Advertisement

ಜನರಿಗೆ ಭಾರವಾದ ಹತ್ತು ರೂಪಾಯಿ ನಾಣ್ಯಗಳು

06:05 PM Mar 29, 2021 | Team Udayavani |

2016ರ ನವೆಂಬರ್‌ನಲ್ಲಿ 500 ಮತ್ತು 1000 ರೂ. ಗಳ ಕರೆನ್ಸಿ ನೋಟುಗಳನ್ನು ರದ್ದು ಮಾಡಿದ ಮೇಲೆ ಕೇಂದ್ರ ಸರ್ಕಾರ ಯಾವುದೇ ನೋಟುಗಳನ್ನು ಅಥವಾ ನಾಣ್ಯಗಳನ್ನು ರದ್ದತಿ ಮಾಡಿಲ್ಲ. ಆದರೂ ಮಾರುಕಟ್ಟೆಯಲ್ಲಿ ಹತ್ತು ರೂಪಾಯಿ ನಾಣ್ಯಗಳನ್ನು ನೋಡಿದರೆ ಜನರು ಬೆಚ್ಚಿ ಬೀಳುತ್ತಾರೆ ಮತ್ತು ಚೇಳನ್ನು ನೋಡಿದವರಂತೆ ಮಾರುದ್ದ ಸರಿಯುತ್ತಾರೆ. ಕೆಲವು ಕಡೆಗಳಲ್ಲಂತೂ ದಮ್ಮಯ್ಯ ಎಂದರೂ ಅವುಗಳನ್ನು ಸ್ವೀಕರಿಸುವುದಿಲ್ಲ.

Advertisement

ರಸ್ತೆ ಬದಿಯ ತರಕಾರಿ ಅಂಗಡಿಯವರು, ಪಾನಿ ಪೂರಿ ಸ್ಟಾಲ್‌ನವರು , ಸಣ್ಣ ಪುಟ್ಟ ಅಂಗಡಿಗಳು ಹೀಗೆ ಎಲ್ಲೇ ಪ್ರಯತ್ನಿ ಸಿದರೂ ಅವುಗಳನ್ನು ಚಲಾವಣೆ ಮಾಡಲು ಆಗುತ್ತಿಲ್ಲ. ಯಾಕೆ ತೆಗೆದುಕೊಳ್ಳುವುದಿಲ್ಲ ಎಂದು ಕೇಳಿದರೆ, ಅವುಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ ಎನ್ನುವ ಸಿದ್ದ ಉತ್ತರ ದೊರಕುತ್ತದೆ. ಬ್ಯಾಂಕ್‌ಗಳಿಗೆ ಇಕ್ಕಟ್ಟು: ಈ ಪರಿಸ್ಥಿತಿ ಬ್ಯಾಂಕುಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಬ್ಯಾಂಕರುಗಳು ಹೇಳುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರ ಬ್ಯಾಂಕುಗಳು ಮತ್ತು ರಿಸರ್ವ್‌ ಬ್ಯಾಂಕ್‌ ಹಲವು ಬಾರಿ ಸ್ಪಷ್ಟೀಕರಣ ನೀಡಿದ್ದು, ಈ ನಾಣ್ಯಗಳು ದೇಶದಲ್ಲಿ ಇನ್ನೂ ಚಲಾವಣೆಯಲ್ಲಿವೆ ಎಂದು ಸ್ಪಷ್ಟವಾಗಿ ಹೇಳಿದೆ.

ಅದರೂ ಹೆಚ್ಚಿನ ಜನರಿಗೆ ಈ ಮಾತಿನಲ್ಲಿ ವಿಶ್ವಾಸ ಕುದುರಿಲ್ಲ. ಪರಿಣಾಮವಾಗಿಯೇ, ಬ್ಯಾಂಕುಗಳಲ್ಲಿ ಹತ್ತು ರೂಪಾಯಿನ ನಾಣ್ಯಗಳ ಶೇಖರಣೆ ನಿರೀಕ್ಷೆ ಮೀರಿ ಹೆಚ್ಚುತ್ತಿದೆಯಂತೆ. ಆದರೆ, ಹೊಸ ನಾಣ್ಯವನ್ನು ಸ್ವೀಕರಿಸಲು ಗ್ರಾಹಕರು ಮುಂದಾಗುತ್ತಿಲ್ಲ. ಕೆಲವು ಮೂಲಗಳ ಪ್ರಕಾರ, ಕೆಲವು ದಿನಗಳಿಂದ ರಿಸರ್ವ್‌ ಬ್ಯಾಂಕ್‌ ಹತ್ತು ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಿದ್ದು, ಕೇವಲ ಹತ್ತು ರೂಪಾಯಿ ನಾಣ್ಯವನ್ನು ಮಾತ್ರ ಮುದ್ರಿಸುತ್ತಿದೆಯಂತೆ. ಅಂತೆಯೇ ಮುಂದಿನ ದಿನಗಳಲ್ಲಿ ಹೊಸ ಹತ್ತು ರೂಪಾಯಿ ನೋಟುಗಳು ಬರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತದೆ. ಹತ್ತು ರೂಪಾಯಿ ನಾಣ್ಯಗಳನ್ನು ಹೆಚ್ಚು ಚಲಾವಣೆ ಮಾಡಲು ಬ್ಯಾಂಕುಗಳ ಮೇಲೆ ಒತ್ತಡವಿದೆಯಂತೆ. ಖಚಿತ ಕಾರಣವಿಲ್ಲ: ಹತ್ತು ರೂಪಾಯಿ ನಾಣ್ಯಗಳ ಅನಧಿಕೃತ ನಿಷೇಧದ ಹಿಂದೆ ಯಾವುದೇ ದೃಢವಾದ ಕಾರಣ ಕಾಣುತ್ತಿಲ್ಲ. ಇದು ಊಹಾಪೋಹ ಮತ್ತು ವದಂತಿಗಳು ಸೃಷ್ಟಿಸಿದ ಸಮಸ್ಯೆ ಎಂದು ಬ್ಯಾಂಕರುಗಳು ಹೇಳುತ್ತಾರೆ. ಹತ್ತು ರೂಪಾಯಿ ನಾಣ್ಯವನ್ನು ಮುದ್ರಿಸಲು 20 ರೂಪಾಯಿಗಳ ವೆಚ್ಚವಾಗುವುದರಿಂದ ನಕಲಿ ನಾಣ್ಯಗಳ ನಾಣ್ಯಗಳ ಚಲಾವಣೆಯ ಸಾಧ್ಯತೆಯನ್ನು ತಜ್ಞರು ತಳ್ಳಿ ಹಾಕುತ್ತಾರೆ.

