Advertisement

ವರುಷಕ್ಕೆ ಬೆಳಕು ಕೊಟ್ಟ ತೆರೆಮರೆ ಸಾಧಕರು

12:30 AM Dec 26, 2018 | |

2018, ಹಲವು ಹೆಜ್ಜೆ  ಗುರುತುಗಳನ್ನು ಚಿರಸ್ಥಾಯಿಯಾಗಿ ಬಿಟ್ಟುಹೋಗಿದೆ. ಎಲ್ಲೋ ತೆರೆಮರೆಯಲ್ಲಿ ಇದ್ದ ಹಲವು ಸಾಧಕರನ್ನು ಬೆಳಕಿಗೆ ತಂದಿದೆ. ಈ ವರ್ಷಕ್ಕೆ ಬೆಳಕು ತಂದ ಸಾಧಕರಿವರು. 

Advertisement

ಸೇವೆಯಲ್ಲೇ ಬದುಕು ಸವೆಸಿದ ಸೂಲಗಿತ್ತಿ ನರಸಮ್ಮ 
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೃಷ್ಣಾಪುರ ಎಂಬ ಹಳ್ಳಿಯಲ್ಲಿ 1920ರಲ್ಲಿ ಜನಿಸಿದ ಸೂಲಗಿತ್ತಿ ನರಸಮ್ಮ ಅವರು ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲದ ಪಾವಗಡದಲ್ಲಿ, ತಮ್ಮ ಇಡೀ ಜೀವಿತಾವಧಿಯಲ್ಲಿ, ಉಚಿತವಾಗಿ 15 ಸಾವಿರಕ್ಕೂ ಹೆಚ್ಚು ಸಹಜ ಹೆರಿಗೆ ಮಾಡಿಸಿದವರು. ಶಾಲಾ ಶಿಕ್ಷಣ ಪಡೆಯದ ಈಕೆ, 12ನೇ ವಯಸ್ಸಿಗೆ ವಿವಾಹವಾದರು. 12 ಮಕ್ಕಳಿಗೆ ತಾಯಿಯಾಗಿ, ಅದರಲ್ಲಿ 4 ಮಕ್ಕಳನ್ನು ಕಳೆದುಕೊಂಡರು. ಹೆರಿಗೆ ಮಾಡಿಸುವುದನ್ನು ಸೇವೆಯಂತೆ  ಭಾವಿಸಿ ಬದುಕಿದ ನರಸಮ್ಮ ಅವರ ಸಾಧನೆ ಗುರ್ತಿಸಿ ಕೇಂದ್ರಸರ್ಕಾರ 2018ರ ಪದ್ಮಶ್ರೀ ಪುರಸ್ಕಾರ ನೀಡಿತ್ತು. ಇದೇ ಮಂಗಳವಾರ(ಡಿ. 25), 98 ವರ್ಷದ ಈ ಹಿರಿಯ ಜೀವ ನಮ್ಮನ್ನಗಲಿದ್ದಾರೆ. ಆದರೆ ತಮ್ಮ ಅಪರಿಮಿತ ಸೇವೆಯಿಂದ ಸಾವಿರಾರು ಜನರ ಮನದಲ್ಲಿ ಬದುಕಲಿದ್ದಾರೆ ಸೂಲಗಿತ್ತಿ ನರಸಮ್ಮ. 

ಪಾಕ್‌ನ ಕಿಶೂ ಬಾಯಿ
ಭಯೋತ್ಪಾದಕ ಪೀಡಿತ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದು ಧರ್ಮಕ್ಕೆ ಸೇರಿದ ಮಹಿಳೆ ಸಂಸದರಾಗುತ್ತಾರೆಂದರೆ, ಅದರ ಹಿಂದೆ ಸಾಧನೆಯಿರಲೇಬೇಕು. ಸಿಂಧ್‌ ಕ್ಷೇತ್ರದಿಂದ ಈ ವರ್ಷ ಸಂಸತ್ತಿಗೆ ಆಯ್ಕೆಯಾಗಿ, ಈ ಸಾಧನೆ ಮಾಡಿದ ಪಾಕ್‌ನ ಕೇವಲ 2ನೇ ಹಿಂದು ಮಹಿಳೆ ಎನಿಸಿಕೊಂಡರು. ಈಕೆ ಬಿಬಿಸಿಯ ವರ್ಷದ 100 ಪ್ರಭಾವಿ ಮಹಿಳೆ ಯರಲ್ಲಿ ಒಬ್ಬರು.

