Advertisement

ವಿಠ್ಠಲನ ಪಾದ ಸೇರಿದ ಐವರು ಯಾತ್ರಿಕರು

11:02 PM Nov 08, 2019 | Lakshmi GovindaRaju |

ಬೆಳಗಾವಿ: ಕಾರ್ತಿಕ ಏಕಾದಶಿಯಂದು ಪಂಢರಪುರದ ಶ್ರೀ ವಿಠ್ಠಲನ ದರ್ಶನಕ್ಕೆ ಹೊರಟಿದ್ದ ಬೆಳಗಾವಿ ತಾಲೂಕಿನ ಐವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸಾಂಗೋಲಾ ಬಳಿ ದುರ್ಘ‌ಟನೆ ಸಂಭವಿಸಿದೆ.

Advertisement

ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದ ಕೃಷ್ಣಾ ವಾಮನ ಕಣಬರಕರ (50), ಮಹಾದೇವ ಮಲ್ಲಪ್ಪ ಕಣಬರಕರ (48), ಲಕ್ಷ್ಮಣ ಅಂಬೇವಾಡಿಕರ (50), ಅರುಣ ದತ್ತಾ ಮುತಗೇಕರ (38) ಹಾಗೂ ಹಂಗರಗಾ ಗ್ರಾಮದ ಟೆಂಪೋ ಚಾಲಕ ಅದಾ ದೇವಪ್ಪ ಪಾಟೀಲ(44) ಮೃತರು. ಇತರ ಏಳು ಜನ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತಿ ವರ್ಷದಂತೆ ಕಾರ್ತಿಕ ಏಕಾದಶಿಗೆ ಪಂಢರಪುರಕ್ಕೆ ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಾರೆ. ಮಂಡೋಳಿಯಿಂದ ಗುರುವಾರ ರಾತ್ರಿ ಟೆಂಪೋ ವಾಹನ ಹೊರಟಿತ್ತು. ಸೊಲ್ಲಾಪುರ ಜಿಲ್ಲೆಯ ಸಾಂಗೋಲಾ ಬಳಿ ನಸುಕಿನ ಜಾವ 4 ಗಂಟೆ ಸುಮಾರಿಗೆ ಇಟ್ಟಿಗೆ ತುಂಬಿಕೊಂಡು ಹೊರಟ ಟ್ರಾಕ್ಟರ್‌ಗೆ ಹಿಂದಿನಿಂದ ಟೆಂಪೋ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದೊಳಗೆ ಸಿಕ್ಕಿ ಹಾಕಿಕೊಂಡಿದ್ದ ಮೃತದೇಹಗಳನ್ನು ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು.

ತಕ್ಷಣ ಸ್ಪಂದಿಸಿದ ಹೆಬ್ಬಾಳಕರ: ಅಪಘಾತ ಸಂಭವಿಸುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಸೊಲ್ಲಾಪುರದ ಶಾಸಕಿ ಪ್ರಣತಿ ಶಿಂಧೆ ಹಾಗೂ ಕೊಲ್ಲಾಪುರ ಶಾಸಕ ಬಂಟಿ ಪಾಟೀಲ ಅವರಿಗೆ ಕರೆ ಮಾಡಿ, ಮಾಹಿತಿ ಕಲೆ ಹಾಕಿ, ಸಹಾಯ ಕೋರಿದರು. ಶಾಸಕಿ ಶಿಂಧೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಎಲ್ಲ ವ್ಯವಸ್ಥೆ ಮಾಡಿ ಮೃತದೇಹಗಳನ್ನು ಊರಿಗೆ ತರಲಾಗಿದೆ ಎಂದು ಶಾಸಕಿ ಹೆಬ್ಬಾಳಕರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next