Advertisement

30 ದಿನ 2 ಚಿತ್ರ  4 ನಾಯಕಿಯರು

01:38 PM Jan 19, 2018 | |

ಒಬ್ಬ ನಟನ ಎರಡು ಸಿನಿಮಾಗಳು ಒಂದೆರಡು ತಿಂಗಳ ಅಂತರದಲ್ಲಿ ಬಿಡುಗಡೆಯಾಗುವುದು ನಿಮಗೆ ಗೊತ್ತಿದೆ. ಆದರೆ, ಈ ಬಾರಿ ನಟಿಯರ ಸರದಿ. ನಾಯಕಿ ನಟಿಯರ ಎರಡೆರಡು ಸಿನಿಮಾಗಳು ಒಂದು ತಿಂಗಳ ಅಂತರದಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ವರ್ಷದ ಆರಂಭದಲ್ಲೇ ಅಭಿಮಾನಿಗಳ ಮುಂದೆ ಬಂದ ಖುಷಿ ನಾಯಕಿಯರದು. ಮುಖ್ಯವಾಗಿ ನಾಲ್ವರು ನಟಿಮಣಿಯರ ಎರಡೆರಡು ಚಿತ್ರಗಳು ಒಂದು ತಿಂಗಳ ಅಂತರದಲ್ಲಿ ತೆರೆಕಾಣುತ್ತಿದೆ. ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್‌, ಕಾವ್ಯಾ ಶೆಟ್ಟಿ ಹಾಗೂ ಹರಿಪ್ರಿಯಾ ಆ ನಾಯಕಿಯರು. ಇಲ್ಲಿನ ಮತ್ತೂಂದು ವಿಶೇಷವೆಂದರೆ ಈ ನಾಲ್ವರು ನಾಯಕಿಯರಲ್ಲಿ ಇಬ್ಬಿಬ್ಬರು ಒಂದೊಂದು ಸಿನಿಮಾಕ್ಕೆ ಸಂಬಂಧಿಸಿದ್ದಾರೆ. “ರಾಜು ಕನ್ನಡ ಮೀಡಿಯಂ’ನಲ್ಲಿ ಆವಂತಿಕಾ ಶೆಟ್ಟಿ ಹಾಗೂ ಆಶಿಕಾ ರಂಗನಾಥ್‌ ನಟಿಸಿದರೆ, “ಸಂಹಾರ’ದಲ್ಲಿ ಕಾವ್ಯಾ ಶೆಟ್ಟಿ ಹಾಗೂ ಹರಿಪ್ರಿಯಾ ನಾಯಕಿಯರು. ಈ ನಾಲ್ವರ ನಟಿಯರ ಸಿನಿಮಾಗಳ ಬಗ್ಗೆ ಒಂದು ರೌಂಡಪ್‌ …