ಪಾರಿಜಾತ ಕಲೆಯ ಉಸಿರು ಯಲ್ಲವ್ವ ರೊಡ್ಡಪ್ಪನವರ
ಉತ್ತರ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಯಕ್ಷಗಾನ ಮಾದರಿಯ ಕಲಾಪ್ರಕಾರ ಪಾರಿಜಾತ. ಬಾಗಲಕೋಟೆ ಜಿಲ್ಲೆಯ ಲೋಕಾಪುರವನ್ನು ಇದರ ತವರೂರೆಂದು ಹೇಳಲಾಗುತ್ತದೆ. ಈ ಕಲೆಯನ್ನು ಶ್ರೀಕೃಷ್ಣ ಪಾರಿಜಾತ ಬಯ ಲಾಟದ ಮೂಲಕ ಜೀವಂತ ವಾಗಿಟ್ಟಿದ್ದು, ಯಲ್ಲವ್ವ ರೊಡ್ಡಪ್ಪನವರ. ಶ್ರೀಕೃಷ್ಣ ಪಾರಿಜಾತ ತಂಡ ಕಟ್ಟಿ ಸಣ್ಣ ಸಣ್ಣ ಪ್ರದರ್ಶನ ನೀಡಲು ಆರಂಭಿಸಿ ದರು. ಮುಂದೆ ಇದು ಜನಪ್ರಿಯ ವಾಯಿತು. ಶ್ರೀಕೃಷ್ಣ ಪಾರಿಜಾತ ಬಯಲಾಟದಲ್ಲಿ ಕೃಷ್ಣನಾಗಿ, ಕೊರವಂಜಿಯಾಗಿ, ನಾರದನಾಗಿ ಹಲವು ಪಾತ್ರ ನಿರ್ವಹಿಸಿರುವ ಯಲ್ಲವ್ವ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. 

ಶ್ರವಣ್‌ -ಸಂಜಯ್‌ ವಯಸ್ಸೆಷ್ಟು ಗೊತ್ತಾ?
ಚೆನ್ನೈನ ಈ ಇಬ್ಬರು ಯುವ ಉದ್ಯಮಿಗಳ ವಯಸ್ಸೆಷ್ಟು ಗೊತ್ತಾ? ಗೋ ಡೈಮೆನ್ಶನ್ಸ್‌ ಕಂಪನಿಯ ಅಧ್ಯಕ್ಷ ಶ್ರವಣ್‌ಗೆ 15, ಸಿಇಒ ಸಂಜಯ್‌ ಕುಮಾರನ್‌ಗೆ 17! 2018ರ ದೇಶದ ಯುವ ಉದ್ಯಮಿಗಳ ಪೈಕಿ ಈ ಇಬ್ಬರು ಅಗ್ರ 10 ಸ್ಥಾನದೊಳಗೆ ಸ್ಥಾನ ಪಡೆದಿದ್ದಾರೆ. ಕ್ರಮವಾಗಿ 6, 8ನೇ ತರಗತಿ ಯಲ್ಲಿ ದ್ದಾಗಲೇ ಇಬ್ಬರೂ ಮೊಬೈಲ್‌ ಆ್ಯಪ್‌ ತಯಾರಿ ಶುರು ಮಾಡಿಕೊಂಡರು. ಇದುವರೆಗೆ 11 ಆ್ಯಪ್‌ಗ್ಳನ್ನು ತಯಾರಿಸಿದ್ದಾರೆ. ಅವನ್ನು ವಿಶ್ವಾದ್ಯಂತ 60,000 ವ್ಯಕ್ತಿಗಳು ಡೌನೊÉàಡ್‌ ಮಾಡಿಕೊಂಡಿದ್ದಾರೆ. ವಿಶ್ವದ ಮೊಬೈಲ್‌ ಬಳಕೆದಾರರಲ್ಲಿ ಅರ್ಧದಷ್ಟು ಮಂದಿಯನ್ನು ತಲುಪುವ ಗುರಿ ಇವರದ್ದು!

