Advertisement

ವಿಧಾನಸಭೆ ಚುನಾವಣೆ: ಅಲ್ಲಿನವರು ಇಲ್ಲಿಗೆ, ಇಲ್ಲಿನವರು ಅಲ್ಲಿಗೆ…

09:43 PM Apr 28, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ  ಜತೆಗೆ 2024ರ ಲೋಕಸಭೆ ಚುನಾವಣೆ ಸ್ಪರ್ಧಾ ವಿಚಾರದ ಬಗ್ಗೆಯೂ ಮೂರೂ ಪಕ್ಷಗಳಲ್ಲಿ  ಲೆಕ್ಕಾಚಾರಗಳು ನಡೆಯುತ್ತಿದೆ.

Advertisement

ಪ್ರಸ್ತುತ ಶಾಸಕರಾಗಿರುವವರಲ್ಲಿ  ಕೆಲವರು ಲೋಕಸಭೆ ಚುನಾವಣೆಗೆ ಸ್ಪರ್ಧೆಗೆ ಒಲವು ಹೊಂದಿದ್ದರೆ, ಮಾಜಿ ಹಾಗೂ ಹಾಲಿ ಸಂಸದರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ವಿಧಾನಸಭೆ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಕಣಕ್ಕಿಳಿದರೆ  ಅವರ ಪುತ್ರ ಡಾ| ಯತೀಂದ್ರ ಅವರು ಲೋಕಸಭೆಗೆ ಮೈಸೂರಿನಿಂದ ಸ್ಪರ್ಧಿಸಲಿದ್ದಾರೆ.  ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ವಿಧಾನಸಭೆಗೆ ಬರಲು ಆಸಕ್ತಿ ಹೊಂದಿದ್ದು, ಕೆಜಿಎಫ್ ಅಥವಾ ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧೆಗೆ ಒಲವು ತೋರಿದ್ದಾರೆ. ಅವರ ಪುತ್ರಿ ರೂಪಕಲಾ ಶಶಿಧರ್‌ ಕೋಲಾರದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ನಲ್ಲಿರುವ ಮುದ್ದಹನುಮೇ ಗೌಡರು ಬಿಜೆಪಿಗೆ ಸೇರಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮುದ್ದಹನುಮೇ ಗೌಡರು ಬಿಜೆಪಿಯಿಂದ ಕಣಕ್ಕಿಳಿಯುವುದು ಖಚಿತವಾದರೆ ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಚನ್ನಪಟ್ಟಣದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮತ್ತೂಂದೆಡೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಈ ಬಾರಿ ಮೈಸೂರಿನಿಂದ ಸ್ಪರ್ಧಿಸಬೇಕೆಂಬ ಒತ್ತಡ ಪಕ್ಷದಲ್ಲಿ ಹೆಚ್ಚಾಗುತ್ತಿದೆ. ಆದರೆ ದೇವೇಗೌಡರಿಗೆ ತುಮಕೂರಿನಿಂದಲೇ ಕಣಕ್ಕಿಳಿಯುವ ಬಯಕೆಯಿದೆ. ಹಾಸನದಿಂದ ಪ್ರಜ್ವಲ್‌  ಅವರೇ ಜೆಡಿಎಸ್‌ ಅಭ್ಯರ್ಥಿಯಾಗಲಿದ್ದು, ಕಾಂಗ್ರೆಸ್‌ನಿಂದ ಮಾಜಿ ಸಚಿವ ಎ.ಮಂಜು  ಅಭ್ಯರ್ಥಿಯಾಗಬಹುದು ಎನ್ನಲಾಗುತ್ತಿದೆ.

Advertisement

ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್‌ ಈ ಬಾರಿ ವಿಧಾನಸಭೆಗೆ ಸ್ಪರ್ಧಿಸಲು  ಚಿಂತಿಸಿದ್ದು, ಗಾಂಧಿನಗರ ಅಥವಾ ಸರ್ವಜ್ಞನಗರ ಕ್ಷೇತ್ರದಿಂದ ಕಣಕ್ಕಿಳಿಯಬಹುದು. ಹಾಗಾದರೆ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ರಾಜೀವ್‌ ಚಂದ್ರಶೇಖರ್‌ ಕಣಕ್ಕಿಳಿಯಬಹುದು ಎನ್ನಲಾಗಿದೆ.

