ಮೈಸೂರು: ನಾವು ಚಿಕ್ಕೋರಿದ್ದಾಗ ಒಂದ್ ಸಾರಿ ಕುಂಭಮೇಳದಲ್ಲಿ ಅಗಸೆöೕಶ್ವರ ಸ್ವಾಮಿ ದೇವಸ್ಥಾನದಿಂದ ನಡುಗಡ್ಡೆವರೆಗೆ ನಿರ್ಮಿಸಿದ್ದ ಮರದ ತಾತ್ಕಾಲಿಕ ಸೇತುವೆ ಮುರಿದು, ನೀರಲ್ಲಿ ಕೊಚ್ಚಿಕೊಂಡು ಹೋಗಿ ಒಂದಿಬ್ಬರಿಗೆ ಗಾಯಗಳಾಗಿತ್ತು. ಅವರನ್ನು ರಕ್ಷಿಸಿದ್ದರು. ಅದು ಬಿಟ್ಟರೆ ಇನ್ಯಾವಾಗಲೂ ಅವಘಡ ಸಂಭವಿಸಿಲ್ಲ. ಕುಂಭಮೇಳ ಸಂದರ್ಭ ಮಾತ್ರವಲ್ಲ, ಬೇರೆ ದಿನಗಳಲ್ಲೂ ಭಕ್ತರು ಇಲ್ಲಿ ಬಂದು ಪುಣ್ಯಸ್ನಾನ ಮಾಡಲು ಬರುತ್ತಾರೆ. ಆದರೆ, ಇಲ್ಲಿ ವಸತಿ ವ್ಯವಸ್ಥೆ ಇಲ್ಲದಿರುವುದರಿಂದ ಯಾರು ಉಳಿಯುವುದಿಲ್ಲ ಎನ್ನುತ್ತಾರೆ ಇಲ್ಲಿ ತೆಪ್ಪ ಓಡಿಸುವ ಶಾಂತರಾಜು.
ನನಗಿದು 11ನೇ ಕುಂಭಮೇಳ: ಉದಯವಾಣಿ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡ ಈಜುಗಾರ ರಾದ ಮಹೇಶ್ ನನಗಿದು 6ನೇ ಕುಂಭಮೇಳ, ಶ್ರೀನಿವಾಸ ನನಗೆ 9ನೇ ಕುಂಭಮೇಳ ಇದು. ನಾವು ಇಲ್ಲಿಯೇ ತೆಪ್ಪ ಓಡಿಸಿಕೊಂಡು ಜೀವನ ಸಾಗಿಸುತ್ತೇವೆ. ಕುಂಭಮೇಳ ಆರಂಭವಾದಾಗಿ ನಿಂದಲೂ ನೋ ಡುತ್ತಾ ಬಂದಿದ್ದು, ನನಗಿದು 11ನೇ ಕುಂಭಮೇಳ.
ಅಪಾಯಕ್ಕೆ ಸಿಲುಕಿದವರ ರಕ್ಷಣೆ: ಈ ಮೂರು ದಿನಗಳ ಕಾಲ ನಮ್ಮನ್ನು ಇಲ್ಲಿ ಪುಣ್ಯಸ್ನಾನಕ್ಕೆ ನದಿಗೆ ಇಳಿಯುವ ಭಕ್ತರ ಸುರಕ್ಷತೆ ನೋಡಿಕೊಳ್ಳಲು 43 ಜನ ಈಜುಗಾರರನ್ನು ನಿಯೋಜಿಸಿದ್ದಾರೆ. ನದಿಯಲ್ಲಿ ನಾಲ್ಕೂವರೆಯಿಂದ ಐದು ಅಡಿಗಳಷ್ಟು ನೀರಿದೆ. ಹೀಗಾಗಿ ಯಾವುದೇ ಅಪಾಯವಿಲ್ಲ. ಆದರೂ ಹೆಂಗಸರು, ಮಕ್ಕಳು, ವಯಸ್ಸಾದವರು ನದಿಗೆ ಇಳಿಯುವುದರಿಂದ ಅವರ ಬಗ್ಗೆ ಎಚ್ಚರವಹಿಸಬೇಕಿದೆ. ಯಾರಿಗಾದರೂ ತೊಂದರೆ ಯಾಗಿ ಅಪಾಯಕ್ಕೆ ಸಿಲುಕಿದರೆ ಅವರ ರಕ್ಷಣೆ ಮಾಡುವುದು ನಮ್ಮ ಕೆಲಸ.
