Advertisement

Electricity: 4.68 ಲಕ್ಷ ವಿದ್ಯುತ್‌ ಮೀಟರ್‌ ಬದಲಾವಣೆ

09:12 AM Sep 22, 2023 | Team Udayavani |

ಬೆಳ್ತಂಗಡಿ: ಹತ್ತಾರು ವರ್ಷಗಳ ಹಿಂದಿನ ವಿದ್ಯುತ್‌ ಮೀಟರ್‌ಗಳ ಕಾರ್ಯಕ್ಷಮತೆ ಕೊರತೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ 4.68 ಲಕ್ಷದಷ್ಟು ಹೊಸ ಮೀಟರ್‌ ಗಳನ್ನು ಅಳವಡಿಸಲು ಮೆಸ್ಕಾಂ ಮುಂದಾಗಿದೆ.

Advertisement

2 ವರ್ಷ ಹಿಂದೆಯೇ ಹಳೆಯ ಮೀಟರ್‌ಗಳ ಸಮಸ್ಯೆಯ ಅರಿವಿದ್ದರೂ ಏಕಕಾಲದಲ್ಲಿ ಹೊಸ ಮೀಟರ್‌ಗಳು ಸರಬರಾಜು ಆಗದಿರುವುದರಿಂದ ಬದಲಾವಣೆ ಸಾಧ್ಯವಾಗಿರಲಿಲ್ಲ. ಆ ಕಾರಣಕ್ಕೆ ಗ್ರಾಹಕರಿಗೆ ಸರಾಸರಿ ಬಿಲ್‌ ನೀಡಲಾಗುತ್ತಿತ್ತು. ಇದು ಕೆಲವು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದರೆ, ಮಿತಿಮೀರಿ ವಿದ್ಯುತ್‌ ಬಳಸುವ ಕೆಲವು ಗ್ರಾಹಕರಿಂದಾಗಿ ಮೆಸ್ಕಾಂಗೂ ನಷ್ಟವಾಗುತ್ತಿತ್ತು.

ಸ್ಟಾಟಿಕ್‌ ಮೀಟರ್‌

ಈ ಹಿಂದಿನ ಮೆಕ್ಯಾನಿಕಲ್‌ (ಚಕ್ರದಂತೆ ಸುತ್ತುವ) ಮೀಟರ್‌ ಗಳು ಬಹುತೇಕ ಕೆಟ್ಟುಹೋಗಿದ್ದವು. ಗ್ರಾಹಕ 100 ಯುನಿಟ್‌ ಬಳಸಿದರೆ ಸರಾಸರಿ 95 ಯುನಿಟ್‌ ಮಾತ್ರ ಅದರಲ್ಲಿ ದಾಖಲಾಗುತ್ತಿತ್ತು. ಇದರಿಂದ ಮೆಸ್ಕಾಂಗೆ ಯುನಿಟ್‌ ಲೆಕ್ಕಾಚಾರದಲ್ಲಿ ಕೊಂಚ ನಷ್ಟವಾಗುತ್ತಿತ್ತು. ಈ ಕಾರಣದಿಂದ ಮೆಕ್ಯಾನಿಕಲ್‌ ಮೀಟರ್‌ಗಳನ್ನು ತೆರವುಗೊಳಿಸಿ ಸ್ಟಾಟಿಕ್‌ ಮೀಟರ್‌ ಅಳವಡಿಸಲಾಗುತ್ತಿದೆ. ಇದು ಬಳಕೆಯಾದ ವಿದ್ಯುತ್ತನ್ನು ನಿಖರವಾಗಿ ಯುನಿಟ್‌ ದಾಖಲಿಸುತ್ತದೆ.

ಗೃಹಜ್ಯೋತಿಗೆ ಪೂರಕ

Advertisement

ರಾಜ್ಯ ಸರಕಾರವು ಗೃಹಜ್ಯೋತಿ ಉಚಿತ ವಿದ್ಯುತ್‌ ಯೋಜನೆ ಜಾರಿಗೊಳಿಸಿದ್ದು, ಹೆಚ್ಚಿನ ಗ್ರಾಹಕರು ಆಗಸ್ಟ್‌ನಿಂದ ಫ‌ಲಾನುಭವಿಗಳಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಬಿಲ್‌ ಪಾವತಿಸಿದ ಹಾಗೂ ನಿಗದಿತ ಮಿತಿಯೊಳಗೆ ವಿದ್ಯುತ್‌ ಬಳಸಿದ ಗ್ರಾಹಕರಿಗೆ ಶೂನ್ಯ ಬಿಲ್‌ ನೀಡಲಾಗುತ್ತಿದೆ. ಹೊಸ ಸ್ಟಾಟಿಕ್‌ ಮೀಟರ್‌ಗಳಲ್ಲಿ ಸರಿಯಾದ ಯೂನಿಟ್‌ಗಳ ಲೆಕ್ಕಾಚಾರ ಸಿಗುವ ಕಾರಣ ಇದರಿಂದ ಗೃಹಜ್ಯೋತಿಗೆ ಅನುಕೂಲವಾಗಲಿದೆ.