Advertisement

ಉಂಡೆ ರಾಗಿ ಕೃಷಿಕ ಮೂಕಪ್ಪ ಪೂಜಾರ
ಬ್ಯಾಡಗಿ ತಾಲೂಕು ಚಿನ್ನಿಕಟ್ಟಿ ಗ್ರಾಮದ ಮೂಕಪ್ಪ ಪೂಜಾರ “ನಾಟಿ ರಾಗಿ’ ಕೃಷಿಕ ಎಂದೇ ಖ್ಯಾತರಾಗಿದ್ದಾರೆ. ದೇಶೀಯ ರಾಗಿ ತಳಿ ಸಂರಕ್ಷಣೆಗೆ ಕಟಿಬದ್ಧರಾಗಿರುವ ಇವರು, ನಾಟಿ ಪದ್ಧತಿಯಲ್ಲಿ ರಾಗಿ ಕೃಷಿ ಮಾಡುವ ಕುರಿತು ದೇಶದ ಹಲವೆಡೆ ಅರಿವು ಮೂಡಿಸಿದ್ದಾರೆ. ಅತಿ ಹಳೆಯ ಉಂಡೆ ರಾಗಿಯನ್ನು 2 ದಶಕಗಳಿಂದ ರಕ್ಷಿಸಿಕೊಂಡು ಬಂದಿದ್ದಾರೆ. ಕಡಿಮೆ ಖರ್ಚಿನಲ್ಲಿ ಗರಿಷ್ಠ ಇಳುವರಿ ಪಡೆಯುವ ಬಗೆಯನ್ನು 8,10 ಸಾವಿರ ರೈತರಿಗೆ ತಿಳಿಸಿದ್ದಾರೆ. ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ದಿಢೀರನೆ ಹೊರಜಗತ್ತಿಗೆ ಪರಿಚಿತರಾಗಿದ್ದಾರೆ. 

ಆಧುನಿಕ ಭಗೀರಥ ಕಲ್ಮನೆ ಕಾಮೇಗೌಡರು
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಲ್ಮನೆ ಕಾಮೇಗೌಡರನ್ನು ಆಧುನಿಕ ಭಗೀರಥ ಎಂದು ಕರೆದರೆ, ಅದನ್ನು ಉತ್ಪ್ರೇಕ್ಷೆ ಎಂದು ಭಾವಿಸುವ ಅಗತ್ಯವಿಲ್ಲ. ಮಳವಳ್ಳಿ ತಾಲೂಕಿನ ಕುಂದೂರು ಬೆಟ್ಟದ ಸುತ್ತ ದೇಶಕ್ಕೇ ಮಾದರಿ ಯಾಗು ವಂತಹ 14 ಚೆಕ್‌ ಡ್ಯಾಂಗಳನ್ನು ನಿರ್ಮಾಣ ಮಾಡಿದ್ದಾರೆ. ಕೆಆರ್‌ಎಸ್‌ ಜಲಾಶಯ ದಲ್ಲಿ ನೀರಿಲ್ಲ ದಿದ್ದರೂ, ಇವರ ಕೆರೆಗಳಲ್ಲಿ ನೀರಿಗೆ ಬರವಿರು ವುದಿಲ್ಲ. ಕುಂದೂರು ಬೆಟ್ಟದ ಸುತ್ತ ಬಿಲ್ವಪತ್ರೆ, ಬೇವು, ಆಲದಂತಹ ಮರಗಳನ್ನು ಬೆಳೆಸಿದ್ದಾರೆ. ಪ್ರಾಣಿಗಳ ಮೇಲೆಯೂ ಅಪಾರ ಪ್ರೀತಿ ಇರುವ ಇವರು ಈ ಬಾರಿಯ ರಾಜ್ಯೋತ್ಸವ ಪುರಸ್ಕೃತರು.