Advertisement

ಸ್ಕೂಲ್‌ನಿಂದ ಬೀಚ್‌ವರೆಗೆ
“ಕ್ರೇಜಿಬಾಯ್‌’ ಚಿತ್ರದ ಮೂಲಕ ಎಂಟ್ರಿಕೊಟ್ಟ ಆಶಿಕಾ ರಂಗನಾಥ್‌, ಈಗ ಕನ್ನಡ ಚಿತ್ರರಂಗದ ಬಿಝಿ ನಟಿ ಎಂದರೆ ತಪ್ಪಿಲ್ಲ. ಸಿನಿಮಾ ಮೇಲೆ ಸಿನಿಮಾ ಒಪ್ಪಿಕೊಳ್ಳುತ್ತಿರುವ ಆಶಿಕಾ ರಂಗನಾಥ್‌ ಅವರ ಎರಡು ಚಿತ್ರಗಳು ಈಗ ಬಿಡುಗಡೆಯ ಹಾದಿಯಲ್ಲಿವೆ. “ರಾಜು ಕನ್ನಡ ಮೀಡಿಯಂ’ ಇಂದು ಬಿಡುಗಡೆಯಾದರೆ, ಶರಣ್‌ ಜೊತೆ ನಟಿಸಿರುವ “ರ್‍ಯಾಂಬೋ-2′ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಒಂದು ತಿಂಗಳ ಅಂತರದಲ್ಲಿ ಎರಡು ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ ಆಶಿಕಾ ಕೂಡಾ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಎರಡು ಚಿತ್ರಗಳ ಪಾತ್ರಗಳು ಕೂಡಾ ಭಿನ್ನವಾಗಿವೆಯಂತೆ.  “ರಾಜು ಕನ್ನಡ ಮೀಡಿಯಂ’ನಲ್ಲಿ ಆಶಿಕಾ ವಿದ್ಯಾ ಎನ್ನುವ ಸ್ಕೂಲ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ತುಂಬಾ ಕ್ಯೂಟ್‌ ಆದ ಪಾತ್ರವಂತೆ. “ರಾಜು ಕನ್ನಡ ಮೀಡಿಯಂ’ನಲ್ಲಿ ನಾನು ಸ್ಕೂಲ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಪಾತ್ರ ನನ್ನ ಹೈಸ್ಕೂಲ್‌ ದಿನಗಳನ್ನು ನೆನಪಿಸಿದ್ದು ಸುಳ್ಳಲ್ಲ. ಯೂನಿಫಾರಂ ಹಾಕಿಕೊಂಡು ಸ್ಕೂಲ್‌ಗೆ ಹೋಗುವ ಸನ್ನಿವೇಶಗಳು ತುಂಬಾ ಮಜಾವಾಗಿತ್ತು. ಇಲ್ಲೊಂದು ಸ್ಕೂಲ್‌ ಡೇಸ್‌ನ ಲವ್‌ಸ್ಟೋರಿಯೂ ಇದೆ.

ಪಾತ್ರ ಚಿಕ್ಕದಾದರೂ ನೆನಪಲ್ಲಿ ಉಳಿಯುವಂತ ಪಾತ್ರ. ಯಶಸ್ವಿ ತಂಡ ಸೇರಿಕೊಂಡು ಈ ಸಿನಿಮಾ ಮಾಡಿದೆ’ ಎಂದು “ರಾಜು ಕನ್ನಡ ಮೀಡಿಯಂ’ ಬಗ್ಗೆ ಹೇಳುತ್ತಾರೆ ಆಶಿಕಾ. ಶರಣ್‌ ನಾಯಕರಾಗಿರುವ “ರ್‍ಯಾಂಬೋ-2′ ಚಿತ್ರದಲ್ಲೂ ಆಶಿಕಾ ನಾಯಕಿ. ಈಗಾಗಲೇ ಚಿತ್ರೀಕರಣ ಮಯಗಿಸಿರುವ ಚಿತ್ರತಂಡ ಮುಂದಿನ ತಿಂಗಳು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಚಿತ್ರದಲ್ಲಿ ಆಶಿಕಾ ಸಖತ್‌ ಬೋಲ್ಡ್‌ ಅಂಡ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ತರಹದ ಪಾತ್ರ ಆಶಿಕಾಗೆ ಸಿಕ್ಕಿರಲಿಲ್ಲವಂತೆ. “ನಾನಿಲ್ಲಿ ತುಂಬಾ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಅದು ಕಾಸ್ಟೂéಮ್‌ನಲ್ಲೂ. ಇದನ್ನು ಗ್ಲಾಮರಸ್‌ ಪಾತ್ರ ಎನ್ನುವಂತಿಲ್ಲ. ಏಕೆಂದರೆ ಆ ಪಾತ್ರವನ್ನು ಡಿಸೈನ್‌ ಮಾಡಿದ ರೀತಿಯೇ ಆಗಿದೆ. ತುಂಬಾ ಬೋಲ್ಡ್‌ ಆಗಿ ಯೋಚನೆ ಮಾಡುವ ಸ್ವತಂತ್ರ ಹುಡುಗಿ. ಯಾರನ್ನೂ ಅವಲಂಭಿಸದೇ ಜೀವನವನ್ನು ತುಂಬಾನೇ ಪ್ರೀತಿಸುವ ಪಾತ್ರ. ನನಗೆ ಈ ಪಾತ್ರ ತುಂಬಾ ಹೊಸದು. ಸಾಮಾನ್ಯವಾಗಿ ಹೀರೋಗಳ ಪಾತ್ರಕ್ಕಷ್ಟೇ ಪ್ರಾಮುಖ್ಯತೆ ಇರುತ್ತದೆ ಎಂಬ ಮಾತಿದೆ. ಆದರೆ, ಈ ಚಿತ್ರದಲ್ಲಿ ನನ್ನ ಪಾತ್ರಕ್ಕೂ ತುಂಬಾ ಪ್ರಾಮುಖ್ಯತೆ ಇದೆ. ಸಿನಿಮಾದುದ್ದಕ್ಕೂ ನನ್ನ ಪಾತ್ರ ಸಾಗಿ ಬರುತ್ತದೆ’ ಎನ್ನುತ್ತಾರೆ ಆಶಿಕಾ.