ಈ ನಡುವೆ ಮಾಜಿ ಸಚಿವ ಕೆ.ಜೆ.ಜಾರ್ಜ್‌ ತಮ್ಮ ಪುತ್ರ ರಾಣಾ ಜಾರ್ಜ್‌ನನ್ನು ಸರ್ವಜ್ಞನಗರದಿಂದ ವಿಧಾನಸಭೆಗೆ ಕಣಕ್ಕಿಳಿಸಿ ಅವರು ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಸಂಸದರಾದ ಶೋಭಾ ಕರಂದ್ಲಾಜೆ, ಶಿವಕುಮಾರ್‌ ಉದಾಸಿ, ರಮೇಶ್‌ ಜಿಗಜಿಣಗಿ, ಉಮೇಶ್‌ ಜಾಧವ್‌ ಕೂಡ ವಿಧಾನಸಭೆ ಪ್ರವೇಶಕ್ಕೆ ಒಲವು ಹೊಂದಿದ್ದಾರೆ. ಕ್ಷೇತ್ರವನ್ನೂ ಗುರುತಿಸಿಕೊಂಡು ವರಿಷ್ಠರ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಉದಾಸಿಯವರ ತಮ್ಮ ತಂದೆ ಪ್ರತಿನಿಧಿಸುವ ಹಾನಗಲ್‌, ಉಮೇಶ್‌ ಜಾಧವ್‌ ಚಿಂಚೋಳಿಯಿಂದ ಸ್ಪಧಿಸಬಹುದು. ಶೋಭಾ ಕರಂದ್ಲಾಜೆ  ವಿಧಾನಸಭೆಗೆ ಸ್ಪರ್ಧಿಸಿದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಜಯಪ್ರಕಾಶ ಹೆಗ್ಡೆ ಸ್ಪರ್ಧಿಸಬಹುದು ಎಂದು ಹೇಳಲಾಗಿದೆ.

ಹಳ್ಳಿಹಕ್ಕಿಗೆ ಕೈ ಕನವರಿಕೆ :

ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ಮಾತುಗಳು ಕೇಳಿಬರುತ್ತಿರುವುದರಿಂದ ಜೆಡಿಎಸ್‌ನಿಂದ ನಿಖೀಲ್‌ ಕುಮಾರಸ್ವಾಮಿ ಸ್ಪರ್ಧಿಸುವುದು ಖಚಿತವಾಗಿದೆ. ಆದ್ದರಿಂದ ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿಗೆ  ತಲಾಷೆ  ಆರಂಭಿಸಿದ್ದು, ಮಾಜಿ ಮುಖ್ಯಮಂತ್ರಿ ಕುಟುಂಬದ ಸದಸ್ಯರೊಬ್ಬರು  ಅಭ್ಯರ್ಥಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದರ ನಡುವೆ ಹಳ್ಳಿಹಕ್ಕಿ ಖ್ಯಾತಿಯ ಎಚ್‌.ವಿಶ್ವನಾಥ್‌ ಮತ್ತೆ ಕಾಂಗ್ರೆಸ್‌ನತ್ತ ಚಿತ್ತ ಹರಿಸಿದ್ದು, ಪೂರ್ವಭಾವಿ ಮಾತುಕತೆಗಳು ಪ್ರಾರಂಭವಾಗಿವೆ. ಬಿಜೆಪಿಯಲ್ಲಿ ಇದ್ದೂ ಇಲ್ಲದಂತಾಗಿರುವ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಕೆಲವು ನಾಯಕರು ಆಸಕ್ತಿ ವಹಿಸಿ ಸಿದ್ದರಾಮಯ್ಯ ಮನವೊಲಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

-ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next