Advertisement

ಕೃಷಿ ಸಮ್ಮಾನ್‌ಗೆ 36 ಸಾವಿರ ರೈತರ ನೋಂದಣಿ

09:14 PM Jun 25, 2019 | Team Udayavani |

ದೇವನಹಳ್ಳಿ: ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ ಯೋಜನೆಗೆ ಜಿಲ್ಲೆಯಲ್ಲಿ ಭಾರೀ ಪ್ರತಿಕ್ರಿಯೆ ದೊರೆತಿದೆ. ಈವರೆಗೂ ಒಟ್ಟು 36 ಸಾವಿರ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಗಿರೀಶ್‌ ತಿಳಿಸಿದರು. ನಗರದ ಬಿಬಿ ರಸ್ತೆಯಲ್ಲಿರುವ ತಾಲೂಕು ಕೃಷಿ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ರ ಕಚೇರಿ , ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ನಡೆದ ಜಿಲ್ಲಾ ಕೃಷಿಕ ಸಮಾಜದ ಸಭೆಯಲ್ಲಿ ಮಾತನಾಡಿದರು.

Advertisement

ಯೋಜನೆಗೆ ರೈತರಿಂದ ಭಾರೀ ಪ್ರತಿಕ್ರಿಯೆ: ಈಗಾಗಲೇ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ ಯೋಜನೆ ರೈತರನ್ನು ಆಕರ್ಷಿಸಿದೆ. ಆನ್‌ಲೈನ್‌ ಮುಖಾಂತರ ಸಾಕಷ್ಟು ಅರ್ಜಿಗಳು ಬರುತ್ತಿವೆ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು ಹಾಗೂ ಸದಸ್ಯರು ಬೆಳೆ ವಿಮೆ ಸಂಬಂಧಿಸಿದಂತೆ ಪ್ರತಿ ರೈತರಿಗೆ ಅರಿವು ಮೂಡಿಸಬೇಕು ಬೆಳೆ ವಿಮೆ ಮಾಡಿಸಿದರೆ ರೈತರು, ಬೆಳೆ ನಷ್ಟವಾದರೆ ವಿಮೆ ಹಣ ಬರುವುದು. ಜಿಲ್ಲೆಯಲ್ಲಿ 3108 ರೈತರು ವಿಮೆ ಮಾಡಿಸಿದ್ದು, ಅದರಲ್ಲಿ 2 ಕೋಟಿ 45 ಲಕ್ಷ ಅನುದಾನ ಬರಲಿದೆ. ಕೃಷಿ ಇಲಾಖೆಯಲ್ಲಿ ಶೇ.75%ರಷ್ಟು ಸಿಬ್ಬಂದಿ ಕೊರತೆ ಇದ್ದರೂ, ಕೃಷಿ ಸಹಾಯಕ ನಿರ್ದೇಶಕರು ಹಾಗೂ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಸಿಬ್ಬಂದಿ ಕೊರತೆಯಿದ್ದರೂ ಕಾರ್ಯನಿರ್ವಹಣೆ: ಈಗಾಗಲೇ ಸಿಬ್ಬಂದಿ ಕೊರತೆ ಇರುವುದರ ಬಗ್ಗೆ ಕೃಷಿ ಸಚಿವರಿಗೆ ಹಾಗೂ ಮೇಲ್‌ ಅಧಿಕಾರಿಗಳಿಗೆ ಪತ್ರ ಬರೆದು ಗಮನಕ್ಕೆ ತರಲಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಎರೆ ಹುಳು ತೊಟ್ಟಿ, ಕಂದಕ ಬದು, ಇಂಗು ಗುಂಡಿ , ಕೃಷಿ ಹೊಂಡಗಳ ನಿರ್ಮಾಣ ಮಾಡಬಹುದು. ಬೆಮಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚಿನ ಕೃಷಿ ಹೊಂಡಗಳನ್ನು ಮಾಡಲಾಗಿದೆ ಎಂದರು.

