Advertisement

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಚಾಮರಾಜನಗರ ಜಿಲ್ಲೆ

05:31 PM Aug 15, 2022 | Team Udayavani |

ಚಾಮರಾಜನಗರ: ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳನ್ನು ಪೂರೈಸಿ, ಅಮೃತ ಮಹೋತ್ಸವ ಆಚರಿಸಿದರೆ, ಚಾಮರಾಜನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದು 25 ವರ್ಷಗಳನ್ನು ಪೂರೈಸಿ, ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.

Advertisement

ಸಮಾಜವಾದಿ ಎನಿಸಿದ್ದ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರು ಮೂಢನಂಬಿಕೆಗೊಳಗಾದ ಕಾರಣ ಜಿಲ್ಲೆ ಎರಡು ಕಡೆ ಉದ್ಘಾಟನೆಗೊಂಡ ಸ್ವಾರಸ್ಯಕರ ಘಟನೆ 25 ವರ್ಷಗಳ ಹಿಂದೆ ಇದೇ ದಿನ ನಡೆಯಿತು!

ಮೈಸೂರು ಜಿಲ್ಲೆಯೊಳಗೆ ಇದ್ದ ಚಾಮರಾಜನಗರ ವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕೆಂಬ ಹೋರಾಟ ಆರಂಭಗೊಂಡು, 1997ರ ಆಗಸ್ಟ್‌ 15 ರಂದು ನೂತನ ಚಾಮರಾಜನಗರ ಜಿಲ್ಲೆಯನ್ನು ಅಸ್ತಿತ್ವಕ್ಕೆ ತರಲಾಯಿತು. ಅನೇಕ ಅಡೆತಡೆಗಳನ್ನೆಲ್ಲ ಲೆಕ್ಕಿಸದೇ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರು ಚಾಮರಾಜ ನಗರ ಜಿಲ್ಲೆ ರಚನೆಯಾಗಲು ಕಾರಣರಾದರು.

ಮೈಸೂರು ಜಿಲ್ಲೆಯೊಳಗೆ ಇದ್ದ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲೂಕುಗಳನ್ನು ಪ್ರತ್ಯೇಕಗೊಳಿಸಿ, ಚಾಮರಾಜನಗರ ಎಂಬ ನೂತನ ಜಿಲ್ಲೆ 1997ರ ಆಗಸ್ಟ್‌ 15ರಂದು ಉದಯವಾಯಿತು. ಜಿಲ್ಲೆಯ ಹೋರಾಟ ಉತ್ತುಂಗದಲ್ಲಿದ್ದಾಗ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿನ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನೂ ಚಾಮರಾಜನಗರ ಜಿಲ್ಲೆಗೆ ಸೇರಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಆ ಒತ್ತಾಯ ಫ‌ಲಪ್ರದವಾಗಿದ್ದರೆ, ಮೈಸೂರು ಜಿಲ್ಲೆಯ ನಂಜನಗೂಡು, ತಿ. ನರಸೀಪುರ, ಬನ್ನೂರು ಕ್ಷೇತ್ರಗಳು ಚಾಮರಾಜನಗರ ಜಿಲ್ಲೆಗೆ ಸೇರ್ಪಡೆಯಾಗುತ್ತಿದ್ದವು! ಆದರೆ ಕೆಲವು ರಾಜಕಾರಣಿಗಳ ಒತ್ತಡದಿಂದ ಈ ಕ್ಷೇತ್ರಗಳನ್ನು ಮೈಸೂರು ಜಿಲ್ಲೆಗೇ ಉಳಿಸಿಕೊಂಡು, ಕೇವಲ 4 ತಾಲೂಕುಗಳುಳ್ಳ ಚಾಮರಾಜನಗರ ಜಿಲ್ಲೆಯನ್ನು ರಚಿಸಲಾಯಿತು. ಅದು ಈಗ ಹನೂರು ಹೊಸ ತಾಲೂಕಾಗಿ 5 ತಾಲೂಕುಗಳಾಗಿವೆ.

