Advertisement

ವೈದ್ಯಕೀಯ ಸೀಟು ಕೊಡಿಸುವುದಾಗಿ ವಿದ್ಯಾರ್ಥಿನಿಗೆ 20 ಲಕ್ಷ ವಂಚನೆ

12:43 PM May 31, 2019 | Team Udayavani |

ಬೆಂಗಳೂರು: ಕೆ.ಜಿ.ಹಳ್ಳಿಯ ಡಾ ಬಿ.ಆರ್‌. ಅಂಬೇಡ್ಕರ್‌ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ನಾಲ್ವರು ಆರೋಪಿಗಳು ಆಂಧ್ರ ಮೂಲದ ವಿದ್ಯಾರ್ಥಿನಿಗೆ 20 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಹೈದರಾಬಾದ್‌ನ ಎನ್‌.ಶ್ವೇತಾ ಬಿಂದು ಎಂಬ ವಿದ್ಯಾರ್ಥಿನಿ ಮೇ 28ರಂದು ಕಾಡುಗೊಂಡನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಆಧಾರದ ಮೇಲೆ ಮಧ್ಯವರ್ತಿಗಳು ಎನ್ನಲಾದ ಸಾಕೇತ್‌, ಸಂತೋಷ್‌, ಕೃಷ್ಣಕುಮಾರ್‌, ಮೆಡಿಕಲ್‌ ಕಾಲೇಜಿನ ಅಧ್ಯಕ್ಷನ ಸಹೋದರ ಎಂದು ಹೇಳಿಕೊಂಡಿದ್ದ ವ್ಯಕ್ತಿ ಸೇರಿ ನಾಲ್ವರ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.

Advertisement

ವಿದ್ಯಾರ್ಥಿನಿ ಶ್ವೇತಾ ಬಿಂದು ಮೆಡಿಕಲ್‌ ಎಂ.ಡಿ ಸೀಟು ಪಡೆಯಲು ದೆಹಲಿಯ ಮಧ್ಯವರ್ತಿ ಸಾಕೇತ್‌ನನ್ನು ಕೇಳಿದ್ದರು. ಆತ ಬೆಂಗಳೂರಿನ ಸಂತೋಷ್‌ನ ಮೊಬೈಲ್‌ ನಂಬರ್‌ ಕೊಟ್ಟಿದ್ದರು. ಅದರಂತೆ ಆಕೆ, ಸಂತೋಷ್‌ನನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ. ಆತ ಅಂಬೇಡ್ಕರ್‌ ವೈದ್ಯಕೀಯ ಕಾಲೇಜಿನಲ್ಲಿ ತನಗೆ ಪರಿಚಯಸ್ಥ ವ್ಯಕ್ತಿಗಳಿದ್ದು, ಹಣ ಕೊಟ್ಟರೆ ಸೀಟು ಕೊಡಿಸುವುದಾಗಿ ನಂಬಿಸಿದ್ದ. ಕೆಲ ದಿನಗಳ ಬಳಿಕ ಕಾಲೇಜಿನ ಅಧ್ಯಕ್ಷರ ಕೊಠಡಿಗೆ ವಿದ್ಯಾರ್ಥಿನಿಯನ್ನು ಕರೆದೊಯ್ದಿದ್ದ ಸಂತೋಷ್‌, ತನ್ನ ಸ್ನೇಹಿತನನ್ನೇ ಅಧ್ಯಕ್ಷನ ಸಹೋದರ ಎಂದು ಪರಿಚಯಿಸಿಕೊಟ್ಟಿದ್ದ. ಆಗ ಆತ 10 ಲಕ್ಷ ರೂ. ಅನ್ನು ಮುಂಗಡವಾಗಿ ಕೊಟ್ಟರೆ, ಸೀಟು ಕೊಡಿಸುವುದಾಗಿ ನಂಬಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಮಾ.5ರಂದು ಮುಂಗಡ ಹಣ 50 ಸಾವಿರ ರೂ. ಅನ್ನು ಸಂತೋಷ್‌ ಮತ್ತು ಅಧ್ಯಕ್ಷನ ಸಹೋದರ ಎಂದು ಹೇಳಿಕೊಂಡಿದ್ದ ವ್ಯಕ್ತಿಗೆ ಕೊಟ್ಟಿದ್ದಾರೆ. ನಂತರ ಮಾ 8ರಂದು ಕಾಲೇಜು ಆವರಣದಲ್ಲೇ 9.50 ಲಕ್ಷ ರೂ.ಹಾಗೂ ಮೇ 20ರಂದು 10 ಲಕ್ಷ ರೂ. ಒಟ್ಟು 20 ಲಕ್ಷ ರೂ. ಕೊಟ್ಟಿದ್ದಾರೆ. ಆದರೆ, ಆರೋಪಿಗಳು ಇದುವರೆಗೂ ವೈದಕೀಯ ಎಂ.ಡಿ.ಸೀಟು ಕೊಡಿಸದೇ, ತೆಗೆದುಕೊಂಡಿರುವ ಹಣವನ್ನು ವಾಪಸ್‌ ಕೊಡದೆ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿಉಲ್ಲೇಖೀಸಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next