ಶೆಟ್ರ ಡಬಲ್‌ ಶೇಡ್‌ 
“ರಂಗಿತರಂಗ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಆವಂತಿಕಾ ಶೆಟ್ಟಿ ನಟಿಸಿರುವ ಎರಡು ಚಿತ್ರಗಳು ಕೂಡಾ ಒಂದು ತಿಂಗಳ ಅಂತರದಲ್ಲಿ ತೆರೆಕಾಣುತ್ತಿವೆ. “ರಾಜು ಕನ್ನಡ ಮೀಡಿಯಂ’ ಹಾಗೂ “ರಾಜರಥ’ ಚಿತ್ರಗಳು ಬಿಡುಗಡೆಯಾಗುವ ಮೂಲಕ ಆವಂತಿಕಾ ಅದೃಷ್ಟ ಪರೀಕ್ಷೆಯಾಗಲಿದೆ. ಇಂದು ತೆರೆ ಕಾಣುತ್ತಿರುವ “ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಆವಂತಿಕಾ ಸಾಫ್ಟ್ವೇರ್‌ ಇಂಜಿನಿಯರ್‌ ಆಗಿ ನಟಿಸಿದ್ದಾರೆ. ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ನಾಯಕ ಗುರುನಂದನ್‌ ಹಳ್ಳಿ ಹಿನ್ನೆಲೆಯಿಂದ ಬಂದ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡುವ ಆವಂತಿಕಾ, “ನಾನಿಲ್ಲಿ ಸಾಫ್ಟ್ವೇರ್‌ ಇಂಜಿನಿಯರ್‌ ಆಗಿ ನಟಿಸಿದ್ದೇನೆ. ಈಗ ಕಥೆಯಲ್ಲಿ ಏನೇನು ಬದಲಾವಣೆಯಾಗಿದೆಯೋ ಗೊತ್ತಿಲ್ಲ. ನಟಿಸುವಾಗ ನನಗೆ ಸಾಫ್ಟ್ವೇರ್‌ ಪಾತ್ರವಿತ್ತು’ ಎನ್ನುತ್ತಾರೆ.

ಅದು ಬಿಟ್ಟರೆ ಆವಂತಿಕಾ ನಟಿಸಿರುವ “ರಾಜರಥ’ ಚಿತ್ರ ಕೂಡಾ ಬಿಡುಗಡೆಯ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ಈ ತಿಂಗಳೇ ಬಿಡುಗಡೆಯಾಗಬೇಕಿತ್ತು. ಆದರೆ ಬಿಡುಗಡೆ ಮುಂದೆ ಹೋಗಿದ್ದು, ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲೂ ಆವಂತಿಕಾ ಶೆಟ್ಟಿಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. “ರಂಗಿತರಂಗ’ ತಂಡದೊಂದಿಗೆ ಮತ್ತೂಮ್ಮೆ ಕೆಲಸ ಮಾಡಿದ ಖುಷಿ ಅವರಿಗಿದೆ. “ಖುಷಿ ಖುಷಿಯಾಗಿ “ರಾಜರಥ’ದಲ್ಲಿ ತೊಡಗಿಸಿಕೊಂಡಿದ್ದೇನೆ. 

