೇವಕರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next