ಎರಡು ಕಡೆಗಳಲ್ಲಿ ಉದ್ಘಾಟನಾ ಕಾರ್ಯಕ್ರಮ!: ಸಮಾಜವಾದಿಯಾಗಿದ್ದ ಜೆ.ಎಚ್‌. ಪಟೇಲ್‌ ಅವರು ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬ ಭಯ ಬಿದ್ದು, ನೂತನ ಜಿಲ್ಲೆಯನ್ನು ಜಿಲ್ಲಾ ಕೇಂದ್ರದಲ್ಲಿ ಉದ್ಘಾಟಿಸಲಿಲ್ಲ! ಬದಲಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಉದ್ಘಾಟಿಸಿದರು. ಆ ಸಂದರ್ಭದಲ್ಲಿ ಮಾತನಾಡಿದ ಅವರು, ನೂತನ ಜಿಲ್ಲೆಗೆ ಒಳ್ಳೆಯದಾಗಲಿ, ಪುಣ್ಯ ಕ್ಷೇತ್ರಗಳ ಮಹಿಮೆಯಿಂದ ಒಳ್ಳೆ ಕೆಲಸಗಳನ್ನು ಆರಂಭಿಸಬೇಕೆಂಬ ಕಾರಣಕ್ಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಆರಂಭಿಸಿದ್ದೇನೆ. ಚಾಮರಾಜನಗರಕ್ಕೆ ಭೇಟಿ ನೀಡಲು ತಮಗೆ ಭಯವೇನೂ ಇಲ್ಲ! ಎಂದು ಸಮರ್ಥಿಸಿಕೊಂಡಿದ್ದರು. ಪ್ರಸಕ್ತ ವಿಧಾನಸಭಾ ಅಧಿವೇಶನ ಮುಗಿದ ನಂತರ ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ ಎಂದು ಬೆಟ್ಟದಲ್ಲಿ ಭರವಸೆ ನೀಡಿದ್ದರು. ಆದರೆ ಅವರು ಚಾಮರಾಜನಗರಕ್ಕೆ ಭೇಟಿ ನೀಡಲೇ ಇಲ್ಲ!

Advertisement

ಆ ಕಾರ್ಯಕ್ರಮದಲ್ಲಿ ಅಂದಿನ ಕೃಷಿ ಮತ್ತು ಮಾರುಕಟ್ಟೆ ಸಚಿವರಾಗಿದ್ದ ಎಚ್‌. ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವಾಟಾಳ್‌ ನಾಗರಾಜ್‌ ಚಾ.ನಗರ ಜಿಲ್ಲೆಯ ಭೂಪಟ ಅನಾವರಣ ಮಾಡಿದ್ದರು. ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್‌.ಎಸ್‌. ಮಹದೇವಪ್ರಸಾದ್‌ ಭಾಗವಹಿಸಿದ್ದರು. ಮೊದಲ ಜಿಲ್ಲಾಧಿಕಾರಿ ಬಿ.ಎಚ್‌. ಮಂಜುನಾಥ್‌ ಸ್ವಾಗತಿಸಿದ್ದರು.

ಚಾ.ನಗರದಲ್ಲಿ ಜಿಲ್ಲೆ ಉದ್ಘಾಟಿಸಿದ ಸಿದ್ದರಾಮಯ್ಯ!: ಅತ್ತ, ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಜೆ. ಎಚ್‌. ಪಟೇಲ್‌ ಜಿಲ್ಲೆಯನ್ನು ಉದ್ಘಾಟಿಸಿದರು. ಇತ್ತ ಅದೇ ದಿನ ಚಾಮರಾಜನಗರದಲ್ಲಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಜಿಲ್ಲೆಯ ಜಿಲ್ಲಾ ಕಚೇರಿಗಳನ್ನು ಉದ್ಘಾಟಿಸಿದರು! ಈಗಿನ ತಹಶೀಲ್ದಾರ್‌ ಕಚೇರಿಯೇ ಅಂದಿನ ಜಿಲ್ಲಾಧಿಕಾರಿ ಕಚೇರಿಯಾಗಿತ್ತು. ಅಲ್ಲಿ ಸಿದ್ದರಾಮಯ್ಯ ನೂತನ ಜಿಲ್ಲಾ ಕಚೇರಿಗಳನ್ನು ಉದ್ಘಾಟಿಸಿದರು.