Advertisement

 ಒಳ್ಳೆಯ ತಂಡ. ಎಲ್ಲರೂ ಪರಿಚಿತರಾದ್ದರಿಂದ ಆರಾಮವಾಗಿ ಕೆಲಸ ಮಾಡಿದ್ದೇನೆ. ನಿರ್ದೇಶಕ ಅನೂಪ್‌, ಈ ಹಿಂದಿನ ಸಿನಿಮಾದ ಒಂಚೂರು ಛಾಯೆ ಇಲ್ಲದಂತೆ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಕಥೆಯಿಂದ ಹಿಡಿದು, ಮೇಕಿಂಗ್‌ವರೆಗೂ ತುಂಬಾ ಭಿನ್ನವಾಗಿದೆ. ಈ ಚಿತ್ರದ ತಾಂತ್ರಿಕ ವರ್ಗ ಕೂಡಾ ತುಂಬಾ ಸ್ಟ್ರಾಂಗ್‌ ಇದೆ. ಇಲ್ಲಿ ನಾನು ಮೇಘಾ ಎನ್ನುವ ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದೇನೆ. ತುಂಬಾ ಮಾಡರ್ನ್ ಆಗಿರುವ ಪಾತ್ರ. ನನ್ನ ಒರಿಜಿನಲ್‌ ಕ್ಯಾರೆಕ್ಟರ್‌ಗೆ ತುಂಬಾ ಭಿನ್ನವಾಗಿರುವ ಪಾತ್ರ ಸಿಕ್ಕಿದ್ದರಿಂದ ನಟಿಸೋದು ಕೂಡಾ ತುಂಬಾ ಸವಾಲಾಗಿತ್ತು’ ಎಂದು ತಮ್ಮ ಪಾತ್ರದ ಬಗ್ಗೆ ಹೇಳುತ್ತಾರೆ. 

ಎಲ್ಲಾ ಓಕೆ, ಆವಂತಿಕಾ ಮುಂದಿನ ಸಿನಿಮಾ ಯಾವುದು ಎಂದು ನೀವು ಕೇಳಿದರೆ “ರಾಜರಥ’ ಬಿಡುಗಡೆಯಾದ ಮೇಲೆ ಮುಂದಿನ ಸಿನಿಮಾ ಎನ್ನುತ್ತಾರೆ. “ಸದ್ಯ ನಾನು “ರಾಜರಥ’ ಚಿತ್ರದ ನಿರೀಕ್ಷೆಯಲ್ಲಿದ್ದೇನೆ. ಆ ಚಿತ್ರ ಬಿಡುಗಡೆಯಾದ ಮೇಲೆ ಮುಂದಿನ ಚಿತ್ರದ ಬಗ್ಗೆ ಯೋಚಿಸುತ್ತೇನೆ’ ಎನ್ನುತ್ತಾರೆ ಆವಂತಿಕಾ.

