Advertisement

3 ದಿನಗಳ ಕೃಷಿಯಂತ್ರ ಮೇಳ-2023 ಸಮಾರೋಪ

01:46 PM Feb 13, 2023 | Team Udayavani |

ಪುತ್ತೂರು: ನೆಹರೂನಗರದ ವಿವೇಕಾನಂದ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿಯ ಆವರಣದಲ್ಲಿ ಫೆ. 10ರಿಂದ 12ರ ತನಕ 3 ದಿನಗಳ ಕಾಲ ನಡೆದ 5ನೇ ಬೃಹತ್‌ ಕೃಷಿಯಂತ್ರ ಮೇಳ-2023 ಮತ್ತು ಕನಸಿನ ಮನೆ ಪ್ರದರ್ಶನ ರವಿವಾರ ಸಮಾರೋಪಗೊಂಡಿತು.

Advertisement

ಜಿಲ್ಲೆಯ ನಾನಾ ಭಾಗದಿಂದ ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಜನರು ಮಳಿಗೆಗೆ ಭೇಟಿ ನೀಡಿ ಮಾಹಿತಿ, ಖರೀದಿಯಲ್ಲಿ ತೊಡಗಿದ್ದರು. ಲಕ್ಷಾಂತರ ಮಂದಿ ಕೃಷಿ ಯಂತ್ರ ಮೇಳದಲ್ಲಿ ಭಾಗವಹಿಸಿದ್ದರು. ರವಿವಾರ ಸಂಜೆ ರೇಡಿಯೋ ಪಾಂಚಜನ್ಯದ ನೇತೃತ್ವದಲ್ಲಿ ಕೃಷಿ ರಸಪ್ರಶ್ನೆ ನಡೆಯಿತು. ಎರಡು ಗೋಷ್ಠಿ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಪುತ್ತೂರು ಮತ್ತು ಮಂಗಳೂರು ವಿ.ವಿ. ಆಶ್ರಯದಲ್ಲಿ ಮೇಳ ನಡೆಯಿತು. 140 ಮಳಿಗೆಗಳು ಮತ್ತು ಕನಸಿನ ಮನೆಗೆ ಸಂಬಂಧಪಟ್ಟ 83 ಮಳಿಗೆ, 10 ಅಟೋ ಮೊಬೈಲ್‌, 4 ನರ್ಸರಿ, 20 ಆಹಾರ ಮಳಿಗೆ, 20 ವ್ಯಾಪಾರ ಮಳಿಗೆ, 20 ಸಾವಯವ ಸಿರಿ ಮಳಿಗೆ, ಡ್ರೋನ್‌ ಬಳಕೆಯ ಪ್ರಾತ್ಯಕ್ಷಿಕೆ, ಸುಸಜ್ಜಿತ ಕಾರ್ಬನ್‌ ಫೈಬರ್‌ ದೋಟಿಗಳ ಪ್ರದರ್ಶನ, ಜಲಕೃಷಿ ವಿಧಾನದ ಸಮಗ್ರ ಪರಿಚಯ, ಸ್ಥಳದಲ್ಲೇ ಮಣ್ಣಿನ ಪಾತ್ರೆಗಳ ತಯಾರಿ ಮತ್ತು ಮಾರಾಟ, ಪಾರಂಪರಿಕ ಮಾದರಿ ಗ್ರಾಮ ಗಮನ ಸೆಳೆಯಿತು.

ಅಡಿಕೆ ಬೆಳೆ ನಿರ್ವಹಣೆ, ರೋಗ ಹತೋಟಿ: ವಿಚಾರಗೋಷ್ಠಿ
ಕ್ಯಾಂಪ್ಕೋ ನಿಯಮಿತ ಮಂಗಳೂರು, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜು ಹಾಗೂ ಮಂಗಳೂರು ವಿ.ವಿ. ಇವುಗಳ ಸಂಯುಕ್ತ ಆಶ್ರಯದಲ್ಲಿ ಕೃಷಿ ಯಂತ್ರ ಮೇಳ -2023 ಮತ್ತು ಕನಸಿನ ಮನೆ ಕಾರ್ಯಕ್ರಮದ 2ನೇಯ ದಿನ ಅಡಿಕೆ ಬೆಳೆ ನಿರ್ವಹಣೆ ಮತ್ತು ರೋಗಗಳ ಹತೋಟಿ ಕುರಿತು ವಿಚಾರಗೋಷ್ಠಿ ನಡೆಯಿತು.

