Advertisement

ಅದಾಲತ್‌ನಲ್ಲಿ 1045 ಮಂದಿಗೆ ಸ್ಥಳದಲ್ಲೇ ಸೌಲಭ್ಯ

09:30 PM Jan 27, 2020 | Lakshmi GovindaRaj |

ಹುಣಸೂರು: ತಾಲೂಕಿನ ಹೋಬಳಿ ಕೇಂದ್ರವಾದ ಹನಗೋಡಿನಲ್ಲಿ ಸೋಮವಾರ ನಡೆದ ಶಾಸಕ ಮಂಜುನಾಥ್‌ ಅವರ ಮಹತ್ವಾಕಾಂಕ್ಷೆಯ “ಮನೆ ಬಾಗಿಲಿಗೆ ತಾಲೂಕು ಆಡಳಿತ’ ಹಾಗೂ ಕಂದಾಯಇಲಾಖೆ ನಡೆಸಿದ ಕಂದಾಯ ಅದಾಲತ್‌ನಲ್ಲಿ 1045 ಮಂದಿ ಸ್ಥಳದಲ್ಲೇ ಸೌಲಭ್ಯ ಪಡೆದುಕೊಂಡರು. ಅದಾಲತ್‌ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

Advertisement

ಹನಗೋಡು ಗ್ರಾಮದ ಸಂತೆಮಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಂಚಣಿ ಆದೇಶ ಪತ್ರ ವಿತರಿಸಿ ಮಾತನಾಡಿದ ಶಾಸಕ ಎಚ್‌.ಪಿ.ಮಂಜುನಾಥ್‌, ಸರಕಾರದ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ತಾಲೂಕು ಕೇಂದ್ರಕ್ಕೆ ನಿತ್ಯ ಅಲೆದಾಡುವುದು ವಿಷಾದನೀಯ. ಹಲವಾರು ಮಂದಿ ಪಿಂಚಣಿ ಸೌಲಭ್ಯ ಜೊತೆಗೆ ಹೆಚ್ಚುವರಿಯಾಗಿರುವ ಮಾಸಾಶನ ಹಣ ಪಡೆಯುವುದು ಕಷ್ಟಸಾಧ್ಯವಾಗಿದೆ.

ಇನ್ನು ಆಧಾರ್‌ ತಿದ್ದುಪಡಿ, ಆಹಾರ ಪಡಿತರ ಚೀಟಿಯಲ್ಲಿ ಸೇರ್ಪಡೆ, ತಿದ್ದುಪಡಿ, ಕಾರ್ಮಿಕ ಇಲಾಖೆಯ ಹಾಗೂ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ಪಡೆಯುವುದು ಜೊತೆಗೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಈ ಅದಾಲತ್‌ ನಡೆಸಲಾಗುತ್ತಿದೆ. ಗ್ರಾಮಸ್ಥರು, ವೃದ್ಧರ ಅನೇಕ ಸಮಸ್ಯೆಗಳಿಗೆ ಹಾಗೂ ಸೌಲಭ್ಯಗಳಿಗೆ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ, ವಿವಿಧ ಇಲಾಖೆ ಮೂಲಕ ಏಕಗವಾಕ್ಷಿ ಪದ್ಧತಿಯಲ್ಲಿ ಸ್ಥಳದಲ್ಲೇ ಪರಿಹಾರ ಸಿಕ್ಕಿದೆ ಎಂದರು.

ಇಂತಹ ಕಾರ್ಯಕ್ರಮಗಳಲ್ಲಿ ಪಕ್ಷಭೇದ ಮರೆತು ಕಾರ್ಯಕರ್ತರು ಸ್ವಯಂ ಸೇವರಾಗಿ ಕಾರ್ಯನಿರ್ವಹಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಫೆ.10 ನಂತರ ನಂತರ ಕರೀಮುದ್ದನಹಳ್ಳಿಯಲ್ಲಿ ಇದೇ ರೀತಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ತಾಲೂಕು ಪಂಚಾಯ್ತಿ ಸದಸ್ಯೆ ರೂಪಾ ನಂದೀಶ್‌ ಮಾತನಾಡಿ, ಮನೆ ಬಾಗಿಲಿಗೆ ತಾಲೂಕು ಆಡಳಿತವೇ ಬಂದು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುತ್ತಿರುವುದು ಶಾಸಕರ ಹಾಗೂ ಅಧಿಕಾರಿಗಳ ಕ್ರಿಯಾಶೀಲತೆಯೇ ಸಾಕ್ಷಿಯಾಗಿದ್ದು, ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೋಬಳಿ ಕೇಂದ್ರಗಳಲ್ಲಿ ಅದಾಲತ್‌: ಕಂದಾಯ ಅದಾಲತ್‌ನಲ್ಲಿ ಭಾಗವಹಿಸಿದ್ದ ಉಪ ವಿಭಾಗಾಧಿಕಾರಿ ಬಿ.ಎನ್‌.ವೀಣಾ ಮಾತನಾಡಿ, ಉಪ ವಿಭಾಗದ ಎಲ್ಲಾ ತಾಲೂಕುಗಳ ಹೋಬಳಿ ಕೇಂದ್ರಗಳಲ್ಲಿ ಕಂದಾಯ ಅದಾಲತ್‌ ನಡೆಸಲಾಗುವುದು. ಇದರಿಂದ ರೈತರ, ಬಡವರ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸಿಗಲಿದೆ ಎಂದರು.

