Advertisement

4 ತಾಲೂಕಲ್ಲೂ ಕೋವಿಡ್‌ ಕೇಂದ್ರ: ಸಚಿವ

10:45 AM Jul 12, 2020 | Suhan S |

ರಾಮನಗರ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕೋವಿಡ್‌-19 ಕೇರ್‌ ಸೆಂಟರ್‌ ಸ್ಥಾಪಿಸುವಂತೆ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ. ಎನ್‌.ಅಶ್ವಥನಾರಾಯಣ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

Advertisement

ಶುಕ್ರವಾರ ಸಂಜೆ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಕೋವಿಡ್‌ 19 ಸ್ಥಿತಿ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ನಡೆದ ಸಭೆಯಲ್ಲಿ ಮಾತನಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ಮೊದಲು ನೀಡಿದ್ದ ಸೂಚನೆಯಂತೆ ಜಿಲ್ಲೆಯಲ್ಲಿ 500 ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ ತಾಲೂಕಿನಲ್ಲಿ ಯೂ ತಲಾ 500 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಲು ನೀಲ ನಕ್ಷೆ ಮತ್ತು ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡಿರುವುದಾಗಿ ತಿಳಿಸಿದರು.

ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಯಾವ ಲೋಪಗಳಿಗೂ ಅವಕಾಶವಾಗದಂತೆ ಕೇಂದ್ರಗಳನ್ನು ನಿರ್ವಹಿಸಿ, ಪ್ರತಿ ತಾಲೂಕು ಕೇಂದ್ರಗಳಲ್ಲಿ ಕನಿಷ್ಠ 2-3 ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿಕೊಳ್ಳಿ, ರೋಗಿಗಳಿಗೆ ಆಕ್ಸಿಜನ್‌ ವ್ಯವಸ್ಥೆ, ಆಕ್ಸಿಜನ್‌ ಅಳೆಯುವ ಸಾಧನ ಸಿದ್ಧವಾಗಿರಲಿ ಎಂದರು.

ಟ್ರೂನಾಟ್‌ ಸಾಧನಕ್ಕೆ ಸಚಿವರ ಸಲಹೆ: ಜಿಲ್ಲಾಸ್ಪತ್ರೆಯ ನೂತನ ಕಟ್ಟಡದಲ್ಲಿ ಸ್ಥಾಪಿಸಿರುವ ಕೋವಿಡ್‌ 19 ಸೋಂಕು ಪತ್ತೆ ಹಚ್ಚುವ ಪ್ರಯೋಗಾಲಯದಲ್ಲಿ ಮಾದರಿಗಳ ಪರೀಕ್ಷೆ ಆರಂಭವಾಗಿರುವ ಬಗ್ಗೆ ಸಚಿವರು ಮಾಹಿತಿ ಪಡೆದರು. ಟ್ರೂನಾಟ್‌ ಪರೀಕ್ಷಾ ಸಾಧನ ಅಳವಡಿಸಿಕೊಂಡರೆ ಒಂದೆರೆಡು ಗಂಟೆಗಳಲ್ಲೇ ಗಂಟಲು ದ್ರವ ಪರೀಕ್ಷೆ ಫ‌ಲಿತಾಂಶ ಲಭ್ಯವಾಗಲಿದೆ ಎಂದು ಸಲಹೆ ನೀಡಿದರು. ಜಿಪಂ ಸಿಇಒ ಇಕ್ರಂ ಮುಂಬೈನಿಂದ ಈ ಸಾಧನಗಳು ಸದ್ಯದಲ್ಲೇ ಬರಲಿದೆ ಎಂದರು. ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರುವವರಿಗೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಿ ಎಂದು ಸೂಚಿಸಿದರು.

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಅನೂಪ್‌ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಜಿಲ್ಲಾ ಆರೋಗ್ಯ ಅಧಿಕಾರಿ ನಿರಂಜನ್‌ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next