Advertisement

ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣಕ್ಕೆ 1536 ಕೋಟಿ

03:30 PM Aug 16, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣಕ್ಕೆ 1536 ಕೋಟಿ ರೂ. ವೆಚ್ಚದ ವಿವರವಾದ ಯೋಜನಾ ವರದಿ ಸಿದ್ಧಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ 74ನೇ ಸ್ವಾತಂತ್ರ್ಯೊತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಬೆಣ್ಣೆಹಳ್ಳದಲ್ಲಿ ಸಾಕಷ್ಟು ನೀರು ವ್ಯರ್ಥವಾಗಿ ಹೋಗುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಈ ಹಳ್ಳದ ಉಪ ಹಳ್ಳವಾಗಿರುವ ತುಪ್ಪರಿಹಳ್ಳ ಪ್ರವಾಹ ನಿಯಂತ್ರಣಕ್ಕೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಪೊಲ್ಲಾವರಂ ಸ್ಕೀಮಿನಡಿ ನವಲಗುಂದ ತಾಲೂಕಿನ ಸುಮಾರು 10 ಸಾವಿರ ಹೆಕ್ಟೇರ್‌ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 1 ಟಿಎಂಸಿ ನೀರು ಹಂಚಿಕೆಯಾಗಿದೆ. ಏತ ನೀರಾವರಿ, ಕೆರೆ ತುಂಬುವ ಯೋಜನೆ ಮತ್ತಿತರ ಕಾಮಗಾರಿಗಳಿಗೆ 400 ಕೋಟಿ ರೂ. ಸಂಯೋಜಿತ ವರದಿ ಅನುಮೋದನೆಯಾಗಿದೆ. ಕರ್ನಾಟಕ ನೀರಾವರಿ ನಿಗಮವು ಡ್ರೋಣ್‌ ಕ್ಯಾಮರಾ ಹಾಗೂ ಡಿಜಿಟಲ್‌ ಜಿಪಿಎಸ್‌ ತಂತ್ರಜ್ಞಾನ ಬಳಸಿ ವಿಸ್ತೃತ ಯೋಜನಾ ವರದಿ ತಯಾರಿಸಲು 50 ಲಕ್ಷ ರೂ. ವೆಚ್ಚದಲ್ಲಿ ಸರ್ವೇ ಕಾರ್ಯ ನಡೆಸುತ್ತಿದೆ ಎಂದರು.

ಕಳಸಾ ಬಂಡೂರಿ ನಾಲಾ ತಿರುವು ಯೋಜನೆ ಕುರಿತು ಮಹದಾಯಿ ನ್ಯಾಯಾಧೀಕರಣವು ಫೆಬ್ರವರಿಯಲ್ಲಿ ಅಂತಿಮ ತೀರ್ಪನ್ನು ಪ್ರಕಟಿಸಿದೆ. ಯೋಜನೆಯ ಸರ್ವೇ, ಅಂದಾಜು ಪತ್ರಿಕೆ ತಯಾರಿಕೆ, ಲೈಯೆಜನಿಂಗ್‌ ಕಾಮಗಾರಿಯ ಒಪ್ಪಂದವನ್ನು ಈಗಾಗಲೇ ಖಾಸಗಿ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಾಗಿದೆ. 2020-21ರ ಆರ್ಥಿಕ ವರ್ಷದಲ್ಲಿ 463.40 ಕೋಟಿ ರೂ. ಅನುದಾನ್ನ ಉಪಯೋಗಿಸಲು ಯೋಜಿಸಲಾಗಿದೆ. ಕಳಸಾ ನಾಲಾ ತಿರುವು ಯೋಜನೆಗೆ 885.80 ಕೋಟಿ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗೆ 791.50 ಕೋಟಿ ವಿನಿಯೋಗಿಸಲು ಕರ್ನಾಟಕ ಸರ್ಕಾರವು ತಾತ್ವಿಕ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ನಿಧಿ ಯೋಜನೆಯಡಿ ಜಿಲ್ಲೆಯ ಅರ್ಹ ರೈತ ಕುಟುಂಬಗಳಿಗೆ ಕೇಂದ್ರದಿಂದ 92.97 ಕೋಟಿ, ರಾಜ್ಯ ಸರ್ಕಾರ 21.81 ಕೋಟಿ ಸಂದಾಯ ಮಾಡಿದೆ. ಜಿಲ್ಲೆಯಲ್ಲಿ 1,61,887 ರೈತರಿದ್ದು, ಇಲ್ಲಿಯವರೆಗೂ 1,24,682 ರೈತರಿಗೆ ಕೇಂದ್ರ ಸರ್ಕಾರದಿಂದ 92.97 ಕೋಟಿ ರೂ. ನೀಡಲಾಗಿದೆ. 1,09,063 ರೈತರಿಗೆ 21.81 ಕೋಟಿ ರೂ.ವನ್ನು ರಾಜ್ಯ ಸರ್ಕಾರದಿಂದ ಜಮೆ ಮಾಡಲಾಗಿದೆ ಎಂದರು.

