Advertisement

46 ವರ್ಷಗಳಲ್ಲಿ 20 ವರ್ಷ ಮಳೆ ಕೊರತೆ

03:05 AM Jul 17, 2017 | Harsha Rao |

ಬೆಂಗಳೂರು: ಈಗ ಎಲ್ಲರ ಚಿತ್ತ ಈ ಬಾರಿ ನಿರೀಕ್ಷಿತ ಮಳೆ ಆಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಕಡೆಗಿದೆ.
ಆದರೆ ರಾಜ್ಯದ ನಾಲ್ಕೂವರೆ ದಶಕಗಳ ಅಂಕಿ-ಅಂಶಗಳ ಪ್ರಕಾರ ಸರಾಸರಿ ಎರಡು ವರ್ಷಕ್ಕೊಮ್ಮೆ ಮಾತ್ರ ವಾಡಿಕೆ
ಮಳೆ ಆಗುತ್ತಿದೆ. ಕಳೆದ 46 ವರ್ಷಗಳ ಜೂನ್‌ 1ರಿಂದ ಜುಲೈ 15ರವರೆಗಿನ ಅಂಕಿ-ಅಂಶಗಳನ್ನು ವಿಶ್ಲೇಷಿಸಿದರೆ,
18 ರಿಂದ 20 ವರ್ಷಗಳು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಹಾಗಾಗಿ, ಮುಂಗಾರು ಪ್ರವೇಶಿಸಿದ ಮೊದಲೆರಡು ತಿಂಗಳು ವಾಡಿಕೆ ಮಳೆ ಆಗದಿರುವುದು ಕರ್ನಾಟಕದ ಪಾಲಿಗೆ ಸರ್ವೇಸಾಮಾನ್ಯವಾಗಿದೆ.

Advertisement

1971ರಿಂದ 2017ರವರೆಗೆ ಮುಂಗಾರು ಪ್ರವೇಶದ ಮೊದಲ ಒಂದೂವರೆ ತಿಂಗಳಲ್ಲಿ ಹೆಚ್ಚು-ಕಡಿಮೆ 20 ಬಾರಿ ವಾಡಿಕೆಗಿಂತ ಕನಿಷ್ಠ ಶೇ. 10ರಿಂದ ಗರಿಷ್ಠ 43ರಷ್ಟು ಕಡಿಮೆ ಮಳೆಯಾಗಿದೆ. ಕೇವಲ 12 ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅಂದರೆ, ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆ ಸುಸ್ಥಿರತೆ ಕಡಿಮೆಯಾಗುತ್ತಿದೆ. ಅದರಲ್ಲೂ 2001ರಿಂದ 2017ರವರೆಗೆ 9 ಬಾರಿ ಈ ಅವಧಿಯಲ್ಲಿ ವಾಡಿಕೆಗಿಂತ ಕನಿಷ್ಠ ಶೇ. 13ರಿಂದ ಗರಿಷ್ಠ ಶೇ. 43ರಷ್ಟು ಕಡಿಮೆ ಮಳೆ ದಾಖಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಹವಾಮಾನ ಇಲಾಖೆ ಈ ಅಂಕಿ-ಅಂಶ ನೀಡಿದೆ.

ಸಾಮಾನ್ಯವಾಗಿ ಮುಂಗಾರು ಮಳೆ ಅವಧಿ ಜೂನ್‌ -ಸೆಪ್ಟೆಂಬರ್‌. ಆರಂಭದಲ್ಲಿ ಮಳೆ ಕೈಕೊಟ್ಟರೂ, ನಂತರ ಉತ್ತಮ ಮಳೆಯಾಗಲು ಅವಕಾಶ ಇರುತ್ತದೆ. ಆದರೆ, ಜೂನ್‌-ಜುಲೈನಲ್ಲಿ ಕೈಕೊಟ್ಟ ವರ್ಷಗಳಲ್ಲಿ ಬಹುತೇಕ ಸಲ ರಾಜ್ಯಕ್ಕೆ ಬರ ಎದುರಾಗಿದೆ. ಈ ರೀತಿ ಮಳೆ ಪದ್ಧತಿ ಕೃಷಿ ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತದೆ.