ಪ್ಲಾಸ್ಟಿಕ್‌ ರಸ್ತೆಯ ತಜ್ಞ ವಿಜ್ಞಾನಿ ವಾಸುದೇವನ್‌
ತಮಿಳುನಾಡಿನ ವಿಜ್ಞಾನಿ ರಾಜಗೋಪಾಲನ್‌ ವಾಸುದೇವನ್‌ ಹೆಸರನ್ನು ನೀವು ಕೇಳಿರುವುದು ಅನುಮಾನ. ಮದುರೈನ ತ್ಯಾಗರಾಜರ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರೊಫೆಸರ್‌ ಆಗಿರುವ ಇವರ ಸಂಶೋಧನೆಯ ವಿಷಯ, ತ್ಯಾಜ್ಯ ನಿರ್ವಹಣೆ. ವ್ಯರ್ಥ ಪ್ಲಾಸ್ಟಿಕನ್ನು ಸುಡದೇ ರಸ್ತೆ ನಿರ್ಮಾಣದಲ್ಲಿ ಬಳಸಿದರೆ, ಪರಿಸರಕ್ಕೂ ಹಾನಿಯಿಲ್ಲ, ರಸ್ತೆಗಳೂ ಚೆನ್ನಾಗಿರುತ್ತವೆ ಎಂಬುದನ್ನು ಸಾಧಿಸಿ ತೋರಿದ್ದಾರೆ. ಈ ಮಾದರಿಯನ್ನು ಗ್ರಾಮೀಣ ಭಾರತದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದನ್ನು ಗುರ್ತಿಸಿ ಭಾರತ ಸರ್ಕಾರ 2018ರ ಪದ್ಮಶ್ರೀ ಪುರಸ್ಕಾರ ನೀಡಿದೆ.

ಮಂಡ್ಯದ ಯುವ ವಿಜ್ಞಾನಿ ಪ್ರತಾಪ್‌ ಎಂಬ ವಿಸ್ಮಯ
ಮಂಡದ ಮಳವಳ್ಳಿ  ತಾಲೂಕು, ನೆಟ್ಕಲ್‌ ಗ್ರಾಮದ ಎನ್‌.ಎಂ.ಪ್ರತಾಪ್‌ ಈಗ ಮೈಸೂರಿನ ಜೆಎಸ್‌ಎಸ್‌ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾರೆ. ಬಡಕುಟುಂಬದಲ್ಲಿ ಹುಟ್ಟಿದ ಈತ, ದೇಶದ ಗಡಿರಕ್ಷಣೆಗೆ ನೆರವಾಗುವ ಡ್ರೋನ್‌ ಕ್ಯಾಮೆರಾವನ್ನು ಆವಿಷ್ಕರಿಸಿದ್ದಾರೆ. 2017ರಲ್ಲಿ ಜಪಾನ್‌ನಲ್ಲಿ ನಡೆದ ರೊಬೊಟಿಕ್‌ ಪ್ರದರ್ಶನದಲ್ಲಿ ಚಿನ್ನ ಗೆದ್ದು, 10,000 ಅಮೆರಿಕನ್‌ ಡಾಲರ್‌ ನಗದನ್ನೂ ಪಡೆದ. ಈ ವರ್ಷ ಜರ್ಮನಿಯಲ್ಲಿ ನಡೆದ ಸೆಬಿಟ್‌ ಕಂಪ್ಯೂಟರ್‌ ಎಕ್ಸ್‌ಪೋದಲ್ಲಿ ಭಾರತದ ಪ್ರತಿನಿಧಿ ಯಾಗಿ ಭಾಗವಹಿಸಿ ಆಲ್ಬರ್ಟ್‌ ಐನ್‌ಸ್ಟಿàನ್‌ ಇನ್ನೋವೇಷನ್‌ ಪ್ರಶಸ್ತಿ ಪಡೆದಿದಿದ್ದಾನೆ ಎನ್‌.ಎಂ. ಪ್ರತಾಪ್‌.

ಅಮ್ಮ-ಚಿಕ್ಕಮ್ಮನನ್ನು ಉಳಿಸಿದ ಬಾಲಕ
ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ಬ್ರಹ್ಮಪುತ್ರಾ ನದಿಗೆ, 11 ವರ್ಷದ ಹುಡುಗನೊಬ್ಬ, ಅರ್ಧ ಗಂಟೆಯ ಅವಧಿಯಲ್ಲಿ, ಮೇಲಿಂದ ಮೇಲೆ ಮೂರು ಬಾರಿ ಜಿಗಿದು ತನ್ನ ತಾಯಿ ಮತ್ತು ಚಿಕ್ಕಮ್ಮನನ್ನು ಉಳಿಸಿ ಸುದ್ದಿಯಾದ. ಕಮಲ್‌ ಕೃಷ್ಣದಾಸ್‌ ಎಂಬ ಹೆಸರಿನ ಈ ಸಾಹಸಿ ಬಾಲಕ ಅಸ್ಸಾಂ ರಾಜ್ಯದವನು. ಇದೇ ಅವಧಿಯಲ್ಲಿ ಭರತ್‌ ಬೋರಾ ಎಂಬ ನಾವಿಕ ಜೀವದ ಹಂಗು ತೊರೆದು ತಮ್ಮ ಬೋಟಿನಲ್ಲಿ 12 ಜನರನ್ನು ರಕ್ಷಿಸಿ ಮಾನವೀಯತೆ ಮೆರೆದು ಸುದ್ದಿಯಾದ. 