ಪಾಸಿಟಿವ್‌ ಟು ನೆಗೆಟಿವ್‌
ಕಳೆದ ವರ್ಷ ಹರಿಪ್ರಿಯಾ ಸಂಪೂರ್ಣವಾಗಿ ಚಿತ್ರೀಕರಣದಲ್ಲಿ ಬಿಝಿಯಾಗಿದ್ದರು. ತಮಗೆ ಇಷ್ಟವಾದ ಪ್ರಾಜೆಕ್ಟ್ಗಳನ್ನು ಮಿಸ್‌ಮಾಡಿಕೊಳ್ಳಲು ರೆಡಿಯಿರಲಿಲ್ಲ. ಹಾಗಾಗಿ, ಹರಿಪ್ರಿಯಾ ಒಪ್ಪಿಕೊಂಡ ಸಿನಿಮಾಗಳ ಸುದ್ದಿ ಆಗುತ್ತಲೇ ಇತ್ತು. ಈ ವರ್ಷ ಅವರ ಸಿನಿಮಾಗಳ ಬಿಡುಗಡೆಯ ಭರಾಟೆ ಆರಂಭವಾಗಿದೆ. ಮೊದಲ ಹಂತವಾಗಿ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅದು “ಕನಕ’ ಹಾಗೂ “ಸಂಹಾರ’. ಈ ಎರಡೂ ಚಿತ್ರಗಳಲ್ಲೂ ಹರಿಪ್ರಿಯಾ ಒನ್‌ ಆಫ್ ದಿ ಹೀರೋಯಿನ್‌ ಆಗಿ ನಟಿಸಿದ್ದಾರೆ. “ಕನಕ’ ಚಿತ್ರ ಜನವರಿ 26 ರಂದು ತೆರೆಕಾಣುತ್ತಿದೆ. ದುನಿಯಾ ವಿಜಯ್‌ ನಾಯಕರಾಗಿರುವ ಈ ಚಿತ್ರದಲ್ಲಿ ಹರಿಪ್ರಿಯಾ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅವರ ಗೆಟಪ್‌ ಕೂಡಾ ವಿಭಿನ್ನವಾಗಿದ್ದು, ಇವರ ಭಾಗದ ಚಿತ್ರೀಕರಣ ಉತ್ತರ ಕರ್ನಾಟಕ ಭಾಗದಲ್ಲಿ ನಡೆದಿದೆ. ಅದು ಬಿಟ್ಟರೆ ಹರಿಪ್ರಿಯಾ ನಟಿಸಿರುವ “ಸಂಹಾರ’ ಚಿತ್ರ ಕೂಡಾ ಫೆಬ್ರವರಿ 9 ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಹರಿಪ್ರಿಯಾ ಸಖತ್‌ ಗ್ಲಾಮರಸ್‌ ಅಂಡ್‌ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲೂ ಹರಿಪ್ರಿಯಾ ಒನ್‌ ಆಫ್ ದಿ ನಾಯಕಿ. ಎರಡು ಚಿತ್ರಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಪಾತ್ರ ಸಿಕ್ಕ ಖುಷಿ ಹರಿಪ್ರಿಯಾಗಿದೆ. “ಈಗಾಗಲೇ ನಾನು ನಟಿಸಿದ ತೆಲುಗು ಚಿತ್ರ “ಜೈ ಸಿಂಹ’ ಬಿಡುಗಡೆಯಾಗಿದೆ. ಈಗ “ಕನಕ’ ಹಾಗೂ “ಸಂಹಾರ’ ಬಿಡುಗಡೆಗೆ ರೆಡಿಯಾಗಿದೆ. “ಕನಕ’ದಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. 

