Advertisement

2021ರ ಚಾಂಪಿಯನ್ಸ್‌ಟ್ರೋಫಿ ರದ್ದು: ಬಿಸಿಸಿಐನಲ್ಲಿ ಹೊಸ ವಿವಾದ 

11:24 AM Jun 22, 2018 | |

ದುಬೈ: ಬಹಳ ದಿನಗಳಿಂದ ಬಿಸಿಸಿಐ ಮತ್ತು ಐಸಿಸಿ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದ ವಿವಾದವೊಂದು ಸದ್ದಿಲ್ಲದೇ ಮುಗಿದುಹೋಗಿದೆ. 2021ರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಬೇಕಿದ್ದ ಏಕದಿನ ಚಾಂಪಿಯನ್ಸ್‌ ಟ್ರೋಫಿ ರದ್ದಾಗಿದೆ. ಅದರ ಬದಲು ಟಿ20 ವಿಶ್ವಕಪ್‌ ನಡೆಯಲಿದೆ. ಐಸಿಸಿ ಭವಿಷ್ಯದ ವೇಳಾಪಟ್ಟಿಯಲ್ಲಿ ಈ ಮಹತ್ವದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

Advertisement

ಐಸಿಸಿ ಮತ್ತು ಬಿಸಿಸಿಐನ ಮಾಜಿ ಮುಖ್ಯಸ್ಥ, ದಿವಂಗತ ಜಗಮೋಹನ್‌ ದಾಲ್ಮಿಯಾ ಚಾಂಪಿಯನ್ಸ್‌ ಟ್ರೋಫಿ ಯನ್ನು ಆರಂಭಿಸಿದ್ದರು. 2021ರಲ್ಲಿ ದಾಲ್ಮಿಯಾ ಪುಣ್ಯತಿಥಿಯಂದೇ ಚಾಂಪಿಯನ್ಸ್‌ ಟ್ರೋಫಿ ನಡೆಸಲು ಬಿಸಿಸಿಐ ತೀರ್ಮಾನಿಸಿತ್ತು. ಅದನ್ನು ಆರ್ಥಿಕ ಕಾರಣಗಳಿಗಾಗಿ ಐಸಿಸಿ ವಿರೋಧಿಸಿತ್ತು. ಭಾರತದಲ್ಲಿ ಮಹತ್ವದ ಕೂಟಗಳಿಗೂ ಸರ್ಕಾರ ತೆರಿಗೆ ವಿನಾಯ್ತಿ ನೀಡುವುದಿಲ್ಲ. ಇದರಿಂದ ತನಗೆ ಬಹಳ ನಷ್ಟವಾಗುತ್ತದೆ ಎನ್ನುವುದು ಐಸಿಸಿ ಆರೋಪ. ಇದಕ್ಕೂ ಹೆಚ್ಚಾಗಿ ಈ ಕೂಟಗಳನ್ನು ಭಾರತದಿಂದ ಹೊರಕ್ಕೆ ನಡೆಸಲು ಐಸಿಸಿ ಬಯಸಿತ್ತು. ಬೇರೆ ಬೇರೆ ಕಾರಣಗಳಿಂದ ಭಾರತದಲ್ಲಿ ಈ ಕೂಟ ನಡೆಸದಿರುವುದೇ ಸರಿ ಎನ್ನುವುದು ಅದರ ವಾದ. ಈ ಬಗ್ಗೆ ಎರಡೂ ಸಂಸ್ಥೆಗಳ ನಡುವೆ ದೀರ್ಘ‌ ಚಕಮಕಿ ನಡೆದಿತ್ತು. ಇತ್ತೀಚೆಗೆ ಐಸಿಸಿ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗಿದೆ. ಚಾಂಪಿಯನ್ಸ್‌ ಟ್ರೋಫಿ ರದ್ದಾಗಿದೆ.

ಚಾಂಪಿಯನ್ಸ್‌ ಟ್ರೋಫಿ ಶಾಶ್ವತ ರದ್ದು?
 ಚಾಂಪಿಯನ್ಸ್‌ ಟ್ರೋಫಿಯನ್ನು ಶಾಶ್ವತವಾಗಿ ರದ್ದು ಮಾಡಲು ಐಸಿಸಿ ಬಯಸಿದೆ. ವಿಪರೀತ ವೇಳಾಪಟ್ಟಿ ಇರುವುದರಿಂದ ಇದು ಬೇಡ. ಟಿ20 ಕಾಲದಲ್ಲಿ ಏಕದಿನ ಕೂಟಗಳಿಗೆ ಹೆಚ್ಚಿನ ಪ್ರಚಾರ ಸಿಗುವುದಿಲ್ಲ. ಆದ್ದರಿಂದ ಶಾಶ್ವತವಾಗಿಯೇ ಇದನ್ನು ನಿಲ್ಲಿಸಬೇಕೆಂದು ಐಸಿಸಿ ಅಭಿಪ್ರಾಯ ಪಟ್ಟಿದೆ. ಬಿಸಿಸಿಐ ವಿರೋಧದ ಹಿನ್ನೆಲೆಯಲ್ಲಿ ಇನ್ನೂ ಕೂಟ ಉಳಿದುಕೊಂಡಿದೆ.