Advertisement

ತಹಶೀಲ್ದಾರ್‌ ಬಸವರಾಜ್‌ ಮಾತನಾಡಿ, ಮನೆ ಬಾಗಿಲಿಗೆ ಆಡಳಿತ ಹಾಗೂ ಕಂದಾಯ ಅದಾಲತ್‌ ಮೂಲಕ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ರೈತರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಒಂದೇ ದಿನದಲ್ಲಿ ನೂರಾರು ಮಂದಿಗೆ ಸ್ಥಳದಲ್ಲೇ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕೆ ಸ್ಪಂದಿಸಿರುವ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಗಿರೀಶ್‌, ತಾಪಂ ಸದಸ್ಯೆ ಲಕ್ಷ್ಮಮ್ಮ, ಗ್ರಾಪಂ ಸದಸ್ಯರಾದ ಕುಮಾರ್‌, ರಜಿಯಾಬಾನು, ಅಶ್ರಕ್‌, ಬಸವರಾಜು, ಮುಖಂಡರಾದ ಎಚ್‌.ಎಸ್‌.ವೆಂಕಟಪ್ಪ, ಮುಕುಂದ, ಪಿಡಿಒ ನಾಗೇಂದ್ರಕುಮಾರ್‌, ಉಪ ತಹಶೀಲ್ದಾರ್‌ ಗುರುಸಿದ್ದಯ್ಯ, ಕಂದಾಯ ಅಧಿಕಾರಿ ರಾಜಕುಮಾರ್‌, ಗ್ರಾಮಲೆಕ್ಕಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಅದಾಲತ್‌ನಲ್ಲಿ ಸ್ಥಳದಲ್ಲೇ ಪರಿಹಾರ: ಅದಾಲತ್‌ನಲ್ಲಿ ಆಧಾರ್‌ ಕಾರ್ಡ್‌ ತಿದ್ದುಪಡಿ-222, ಆಯುಷ್ಮಾನ್‌ ಕಾರ್ಡ್‌-136, ಕಂದಾಯ ಇಲಾಖೆ ಅರ್ಜಿ-128, ಪಡಿತರ ಕಾರ್ಡ್‌ ತಿದ್ದುಪಡಿ-ಸೇರ್ಪಡೆ, ಹೆಸರು ತೆಗೆಯುವಿಕೆ ಸೇರಿದಂತೆ 135, ವಿವಿಧ ಪಿಂಚಣಿ ಆದೇಶ-61, ಹೊಸ ಪಿಂಚಣಿಗೆ ಅರ್ಜಿ-21 ಹಾಗೂ 360ಕ್ಕೂ ಹೆಚ್ಚು ಮಂದಿ ಭೂಮಿ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಪಪಡಿಸಲಾಯಿತು.

ಭಾನುವಾರ ನಿಧನರಾದ ಕಡೇಮನುಗನಹಳ್ಳಿಯ ರಾಜಣ್ಣರ ಕುಟುಂಬದವರಿಗೆ ಈ ಕಂದಾಯಅದಾಲತ್‌ನಲ್ಲೇ ಸ್ಥಳದಲ್ಲೇ ಮರಣ ದೃಢೀಕರಣ ಪತ್ರ ವಿತರಿಸಲಾಯಿತು. ಅದೇ ರೀತಿ ಸ್ಥಳದಲ್ಲೇ ಅರ್ಜಿ ಹಾಕಿದ 26 ಮಂದಿ ಪೈಕಿ 19 ಮಂದಿ ಫಲಾನುಭವಿಗಳಿಗೂ ಸಹ ವಿವಿಧ ಪಿಂಚಣಿ ಆದೇಶಪತ್ರ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next