ಹೊಸ ಮೀಟರ್‌ ಅಳವಡಿಕೆ

ಮಂಗಳೂರು ವಿಭಾಗ-7,441 ಕಾವೂರು ಉಪವಿಭಾಗ-6,589 ಬಂಟ್ವಾಳ ಉಪವಿಭಾಗ-4,584 ಪುತ್ತೂರು ಉಪವಿಭಾಗ-2,945 ದ.ಕ.ದಲ್ಲಿ ಒಟ್ಟು 21,559 ಉಡುಪಿ ಜಿಲ್ಲೆಯ ಉಡುಪಿ, ಮಣಿಪಾಲ, ಕಾರ್ಕಳ, ಕಾಪು, ಕುಂದಾಪುರ, ಬ್ರಹ್ಮಾವರ, ಬೈಂದೂರು, ಹೆಬ್ರಿ, ಶಂಕರನಾರಾಯಣ, ಕೊಲ್ಲೂರು, ಕೋಟ, ನಿಟ್ಟೆ ಉಪವಿಭಾಗಗಳಲ್ಲಿ ಒಟ್ಟು 70 ಸಾವಿರ ಸ್ಟಾಟಿಕ್‌ ಮೀಟರ್‌ಗಳಿಗೆ ಬೇಡಿಕೆ ಇದ್ದು, 26,000 ಮೀಟರ್‌ ಅಳವಡಿಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಸೌರಶಕ್ತಿ ಉತ್ಪಾದಕರಿಗೆ ಸಿಗದ ರಿಯಾಯಿತಿ

ಮನೆಗಳಲ್ಲಿ ಸೌರಫಲಕ ಅಳವಡಿಸಿ ವಿದ್ಯುತ್‌ ಉತ್ಪಾದಿಸಿ ಮಿಕ್ಕಿದ್ದನ್ನು ಮೆಸ್ಕಾಂಗೆ ಕೊಡುತ್ತಿರುವ ಗ್ರಾಹಕರು ಗೃಹಜ್ಯೋತಿಯಿಂದ ವಂಚಿತರಾಗಿದ್ದಾರೆ. ವಿದ್ಯುತ್‌ ಕೊರತೆ ನೀಗಿಸುವಲ್ಲಿ ಇವರದು ಬಹುದೊಡ್ಡ ಪಾತ್ರವಾಗಿದ್ದರೂ ಸರಕಾರ ಅವರನ್ನು ಗೃಹಜ್ಯೋತಿಯಿಂದ ಹೊರಗಿಟ್ಟಿದೆ. ಜತೆಗೆ ಈವರೆಗೆ ಬಿಲ್‌ನಲ್ಲಿ ನೀಡಲಾಗುತ್ತಿದ್ದ 50 ರೂ. ರಿಯಾಯಿತಿಯನ್ನು ಹೊಸ ಟ್ಯಾರಿಫ್‌ನಲ್ಲಿ ಕೈಬಿಡಲಾಗಿದೆ. ಮೆಸ್ಕಾಂ ಜತೆ 25 ವರ್ಷಗಳ ಕರಾರು ಮಾಡಿಕೊಂಡಿರುವುದರಿಂದ ಸಂಪರ್ಕ ಕಡಿತಗೊಳಿಸಲೂ ಆಗದ ಪರಿಸ್ಥಿತಿ ಗ್ರಾಹಕರದಾಗಿದೆ. ಈ ಕುರಿತು ಸರಕಾರ ಗಮನಹರಿಸಬೇಕು ಎಂದು ಬೆಳ್ತಂಗಡಿ ತಾಲೂಕಿನ ವೇಣೂರಿನ ಗ್ರಾಹಕ ಗಣೇಶ್‌ ಪೂಜಾರಿ ಆಗ್ರಹಿಸಿದ್ದಾರೆ.

ಈ ಹಿಂದೆ 2018ರಿಂದ 2020ರ ಅವಧಿಯಲ್ಲಿ ಕೇಂದ್ರ ಸರಕಾರದ INTEGRATED POWER DEVELOPMENT SCHEME (ಐಪಿಡಿಎಸ್‌) ಯೋಜನೆಯಡಿ ದ.ಕ. ಜಿಲ್ಲೆಯ ಸುಮಾರು 1.50 ಲಕ್ಷ, ಉಡುಪಿ ಜಿಲ್ಲೆಯ 1 ಲಕ್ಷಕ್ಕೂ ಅಧಿಕ ಮೀಟರ್‌ಗಳ ಬದಲಾವಣೆ ಮಾಡಲಾಗಿತ್ತು.

ಜಿಲ್ಲೆಗೆ ಅಗತ್ಯವಿರುವಷ್ಟು ಸಂಖ್ಯೆಯ ವಿದ್ಯುತ್‌ ಮೀಟರ್‌ ಗಳು ಲಭ್ಯವಿವೆ. ಮೆಸ್ಕಾಂಗೆ ಸಂಬಂಧಿಸಿದ 4 ಜಿಲ್ಲೆಗಳಲ್ಲಿ 4.68 ಲಕ್ಷ ಮೀಟರ್‌ಗಳ ಬೇಡಿಕೆಯಿದೆ. ಸದ್ಯ ಬೇಡಿಕೆ ಆಧಾರದಲ್ಲಿ ಮೀಟರ್‌ ಪೂರೈಸಲಾಗುತ್ತಿದೆ. – ಪದ್ಮಾವತಿ, ಎಂಡಿ, ಮೆಸ್ಕಾಂ ಮಂಗಳೂರು ­

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next