ಚಾಂಪಿಯನ್ಸ್‌ ಟ್ರೋಫಿ ರದ್ದಾಗಿದ್ದು ಆಡಳಿತಾಧಿಕಾರಿಗಳಿಗೇ ಗೊತ್ತಿಲ್ಲ!
ನವದೆಹಲಿ: ಬಿಸಿಸಿಐನ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳು ಮತ್ತು ಪದಾಧಿಕಾರಿಗಳ ನಡುವಿನ ಒಳಜಗಳ ಈಗ ತಾರಕ್ಕೇರಿದೆ.

2021ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಏಕದಿನ ಚಾಂಪಿಯನ್ಸ್‌ ಟ್ರೋಫಿ ರದ್ದಾಗಿ ಅದರ ಬದಲು ಟಿ20 ವಿಶ್ವಕಪ್‌ ನಡೆಯಲು ನಿರ್ಧಾರವಾಗಿದ್ದು ತನಗೆ ಗೊತ್ತೇ ಇಲ್ಲ. ತನಗೆ ಗೊತ್ತಿಲ್ಲದೇ ಪದಾಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆಂದು ಆಡಳಿತಾಧಿಕಾರಿಗಳು ಆಪಾದಿಸಿದ್ದಾರೆ. ಐಸಿಸಿ ಸಭೆಯಲ್ಲಿ ಬಿಸಿಸಿಐ ಪದಾಧಿಕಾರಿಗಳು ಚಾಂಪಿಯನ್ಸ್‌ ಟ್ರೋಫಿ ರದ್ದುಪಡಿಸಲು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ತನಗೆ ಅಧಿಕೃತ ಘೋಷಣೆಯಾಗುವವರೆಗೆ ಗೊತ್ತೇ ಆಗಿಲ್ಲ ಎನ್ನುವುದು ಆಡಳಿತಾಧಿಕಾರಿಗಳ ನೋವು.

Advertisement

ಇಷ್ಟು ಮಾತ್ರವಲ್ಲದೇ, ಬಿಸಿಸಿಐನ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಅವರು, ಭೂತಾನ್‌ಗೆ ತೆರಳಿ ಕ್ರಿಕೆಟ್‌ ಬೆಳವಣಿಗೆಗೆ ಇರುವ ಪರಿ ಸ್ಥಿತಿ ಅವಲೋಕನ ಮಾಡಿ ಬಂದಿದ್ದಾರೆ. ಆದರೆ, ಇದೆಲ್ಲವನ್ನೂ ಸಮಿತಿಯ ಗಮನಕ್ಕೆ ತಾರದೇ ಮಾಡಲಾಗಿದೆ ಎಂದು ಸಮಿತಿ ಆರೋಪಿಸಿದೆ.

ಈ ಕುರಿತಂತೆ,ಚೌಧರಿಯವರಿಗೆ ಪತ್ರ ಬರೆದಿರುವ ಸಮಿತಿ, ಜು. 4ರೊಳಗೆ ಉತ್ತರಿಸುವಂತೆ ಸೂಚಿಸಿದೆ. ಇದಕ್ಕೂ ಕೆಲ ದಿನಗಳ ಮುನ್ನ ಎರಡೂ ಗುಂಪಿನ ನಡುವೆ ಇನ್ನೊಂದು ಚಕಮಕಿ ನಡೆದಿತ್ತು. ಇಂಗ್ಲೆಂಡ್‌ನ‌ಲ್ಲಿ ನಡೆಯುವ ಐಸಿಸಿ ಸಭೆಯ ನಂತರ ಭಾರತ-ಇಂಗ್ಲೆಂಡ್‌ ನಡುವಿನ 3 ಟಿ20 ಪಂದ್ಯ ನೋಡಲು ಕಾರ್ಯದರ್ಶಿ ಚೌಧರಿ ಬಯಸಿದ್ದರು. ಈ ಖರ್ಚುಗಳನ್ನು ಬಿಸಿಸಿಐ ಭರಿಸಲು ಸಾಧ್ಯವಿಲ್ಲ ಅದನ್ನು ನಿಮ್ಮದೇ ಖರ್ಚಿನಲ್ಲಿ ನೋಡಿಕೊಳ್ಳಿ ಎಂದು ಆಡಳಿತಾಧಿಕಾರಿಗಳು ಕಠಿಣವಾಗಿ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next