ಸ್ವಚ್ಛತೆ ಬಗ್ಗೆ ಅರಿವು: ಬೆಳಗ್ಗೆ 4 ಗಂಟೆಯಿಂದಲೇ ಜನ ಸ್ನಾನ ಮಾಡಿ ಹೋಗುತ್ತಿದ್ದಾರೆ. ಈಗೀಗ ಶೇ.60ರಷ್ಟು ಭಕ್ತರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಬಂದಿದೆ. ಮೊದಲೆಲ್ಲಾ ಹಾಕಿರುವ ಬಟ್ಟೆ, ಮನೆಯಲ್ಲಿಂದ ಹಳೆಯ ಹೂವುಗಳನ್ನೆಲ್ಲಾ ತಂದು ನದಿಯಲ್ಲಿ ಬಿಡುತ್ತಿದ್ದರು. ಈಗಲೂ ತಂದು ನದಿಗೆ ಬಿಡುವವರಿದ್ದಾರೆ. ಆದರೆ, ಪ್ರಮಾಣ ಕಡಿಮೆ. ಆ ರೀತಿ ಹಳೇ ಬಟ್ಟೆ, ಹೂವುಗಳನ್ನು ನದಿಗೆ ಬಿಡದಂತೆ ಅವರಿಂದ ಪಡೆದುಕೊಂಡು ಬೆಂಕಿ ಹಾಕಿ ಸುಟ್ಟು ಬಿಡುತ್ತೇವೆ.
ವಿವಿಧ ರಾಜ್ಯದಿಂದ ಭಕ್ತರ ಆಗಮನ: ಪ್ರತಿ ನಿತ್ಯ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಶನಿವಾರ, ಭಾನುವಾರ, ಸರ್ಕಾರಿ ರಜಾ ದಿನಗಳಲ್ಲಿ ಆಂಧ್ರ ಪ್ರದೇಶ, ತಮಿಳುನಾಡಿನಿಂದ ಹೆಚ್ಚು ಜನ ಬರು ತ್ತಾರೆ. ಕ್ಷೇತ್ರಕ್ಕೆ ಬರುವ ಪ್ರವಾಸಿಗರನ್ನು ತೆಪ್ಪದಲ್ಲಿ ಸಂಗಮಕ್ಕೆ ಕರೆದೊಯ್ಯುತ್ತೇವೆ. ಇಷ್ಟೇ ಕೊಡಿ ಎಂದು ಕೇಳುವುದಿಲ್ಲ, ಅವರು ಕೊಟ್ಟಷ್ಟು ಪಡೆ ಯುತ್ತೇವೆ. ಸಂಗಮದಲ್ಲಿ ಸ್ನಾನ ಮಾಡಿದ ಭಕ್ತರು ರುದ್ರಪಾದ, ನಂದಿಗೆ ಪೂಜೆ ಸಲ್ಲಿಸಿ ಬರುತ್ತಾರೆ. ಇಲ್ಲಿ ವಸತಿ ವ್ಯವಸ್ಥೆ ಇಲ್ಲದಿರುವುದರಿಂದ ಕ್ಷೇತ್ರಕ್ಕೆ ಬಂದವರು ಸ್ನಾನ, ಪೂಜೆ ಮುಗಿಸಿ ಹೊರಟು ಬಿಡುತ್ತಾರೆ.
ಸೇತುವೆ ನಿರ್ಮಾಣ: ಈ ವರ್ಷ ಮಿಲಿಟರಿ ಯವರು ಗುಂಜಾ ನರಸಿಂಹಸ್ವಾಮಿ ದೇವಾಲಯದ ಮೆಟ್ಟಿಲುಗಳಿಂದ ನಡುಗಡ್ಡೆವರೆಗೆ ತೇಲುವ ಸೇತುವೆ ನಿರ್ಮಿಸಿರುವುದರಿಂದ ಭಕ್ತರಿಗೆ ತುಂಬಾ ಅನುಕೂಲವಾಗಿದೆ. ಇಲ್ಲದಿದ್ದರೆ ಬಳಸಿ ಕೊಂಡು ಬರಬೇಕಾಗಿತ್ತು ಎನ್ನುತ್ತಾರೆ.
* ಗಿರೀಶ್ ಹುಣಸೂರು