Advertisement

ಗರ್ಭಿಣಿ-ಮಕ್ಕಳ ಆರೈಕೆಗಾಗಿ 40 ಬೆಡ್‌

05:40 PM May 20, 2021 | Team Udayavani |

ಬೆಳಗಾವಿ: ಕೋವಿಡ್‌ -19 ಸಾಂಕ್ರಾಮಿಕ ರೋಗದ ತುರ್ತು ಸಂದರ್ಭದಲ್ಲಿ ಕೆಎಲ್‌ಇ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಶನ್‌ ಆ್ಯಂಡ ರಿಸರ್ಚ (ಡೀಮ್ಸ್‌ ವಿಶ್ವವಿದ್ಯಾಲಯ), ಜೆಎನ್‌ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಡಾ. ಪ್ರಭಾಕರ ಕೋರೆ ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ಈ ಭಾಗದ ಜನರಿಗೆ ಎಲ್ಲ ರೀತಿಯ ಸೇವೆ ನೀಡಲು ಬದ್ಧವಾಗಿದ್ದು, ಗರ್ಭಿಣಿ ಮತ್ತು ಮಕ್ಕಳ ಆರೈಕೆಗಾಗಿ 40 ಬೆಡ್‌ ಮೀಸಲಿಡಲಾಗಿದೆ.

Advertisement

ಈ ಸಂಬಂಧ ಜೆಎನ್‌ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಸಭೆಯಲ್ಲಿ ಆಸ್ಪತ್ರೆಯ ತಜ್ಞವೈದ್ಯರೊಂದಿಗೆ ಕೋವಿಡ್‌ ಸಾಂಕ್ರಾಮಿಕ ರೋಗದ ನಿಯಂತ್ರಣ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಚರ್ಚಿಸಿದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಕೋವಿಡ್‌ ಸೊಂಕಿಗೆ ಒಳಗಾಗುತ್ತಿರುವ ಗರ್ಭಿಣಿಯರ ಆರೈಕೆಗಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ 20 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ ಹಾಗೂ ಲೇಬರ್‌ ರೂಮ್‌ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಇದಲ್ಲದೆ ಸಂಭವನೀಯ ಮೂರನೇ ಅಲೆಗೆ ಮಕ್ಕಳು ಬಳಲಲಿದ್ದಾರೆ ಎಂದು ಅಂದಾಜಿಸಲಾಗಿದ್ದು, ಮಕ್ಕಳ ಚಿಕಿತ್ಸೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಕ್ರಮವಹಿಸಲಾಗಿದೆ.

ಮಕ್ಕಳ ತಜ್ಞವೈದ್ಯರು ಚಿಕಿತ್ಸೆ ನೀಡಲು ಸಿದ್ದವಾಗಿದ್ದು ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಸಮೇತ ತೀವ್ರ ನಿಗಾ ಘಟಕದ 20 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ ಪ್ರಾರಂಭಿಸಲಾಗಿದೆ. ಕೊರೊನಾ ಸೋಂಕಿಗೆ ತುತ್ತಾಗಿ ರೋಗಲಕ್ಷಣವಿಲ್ಲದ ಹಾಗೂ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿರುವವರು ಮನೆಯಲ್ಲಿ ಪ್ರತ್ಯೇಕವಾಗಿರಲು ಆಮ್ಲಜನಕದ ಅಗತ್ಯವಿಲ್ಲ. ಅದಕ್ಕಾಗಿ ನಗರದ ಲಿಂಗರಾಜ ಮಹಾವಿದ್ಯಾಲಯದ ಆವರಣದಲ್ಲಿರುವ ವಸತಿ ನಿಲಯದಲ್ಲಿ ಕೆಎಲ್‌ಇ ಸ್ವಶಕ್ತಿ ಸಂಘವು ಕೋವಿಡ್‌ ಕೇರ್‌ ಕೇಂದ್ರವನ್ನು ಪ್ರಾರಂಭಿಸಿದ್ದು ಇಲ್ಲಿ ದಿನದ 24 ಗಂಟೆಗಳ ಕಾಲ ವೈದ್ಯರ ಸೇವೆ ಲಭ್ಯವಿದೆ.