ಸಂಪನ್ಮೂಲ ವ್ಯಕ್ತಿ ಕಾಸರಗೋಡು ಐಎಫ್ಎಆರ್‌ ಮತ್ತು ಸಿಪಿಸಿಆರ್‌ಐ ಬೆಳೆ ಸಂರಕ್ಷಣ ವಿಭಾಗ ಮುಖ್ಯಸ್ಥ ಡಾ| ವಿನಾಯಕ ಹೆಗಡೆ ಮಾತನಾಡಿ, ಕರಾವಳಿಯಲ್ಲಿ ಅತಿಯಾಗಿ ಬೆಳೆಯುವ ಅಡಿಕೆ ಕೃಷಿಯಲ್ಲಿ ಕಂಡು ಬರುವ ಎಲೆ ಚುಕ್ಕಿ ರೋಗ, ಹಳದಿ ರೋಗ, ಕೊಳೆ ರೋಗ, ಹಿಂಗಾರ ಒಣಗುವಿಕೆ, ಬೇರು ಹುಳ ಮುಂತಾದ ರೋಗಗಳನ್ನು ನಿವಾರಿಸುವ ಕ್ರಮ ಹಾಗೂ ಮುಂಜಾಗ್ರತ ಕ್ರಮಗಳ ಕುರಿತಾಗಿ ಮಾಹಿತಿ ನೀಡಿದರು.

Advertisement

ಅಡಿಕೆ ಕೃಷಿಗೆ ಒಂದು ಬಾರಿ ರೋಗ ತಗುಲಿದರೆ ಅದನ್ನು ನಿವಾರಿಸಲು ವರ್ಷ ಗಳೇ ತಗಲುತ್ತವೆ. ಅಂತಹ ಸಂದರ್ಭದಲ್ಲಿ ನಾವು ಹೆಚ್ಚು ಗಮನ ಹರಿಸುವುದು ಅಗತ್ಯ. ಪೋಷಕಾಂಶಗಳ ನಿರ್ವಹಣೆ ಹಾಗೂ ನೀರಿನ ಸರಬರಾಜನ್ನು ಸರಿಯಾಗಿ ನೋಡಿಕೊಂಡಲ್ಲಿ ರೋಗ ಬರುವುದು ತಡೆಗಟ್ಟಬಹುದು ಎಂದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ. ಕೃಷ್ಣ ಭಟ್‌ ಹಾಗೂ ಕ್ಯಾಂಪ್ಕೋ ನಿಯಮಿತ ಮಂಗಳೂರಿನ ನಿರ್ದೇಶಕ ದಯಾನಂದ ಹೆಗಡೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಶ್ವೇತಾಂಬಿಕೆ ನಿರೂಪಿಸಿದರು.

ಪೋಷಣೆ ಅಗತ್ಯ
ವಿಟ್ಲದ ಸಿಪಿಸಿಆರ್‌ಐನ ಹಿರಿಯ ವಿಜ್ಞಾನಿ ಡಾ| ನಾಗರಾಜ್‌ ಎನ್‌. ಮಾತನಾಡಿ, ಭಾರತದಲ್ಲಿ ಅಡಿಕೆಗೆ ಒಂದು ಪೂಜನೀಯ ಸ್ಥಾನವಿದೆ. ಅದರಲ್ಲೂ ಕರ್ನಾಟಕ ಕೃಷಿಯಲ್ಲಿ ಅಡಿಕೆಯು ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಮಂಗಳ ತಳಿಗೆ ಅತೀ ಹೆಚ್ಚು ಬೇಡಿಕೆ ಇದ್ದು ಇದು ಅತೀ ಶೀಘ್ರದಲ್ಲಿ ಫಸಲನ್ನು ನೀಡುವ ತಳಿಯಾಗಿದೆ. ಕೃಷಿ ಎಂಬುವುದು ಕೇವಲ ಆದಾಯಕ್ಕೆ ಸೀಮಿತವಲ್ಲ. ಅದರ ಪೋಷಣೆ ಅಗತ್ಯ. ಹಾಗಾಗಿ ವರ್ಷಕ್ಕೊಮ್ಮೆ ಅದರ ಮಣ್ಣನ್ನು ಪರಿಶೀಲಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next