Advertisement

2.34 ಲಕ್ಷ ಎಕರೆ ಅನಧಿಕೃತ ಸಾಗುವಳಿ ಸಕ್ರಮಕ್ಕೆ ಅರ್ಜಿ!

10:47 AM Jun 30, 2019 | keerthan |

ಸುಳ್ಯ: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 2.34 ಲಕ್ಷ ಎಕರೆ ಸರಕಾರಿ ಭೂಮಿಯಲ್ಲಿ ಮಾಡಲಾದ ಅನಧಿಕೃತ ಸಾಗುವಳಿ ಸಕ್ರಮಕ್ಕೆ ನಮೂನೆ-57ರಲ್ಲಿ 1,26,576 ಅರ್ಜಿ ಸಲ್ಲಿಕೆಯಾಗಿವೆ. ಭೂಕಂದಾಯ ಸಂಬಂಧಿ 1964ರ ಕಲಂ 94ಎ (4)ಗೆ 2018 ಮಾ.17ರಂದು ತಿದ್ದುಪಡಿ ತಂದು 2018 ಅ.25
ರಂದು ಮಾರ್ಗ ಸೂಚಿ ಪ್ರಕಟಿಸಲಾಗಿತ್ತು. 2019ರ ಮಾ.16ಕ್ಕೆ ಅರ್ಜಿ ಸಲ್ಲಿಕೆಗೆ ಕೊನೆ ದಿನ ನಿಗದಿಪಡಿಸಲಾಗಿತ್ತು.

Advertisement

ಗರಿಷ್ಠ-ಕನಿಷ್ಠ
ದ.ಕನ್ನಡ ಜಿಲ್ಲೆಯಲ್ಲಿ 1,58,816.89 ಎಕರೆ ಸಾಗುವಳಿ ಸಕ್ರಮಕ್ಕೆ 88,549 ಅರ್ಜಿ ಮತ್ತು ಉಡುಪಿ ಜಿಲ್ಲೆಯಲ್ಲಿ 76,013.36 ಎಕರೆ ಸಕ್ರಮಕ್ಕೆ 38,027 ಅರ್ಜಿ ಸಲ್ಲಿಸಲಾಗಿದೆ. ಆಯಾ ತಾ| ಕಚೇರಿಗಳ ಕಡತ ನಿರ್ವಾಹಕರು ನೀಡಿದ ಮಾಹಿತಿ ಪ್ರಕಾರ ದ.ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ 31,123 ಅರ್ಜಿ (ಗರಿಷ್ಠ), ಮೂಲ್ಕಿ 125 (ಕನಿಷ್ಠ) ಅರ್ಜಿ ಸಲ್ಲಿಕೆಯಾಗಿವೆ. ಉಡುಪಿ ಜಿಲ್ಲೆಯ ಕುಂದಾಪುರ ತಾ|ನಲ್ಲಿ 18,651 (ಗರಿಷ್ಠ), ಕಾಪುವಿನಲ್ಲಿ 206 (ಕನಿಷ್ಠ) ಅರ್ಜಿ ಸಲ್ಲಿಕೆಯಾಗಿವೆ.

ಸಕ್ರಮಕ್ಕೆ ಮೂರು ಅವಕಾಶ
1964ರ ಕರ್ನಾಟಕ ಭೂ ಕಂದಾಯ ಕಾಯ್ದೆಗೆ 1991ರಲ್ಲಿ ತಿದ್ದುಪಡಿ ತಂದು ನಮೂನೆ-50ರಲ್ಲಿ ಆರು ತಿಂಗಳ ಕಾಲ ಅರ್ಜಿ ಸ್ವೀಕಾರ ನಡೆದಿತ್ತು. ಬಾಕಿ ಉಳಿದವರಿಗೆ 1998ರ ನ.1ರಿಂದ 1999ರ ಎ.30ರ ವರೆಗೆ ನಮೂನೆ-
53ರಲ್ಲಿ ಮತ್ತು 2018 ನವೆಂಬರ್‌ನಿಂದ ನಮೂನೆ -57ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ನಮೂನೆ 50 ಮತ್ತು 53ರಲ್ಲಿ ಉಭಯ ಜಿಲ್ಲೆಗಳಲ್ಲಿ 1,02,934 ಅರ್ಜಿದಾರರ 3.47 ಲಕ್ಷ ಎಕರೆ ಅನಧಿಕೃತ ಸಾಗುವಳಿ ಭೂಮಿ ಸಕ್ರಮವಾಗಿದೆ.