ಅಂದು ಸಂಜೆ 5 ಗಂಟೆಗೆ ಚಾಮರಾಜನಗರದ ಜೆಎಸ್‌ಎಸ್‌ ಕಾಲೇಜು ಮೈದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕೇರಳದ ಮಾಜಿ ರಾಜ್ಯಪಾಲ ಬಿ. ರಾಚಯ್ಯನವರು ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಚಿವ ಎಚ್‌. ನಾಗಪ್ಪ ಉದ್ಘಾಟನೆ ನೆರವೇರಿಸಿದರು. ಸಂಸದ ಎ. ಸಿದ್ದರಾಜು ಜ್ಯೋತಿ ಬೆಳಗಿದ್ದರು. ಆ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಎಚ್‌.ಸಿ. ಮಹದೇವಪ್ಪ, ತೋಟಗಾರಿಕೆ ಸಚಿವ ಟಿ.ಟಿ. ಜಯಕುಮಾರ್‌, ಶಾಸಕರಾದ ಎಚ್‌.ಎಸ್‌. ಮಹದೇವಪ್ರಸಾದ್‌, ಎ.ಆರ್‌. ಕೃಷ್ಣಮೂರ್ತಿ, ಎಸ್‌. ಜಯಣ್ಣ, ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಮಹದೇವನಾಯ್ಕ, ಮೈಸೂರು ಜಿ.ಪಂ. ಅಧ್ಯಕ್ಷ ಬಿ.ಎಂ. ರಾಮು, ಉಪಾಧ್ಯಕ್ಷ ಕೆ.ಎಸ್‌. ನಾಗರಾಜಪ್ಪ, ನಗರಸಭಾ ಉಪಾಧ್ಯಕ್ಷ ಎಂ. ರಾಮಚಂದ್ರ, ಕಾಡಾ ಅಧ್ಯಕ್ಷ ದೇವನೂರು ಶಿವಮಲ್ಲು, ಮಾಜಿ ಶಾಸಕ ಎಸ್‌. ಪುಟ್ಟಸ್ವಾಮಿ, ತಾ.ಪಂ. ಅಧ್ಯಕ್ಷ ಶಾಂತಮೂರ್ತಿ, ಮಾಜಿ ಶಾಸಕರಾದ ಟಿ.ಪಿ. ಬೋರಯ್ಯ, ಕೆ. ಸಿದ್ದಯ್ಯ, ಎಚ್‌. ಕೆ. ಶಿವರುದ್ರಪ್ಪ, ಕೆ.ಪಿ. ಶಾಂತಮೂರ್ತಿ ಭಾಗವಹಿಸಿದ್ದರು. ಜಿಲ್ಲಾ ಜನತಾ ದಳ ಅಧ್ಯಕ್ಷ ಸಿ. ಗುರುಸ್ವಾಮಿ, ಜಿ.ಪಂ. ಸದಸ್ಯ ಎಸ್‌. ಮಹದೇವಯ್ಯ, ಆರ್‌.ಎನ್‌. ರಾಜಶೇಖರಾಚಾರ್‌, ಬಿ.ಕೆ. ರವಿಕುಮಾರ್‌ ವೇದಿಕೆಯಲ್ಲಿದ್ದರು.

ಕ್ಷೇತ್ರದ ಶಾಸಕರಾದರೂ ವಾಟಾಳ್‌ ನಾಗರಾಜ್‌ ಅವರು ಅಂದು ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಿ, ತಾವೇ ಇನ್ನೊಂದು ಕಾರ್ಯಕ್ರಮವನ್ನು ಜೂನಿಯರ್‌ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದರು.

ಯಾವ ಗುಮ್ಮಕ್ಕೂ ಹೆದರುವವನಲ್ಲ ಎಂದಿದ್ದ ಸಿದ್ದರಾಮಯ್ಯ..! ಅಂದಿನ ತಮ್ಮ ಭಾಷಣದಲ್ಲಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಾನು ಯಾವ ಗುಮ್ಮಕ್ಕೂ ಹೆದರುವವನಲ್ಲ. ನಾನು ಪದೇ ಪದೇ ಚಾಮರಾಜನಗರಕ್ಕೆ ಬರುತ್ತೇನೆ. ನೋಡೋನ, ನನಗೂ ಲಕ್‌ ಹೊಡೀಬಹುದು ಎಂದು ಹೇಳಿದ್ದರು! ಕಾಕತಾಳೀಯವೆಂಬಂತೆ ಅವರ ಮಾತು ನಿಜವಾಯಿತು. 2013ರಲ್ಲಿ ಮುಖ್ಯಮಂತ್ರಿಯೂ ಆದರು. ಸಿಎಂ ಆಗಿ ಚಾಮರಾಜನಗರ ಪಟ್ಟಣಕ್ಕೆ 12 ಬಾರಿ ಭೇಟಿ ನೀಡಿದರು. ಸಿಎಂ ಆಗಿ ಪೂರ್ಣಾವಧಿ ಅಧಿಕಾರವನ್ನೂ ಪೂರೈಸಿದರು!

– ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next