ವಾಷಿಂಗ್ಟನ್: ಮುಂಬೈನಲ್ಲಿ 2008ರಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿಗೆ ಕಾರಣನಾಗಿರುವ ಪಾಕಿಸ್ತಾನ ಮೂಲದ ಕೆನಡಾ ನಾಗರಿಕ, ಉಗ್ರ ತಹಾವ್ವುರ್ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.
ಅಮೆರಿಕದ ಕ್ಯಾಲಿಫೋರ್ನಿಯಾದ ನ್ಯಾಯಾಲಯದ ನ್ಯಾಯಾಧೀಶೆ ಜಾಕ್ವೆಲಿನ್ ಚೂಲಿಜಿನ್ 2021ರ ಜೂನ್ನಲ್ಲಿ ಕೊನೇಯ ವಿಚಾರಣೆ ನಡೆಸಿದ್ದರು. ಅದೇ ಸಂದರ್ಭದಲ್ಲಿ ಗಡಿಪಾರು ಮಾಡುವ ನಿಟ್ಟಿನಲ್ಲಿ ಬೇಕಾಗಿರುವ ದಾಖಲೆಗಳನ್ನೂ ಸಲ್ಲಿಸಲಾಗಿತ್ತು.
ಆ ಪ್ರಕ್ರಿಯೆ ಪೂರ್ತಿಗೊಂಡು ಒಂದು ವರ್ಷ ಕಳೆದರೂ ನ್ಯಾಯಾಲಯದಿಂದ ಇನ್ನೂ ಅಂತಿಮ ತೀರ್ಪು ಪ್ರಕಟವಾಗಿಲ್ಲ. ವಾದ ಮಂಡನೆ ವೇಳೆ ಅಮೆರಿಕ ಸರ್ಕಾರದ ಪರ ವಕೀಲರೂ ಕೂಡ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಬೇಕು ಮತ್ತು ಆತ ಎಸಗಿರುವ ಅಪರಾಧಕ್ಕೆ ಸೂಕ್ತ ಸಾಕ್ಷ್ಯಾಧಾರಗಳೂ ಇವೆ ಎಂದು ವಾದಿಸಿದ್ದರು.
ಆದರೆ ತಹಾವ್ವುರ್ ಪರ ವಕೀಲರು ಅದನ್ನು ವಿರೋಧಿಸಿದ್ದರು.ತಹಾವ್ವುರ್ ರಾಣಾನನ್ನು ಭಾರತದಲ್ಲಿ ಘೋಷಿತ ಅಪರಾಧಿ ಎಂದು ಈಗಾಗಲೇ ಪ್ರಕಟಿಸಲಾಗಿದೆ.