ದ.ಕ. ಜಿಲ್ಲೆಯಲ್ಲಿ ನಮೂನೆ 50ರಲ್ಲಿ 1,13,730 ಅರ್ಜಿ ಸಲ್ಲಿಕೆಯಾಗಿ, 46,577 ಮಂಜೂರಾತಿ, 67,084 ತಿರಸ್ಕೃತಗೊಂಡಿವೆ. ನಮೂನೆ 53ರಲ್ಲಿ 1,11,387 ಅರ್ಜಿ ಸಲ್ಲಿಕೆಯಾಗಿ 32,725 ಮಂಜೂರಾತಿ, 71,306 ತಿರಸ್ಕೃತವಾಗಿದ್ದರೆ, ಉಡುಪಿ ಜಿಲ್ಲೆಯಲ್ಲಿ ನಮೂನೆ 50ರಲ್ಲಿ 50,358 ಅರ್ಜಿ ಸಲ್ಲಿಕೆ, 11,927 ಮಂಜೂರಾತಿ, 38, 259 ತಿರಸ್ಕೃತವಾಗಿದೆ. ನಮೂನೆ 53ರಲ್ಲಿ 58,453 ಅರ್ಜಿ ಸಲ್ಲಿಕೆ. 11, 724 ಮಂಜೂರಾತಿ, 76,080 ತಿರಸ್ಕೃತವಾಗಿ, 10,914 ವಿಲೇಗೆ ಬಾಕಿ ಉಳಿದಿವೆ.

6 ದಿನ ನೀತಿ ಸಂಹಿತೆ ಅರ್ಜಿ ಸಲ್ಲಿಕೆ ಬಾಕಿ!
2005 ಜ.1ಕ್ಕಿಂತ ಮೊದಲು ಅನಧಿಕೃತ ಅನುಭೋಗ ಹೊಂದಿರುವವರು ಜಮೀನು ಸಕ್ರಮಕ್ಕೆ ನಮೂನೆ 57ರಲ್ಲಿ 2019 ಮಾ.16ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಮಾ.10ರಿಂದ ಜಾರಿಗೊಂಡ ಕಾರಣ ಕೊನೆಯ 6 ದಿನ ಅರ್ಜಿ ಸಲ್ಲಿಸಲು ಅವಕಾಶ ಸಿಗಲಿಲ್ಲ. ಇದರಿಂದ ನೂರಾರು ಮಂದಿಗೆ ಅವಕಾಶ ಕೈತಪ್ಪಿದೆ. ಹೀಗಾಗಿ ಮರು ಅರ್ಜಿ ಸಲ್ಲಿಕೆಗೆ ಅವಕಾಶ ವಿಸ್ತರಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.

Advertisement

ಕಾಲಾವಧಿ ವಿಸ್ತರಣೆ ಸರಕಾರ ನಿರ್ಧಾರ
ಅಕ್ರಮ-ಸಕ್ರಮ ನಮೂನೆ-57ರ ಅರ್ಜಿ ಸಲ್ಲಿಕೆ ಕಾಲಾವಕಾಶ ಮಾರ್ಚ್‌ನಲ್ಲಿ ಕೊನೆಗೊಂಡಿದೆ. ಈಗ ಮತ್ತೆ ಅರ್ಜಿ ಸ್ವೀಕರಿಸಲು ಸೂಚನೆ ಬಂದಿಲ್ಲ; ವಿಸ್ತರಿಸುವ ಸಾಧ್ಯತೆ ಇದೆ. ಈ ಬಗ್ಗೆ ಸಚಿವ ಸಂಪುಟ ಸಭೆ ತೀರ್ಮಾನಿಸುತ್ತದೆ.  – ಎಚ್‌.ಕೆ. ಕೃಷ್ಣಮೂರ್ತಿ ಸಹಾಯಕ ಆಯುಕ್ತ ಪುತ್ತೂರು ಉಪವಿಭಾಗ

ಹೋಬಳಿ ಮಟ್ಟದಲ್ಲಿ ವಿಲೇ
ಅನಧಿಕೃತ ಸಾಗುವಳಿ ಸಕ್ರಮಗೊಳಿಸುವ ಅರ್ಜಿ ವಿಲೇ ಮಾಡಲು ಆಯಾ ಕ್ಷೇತ್ರದಲ್ಲಿ ಶಾಸಕರ ಅಧ್ಯಕ್ಷತೆಯ ಸಮಿತಿ ರಚಿಸಲಾಗುತ್ತದೆ. ತಹಶೀಲ್ದಾರ್‌ ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಈ ಬಾರಿ ತಾಲೂಕು ಮಟ್ಟದಲ್ಲಿ ವಿಲೇ ಮಾಡುವ ಬದಲು ಆಯಾ ಹೋಬಳಿ ಮಟ್ಟದಲ್ಲೇ ಸಮಿತಿ ಸಭೆ ನಡೆಸಿ ಅರ್ಜಿ ವಿಲೇ ಮಾಡುವ ಪ್ರಸ್ತಾವ ಸರಕಾರದ ಮುಂದಿದೆ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next