Advertisement

3 DCM ಚರ್ಚೆ ಮಾಡುತ್ತಿರುವವರಿಗೆ ಟಾಸ್ಕ್ ನೀಡಬೇಕು: ಸಚಿವರಿಗೆ ಬಾಲಕೃಷ್ಣ ಟಾಂಗ್

05:27 PM Jan 13, 2024 | Team Udayavani |

ರಾಮನಗರ: ರಾಜ್ಯದಲ್ಲಿ ಮೂವರು ಡಿಸಿಎಂ ಚರ್ಚೆ ವಿಚಾರಕ್ಕೆ ಸಂಬಂಧಿಸಿ ಸ್ವಪಕ್ಷೀಯ ಸಚಿವರಿಗೆ ಮಾಗಡಿ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಶನಿವಾರ ಟಾಂಗ್ ನೀಡಿದ್ದು,”ಈ ರೀತಿ ಚರ್ಚೆ ಮಾಡುವವರಿಗೆ ಲೋಕಸಭಾ ಚುನಾವಣೆಗೆ ಟಾಸ್ಕ್ ನೀಡಬೇಕು,ಯಾರ್ಯಾರು ಡಿಸಿಎಂ ಆಗುತ್ತೇನೆ ಅನ್ನುತ್ತಿದ್ದಾರೆ ಅವರು ಎರಡೆರಡು ಕ್ಷೇತ್ರ ಗೆಲ್ಲಿಸಿಕೊಂಡು ಬರಲಿ” ಎಂದು ಸವಾಲು ಹಾಕಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ,” ಸುಮ್ಮನೆ ಜಾತಿ ಹೆಸರಲ್ಲಿ ಡಿಸಿಎಂ ಮಾಡಿ ಅನ್ನೋದಲ್ಲ.ಡಿಸಿಎಂ ಮಾಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ.ಆದರೆ ಕೆಲವರು ಅನಾವಶ್ಯಕವಾಗಿ ಹೇಳಿಕೆ ನೀಡುತ್ತಿದ್ದಾರೆ.ಬೇಕಿದ್ದರೆ ನೇರವಾಗಿ ಹೈಕಮಾಂಡ್ ಭೇಟಿಯಾಗಿ ಕೇಳಿಕೊಳ್ಳಲಿ, ಅದನ್ನಬಿಟ್ಟು ಮಾಧ್ಯಮಗಳ ಮುಂದೆ ಮಾತನಾಡಿ ಗೊಂದಲ ಸೃಷ್ಟಿ ಮಾಡಬೇಡಿ” ಎಂದು ಸ್ವಪಕ್ಷೀಯ ಸಚಿವರಿಗೆ ತಿರುಗೇಟು ನೀಡಿದರು.

ಡಿ.ಕೆ.ಶಿವಕುಮಾರ್ ಶಕ್ತಿ ಕುಗ್ಗಿಸಲು ಸಿದ್ದರಾಮಯ್ಯ ಬಣ ಟಾರ್ಗೆಟ್ ಮಾಡಿದೇಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ”ಯಾರನ್ನ ಯಾರೂ ಟಾರ್ಗೆಟ್ ಮಾಡಲು ಆಗುವುದಿಲ್ಲ.ಯಾರ ಶಕ್ತಿ ಏನು ಎಂದು ನಮ್ಮ ಹೈಕಮಾಂಡ್ ಗೆ ಗೊತ್ತು.ಎಲ್ಲಾ ಪಕ್ಷದಲ್ಲೂ ಟಾರ್ಗೆಟ್ ಮಾಡುವವರು ಇದ್ದೇ ಇರ್ತಾರುತ್ತಾರೆ. ಆದರೆ ಇದನ್ನ ಟಾರ್ಗೆಟ್ ಅಂತ ಅಂದುಕೊಳ್ಳುವುದಿಲ್ಲ.ಕೆಲವರು ಅವರ ಅಭಿಪ್ರಾಯ ತಿಳಿಸಿದ್ದಾರೆ, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸದ್ಯಕ್ಕೆ ಈ ವಿಚಾರ ಅಪ್ರಸ್ತುತ ಅಂತ ಖರ್ಗೆ ಅವರೇ ಹೇಳಿದ್ದಾರೆ” ಎಂದರು.

ಸಿಎಂ ಹಾಗೂ ಡಿಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ.ಮಧ್ಯೆ ಕೆಲವರು ಅವರ ಬೇಳೆ ಬೇಯಿಸಿಕೊಳ್ಳಲು ಏನೇನೋ ಮಾತನಾಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next