ಮಳೆ ಹಂಚಿಕೆಯೂ ಅಸಮರ್ಪಕ: ವಾಡಿಕೆ ಮಳೆ ಆಗದಿರುವುದು ಒಂದೆಡೆಯಾದರೆ, ವಾಡಿಕೆ ಮಳೆಯಾಗಿದ್ದರೂ ಆ ಮಳೆ ಹಂಚಿಕೆ ಸಮರ್ಪಕವಾಗಿರುವುದಿಲ್ಲ ಎನ್ನುವುದು ಮತ್ತೂಂದು ಸಮಸ್ಯೆ. ಉದಾಹರಣೆಗೆ ಕರಾವಳಿ ಅಥವಾ ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗಿದ್ದರೆ, ದ.ಒಳನಾಡಿನಲ್ಲಿ ಮಳೆ ಕೊರತೆ ಇರುತ್ತದೆ. ಕೆಲವೊಮ್ಮೆ ಉ.ಒಳನಾಡಿನಲ್ಲಿ ನಿರೀಕ್ಷಿತ ಮಳೆ ಆಗಿರುವುದಿಲ್ಲ. ಒಟ್ಟಾರೆ ಮಳೆ ಪ್ರಮಾಣ ತೆಗೆದುಕೊಂಡಾಗ, ಅದು ವಾಡಿಕೆ ಮಳೆಗೆ ಸರಿಸಮಾನವಾಗಿರುತ್ತದೆ. ಈ ವರ್ಷದ ಅಂಕಿ-ಅಂಶಗಳಲ್ಲೂ ಇದನ್ನು ಕಾಣಬಹುದು ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಡಾ.ಸಿ.ಎನ್‌. ಪ್ರಭು ತಿಳಿಸುತ್ತಾರೆ.

ಈಗಲೇ ನಿರ್ಧಾರ ಸರಿಯಲ್ಲ: ಆದರೆ, ಕೇವಲ ಒಂದೂವರೆ ತಿಂಗಳ ಅಂಕಿ-ಅಂಶಗಳನ್ನು ಆಧರಿಸಿ ವಾಡಿಕೆ ಮಳೆಯನ್ನು ನಿರ್ಧರಿಸುವುದು ಸರಿ ಅಲ್ಲ. ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದು ಜೂನ್‌ 5ರ ಆಸುಪಾಸು. ಅಲ್ಲಿಗೆ 40 ದಿನಗಳು ಮಾತ್ರ ಉಳಿಯಿತು. ಅಷ್ಟಕ್ಕೂ ಜೂನ್‌ ಮಧ್ಯಭಾಗದಲ್ಲಿ ಮಳೆ ವಾಡಿಕೆಗಿಂತ ಹೆಚ್ಚಿತ್ತು. ನಂತರದಲ್ಲಿ ಇಳಿಮುಖವಾಯಿತು.
ಈಗ ಮುಂದಿನ ಒಂದೆರಡು ವಾರಗಳಲ್ಲಿ ಉತ್ತಮ ಮಳೆಯಾದರೆ, ಒಂದೂವರೆ ತಿಂಗಳ ಅಂಕಿ-ಅಂಶಗಳೆಲ್ಲಾ ತಲೆಕೆಳಗಾಗುತ್ತವೆ. ಹಾಗಾಗಿ, ಈಗಲೇ ಈ ಬಗ್ಗೆ ಹೇಳುವುದು ಕಷ್ಟ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಎಲ್‌.ರಮೇಶ್‌ಬಾಬು ಹೇಳುತ್ತಾರೆ.

Advertisement

ದೇಶದಲ್ಲೇ ಎರಡನೇ ಅತಿ ಹೆಚ್ಚು ಒಣಭೂಮಿ ಹೊಂದಿರುವ ಹಾಗೂ ಈ ಒಣಭೂಮಿಯಲ್ಲಿ ಅತ್ಯಧಿಕ ಕೃಷಿ ಚಟುವಟಿಕೆಗಳನ್ನು ಮಾಡುತ್ತಿರುವ ರಾಜ್ಯ ಕರ್ನಾಟಕ. ಅದೆಲ್ಲವೂ ಮಳೆಯನ್ನು ಅವಲಂಬಿಸಿದೆ. ಆದ್ದರಿಂದ ಮಳೆಯ ಸುಸ್ಥಿರತೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದು ಇಡೀ ಕೃಷಿ ಆರ್ಥಿಕತೆಯ ಏರುಪೇರಿಗೆ ಕಾರಣವಾಗಲಿದೆ. ಸತತ ಎರಡು ವರ್ಷಗಳೂ ಇದೇ ಆಗಿದೆ. ಈ ಎರಡೂ “ಬರ ಸಿಡಿಲು’ ಗಳಿಂದ ರೈತರು ಇನ್ನೂ ಚೇತರಿಸಿ ಕೊಂಡಿಲ್ಲ, ಅಷ್ಟರಲ್ಲಿ ಪ್ರಸಕ್ತ ಸಾಲಿಗೂ ಮಳೆ ಕೊರತೆ ಮತ್ತೆ ರೈತರಲ್ಲಿ ಚಿಂತೆಗೆ ಕಾರಣವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next