ಕೋವಿಡ್‌ ಸೋಂಕಿನ ತೀವ್ರತೆ ನಡುವೆ ಬ್ಲ್ಯಾಕ್‌ ಫಂಗಸ್‌ (ಕಪ್ಪು ಶಿಲೀಂದ್ರ)ದಿಂದ ಬಳಲುತ್ತಿರುವವರ ಸಂಖ್ಯೆಯೂ ಅಧಿಕಗೊಳ್ಳುತ್ತಿದೆ. ಈ ಸಮಸ್ಯೆ ಕಂಡು ಬಂದ ರೋಗಿಗಳ ಚಿಕಿತ್ಸೆಗಾಗಿಯೇ 20 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ ಸ್ಥಾಪಿಸಲಾಗಿದೆ. ಎರಡನೇ ಅಲೆಯಲ್ಲಿ ಕೋವಿಡ್‌ ರೋಗಿಗಳಿಗೆ ಆಮ್ಲಜನಕ ಹಾಗೂ ವೆಂಟಿಲೇಟರಗಳ ಅವಶ್ಯಕತೆ ಬಹಳಷ್ಟಿದೆ. ಅವಶ್ಯಕತೆಗೆ ಅನುಗುಣವಾಗಿ ಆಮ್ಲಜಕವನ್ನು ಪಡೆದುಕೊಳ್ಳಲು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಆವರಣದಲ್ಲಿ 2500 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಅಗತ್ಯವಿದ್ದಷ್ಟು ಆಮ್ಲಜಕ ಯಾವುದೇ ತೊಂದರೆಯಿಲ್ಲದೇ ಸಿಗಲಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ತಿಳಿಸಿದ್ದಾರೆ.

ಕೋವಿಡ್‌-19 ಸೋಂಕಿಗೆ ಒಳಗಾದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಸೇವೆಗೆ ಜೊತೆಗೆ ಆಸ್ಪತ್ರೆಯ ಆವರಣದಲ್ಲಿ ಕೋವಿಡ್‌ ಕೇರ್‌ ಕ್ಲಿನಿಕ್‌ ಅನ್ನು ಪ್ರಾರಂಭಿಸಲಾಗಿದೆ. ತೀವ್ರತರ ಲಕ್ಷಣವಿಲ್ಲದವರು ಹಾಗೂ ಮನೆಯಲ್ಲಿ ಪ್ರತ್ಯೇಕವಾಗಿದ್ದು, (ಐಸೊಲೇಶನ್‌) ಚಿಕಿತ್ಸೆಗೆ ಒಳಗಾಗಲು ಬಯಸುವ ಕೋವಿಡ್‌ ರೋಗಿಗಳಿಗೆ ಗುಣಮಟ್ಟದ ಸೂಕ್ತ ಚಿಕಿತ್ಸೆ ಹಾಗೂ ಸೇವೆಯನ್ನು ಕಲ್ಪಿಸಲಾಗುತ್ತದೆ. ನುರಿತ ಶ್ವಾಸಕೋಶ ತಜ್ಞವೈದ್ಯರು ದೂರವಾಣಿ ಮೂಲಕ ಆಪ್ತಸಮಾಲೋಚನೆ ಹಾಗೂ ಚಿಕಿತ್ಸೆ ನೀಡುತ್ತಿದ್ದಾರೆ.

Advertisement

ಈ ಸಂದರ್ಭದಲ್ಲಿ ಆಸ್ಪತ್ರೆಯು ಸಹಾಯವಾಣಿಯನ್ನು ಪ್ರಾರಂಭಿಸಿದ್ದು ತುರ್ತು ಸಂದರ್ಭದಲ್ಲಿ 1099 ಗೆ ಸಂಪರ್ಕಿಸಲು ತಿಳಿಸಲಾಗಿದೆ. ಸಭೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್‌ ಎಸ್‌ ಮಹಾಂತಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ ವಿ ಜಾಲಿ, ಉಪಪ್ರಾಚಾರ್ಯ ಡಾ. ವಿ ಎಂ ಪಟ್ಟಣಶೆಟ್ಟಿ, ಡಾ. ರಾಜೇಶ ಪವಾರ, ವೈದ್ಯಕೀಯ ಅದೀಕ್ಷಕ ಡಾ. ಆರಿಫ್‌ ಮಾಲ್ದಾರ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next