ಸಿರಿಧಾನ್ಯ ಪ್ರೋತ್ಸಾಹಕ್ಕಾಗಿ ರೈತಸಿರಿ ಕಾರ್ಯಕ್ರಮ: ಸಿರಿದಾನ್ಯಗಳ ಪ್ರೋತ್ಸಾಹಕ್ಕಾಗಿ ರೈತಸಿರಿ ಕಾರ್ಯಕ್ರಮ ರೂಪಿಸಲಾಗಿದ್ದು , ಒಂದು ಎಕೆರೆಗೆ ಹತ್ತು ಸಾವಿರ ರೂ.ಗಳ ಪ್ರೋತ್ಸಾಹ ಧನ, 2 ಕಂತಿನಲ್ಲಿ ನೀಡಲಾಗುವುದು. ಕಳೆದ ಬಾರಿ 150 ಹೆಕ್ಟೇರ್‌ನಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗಿತ್ತು. ಮೆಕ್ಕೆ ಜೋಳಗಳಿಗೆ ಸೆ„ನಿಕ ಹುಳುವಿನ ಕಾಟ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ ರೈತರಲ್ಲಿ ಅದರ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗಿದೆ. ಅಮೆರಿಕದಿಂದ ಭಾರತಕ್ಕೆ ವಲಸೆ ಬಂದಿರುವ ಸೈನಿಕ ಹುಳುವಿನ ಕೀಟ ಬಾಧೆಯು ಪ್ರತಿ ಶತ 12 ರಿಂದ 48 ರಷ್ಟು ತೀವ್ರತೆಯಲ್ಲಿ ಕಾಣಿಸಿಕೊಂಡಿದೆ.

ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು: ಮುಂಗಾರು ಮಳೆ ಪ್ರಾರಂಭವಾಗಿ ರುವುದರಿಂದ ಬಿತ್ತನೆ ಬೀಜ ಮತ್ತು ರಸ ಗೊಬ್ಬರದ ಕೊರತೆ ಇಲ್ಲದಂತೆ ದಾಸ್ತಾನು ಮಾಡಲಾಗಿದೆ. ರಾಗಿ, ಮೆಕ್ಕೆ ಜೋಳ , ಹಲಸಂದಿ, ತೊಗರಿ, ಅವರೆ ಮುಂತಾದ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹಿಸಲಾಗಿದೆ. 196 ಮಿಮೀ ಮಳೆಯ ನಿರೀಕ್ಷೆ ಇದ್ದು, ಅದರಲ್ಲಿ 226 ಮಿಮೀ ಮಳೆ ಆಗಿದೆ. 98 ಕ್ವಿಂಟಲ್‌ ಬಿತ್ತನೆ ಬೀಜವನ್ನು ರೈತರು ಖರೀದಿಸಿದ್ದಾರೆ ಎಂದು ಹೇಳಿದರು.

Advertisement

ಅನುದಾನ ಅಗತ್ಯವಿದೆ: ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್‌.ಆರ್‌.ರವಿಕುಮಾರ್‌ ಮಾತನಾಡಿ, ಮುಂಗಾರು ಮಳೆ ಪ್ರಾರಂಭವಾಗಿರುವುದರಿಂದ ರೈತರಿಗೆ ಸ‌ಕಾಲದಲ್ಲಿ ಬಿತ್ತನೆಯ ಬೀಜ ದೊರೆಯಬೇಕು. ಜಿಲ್ಲಾ ಕೃಷಿಕ ಸಮಾಜದ ಕಟ್ಟಡ ನಿರ್ಮಾಣ ಕಾಮಗಾರಿ ಕೊನೆ ಹಂತದಲ್ಲಿದೆ. ಇನ್ನೂ ಅನುದಾನ ಬೇಕಾಗಿದ್ದು, ಕೃಷಿ ಇಲಾಖೆಯಿಂದ ಅನುದಾನ ಒದಗಿಸಿಕೊಡಬೇಕು. ಕೃಷಿ ಸಚಿವರು, ಸಂಸದರು, ವಿಧಾನ ಪರಿಷತ್‌ ಸದಸ್ಯರು ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಇನ್ನು 35 ಲಕ್ಷ ಅನುದಾನ ಬೇಕಾಗಿದ್ದು ಗುತ್ತಿಗೆ ದಾರರಿಗೆ ಹಣವನ್ನು ನೀಡಿದರೆ ಕಾಮಗಾರಿ ಪೂರ್ಣ ವಾಗುವುದು. ಪ್ರತಿ 3 ತಿಂಗಳಿಗೊಮ್ಮೆ ಸಭೆ ಆದರೆ ಅನುಕೂಲ ವಾಗುವುದು ಎಂದರು.