ಇಲ್ಲಿ ನಾಯಕ ಹಾಗೂ ನಾನು ಬಾಲ್ಯದಿಂದಲೇ ಒಟ್ಟಿಗೆ ಬೆಳೆದಿರುವ ಪಾತ್ರ. ಡಾ.ರಾಜಕುಮಾರ್‌ ಅವರ ಸಿನಿಮಾಗಳನ್ನು ನೋಡಿ, ಆ ಸಿನಿಮಾಗಳ ಪ್ರೇರಣೆಯೊಂದಿಗೆ ಮುನ್ನಡೆಯುವ ಪಾತ್ರ. ತುಂಬಾ ವಿಭಿನ್ನವಾಗಿದೆ. ತುಂಬಾ ಇಷ್ಟಪಟ್ಟು ಒಪ್ಪಿಕೊಂಡ ಸಿನಿಮಾವಿದು. ಇನ್ನು, “ಸಂಹಾರ’ ಚಿತ್ರದಲ್ಲಿ ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದೇನೆ. ಈ ಹಿಂದೆ ನಾನು ಇಂತಹ ಪಾತ್ರ ಮಾಡಿಲ್ಲ. ನೆಗೆಟಿವ್‌ ಶೇಡ್‌ನ‌ಲ್ಲಿ ಸಾಗುವ ಪಾತ್ರವಿದು. ಸಾಮಾನ್ಯವಾಗಿ ಹೀರೋಗಳಿಗೆ ನೆಗೆಟಿವ್‌ ಶೇಡ್‌ನ‌ ಪಾತ್ರ ಸಿಗುತ್ತದೆ. ನಾಯಕಿಯರಿಗೆ ಸಿಗೋದು ಕಡಿಮೆ. ಆದರೆ “ಸಂಹಾರ’ ಚಿತ್ರದಲ್ಲಿ ನನಗೆ ಸಿಕ್ಕಿದೆ’ ಎಂದು ತಮ್ಮ ಪಾತ್ರಗಳ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ ಹರಿಪ್ರಿಯಾ.
ಹರಿಪ್ರಿಯಾ ನಟಿಸಿರುವ ಕೇವಲ ಇವೆರಡು ಚಿತ್ರಗಳಷ್ಟೇ ಈ ವರ್ಷ ಬಿಡುಗಡೆಯಾಗುತ್ತಿಲ್ಲ. ಇದರ ಬೆನ್ನಿಗೆ ಮತ್ತಷ್ಟು ಚಿತ್ರಗಳು ಕೂಡಾ
ಬಿಡುಗಡೆಯಾಗುತ್ತಿವೆ. “ಕುರುಕ್ಷೇತ್ರ”,”ಕಥಾಸಂಗಮ’ ಚಿತ್ರಗಳು ಕೂಡಾ ಬಿಡುಗಡೆಯ ಹಾದಿಯಲ್ಲಿವೆ. ಇನ್ನು, “ಸೂಜಿದಾರ’ ಸಿನಿಮಾದ ಚಿತ್ರೀಕರಣವನ್ನು ಹರಿಪ್ರಿಯಾ ಮುಗಿಸಿದ್ದಾರೆ. ಈ ಚಿತ್ರ ಕೂಡಾ ಈ ವರ್ಷ ತೆರೆಕಾಣಲಿದೆ. “ಈ ವರ್ಷ ನಾನು 
ನಟಿಸಿದ ಏಳು ಚಿತ್ರಗಳು ಬಿಡುಗಡೆಯಾಗುತ್ತಿವೆ. ಖುಷಿಯ ವಿಚಾರವೆಂದರೆ ಈ ಏಳು ಚಿತ್ರಗಳಲ್ಲೂ ನನ್ನ ಪಾತ್ರ ಬೇರೆ ಬೇರೆ ಶೇಡ್‌ಗಳೊಂದಿಗೆ ಸಾಗುತ್ತದೆ. ಎಲ್ಲೂ ಪಾತ್ರಗಳು ರಿಪೀಟ್‌ ಅನಿಸೋದಿಲ್ಲ’ ಎಂದು ತಮ್ಮ ಸಿನಿಮಾಗಳ ಬಗ್ಗೆ ಹೇಳುತ್ತಾರೆ ಹರಿಪ್ರಿಯಾ. ಸದ್ಯ ಹರಿಪ್ರಿಯಾ “ಲೈಫ್ ಜೊತೆಗೊಂದು ಸೆಲ್ಫಿ’ ಚಿತ್ರೀಕರಣದಲ್ಲಿ ಬಿಝಿ. ದೆಹಲಿಯಲ್ಲಿ ಚಿತ್ರೀಕರಣದಲ್ಲಿರುವ ಹರಿಪ್ರಿಯಾ ಆ ಚಿತ್ರೀಕರಣ ಮುಗಿಯುತ್ತಿದ್ದಂತೆ ಹೊಸ ಸಿನಿಮಾವನ್ನು ಒಪ್ಪಿಕೊಳ್ಳಲಿದ್ದಾರಂತೆ. 