ಇದಕ್ಕೆ ಮುಖ್ಯ ಕಾರಣ, ರೂಪಾಯಿ ನೋಟುಗಳ ರದ್ದತಿ ಬಗೆಗೂ ಕೆಲವು ಟಿವಿ ನ್ಯೂಸ್‌ ಚಾನೆಲ್‌ ಗಳಿಂದ ಗೊಂದಲಕಾರಿ ಹೇಳಿಕೆಗಳು ಬಂದಿದ್ದು ಎಂದು ಬ್ಯಾಂಕರುಗಳು ಹೇಳುತ್ತಾರೆ.  ಇತ್ತೀಚೆಗೆ 2000 ರೂಪಾಯಿ ನೋಟುಗಳ ರದ್ದತಿ ಬಗೆಗೆಗೂ ವದಂತಿಗಳು ಸಾಕಷ್ಟು ಹರಡಿದ್ದವು. ಆದರೆ, ಸಂಬಂಧಪಟ್ಟವರು ಇವುಗಳನ್ನು ಮೊಳಕೆಯಲ್ಲಿಯೇ ಚಿವುಟಿದ್ದರಿಂದ ಯಾವುದೇ ಅನಾಹುತವಾಗಿಲ್ಲ. ಜನರು ವದಂತಿಗಳನ್ನು ಬಹುಬೇಗ ನಂಬುತ್ತಿದ್ದು, ಇದು ವದಂತಿಗಳು ಸೃಷ್ಟಿಸಿದ ಸಂಕಷ್ಟ ಎಂದು ಬ್ಯಾಂಕರುಗಳು ಹೇಳುತ್ತಿದ್ದಾರೆ.

ಈಗಾಗಲೇ ತಮ್ಮಲ್ಲಿ ಸಂಗ್ರಹವಾಗಿರುವ ನಾಣ್ಯಗಳನ್ನು ಹೇಗೆ ವಿಲೇವಾರಿ ಮಾಡಬೇಕೆಂದು ತಿಳಿಯದಾಗಿದೆ ಎನ್ನುತ್ತಿದ್ದಾರೆ.  ರಿಯಾಯಿತಿ ಕೊಟ್ಟರೂ ಪ್ರಯೋಜನವಿಲ್ಲ: ರಿಸರ್ವ್‌ ಬ್ಯಾಂಕ್‌ ಹತ್ತು ರೂಪಾಯಿ ನಾಣ್ಯಗಳನ್ನು ಚಲಾವಣೆ ಮಾಡಲು ಬ್ಯಾಂಕುಗಳ ಮೇಲೆ ಒತ್ತಡ ಹಾಕುತ್ತಿದ್ದು, ಗ್ರಾಹಕರು ಇವುಗಳನ್ನು ಸ್ವೀಕರಿಸುವಂತೆ ಬ್ಯಾಂಕುಗಳಲ್ಲಿ ಒತ್ತಾಯಿಸುತ್ತಿದ್ದಾರಂತೆ. ಇದು ಬ್ಯಾಂಕ್‌ ಕೌಂಟರ್‌ನಲ್ಲಿ ಗ್ರಾಹಕರು ಮತ್ತು ಸಿಬ್ಬಂದಿಯ ನಡುವೆ ಸಾಕಷ್ಟು ತಿಕ್ಕಾಟ ಮತ್ತು ಘರ್ಷಣೆಗೆ ಕಾರಣವಾಗುತ್ತಿದೆ. ಈನಾಣ್ಯಗಳನ್ನು ಚಲಾವಣೆಗೆ ತರಲು ಮತ್ತು ಅವುಗಳಿಗೆ ಬೇಡಿಕೆಉಳಿಯುವಂತೆ ನೋಡಿಕೊಳ್ಳಲು ಈ ನಾಣ್ಯಗಳನ್ನು ನೀಡಿದವರಿಗೆ ಮತ್ತು ತೆಗೆದುಕೊಳ್ಳುವವರಿಗೆ ಕೆಲವು ಹೋಟೆಲ್ಲುಗಳು ಗ್ರಾಹಕರಿಗೆಶೇ.10 ರಷ್ಟು ರಿಯಾಯಿತಿ ಕೊಡುಗೆ ನೀಡಿದರೂ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯಾಗಿಲ್ಲ ಎಂದು ಹೇಳಲಾಗುತ್ತಿದೆ.

Advertisement

 

 ರಮಾನಂದ ಶರ್ಮ

Advertisement

Udayavani is now on Telegram. Click here to join our channel and stay updated with the latest news.

Next