Advertisement

Water: 36.76 ಟಿಎಂಸಿ ನೀರು ಬಿಡಲು ಸಾಧ್ಯವೇ ಇಲ್ಲ: ಕರ್ನಾಟಕ

10:20 PM Aug 24, 2023 | Team Udayavani |

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಗುರುವಾರ ಕರ್ನಾಟಕ ಸರ್ಕಾರ ಅಫಿಡವಿಟ್‌ ಸಲ್ಲಿಸಿದೆ. “36.76 ಟಿಎಂಸಿ ಕಾವೇರಿ ನೀರು ಬಿಡುಗಡೆಗೆ ಬೇಡಿಕೆಯಿಟ್ಟು ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಗೆ ಯಾವುದೇ ಕಾನೂನು ಆಧಾರವಿಲ್ಲ’ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

Advertisement

“ಸಾಮಾನ್ಯ ಮಳೆಗಾಲದ ಅವಧಿಯಲ್ಲಿ ಈ ಪ್ರಮಾಣದ ನೀರು ಬಿಡಬೇಕೆಂಬುದು ವಾಡಿಕೆಯಾಗಿದೆ. ಆದರೆ ಈ ಬಾರಿ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಈ ವರ್ಷ ರಾಜ್ಯವು ಮಳೆನೀರಿನ ಕೊರತೆ ಅನುಭವಿಸುತ್ತಿದೆ’ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖೀಸಲಾಗಿದೆ.

“ಇನ್ನೊಂದೆಡೆ, ಕರ್ನಾಟಕದ ಜಲಾಶಯಗಳಿಂದ ಪ್ರತಿ ದಿನ 24,000 ಕ್ಯೂಸೆಕ್‌ ನೀರು ಬಿಡಬೇಕೆಂದು ತಮಿಳುನಾಡು ಸರ್ಕಾರ ತನ್ನ ಅರ್ಜಿಯಲ್ಲಿ ಬೇಡಿಕೆಯಿಟ್ಟಿದೆ. ಆದರೆ ಇದು ಸಾಮಾನ್ಯ ಮಳೆನೀರಿನ ವರ್ಷಕ್ಕೆ ಆಧಾರವಾಗಿದೆ. ಈ ವರ್ಷ ಮಳೆ ಕೊರತೆ ಆಗಿರುವುದರಿಂದ ಈ ಪ್ರಮಾಣದ ನೀರು ಬಿಡಲು ಸಾಧ್ಯವೇ ಇಲ್ಲ’ ಎಂದು ಕರ್ನಾಟಕ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.
ವಿವಾದದ ಹಿಂದೆ ಡಿ.ಕೆ.ಶಿವಕುಮಾರ್‌: ಇದೇ ವೇಳೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮಾತನಾಡಿ, “ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಕಾವೇರಿ ವಿವಾದ ಮುನ್ನೆಲೆಗೆ ಬಂದಿದೆ. ಮೇಕೆದಾಟು ಜಲಾಶಯ ನಿರ್ಮಾಣವು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿದೆ. ರಾಜಕೀಯ ಲಾಭಕ್ಕಾಗಿ ಕಾವೇರಿ ನದಿ ವಿವಾದ ಮಾಡಲಾಗುತ್ತಿದೆ. ಇದರ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಇದ್ದಾರೆ’ ಎಂದು ಆರೋಪಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next