ಓನರ್‌ನಿಂದ ವರ್ಕರ್‌
ಕಾವ್ಯಾ ಶೆಟ್ಟಿ ಚಿತ್ರರಂಗಕ್ಕೆ ಬಂದು ಐದಾರು ವರ್ಷವಾದರೂ ಅವರಿಗೆ ಹೇಳಿಕೊಳ್ಳುವಂತಹ ಬ್ರೇಕ್‌ ಸಿಕ್ಕಿಲ್ಲ. ಹಾಗಂತ ಕಾವ್ಯಾ ಶೆಟ್ಟಿ ಯಾವತ್ತೂ ಸುಮ್ಮನೆ ಕುಳಿತಿಲ್ಲ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಾ ಅದೃಷ್ಟದ ಕನಸು ಕಾಣುತ್ತಲೇ ಇದ್ದಾರೆ. ಈಗ ಮತ್ತೆ ಅವರ ಕನಸು ಗರಿಗೆದರಿದೆ. ಅದಕ್ಕೆ ಕಾರಣ ಬಿಡುಗಡೆಯಾಗುತ್ತಿರುವ ಎರಡು ಚಿತ್ರಗಳು. ಕಾವ್ಯಾ ಶೆಟ್ಟಿ ನಾಯಕಿಯಾಗಿರುವ “3 ಗಂಟೆ 30 ದಿನ 30 ಸೆಕೆಂಡ್‌’ ಹಾಗೂ “ಸಂಹಾರ’ ಚಿತ್ರಗಳು ಬಿಡುಗಡೆಯಾಗುತ್ತಿವೆ. “3 ಗಂಟೆ 30 ದಿನ 30 ಸೆಕೆಂಡ್‌’ ಚಿತ್ರ ಇಂದು ಬಿಡುಗಡೆಯಾದರೆ, “ಸಂಹಾರ’ ಮುಂದಿನ ತಿಂಗಳು ತೆರೆಕಾಣುತ್ತಿದೆ. ಎರಡೂ ಚಿತ್ರಗಳಲ್ಲೂ ಹೊಸ ತರಹದ ಪಾತ್ರ ಸಿಕ್ಕ ಖುಷಿ ಕಾವ್ಯಾ ಅವರಿಗಿದೆ. “3 ಗಂಟೆ 30 ದಿನ 30 ಸೆಕೆಂಡ್‌’ ಚಿತ್ರದಲ್ಲಿ ಚಾನೆಲ್‌ವೊಂದರ ಮಾಲೀಕರಾಗಿ ಕಾಣಿಸಿಕೊಂಡರೆ, “ಸಂಹಾರ’ದಲ್ಲಿ ಚಾನೆಲ್‌ವೊಂದರ ರಿಪೋರ್ಟರ್‌ ಆಗಿ ನಟಿಸಿದ್ದಾರೆ. 

