Advertisement

24 ಲಕ್ಷ ರೂ. ವಿದ್ಯಾರ್ಥಿ ವೇತನ ವಂಚನೆ-ದೂರು

03:26 PM Jun 27, 2021 | Team Udayavani |

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಹೆಗ್ಗೇರಿಯ ಆಯುರ್ವೇದ ಕಾಲೇಜಿನ ಹೆಸರಿನಲ್ಲಿ ಹಿಂದುಳಿದ ವರ್ಗ ಇಲಾಖೆಯ ಸಿಬ್ಬಂದಿಯೊಬ್ಬ ಬ್ಯಾಂಕ್‌ ಖಾತೆ ತೆರೆದು ಅದಕ್ಕೆ 24 ಲಕ್ಷ ರೂ. ವಿದ್ಯಾರ್ಥಿ ವೇತನ ಜಮಾ ಮಾಡಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ.

Advertisement

ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಕುರಿತ ಮಾಹಿತಿಯನ್ನು ಹಿಂದುಳಿದ ವರ್ಗ ಇಲಾಖೆಗೆ ಮಾಹಿತಿ ಕೊಡುತ್ತಿದ್ದರು. ಇಲಾಖೆಯವರು ನೇರವಾಗಿ ಕಾಲೇಜು ಪ್ರಾಚಾರ್ಯರ ಬ್ಯಾಂಕ್‌ ಖಾತೆಗೆ ವಿದ್ಯಾರ್ಥಿ ವೇತನ ಜಮಾ ಮಾಡುತ್ತಿದ್ದರು. ಅದನ್ನು ಪ್ರಾಚಾರ್ಯರು ವಿದ್ಯಾರ್ಥಿಗಳಿಗೆ ಬಟವಡೆ ಮಾಡುತ್ತಿದ್ದರು. ಈ ಬಗ್ಗೆ ತಿಳಿದಿದ್ದ ಹಿಂದುಳಿದ ವರ್ಗ ಇಲಾಖೆ ಸಿಬ್ಬಂದಿಯೊಬ್ಬ ಪ್ರವಾಸಿ ಮಂದಿರ ರಸ್ತೆಯಲ್ಲಿನ ಐಸಿಐಸಿ ಬ್ಯಾಂಕ್‌ನಲ್ಲಿ ಆಯುರ್ವೇದಿಕ್‌ ಕಾಲೇಜು ಹೆಸರಿನಲ್ಲಿ ಖಾತೆ ತೆಗೆದಿದ್ದಾನೆ. ಅದರಲ್ಲಿ 2017ರ ಏ. 1ರಿಂದ 2018ರ ಮಾ. 31ರ ಅವಧಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ 24,04,090 ರೂ. ಜಮಾ ಮಾಡಿಕೊಂಡು ವಂಚಿಸಿದ್ದಾನೆ.

ಈ ಕುರಿತು ಹೆಗ್ಗೇರಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ| ಪ್ರಶಾಂತ ಎಸ್‌. ಅವರು ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next