ತಾಲೂಕು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಮಂಜುನಾಥ್‌ ಮಾತನಾಡಿ, ತೋಟಗಾರಿಕೆ ಇಲಾಖೆ ಯ ಬೆಳೆಗಳ ರೋಗ ಮತ್ತು ಕೀಟಗಳ ನಿಯಂತ್ರಣಕ್ಕಾಗಿ ಸಾಮಾನ್ಯ ವರ್ಗ ರೈತರಿಗೆ ಶೇ.75 ಹಾಗೂ ಎಸ್‌ಸಿ, ಎಸ್‌ಟಿ ಶೇ.90 ಸಸ್ಯ ಸಂರಕ್ಷಣೆ ಔಷಧಿ ಖರೀದಿಸಿದ ರೈತರಿಗೆ ಸಹಾಯ ಧನ ನೀಡಲಾಗುವುದು. ಪಾಲಿ ಹೌಸ್‌, ಹನಿ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಬಿ.ನಾಗರಾಜ್‌, ಖಜಾಂಚಿ ಹೊನ್ನಸಿದ್ದಯ್ಯ, ರಾಜ್ಯ ಪ್ರತಿನಿಧಿ ಕೃಷ್ಣಪ್ಪ, ಜಿಲ್ಲಾ ಪ್ರತಿನಿಧಿ ಹಿಂಡಿಗನಾಳ ಎಚ್‌.ಕೆ. ನಾರಾಯಣ ಗೌಡ, ದೇವನಹಳ್ಳಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶ್ರೀನಿವಾಸ್‌ ಗೌಡ, ಜಿಲ್ಲಾ ರೇಷ್ಮೇ ಇಲಾಖೆ ಉಪ ನಿರ್ದೇಶಕ ಭೈರಾರೆಡ್ಡಿ, ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಮಂಜುಳಾ, ನೆಲಮಂಗಲ ಕೃಷಿ ಸಹಾಯಕ ನಿರ್ದೇಶಕಿ ಸುಶೀಲಮ್ಮ, ಹೊಸಕೋಟೆ ಕೃಷಿ ಸಹಾಯಕ ನಿರ್ದೇಶಕ ನಾಗರಾಜ್‌, ಬೂದಿಗೆರೆ ವಿಎಸ್‌ಎಸ್‌ಎನ್‌ ಅಧ್ಯಕ್ಷ ಶಂಕರಪ್ಪ, ಬೆ„ಚಾಪುರ ಎಮ್‌ ಪಿಸಿಎಸ್‌ ನಿರ್ದೇಶಕ ಪುರುಷೋತಮ್‌ ಕುಮಾರ್‌, ಗ್ರಾಪಂ ಸದಸ್ಯ ಗೋಪಾಲಗೌಡ ಇದ್ದರು. ರವಿಕುಮಾರ್‌ , ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಗಿರೀಶ್‌ ವೀಕ್ಷಿಸುತ್ತಿರುವುದು.

Advertisement

Udayavani is now on Telegram. Click here to join our channel and stay updated with the latest news.

Next