ಮಾಲೀಕರಾಗಿದ್ದವರು ರಿಪೋರ್ಟರ್‌ ಆದ್ರಾ ಎಂದು ನೀವು ಕೇಳುವಂತಿಲ್ಲ. ಏಕೆಂದರೆ ಎರಡೂ ಪಾತ್ರಗಳು ಭಿನ್ನವಾಗಿವೆಯಂತೆ.
ಒಂದು ತಿಂಗಳಲ್ಲಿ ತಾವು ನಟಿಸಿರುವ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿರುವುದರಿಂದ ಸಹಜವಾಗಿಯೇ ಕಾವ್ಯಾ ಶೆಟ್ಟಿ ಖುಷಿಯಾಗಿದ್ದಾರೆ. “20 ದಿನಗಳ ಅಂತರದಲ್ಲಿ ನನ್ನ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಖುಷಿ ಕೊಟ್ಟಿದೆ. ಎರಡು ಸಿನಿಮಾಗಳಲ್ಲೂ ಬೇರೆ ಬೇರೆ ಶೇಡ್‌ ಇರುವ ಪಾತ್ರ ಸಿಕ್ಕಿದೆ. “3 ಗಂಟೆ 30 ದಿನ 30 ಸೆಕೆಂಡ್‌’ನಲ್ಲಿ ಚಾನೆಲ್‌ ಓನರ್‌ ಪಾತ್ರ ಸಿಕ್ಕಿದೆ. ದುಡ್ಡೇ ಇಲ್ಲ, ದುಡ್ಡಿದ್ದರೆ ಏನೂ ಬೇಕಾದರೂ ಸಾಧಿಸಬಹುದೆಂದು ಪಕ್ಕಾ ಪ್ರಾಕ್ಟಿಕಲ್‌ ಆಗಿ ಯೋಚಿಸುವ ಪಾತ್ರ. ನಾಯಕ ಇಲ್ಲಿ ಲಾಯರ್‌. ಆದರೆ, ನಾಯಕನ ಸಿದ್ಧಾಂತ ಬೇರೆ. ಆತ ಭಾವನೆಗಳಿಗೆ ಬೆಲೆ ಕೊಡುವ ವ್ಯಕ್ತಿ. ಹಣ ಮತ್ತು ಸಂಬಂಧದ
ನಡುವೆ ನಡೆಯುವ ಸಿನಿಮಾ ಎಂದರೂ ತಪ್ಪಿಲ್ಲ. ಹಾಗಾಗಿ, ನಮ್ಮಿಬ್ಬರ ನಡುವೆ ನಡೆಯುವ ಸ್ಪರ್ಧೆ ನೋಡುಗರಿಗೆ ಮನರಂಜನೆ ನೀಡುತ್ತದೆ. ಇನ್ನು, “ಸಂಹಾರ’ ಚಿತ್ರ ಒಂದು ಥ್ರಿಲ್ಲರ್‌ ಸಿನಿಮಾ. ಇಲ್ಲಿ ನಾನು ಟಿವಿ ರಿಪೋರ್ಟರ್‌ ಆಗಿ ನಟಿಸಿದ್ದೇನೆ. ಹಾಗಂತ ಇಡೀ ಸಿನಿಮಾದಲ್ಲಿ ಮೈಕ್‌ ಇಟ್ಟುಕೊಂಡೇ ಇರುತ್ತೇನೆ ಎಂದಲ್ಲ. ಅದರ ಹೊರತಾಗಿ ಸಾಕಷ್ಟು ವಿಷಯಗಳಿವೆ. ಎರಡು ಸಿನಿಮಾಗಳು ಒಂದೆರಡು ತಿಂಗಳ ಅಂತರದಲ್ಲಿ ಆರಂಭವಾದವು. ಈಗ ಬಿಡುಗಡೆಯಾಗುತ್ತಿವೆ. ಎರಡೂ ಸಿನಿಮಾಗಳು ನನ್ನದೇ ಆದ್ದರಿಂದ ಎರಡರ ಮೇಲೂ ಸಾಕಷ್ಟು ನಿರೀಕ್ಷೆ ಇದೆ. ಸದ್ಯ ಎರಡು ಸಿನಿಮಾಗಳ ಪ್ರಮೋಶನ್‌ನಲ್ಲಿ ಬಿಝಿ’ ಎಂದು ತಮ್ಮ ಸಿನಿಮಾಗಳ ಬಗ್ಗೆ ಮಾತನಾಡುತ್ತಾರೆ ಕಾವ್ಯಾ. ಸದ್ಯ ಕಾವ್ಯಾ ಬೇರೆ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. 

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next