ಚಿನ್ನದ ಗೆಲುವಿನ‌ ಓಟಗಾರ್ತಿ ಹಿಮಾದಾಸ್‌
ಅಸ್ಸಾಂನ ಧಿಂಗ್‌ನಲ್ಲಿ ಜನಿಸಿದ ಹಿಮಾದಾಸ್‌ಗೆ ಈಗ ಕೇವಲ 18 ವರ್ಷ. ಜಿಂಕೆಯಂತೆ ಓಡುವ ಈಕೆ ತನ್ನ ಸಾಮರ್ಥ್ಯದ ಮೂಲಕ ಇಡೀ ಭಾರತವನ್ನೇ ನಿಬ್ಬೆರಗು ಮಾಡಿದ್ದಾರೆ. ಈ ವರ್ಷ ಫಿನ್‌ಲ್ಯಾಂಡ್‌ನ‌ಲ್ಲಿ ನಡೆದ 20 ವಯೋಮಿತಿಯೊಳಗಿನ ವಿಶ್ವಚಾಂಪಿಯನ್‌ಶಿಪ್‌ನ 400 ಮೀ. ಓಟದಲ್ಲಿ ಚಿನ್ನ ಗೆದ್ದರು. ಇಂತಹ ಸಾಧನೆ ಮಾಡಿದ ಭಾರತದ ಮೊದಲ ಸ್ಪರ್ಧಿ ಈಕೆ. ಅದರ ಬೆನ್ನಲ್ಲೇ ಏಷ್ಯಾಡ್‌ನ‌ಲ್ಲಿ 1 ಚಿನ್ನ, 2 ಬೆಳ್ಳಿ ಗೆದ್ದರು. ಏಷ್ಯಾಡ್‌ನ‌ಲ್ಲಿ ಚಿಗರೆಯಂತೆ ಓಡುವ ಈಕೆಯನ್ನು ನೋಡಿ ಭಾರತ, ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಇನ್ನಾದರೂ ಒಂದು ಪದಕ ಗೆಲ್ಲಬಹುದು ಎಂಬ ಭರವಸೆ ಮೂಡಿದೆ.

ಐಪಿಎಲ್‌ ನಂತರ ವರುಣ್‌ ಚಕ್ರವರ್ತಿ ಬದುಕೇ ಸ್ಪಿನ್ನಾಯ್ತು
27 ವರ್ಷದ ಈ ಸ್ಪಿನ್ನರ್‌ ಕಥೆಯೇ ರೋಚಕ. ತಮಿಳುನಾಡು ಪ್ರೀಮಿಯರ್‌ ಲೀಗ್‌ ಮೂಲಕ 7 ರೀತಿ ಸ್ಪಿನ್‌ ಮಾಡಬಲ್ಲ ಇವರ ಸಾಮರ್ಥ್ಯ ಬೆಳಕಿಗೆ ಬಂತು. ಹೊರಜಗತ್ತಿಗೆ ಪರಿಚಯವೇ ಇಲ್ಲದ ಇವರನ್ನು ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ಕಿಂಗ್ಸ್‌ ಪಂಜಾಬ್‌ ತಂಡ 8.4 ಕೋಟಿ ರೂ. ನೀಡಿ ಖರೀದಿಸಿತು. ಮೊದಲು ಬ್ಯಾಟ್ಸ್‌ಮನ್‌ ಆಗಿದ್ದ ಈತ, ಕ್ರಿಕೆಟ್‌ ತ್ಯಜಿಸಿ ಗೃಹನಿರ್ಮಾಣ ತಜ್ಞರಾಗಿ, ಕೆಲಸ ಬಿಟ್ಟು ಮತ್ತೆ ವೇಗಿಯಾಗಿ ಕ್ರಿಕೆಟ್‌ ಪ್ರವೇಶಿಸಿದರು. ಮಂಡಿಗೆ ಗಾಯವಾಯಿ ತೆಂದು ಸ್ಪಿನ್‌ ಬೌಲಿಂಗ್‌ ಶುರು ಮಾಡಿ ವಿಶ್ವವಿಖ್ಯಾತರಾಗಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next