ಕಲಬುರಗಿ: ಭಾರತೀಯ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರ 41 ನೇ ರಾಜ್ಯ ಸಮ್ಮೇಳನ ಇದೇ ಫೆ. 10 ರಿಂದ ಮೂರು ದಿನಗಳ ಕಾಲ ಇಲ್ಲಿನ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜ್ ನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಭಾರತದ ಶಸ್ತ್ರಚಿಕಿತ್ಸಕರ ಸಂಘದ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಆಯೋಜಿಸಲಾಗಿರುವ ಸಮ್ಮೇಳನದಲ್ಲಿ 1500 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಾ ತಜ್ಞ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದು 41ನೇ ಸಮ್ಮೇಳನದ ಸಂಘಟನಾ ಅಧ್ಯಕ್ಷರು ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ಎಸ್. ಆರ್. ಹರವಾಳ ಹಾಗೂ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ರಾಜಶೇಖರ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭಾರತೀಯ ಶಸ್ತ್ರಚಿಕಿತ್ಸಾ ವೈದ್ಯರ ಕಲಬುರಗಿ ಜಿಲ್ಲಾ ಘಟಕದ ಕಲಬುರಗಿ ನಗರ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜ್ ಸಮ್ಮೇಳನದ ಆತಿಥ್ಯ ವಹಿಸಿಕೊಂಡಿದ್ದು, ಸಮ್ಮೇಳನದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅದರಲ್ಲೂ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಆಗಿರುವ ತಾಂತ್ರಿಕ ಬೆಳವಣಿಗೆ ಹಾಗೂ ವೈದ್ಯಕೀಯ ಸೇವೆ ಗುಣಮಟ್ಟತೆ ಕುರಿತಾಗಿ ಬೆಳಕು ಚೆಲ್ಲಲಿದೆ ಎಂದು ವಿವರಣೆ ನೀಡಿದರು.
ಕೊವಿಡ್ ಹಿನ್ನೆಲೆ ಕಳೆದ ಮೂರು ವರ್ಷಗಳಿಂದ ಸಮ್ಮೇಳನ ಆಯೋಜಿರಲಿಲ್ಲ. ಈಗ ಸಮ್ಮೇಳನ ಆಯೋಜಿಸಿದ್ದರಿಂದ ಸಮ್ಮೇಳನಕ್ಕೆ ವಿದೇಶಗಳಿಂದಲೂ ತಜ್ಞ ವೈದ್ಯರು ಪಾಲ್ಗೊಳ್ಳುತ್ತಿದ್ದು, ಎಲ್ಲ ಸಿದ್ದತೆಗಳು ಭರದಿಂದ ಸಾಗಿವೆ ಎಂದು ಹೇಳಿದರು.
Related Articles
ಅಖಿಲ ಭಾರತ ಶಸ್ತ್ರಚಿಕಿತ್ಸಾ ವೈದ್ಯರ ಸಂಘದ ಅಧ್ಯಕ್ಷ ಡಾ. ಸಂಜಯಕುಮಾರ ಜೈನ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಂಸದ ಡಾ. ಉಮೇಶ್ ಜಾಧವ, ಎಚ್ಕೆಇ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ, ಭಾರತೀಯ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರ ಸಂಘದ ಹಿಂದಿನ ಅಧ್ಯಕ್ಷ ಡಾ. ಜಿ. ಜಗದೀಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಶಸ್ತ್ರಚಿಕಿತ್ಸಾ ವೈದ್ಯಕೀಯ ವಿಭಾಗದಲ್ಲಿ ಬದಲಾವಣೆ ಹಾಗೂ ಆತ್ಮವಿಶ್ವಾಸದೆಡೆಗೆ ಶಸ್ತ್ರಚಿಕಿತ್ಸಾ ವೈದ್ಯರು ಎಂಬ ವಿಷಯದಲ್ಲಿ 300 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ ಎಂದು ಡಾ.ಎಸ್. ಆರ್. ಹರವಾಳ ಹಾಗೂ ಡಾ. ರಾಜಶೇಖರ ಪಾಟೀಲ್ ತಿಳಿಸಿದರು.
ಸಮ್ಮೇಳನದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಡಾ. ಸುರೇಶ್ ಪಾಟೀಲ್, ಡೀನ್ ಎಸ್. ಎನ್. ಪಾಟೀಲ್, ಡಾ.ಶಾಂತಾ ಪಾಟೀಲ್ ಸೇರಿದಂತೆ ಮುಂತಾದವರಿದ್ದರು.