ಕೋವಿಡ್ ತಡೆಗೆ ಯತ್ನ: ಜಿಲ್ಲೆಯಲ್ಲಿ ಕೋವಿಡ್‌ ತಪಾಸಣೆಗಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 63 ಸ್ವಾ ಬ್‌ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ ಗುಣಮುಖವಾಗುತ್ತಿರುವವರ ಪ್ರಮಾಣವೂ ಅಧಿಕವಾಗಿದೆ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಈಗಾಗಲೇ ಕೋವಿಡ್‌ ನಿಂದ ಗುಣಮುಖರಾದ 16 ಜನರು ಪ್ಲಾಸ್ಮಾವನ್ನು ದಾನ ಮಾಡಿದ್ದು, ಅವರಿಗೆ ತಲಾ 5 ಸಾವಿರ ರೂ. ಗೌರವ ಧನ ನೀಡಿ ಪುರಸ್ಕರಿಸಲಾಗುತ್ತಿದೆ ಎಂದು ಹೇಳಿದರು.

Advertisement

ಸ್ಮಾರ್ಟ್‌ಸಿಟಿಗೆ ಹೆಚ್ಚಿನ ಒತ್ತು: ಹು-ಧಾ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಒಟ್ಟು 58 ಯೋಜನೆಗಳನ್ನು 1 ಸಾವಿರ ಕೋಟಿ ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇಲ್ಲಿಯವರೆಗೆ 15.192 ಕೋಟಿ ರೂ. ಮೊತ್ತದ 10 ಯೋಜನೆಗಳ ಕಾಮಗಾರಿಗಳು ಮುಕ್ತಾಯಗೊಂಡಿವೆ. ಇ-ಶೌಚಾಲಯ, ಈಜುಗೊಳ, ಸ್ಮಾರ್ಟ್ ಸ್ಕೂಲ್‌, ಸ್ಮಾರ್ಟ್‌ಹೆಲ್ತ್‌, ಇಂದಿರಾ ಗಾಜಿನಮನೆ ಆವರಣದ ಸಂಗೀತ ಕಾರಂಜಿ ಕಾಮಗಾರಿಗಳು ಪೂರ್ಣಗೊಂಡಿವೆ. 645.17 ಕೋಟಿ ರೂ. ಮೊತ್ತದ 40 ಯೋಜನೆಗಳ ಕಾಮಗಾರಿಗಳು ಅನುಷ್ಠಾನ ಹಂತದಲ್ಲಿವೆ. ಅದರಲ್ಲಿ ಸ್ಮಾರ್ಟ್‌ರಸ್ತೆಗಳ ನಿರ್ಮಾಣ, ತೋಳನಕೆರೆ ಹಾಗೂ ಉಣಕಲ್‌ ಕೆರೆ ಅಭಿವೃದ್ಧಿ, ಕಮಾಂಡ್‌ ಮತ್ತು ಕಂಟ್ರೋಲ್‌ ಸೆಂಟರ್‌ ಸ್ಥಾಪನೆ, ನೆಹರು ಮೈದಾನ ಹಾಗೂ ಚಿಟಗುಪ್ಪಿ ಆಸ್ಪತ್ರೆ ನಿರ್ಮಾಣ, ಮಹಾತ್ಮಾಗಾಂ ಧಿ ಉದ್ಯಾನವನ ಅಭಿವೃದ್ಧಿ ಒಳಗೊಂಡಿವೆ. 10 ಕೋಟಿ ಮೊತ್ತದ ಎರಡು ಯೋಜನೆಗಳ ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ. ಉಳಿದ 5 ಯೋಜನೆಗಳನ್ನು 250 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಸಮಗ್ರ ಕ್ರೀಡಾ ಸಂರ್ಕಿರ್ಣ, ಹಳೇ ಬಸ್‌ ನಿಲ್ದಾಣ ಅಭಿವೃದ್ಧಿ, ಉಣಕಲ್‌ ಕೆರೆ ಅಭಿವೃದ್ಧಿ ಮತ್ತು ವಾಣಿವಿಲಾಸ ವೃತ್ತದ ಅಭಿವೃದ್ಧಿ ಯೋಜನೆಗಳು ಸೇರಿವೆ ಎಂದು ಸಚಿವ ಶೆಟ್ಟರ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next